ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುವ ಬಗೆ ಹೇಗೆ, ಆಧುನಿಕ ಬದುಕು ಸೃಷ್ಟಿಸುವ ಗೊಂದಲ, ಅತಂತ್ರತೆ, ಅಸಹನೆ ಎಂತಹದ್ದು ಎಂಬುದನ್ನು ಇಲ್ಲಿನ ಪಾತ್ರಗಳು ಚರ್ಚಿಸಿವೆ. ಕಾರ್ಪೊರೇಟ್ ಜಗತ್ತಿನ ಯೋಜನೆಗಳ ಆಳವಾದ ಉದ್ದೇಶಗಳೂ ಇಲ್ಲಿ ವಿಶ್ಲೇಷಣೆಗೆ ಒಳಗಾಗಿವೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಪ್ರಭುತ್ವದ ವಿರುದ್ಧ ಆಕ್ರೋಶವೂ ಹರಿದಿದೆ. ಮನುಷ್ಯ ಬದುಕಿನ ಶೂನ್ಯತೆ ಮತ್ತು ಸಾತ್ವಿಕತೆ ಒಂದು ಹಂತದ ಅಮಾಯಕತೆಯನ್ನು ಬಿಕ್ಕುವಿನ ಪಾತ್ರ ವಿವರಿಸಿದಂತಿದೆ. ಮುರಿದ ಭಿಕ್ಷಾಪಾತ್ರೆ, ಅದನ್ನೂ ಜೋಪಾನವಾಗಿರಿಸಿಕೊಂಡು ಮುಂದುವರಿಯುವ ಬಿಕ್ಕು ಭೂತ, ವರ್ತಮಾನ ಮತ್ತು ಭವಿಷ್ಯದ ನೇರವಾದ ಪೂರಕ ಸಾಕ್ಷಿಯಂತೆ ಕಾಣಿಸುತ್ತಾನೆ. ಭಿಕ್ಷಾಪಾತ್ರೆ ಮನುಷ್ಯ ಬದುಕಿನ ಪಲ್ಲಟ ಹಾಗೂ ಅಸ್ಥಿರತೆಯನ್ನೂ ಪ್ರತಿಬಿಂಬಿಸಿದಂತಿದೆ.