ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮೇಶ ಅರೋಲಿ ಬರೆದ ಕವಿತೆ: ದೇವರು ರಜೆಯಲಿರುವಾಗ...

Last Updated 15 ಮೇ 2021, 19:30 IST
ಅಕ್ಷರ ಗಾತ್ರ

ಊರು ಕೇರಿಗಳು ಉರಿದು ಹೋಗುತಾವ

ಹುತ್ತದ ಹಾವು ಗುಳೆ ಹೋಗುತಾವ

ನದಿ ನೀರಾಗ ಹೆಣ ತೇಲುತಾವ

ನಡುಬೀದಿಯಲಿ ಕಣಿ ಕೇಳುತಾವ

ಎಲ್ಲಿದ್ದೋ ದೇವ ನೀನೇನಾದೋ ದೇವ

ಅಂಗಳಯೆಲ್ಲ ಅಂಗಲಾಚುತಾವ

ತಿಂಗಳು ಬಸುರಿಯ ನೋವು ತಿನ್ನುತಾವ

ಕೇಳಿದ ಕಿವಿಗಳು ಕಿಟಕಿ ಮುಚ್ಚಿದವು

ನೋಡಿದ ಕಣ್ಣು ರೆಪ್ಪೆ ಮುಚ್ಚಿದವು

ಎಲ್ಲಿದ್ದೋ ದೇವ ನೀನೇನಾದೋ ದೇವ

ದ್ವಾಮೆ ಕೊಲ್ಲಲು ದೇಣಿಗೆ ಕೊಟ್ಟೀವಿ

ಹಸಿದ ಕೂಸಿಗೆ ಹಾಲನು ಇಟ್ಟೀವಿ

ಹರಹರ ಎಂದವ ಬರಿ ಮಾತಾಡಲು

ಆರಿಸಿ ತಂದವ ಅರಮನೆ ಸೇರಲು

ಎಲ್ಲಿದ್ದೋ ದೇವ ನೀನೇನಾದೋ ದೇವ

ದುಂಡಗಿರುವ ಈ ಭೂ-ಚೆಂಡೊಳಗ

ಗಂಡೆಂಬವನ ಗಡ್ಡದ ಕೆಳಗ

ತುಂಡು ನೆಲವನು ಬಿತ್ತಲಾಗದವ

ಸಾವಿನ ಬೀಜ ಉಗಿದು ಕುಂತವ

ಎಲ್ಲಿದ್ದೋ ದೇವ ನೀನೇನಾದೋ ದೇವ

ನೀರಿಗಿಲ್ಲಿ ಒಂದು ದಾಣೆಯುವುಂಟು

ಗಾಳಿಗಿಲ್ಲಿ ಗನ ಬೇಡಿಕೆಯುಂಟು

ಹಳ್ಳದ ಸೆಲುಮೆ ಹೊಗೆ ಉಗಿದಾವ

ಮರದಟೊಂಗೆಯು ಜೀವ ತೆಗದಾವ

ಎಲ್ಲಿದ್ದೋ ದೇವ ನೀನೇನಾದೋ ದೇವ

ಅರೆಸುಟ್ಟ ಈ ಹೆಣದ ಬಣಿವೆಗೆ

ಅತರ್ ಗಂಧ ಹಚ್ಚುವ ಘಳಿಗೆ

ಮತ ಹಾಕೋನು ಮಸಣವಾಸಿಯು

ಪಡೆದು ಬಂದವನೊ ಗದ್ದುಗೆವಾಸಿಯು

ಎಲ್ಲಿದ್ದೋ ದೇವ ನೀನೇನಾದೋ ದೇವ

ಖಾಲಿ ಹೊಟ್ಟೆಯಲಿ ಪೂಜೆಗೆ ಬಂದೆ

ಥರ ಥರ ಹೂವು ಆರಿಸಿ ತಂದೆ

ಹಾಡಿ ಹೊಗಳಿ ನಿನ್ನ ಬೇಡಿದ ಪರಿಗೆ

ಅನಾಥ ಹೆಣಗಳು ಹಗಲಿನ ತೆರಿಗೆ

ಎಲ್ಲಿದ್ದೋ ದೇವ ನೀನೇನಾದೋ ದೇವ

ಗುಡಿ ಗುಂಡಾರಕೆ ಇಲಿ ಗುದ್ದಲಿ ಪೆಟ್ಟು

ದವಾಖಾನೆಯಲಿ ಸಾವಿನ ಹುಟ್ಟು

ಢಣಢಣ ಅಂದಿದ್ದು ಯಾವ ಸದ್ದದು

ದಾರಿಯ ಗುಂಟ ಬಾರಿಸಿ ಹೋದದ್ದು

ಎಲ್ಲಿದ್ದೋ ದೇವ ನೀನೇನಾದೋ ದೇವ

ಸಿರಿವಂತರ ಓ ಚಿನ್ನದ ಮೂರುತಿ

ಬಡವರ ಪಾಲಿನ ಕಾಗದ ಮಾರುತಿ

ಬದುಕಿರುವಾಗ ಬವಣೆಗೆ ಆಗದೆ

ಸತ್ತು ಬಿದ್ದಿರಲು ಮಣ್ಣಿಗು ಬಾರದೆ

ಎಲ್ಲಿದ್ದೋ ದೇವ ನೀನೇನಾದೋ ದೇವ

ಸಾವಿನ ಡೇರೆಗೆ ಟೆಂಡರು ಕರೆದರು

ಮೊಳೆಯ ಮೇಲೆ ನಿನ್ನ ಹೆಸರನು ಬರೆದರು

ಲಕೋಟೆಗೆ ಹಚ್ಚಿದ ಕುಂಕುಮ ಅರಿಶಿನ

ಲಘು ಅಂದವನಿಗೆ ಮರಣವೆ ಶಾಸನ

ಎಲ್ಲಿದ್ದೋ ದೇವ ನೀನೇನಾದೋ ದೇವ

ಸುಳ್ಳನು ಇಲ್ಲಿ ಸುಳ್ಳೆಂದವರ

ತುಟಿಯ ಹೊಲೆಯಲು ಸೂಜಿದಾರ

ದೇವರಾಣೆಗಿದು ಖರೆ ಅಂದವರ

ಸಮಾಧಿ ಮ್ಯಾಲೆ ಹೂವಿನ ಹಾರ

ಎಲ್ಲಿದ್ದೋ ದೇವ ನೀನೇನಾದೋ ದೇವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT