ಬುದ್ಧಿಮಾಂದ್ಯ ಸ್ಥಿತಿ ಅಂದರೆ ಏನು ಎಂಬುದನ್ನು ವೈಜ್ಞಾನಿಕವಾಗಿ ವಿವರಿಸುವ ಮೂಲಕ ಆರಂಭವಾಗುವ ಈ ಕೃತಿಯು, ಅಂತಹ ಮಕ್ಕಳಿಗೆ ಶಿಕ್ಷಣ ಹೇಗೆ ಕೊಡಿಸಬೇಕು ಎಂಬ ಅಧ್ಯಾಯದತ್ತ ಹೊರಳಿಕೊಳ್ಳುತ್ತದೆ. ಬುದ್ಧಿಮಾಂದ್ಯರಿಗೆ ಮದುವೆಯ ಹೊಣೆಗಾರಿಕೆಗಳನ್ನು ನಿಭಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನೂ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳಿಗೆ ಸಮುದಾಯ ಹೇಗೆ ಬೆಂಬಲಕ್ಕೆ ನಿಲ್ಲಬಹುದು ಎನ್ನುವ ವಿಚಾರದಲ್ಲಿ ಕೆಲವು ಸಲಹೆಗಳು ಇದರಲ್ಲಿವೆ. ಹಾಗೆಯೇ, ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳೇನು, ಅವರಿಗಾಗಿ ಮಾಡಬೇಕಿರುವ ಹಣಕಾಸಿನ ಯೋಜನೆಗಳು ಏನೇನು ಎಂಬುದೂ ಇದರಲ್ಲಿ ಅಡಕವಾಗಿದೆ. ಬುದ್ಧಿಮಾಂದ್ಯರ ವಿಚಾರದಲ್ಲಿ ಸಹಾನುಭೂತಿ ಹೊಂದಿರುವವರಿಗೆ ಈ ಪುಸ್ತಕ ಒಂದು ಪ್ರವೇಶಿಕೆಯಂತೆ ಕೆಲಸ ಮಾಡಬಲ್ಲದು.