ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಕಾಟಿಮರಿಯ ಕೃಪಾಕಟಾಕ್ಷ

Last Updated 3 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಇದು ಕನಸೋ ನನಸೋ ಎಂಬ ಸಂದಿಗ್ಧದಲ್ಲಿದ್ದ ಹೇಮಂತ್. ಎಲ್ಲವೂ ಮಿಥ್ಯಾ ವಾಸ್ತವದಂತೆ ಅವನ ಜೀವನದಲ್ಲಿ ಜರುಗಿ ಹೋಗಿತ್ತು. ಕಲಾ ಪರಿಷತ್ತಿನ ಮೊದಲ ಮಹಡಿಯ ಕಾಫಿ ಬಾರ್‌ನಲ್ಲಿ, ಹಳೆ ಪ್ರೇಯಸಿಯ ನೆನಪಿಸಿಕೊಂಡಂತೆ ಉದುರುತ್ತಿರುವ ಮಳೆಯ ಹನಿಗಳ ನೋಡುತ್ತಾ ಅವನಿಯೊಂದಿಗೆ ಕುಳಿತಿದ್ದ. ಅವಳ ಮುಂಗುರುಳು ಹಣೆಯ ಮೇಲೆ ಲಾಸ್ಯವಾಡುತ್ತಿತ್ತು.

ಅಂದಷ್ಟೇ ಅವನ ಎರಡನೆಯ ಕಥಾ ಸಂಕಲನ ಬಿಡುಗಡೆಗೊಂಡಿತ್ತು. ಕಾಫಿ ಬಾರ್ ಎಂಬ ಢೌಲು ಅವನಿಗೆ ಆಗಿ ಬರದಿದ್ದರೂ ಅವಳಿಗಾಗಿ ಅಲ್ಲಿಗೆ ಬಂದಿದ್ದ. ಕೊನೆಯ ವರ್ಷದ ಪತ್ರಿಕೋದ್ಯಮದಲ್ಲಿದ್ದ ಅವಳ ಮತ್ತು ಅವನ ನಡುವೆ ಕಥೆಗಳೇ ಸಮಾನ ಆಸಕ್ತಿ.

ಯಾವಾಗಲೂ ಗಂಭೀರವಾಗಿದ್ದರೂ, ನೇರ ನುಡಿಯ, ಮಾರು ಹೋಗುವ ವ್ಯಕ್ತಿತ್ವದವ. ಎತ್ತರ, ಬಿಗಿ ಬಿಗುಮಾನದ, ಗಡಸು ದನಿಯ ಹೇಮಂತನೆಡೆಗೆ ಸಹಜವಾಗಿ ಅವಳು ವಾಲಿದ್ದಳು. ಇಬ್ಬರೂ ಮಂಜು ಬೀಳುವ ಮಲೆನಾಡಿನವರು ಎಂಬುದು ಅವರ ನಡುವಿನ ಸ್ನೇಹಕ್ಕೆ ಕಾರಣವಾಗಿತ್ತು.

***

ಅವರಿಬ್ಬರೂ ಕ್ಯಾಂಟಿನ್‍ನಲ್ಲಿ ಕಪಚಿನೋಗೆ ಆರ್ಡರ್ ಕೊಟ್ಟು ಕಾಯುತ್ತಾ ಕುಳಿತಿದ್ದರು. ಗುಡುಗು ಬಂದು ಅವರ ಮಾತಿಗೆ ಮೇಳವಾಗಿತ್ತಂದು. ಧೋ ಎಂದು ಸುರಿವ ಮಳೆಯ ನಡುವೆ ಅವಳು ಅವನನ್ನು ಮಾತಿಗೆ ಎಳೆದಳು.

“ಏಯ್ ಹೇಮ್, ನೀನು ಹೇಗೆ ಪತ್ರಕರ್ತನಾದೆ? ಎಂದು ಹೇಳುತ್ತಿಯೆಂದು ಕಳೆದ ಬಾರಿಯೇ ಹೇಳಿದ್ದೆ” ಎಂದು ಜೋಗುಳದಂತೆ ಅವಳು ಪಿಸುಗುಟ್ಟಿದಳು.

“ಮಲೆನಾಡಿನ ನನ್ನ ನೆನಪೇ ನನಗೆ ಶ್ರೀರಕ್ಷೆ.”

“ಹೇಳಿದರೆ ನೀ ನಗುತ್ತಿ, ಯಾಕೆ ಈಗ ಅದೆಲ್ಲಾ” ಮೆಲ್ಲಗೆ ಅವನೆಂದ.

“ಕೇಳುವ ಕುತೂಹಲ” ಎಂದು ಮೆಲ್ಲಗೆ ಅವನ ಬೆನ್ನಿಗೆ ಗುದ್ದಿದಳು.

“ಮರಾಯ್ತಿ ನೀ ಬಿಡುವ ಹಾಗೆ ಕಾಣಿಸೊಲ್ಲ” ಎಂದು ಒಂದು ನೋಟವನ್ನು ಅವಳೆಡೆಗೆ ಎಸೆದು ನಕ್ಕ.

“..........................ಹಂ” ಅವಳೂ ನಕ್ಕಳು.

“ಅದೊಂದು ವಿಚಿತ್ರ ಕಥೆ. ನಾನೊಂದು ಕಾಡುಕೋಣದ ಮರಿಯಿಂದಾಗಿ ಈ ವೃತ್ತಿಗೆ ಬಂದೆ.”

“ಏನು?” ಅವಳು ಆಶ್ಚರ್ಯ ತಡೆಯಲಾಗದೆ ಕೇಳಿದಳು.

“ಹೌದು”

“ಅದು ಹೇಗೋ?” ಎಂದಳು.

ಅದೊಂದು ನನ್ನ ಬದುಕಿನ ಅತಿ ವಿಚಿತ್ರ ಘಟನೆ. ಎಲ್ಲರ ಬದುಕಲ್ಲೂ ಘಟಿಸೊಲ್ಲವೆಂದು ನೆನಪ ಸುರುಳಿ ಬಿಚ್ಚತೊಡಗಿದ.

***

ಮಾಘ ಮಾಸದ ಸಂಜೆಗತ್ತಲಿನ ಸಮಯ. ಹಸುಗಳು ಹಟ್ಟಿಗೆ ಮರಳುವ ಹೊತ್ತು. ಸೂರ್ಯ ತನ್ನ ಕೆಲಸ ಮುಗಿಸಿದ್ದ. ಗಾಳಿ ತಣ್ಣಗೆ ಹೊಯ್ಯುತ್ತಿತ್ತು.

ಓತಿಕ್ಯಾತನಂತಿರುವ ತನ್ನ ನೆಚ್ಚಿನ ಬಂಟ ಅಂಜುಬುರುಕ ಮಾಚನೊಡನೆ "ಬೇಟೆಗೆ ಹೋಗುವಾ." ಎಂದೆ. ಮಾಚ ನನ್ನ ಬೇಟೆಯ ಸಂಗಾತಿ. ಮೂರು ಹೊತ್ತು ನಮ್ಮನೆಯ ಕೂಳು ತಿನ್ನದಿದ್ದರೆ ಅವನಿಗೆ ಸರಿಯಾಗಿ ನಿದ್ರೆ ಹತ್ತಲ್ಲ. ಬೇಟೆ ಹುಚ್ಚಿನ ಮನುಷ್ಯ. ತನ್ನ ಸ್ವಭಾವಕ್ಕೂ ಬೇಟೆಗೂ ವಿರುದ್ಧ ಪದದಂತಿದ್ದ.

ಮಲೆನಾಡಿನ ನಮ್ಮ ಒಂಟಿ ಮನೆಯಿಂದ ಚರೆ ಕೋವಿ ಹಿಡಿದು ಕಬ್ಬಿನಗದ್ದೆ, ಕಾಲು ತೋಡು ದಾಟಿ ಕುರುಚಲು ಕಾಡಿಗೆ ಬಂದಿದ್ದೆವು. ರಾತ್ರಿ ಪೂರಾ ತಿರುಗುವ ಉದ್ದೇಶದಿಂದ ಒಂದಿಷ್ಟು ಕಡುಬು, ಚರೆ ಕೋವಿಗೊಂದಿಷ್ಟು ಗುಂಡು ನಮ್ಮ ಜೊತೆಗಿದ್ದವು. ಕಾಟಿ, ಚಿರತೆ, ಹಂದಿಗಳು ಕಾಡ ನಡುವೆ ಹೆದ್ದಾರಿ ಕೊರೆದ ಜಾಗವದು.

ಕುರುಚಲು ಕಾಡಿನ ನಡುವೆಯೊಂದು ದೊಡ್ಡಾಲದ ಮರವಿತ್ತು. ಕುರುಚಲು ಕಾಡಿನ ನಡುವೆಯೇ ಜಿಂಕೆ, ಕಡವೆಗಳನ್ನು ಒಂದೇಟಿಗೆ ಹೊಡೆದುರುಳಿಸಿದ್ದ ನಡು ಕಾಡಲ್ಲಿ ಅವತ್ತು ಯಾವ ಬೇಟೆಯೂ ಕಾಣಸಿಗದೇ, ನಿರಾಶನಾಗಿ “ಆ ಆಲದ ಮರದಡಿ ಸ್ವಲ್ಪ ಕೂರೋಣವೇ?” ಕೇಳಿದೆ. “ಅಯ್ಯೋ, ಸರಿ ದ್ಯಾವ್ರೆ” ಎಂದ ಮಾಚ. “ಥೂ ಹಲ್ಕಾ ಸುವರ್, ಎಲ್ಲದಕ್ಕೂ ಅಯ್ಯೋ ಸೇರಿಸಿ ಕನ್ನಡದ ಮರ್ಯಾದೆ ತೆಗಿಬೇಡ್ವೋ ಮರಾಯ” ಎಂದು ಗದರಿದೆ. ಆಗಲೇ ಆಲದ ಮರದಡಿ ಏನೋ ಬಹೃತ್ ಪ್ರಾಣಿಯೊಂದು ನೆಗೆಯೊ ಸದ್ದು. ನಮ್ಮ ಕಿವಿ ನೆಟ್ಟಗಾಯಿತು. ಚರೆ ಕೋವಿ ನಿಮಿರಿ ನಿಂತಿತು ನೋಡು.

ಸದ್ದಾಗದಂತೆ ನಾವು ಆಲದ ಮರವನ್ನು ಸಮೀಪಿಸಿದೆವು. ಎದೆ ಢವ-ಢವನೇ ಹೊಡೆದುಕೊಳ್ಳ ಹತ್ತಿತ್ತು. ಈ ರೀತಿ ಕುಣಿಯುವ ಪ್ರಾಣಿ ಯಾವುದೆಂದು ಅವರಿಗೆ ಹೊಳೆಯಲಿಲ್ಲ. ಹಂದಿ, ಕಡವೆಯಾಗಿದ್ದರೆ ಅವುಗಳ ಸದ್ದು ಹೀಗಿರುತ್ತಿರಲಿಲ್ಲ. ನಿಧಾನಕ್ಕೆ ನಾನು ಕಳ್ಳ ಹೆಜ್ಜೆ ಇಟ್ಟು ಕುರುಚಲು ಕಾಡಿನೊಳಗೆ ಇಣುಕಿ ನೋಡಿದೆ. ಧಿಗ್ಮೂಢನಾದೆ. ಕಾಡುಕೋಣದ ಮರಿಯೊಂದು ಮರದಡಿಯಲ್ಲಿ ಖುಷಿಯಿಂದ ಕುಣಿಯುತಲಿತ್ತು. ನಾವಿಬ್ಬರೂ ಜಾಗೃತರಾದೆವು.

“ಮರಿ ಇದೆ ಎಂದರೆ ಹತ್ತಿರದಲ್ಲೆಲ್ಲೋ ಅದರ ತಾಯಿ ಇರಲೇ ಬೇಕಲ್ಲ.” ಎಂದೆ. ಸುತ್ತಲೂ ಹುಡುಕಿದರೂ. ಏನೂ ಕಾಣಲಿಲ್ಲ.

“ಅಯ್ಯೋ, ಇಲ್ಲೇನೂ ಕಾಂತಿಲ್ಯಲೆ ದ್ಯಾವ್ರೇ” ಎಂದ ಮಾಚ ಆಶ್ಚರ್ಯ ಸೂಚಿಸುತ್ತಾ.

“ಹತ್ತಿರ ಹೋಗಿ ನೋಡೋ ಮರಾಯ, ಪಕ್ಕದಲ್ಲೇ ಮಲಗಿರಬಹುದು” ಎಂದೆ. ಮರಿ ಎಮ್ಮೆ ಅಸಾಧ್ಯ ಶಬ್ದಮಾಡುತ್ತಾ ಜಾತ್ರೆಯ ಕೀಲು ಗೊಂಬೆಯಂತೆ ಕುಣಿಯುತಲಿತ್ತು.

“ಎಷ್ಟು ದಿನಗಳ ಮರಿ ಇರ್ಬೊದು ಮಾಚ?”

“ಅಯ್ಯೋ, ಒಂದಿಪ್ಪತ್ತು ದಿನದ್ದು, ದ್ಯಾವ್ರೆ”

“‌ಹಟ್ಟಿಯ ದನಗಳೊಂದಿಗೆ ಸಾಕಿದ್ರೆ ಹೆಂಗೆ?” ನಾನೆಂದೆ.

“ಅಯ್ಯೋ, ಥೂ ನಿಮ್ಮ, ಅದರಮ್ಮ ಬಂದ್ರೆ ಸಿಗದ್ ಹಾಕತ್ತೆ ಅಷ್ಟೇ! 400 ಕೆ.ಜಿ ಬಬ್ಬರ್ಯದಾಂಗ್ ಇಪ್ಪೊ ಅದನ್ ಎದ್ರುಸುಕಾತ್ತೆ? ಅದ್ ನಮ್ಮನ್ ಕಂಡು ಖಂಡಿತಾ ಪರಾರಿಯಾಗುತ್ತೆ, ಇಲ್ಲ ಕೊಂದ್ ಹಾಕುತ್ತೆ ದ್ಯಾವ್ರೆ” ಎಂದು ಪಿಸುಗುಟ್ಟಿದ ಮಾಚ.

“ಎಷ್ಟು ಹಾಲು ಕೊಡುತದೆಂದು ನೋಡ್ಬೇಕು ಮರಾಯ?”

‘‘ನಮ್ ತಿಥಿ ಆಯ್ದಿರ್ ಸಾಕ್"

ಮಾಚ ಏನು ಹೇಳುವುದೆಂದು ತೋಚದೆ ಗರ ಬಡಿದವನಂತೆ ನಿಂತ .

“ಏಯ್ ಮಾಚ, ನೀನು ಲಂಗೋಟಿ ಕಟ್ಟಿದ್ಯಾ? ಕೇಳಿದೆ.

“ಅಯ್ಯೋ, ಅದು ಈ ಮರಿ ಕಟ್ಟುವಷ್ಟು ಉದ್ದವಿಲ್ಲ ದ್ಯಾವ್ರೆ”

“ಥೂ, ಹಲ್ಕಾ ಬಡ್ಡಿ ಮಗನೆ, ನಿನ್ನ ಲಂಗೋಟಿ ಯಾರಿಗೆ ಬೇಕೋ?”

“ಬೇಕಾಗಿರೋದು ನಿನ್ನ ಪಂಚೆ.”

“ಅಯ್ಯಯ್ಯೋ, ಬ್ಯಾಡ ದೇವ್ರೆ” ಎಂದು ಕಿರುಚಲು ಬಾಯಿ ತೆರೆದ. “ಅಯ್ಯೋ, ಊರ ದನಕಳ ಕಾಯ್ಲಿ ಅವಕ್ಕೂ ಬತ್ತ್ ಮರ್ರೆ, ಬ್ಯಾಡ ದ್ಯಾವ್ರೆ” ಎನ್ನುವುದನ್ನು ಕಿವಿಗೆ ಹಾಕಿಕೊಳ್ಳದೇ ಹಠ ಹಿಡಿದಾಗ ಅನಿವಾರ್ಯವಾಗಿ ಮಾಚ ಸುಮ್ಮನಾದ.

***

ಕಪಚಿನೋ ಬಂದಿತ್ತು. ಅದನ್ನು ಸವಿಯುತಲಿದ್ದ ಹೇಮಂತ್ ಮತ್ತು ಅವನಿ. “ಎನ್ ಧೈರ್ಯ ನಿಂದು” ಎಂದು ಕಣ್ಣಲ್ಲೇ ನಕ್ಕಳು ಅವನಿ. ಅವನೂ ನಕ್ಕ. ಮತ್ತೊಂದು ಸಿಗರೇಟಿಗೆ ಕೈ ಹಚ್ಚಿದ್ದ. ಅವನಿ ಮುನಿಸಿಕೊಂಡಳು. ಸಿಗರೇಟಿನ ಧೂಳಿನ ನಡುವೆ ಕತೆ ಮತ್ತೆ ಬಿಚ್ಚಿಕೊಳ್ಳ ತೊಡಗಿತು.

***

ಕುಣಿತಿದ್ದ ಕಾಟಿ ಮರಿ ಹಿಂದೆ ಹೋಗಿ ಅಡಗಿ ಸದ್ದಾಗದಂತೆ ಅದರ ಕುತ್ತಿಗೆ ಸುತ್ತ ಪಂಚೆ ಬಿಗಿದು ಆಲದ ಮರಕ್ಕೆ ಕಟ್ಟಿ ಹಾಕಿದರು. ಕಟ್ಟಿದ ಕೂಡಲೇ ತಟಪಟವೆಂದು ಕಾಲನ್ನು ವಿಚಿತ್ರ ರೀತಿಯಿಂದ ಬಡಿಯತೊಡಗಿತು. ಅಪಸ್ವರದ ಶಂಖದಿಂದ ಹೊಮ್ಮಿದಂತಹ ಸ್ವರವೊಂದನು ಅದು ಹೊರಡಿಸಿತು. ಕಾಡಿನ ಮರಗಿಡಗಳೆಲ್ಲಾ ಅಲ್ಲಾಡಿದವು. ಅನೇಕ ಬಾರಿ ಕಾಡೆಮ್ಮೆಯ ಸ್ವರ ಕೇಳಿದ್ದ ನಾವಿಬ್ಬರೂ ಅದರ ಸ್ವರಕ್ಕೆ ವಿಚಲಿತರಾದೆವು. ಅಷ್ಟು ಕರ್ಕಶವಾಗಿತ್ತದು. ಇದು ಯಾವುದೋ ಸನಿಹದ ಮತ್ತೊಂದಕ್ಕೆ ಸಂದೇಶ ನೀಡುತ್ತಿದೆ ಎಂದು ನಮಗೆ ಖಾತ್ರಿಯಾಯಿತು. ಚರೆ ತುಂಬಿದ ಕೋವಿ ಹಿಡಿದೆವು. ಕರುವನ್ನು ಆಲದ ಉದ್ದದ ಬಿಳಲುಗಳನ್ನು ಸೇರಿಸಿ ಪಂಚೆಯಿಂದ ಕಟ್ಟಿದ್ದೆವು.

ಕುರುಚಲು ಕಾಡಿನ ಕಡೆಯಿಂದ ಏನೋ ಸದ್ದಾಯಿತು. ಮಹಾ ದೈತ್ಯ ಕಾಟಿಯೊಂದು ಬುಸು ಬುಸು ಉಸಿರ ಬಿಡುತ್ತಾ ಬಂದಿತು. ಅದರ ಎತ್ತರದ ನಿಲುವು ಹೊಳೆಯುವ ಮೈ. ಕೆಂಗಣ್ಣು. ಕೋಪದಿಂದ ಬುಸುಗುಡುವ ಅದರ ಮೂತಿ ನೋಡಿ ನಮ್ಮ ಚಡ್ಡಿ ಒದ್ದೆಯಾಗುವುದೊಂದು ಬಾಕಿ. ತನ್ನ ಕೋಡಿನಿಂದ ತಿವಿಯುವಂತೆ ಎತ್ತುತ್ತಾ ಅವರಿರುವಲ್ಲಿಗೆ ನುಗ್ಗಿತು. ಬಿಳಲುಗಳನ್ನು ಹಿಡಿದು ಅವರಿಬ್ಬರು ಮರವೇರಿದರು. ಗರ್ಜಿಸುತ್ತಾ ಮರವನ್ನೇ ತಿವಿಯ ತೊಡಗಿತು. ಐದಾರು ಬಾರಿ ಮರ ಸುತ್ತಿ ಬಂದಿತು. ತನ್ನ ಕಂದನ ಬಿಡಿಸಿರೆಂದು ಒಮ್ಮೆ ಆರ್ತನಾದ ಮಾಡಿ ಕೂಗಿತು. ಬರಿ ಅಂಗಿಯಲ್ಲಿದ್ದ ಮಾಚನಿಗೆ ಸಂಜೆಗತ್ತಲಾವರಿಸುವುದ ನೋಡಿ ಚಿಂತೆಯಾಯಿತು. “ಅಯ್ಯೋ, ಗಾಳಿಯಲ್ಲಿ ಒಂದು ಗುಂಡು ಹಾರಿಸಿ ದ್ಯಾವ್ರೆ” ಎಂದ ಮಾಚ. ತಡಮಾಡದೆ ನಾನು, ಕಾಡೆಮ್ಮೆಯ ಕಿವಿಗಳ ನಡುವೆ ಗುಂಡು ಹಾರಿಸಿದೆ. ಕೋಡುಗಳ ನಡುವೆ ಗುಂಡು ಹಾರಿತು. ಒಂದೇ ನೆಗೆತಕ್ಕೆ ತನ್ನ ಮರಿಯಿಂದ ಅನತಿ ದೂರಕ್ಕೆ ಹೋಗಿ ಕಾಟಿ ನಿಂತು ಬಿಟ್ಟಿತು. ಸ್ಫೋಟಿಸಿದ ಶಬ್ದಕ್ಕೆ ಕಾಡೊಮ್ಮೆ ನಿಶ್ಯಬ್ದವಾಯಿತು. ದೂರ ಹೋಗಿ ನಿಂತ ಎಮ್ಮೆ ತನ್ನ ಮರಿಗೆ ಬರುವಂತೆ ಬುಸುಗುಟ್ಟಿ ಕರೆಯತೊಡಗಿತು. ಮತ್ತೊಂದು ಚರೆ ತುಂಬಿಸಿ ಅದರ ಕೋಡುಗಳ ನಡುವೆ ಹೊಡೆದೆ. ವಿಚಿತ್ರವಾಗಿ ಕೂಗೂತ್ತಾ ಕಾಡಿನಲ್ಲಿ ಕಣ್ಮರೆಯಾಯಿತು. ಅದರ ವಿಚಿತ್ರ ದನಿ ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿದೆ.

ಕಾಡಿನ ಮೌನದಲ್ಲೇ ಲೀನವಾದ ನಾವಿಬ್ಬರೂ ಕುಳಿತಲ್ಲೇ ಕುಳಿತ್ತಿದ್ದರಿಂದ ಸೊಳ್ಳೆಗಳು ಕಡಿಯ ತೊಡಗಿದವು. ನಡೆದ ಘಟನಾವಳಿಗಳಿಂದ ಸ್ವಲ್ಪ ವಿಚಲಿತನಾದೆ. ಮಾಚನಿಗೆ ತೋರಿಸಿಕೊಳ್ಳದೆ ಸುಮ್ಮನಿದ್ದೆ. ಇಳಿದು ಹೋಗಲು ಅಂಜಿಕೆ. ಮಾಚನೊಬ್ಬನನ್ನೇ ಬಿಟ್ಟು ಹೋದರೆ ಅವನಿಗೆ ಗುಂಡು ಹಾರಿಸಲೂ ಬರದು. ಕಾಡಿನ ಹಾದಿಯಲ್ಲಿ ಕೋವಿ ಇರದೇ ನಡೆದು ಹೋಗುವುದು ಅತಿ ಅಪಾಯ. ಹಾಗೇ ಸಂದಿಗ್ಧದಲ್ಲೇ ಕೆಲ ಕ್ಷಣಗಳು ಕಳೆದವು. ರಾತ್ರಿ ಏರುವ ಹೊತ್ತಲ್ಲಿ ಮಾಚನನ್ನು ಸಮಾಧಾನ ಮಾಡಿ, ಕೋವಿಗೆ ಚರೆ ತುಂಬಿಸಿ ಅಲ್ಲೇ ಬಿಟ್ಟು ಧೈರ್ಯ ಮಾಡಿ ಹೊರಟೆ.

ಬಲವಾದ ಹಗ್ಗ, ಪಂಚೆ ಒಂದಿಷ್ಟು ಹುಲ್ಲಿನೊಂದಿಗೆ ಹಿಂದಿರುಗಿದೆ.

“ಅಯ್ಯೋ, ಬಂದ್ಬಿಟ್ರಾಯ್ಯಾ ದ್ಯಾವ್ರೆ”

“ಯಾಕೆ ಬರ ಬಾರದಿತ್ತೆ.?”

ಮಾಚನಿಗೆ ಪಂಚೆ ಕೊಟ್ಟು ಬಲವಾದ ಹಗ್ಗದಿಂದ ಮರಿಯನ್ನು ಬಂಧಿಸಿದೆ. ನಿಶೆಯ ಮೊದಲ ಘಳಿಗೆಯೊಳಗೆ ಮನೆ ತಲುಪಿದೆವು. ಹಟ್ಟಿಯಲ್ಲಿ ಕರುವನ್ನು ಉಳಿದ ಕರುಗಳ ಜೊತೆಗೇ ಕಟ್ಟಿ ನಿಟ್ಟುಸಿರಿಟ್ಟೆ.

***

ರಾತ್ರಿ ತನ್ನ ಮಗ್ಗಲು ಬದಲಿಸಿತ್ತು. ತೋಟ ತಿರುಗಿ ಬಂದ ಹೇಮಂತನ ತಂದೆ ಹಟ್ಟಿ ಕಡೆ ಹೋದವರಿಗೆ ಈ ಹೊಸ ಅತಿಥಿ ಗುಟುರು ಹಾಕಿತು.

ಗಾಬರಿ ಬಿದ್ದವರು, ನೇರ ಮನೆಯೊಳಗೆ ಹೋಗಿ “ಎಲ್ಲಿಂದ ತಂದ್ಯೋ ಇದ್ನಾ, ಅಲ್ಲೇ ಬಿಟ್ಟು ಬಾ. ಡಿಪಾರ್ಟಮೆಂಟಿಗೆ ಗೊತ್ತಾದರೆ ಮುಗೀತು ಕತೆ.”

“ಹಾಗೇನೂ ಆಗಲ್ಲ. ಅದು ಕಾಡುಕೋಣದ ಮರಿಯೆಂದು ಯಾರಿಗೂ ಗೊತ್ತಾಗಲ್ಲ ಬಿಡಿ. ನೀವೇನು ತಲೆ ಬಿಸಿ ಮಾಡ್‍ಬೇಡಿ.” ಎಂದು ಅವರ ಬಾಯಿ ಮುಚ್ಚಿಸಿದೆ.

ಒಂದು ನಾಲ್ಕು ದಿನ ಕಷ್ಟ ಕೊಟ್ಟಿತು. ನಂತರ ಅದುವೇ ಮರಿಗಳೊಂದಿಗೆ ಹೊಂದಿಕೊಂಡಿತು. ಮನೆಯ ದನ ಕರುಗಳೊಂದಿಗೆ ಒಂದಾದ ಮರಿ ದಿನಾಲೂ ಮೇಯಲು ಹೋಗಿ ಹಟ್ಟಿಗೆ ಹಿಂತಿರುಗುತಲಿತ್ತು. ಹೇಮಂತ ಅದಕೆ ದಿನಾಲೂ ನಾಲ್ಕು ಲೀಟರ್ ಹಾಲು ಕುಡಿಸುತ್ತಿದ್ದ.

***

ಒಂದು ಮುಂಜಾನೆ ಧೂಳೆಬ್ಬಿಸುತ್ತಾ ಬಂದ ಕಪ್ಪು ಪೊಲೀಸ್ ಜೀಪು ನನ್ನ ಅಪ್ಪಯ್ಯನ ಎದೆ ಪಸೆ ಆರುವಂತೆ ಮಾಡಿತ್ತು.

“ಏನ್ರೀ ಕಾಡುಕೋಣದ ಮರಿ ಸಾಕುತ್ತಿದ್ದೀರಿಯಂತೆ?” ಎಂದು ಜಂಬದಿಂದ ಜಬರಿಸಿದ ಅರಣ್ಯಾಧಿಕಾರಿ.

“ಎ...........ಲ್ಲಾ..........ದ........ರೂ......ಉಂ.....ಟೆ?.” ಎಂದರು ಅಪ್ಪಯ್ಯ ನಡುಗುವ ಕಂಠದಲ್ಲಿ. ಅರಣ್ಯಾಧಿಕಾರಿ ನೇರ ಹಟ್ಟಿಗೆ ಹೋಗಿ ನೋಡಿದ. ದನಗಳು, ಕರುಗಳು, ಎಮ್ಮೆಗಳು ಇವನನ್ನು ಪಿಳಿ-ಪಿಳಿ ನೋಡಿದವು. ಅವನೂ ದಿಟ್ಟಿಸಿದ. ಯಾವನೋ ಹೊಸಬನ ನೋಡಿ ಬೆಚ್ಚಿ ಬೊಬ್ಬಿರಿದು ಕೂಗ ತೊಡಗಿದವು. 10-15 ಮರಿಗಳಲ್ಲಿ ಕಾಡುಕೋಣ ಯಾವುದೆಂದು ಅವನಿಗೆ ಗುರುತಿಸಲಾಗಲಿಲ್ಲ. ಅಧಿಕಾರಿಯೋ ಬಯಲು ಸೀಮೆಯವನು. ನಿರಾಶನಾಗಿ ಹಿಂದೆ ಬಂದು “ಆ ಮರಿಗಳವುಗಳ ಫೋಟೊ ತೆಗೆದುಕೊಳ್ಳಿ” ಎಂದು ಪೋಟೊಗ್ರಾಫರ್‌ಗೆ ಆದೇಶಿಸಿದ. ಅಪ್ಪಯ್ಯನ ಎದೆಯಲ್ಲಿ ಅವಲಕ್ಕಿ ಕುಟ್ಟಲಾರಂಬಿಸಿತು. ಅಧಿಕಾರಿ ಅಪ್ಪಯ್ಯನೊಡನೆ ಏನೋ ಮಾತನಾಡಿಕೊಂಡು ಜೀಪು ಹತ್ತಿ ಹೊರಟ.

ಅವರು ಬಂದು ಹೋದ ಮೇಲೆ ಅಪ್ಪಯ್ಯ ಚಿಂತಾಕ್ರಾಂತರಾದರು. ನನ್ನೊಡನೆ ಮಾತು ನಿಲ್ಲಿಸಿದರು. “ನೀನು ಸ್ವಲ್ಪ ದಿನಗಳಿಗೆ ಊರು ಬಿಡು. ಆ ಮರಿಯನ್ನ ಹಟ್ಟಿಯಿಂದ ಬಿಡು” ಎಂದು ವರಾತ ಶುರುವಿಟ್ಟರು. ಸಣ್ಣ ಶಬ್ದಕ್ಕೂ ಎಗರಿ ಬೀಳುತ್ತಿದ್ದರು. ಅಪ್ಪಯ್ಯ ದಿನದಿಂದ ದಿನಕ್ಕೆ ಕೃಶರಾಗತೊಡಗಿದರು. ಅವರ ಅವಸ್ಥೆ ನೋಡಲಾಗದೇ ಮರಿಯನ್ನು ಕಾಡಿಗೆ ಬಿಟ್ಟು ಬಂದೆ. ಅದು ಐದಾರು ಬಾರಿ ಇವನನ್ನೇ ನೋಡಿ ಕಾಡಿನಲ್ಲಿ ಕಣ್ಮರೆಯಾಯಿತು. ಏನೇ ಮಾಡಿದರೂ ಅಪ್ಪಯ್ಯನ ದಿಗಿಲು ಕಡಿಮೆಯಾಗಲಿಲ್ಲ. ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಯಾವಾಗ ಮಗ ಅರೆಸ್ಟ್ ಆಗುವನೊ ಎಂಬ ಚಿಂತೆಯಲ್ಲೇ ಕಾಲ ಹಾಕತೊಡಗಿದರು.

***

"ಇದೇ ನನ್ನ ಜೀವನದ ಟರ್ನಿಂಗ್ ಪಾಯಿಂಟ್" ಎಂದು ಕಪಾಚಿನೋ ಹೀರುತ್ತಾ ಹೇಳಿದ ಹೇಮಂತ್.

ಅವನಿ ಮುಂದೆ ಎನ್ನುವಂತೆ ಅವನನ್ನೆ ನೋಡತೊಡಗಿದಳು.

***

ಇದೇ ಚಿಂತೆಯಲ್ಲಿ ಅವರನ್ನು ನೋಡಲಾರದೇ ನಾನು ಮನೆ ಬಿಟ್ಟೆ. ಮೊದ ಮೊದಲಿಗೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದೆ. ಜೊತೆ ಜೊತೆಗೆ ಓದು ಮುಂದುವರಿಸಿದೆ. ಬೆಂಗಳೂರಿಗೆ ಬಂದೆ ಬರವಣಿಗೆ ಕೈ ಹತ್ತಿತು. ನಾ ಬರೆದ ‘ಕಾಟಿ ಮರಿಯ ಕೃಪಾಕಟಾಕ್ಷ' ಕಥೆಗೆ ಮೊದಲ ಬಹುಮಾನ ಕೂಡ ಬಂದಿತು. ಪ್ರಜಾ ಮಿತ್ರಕ್ಕೆ ದುಡಿದೆ. ಅಲ್ಲಿಂದ ನಾನು ಹಿಂದಿರುಗಿ ನೋಡಿದ್ದೆ ಇಲ್ಲಾ.

***

ಕಪ್‍ನಲ್ಲಿದ್ದ ಕಪಚಿನೋ ಕೂಡಾ ಮುಗಿದಿತ್ತು. ತುಂತುರು ಮಳೆಯೂ ಆಗಸ್ಟೇ ನಿಂತಿತು.

“ಪ್ರಪಂಚದಲ್ಲಿ ಕಾಡೆಮ್ಮೆ ಮರಿಯಿಂದಾಗಿ ಪತ್ರಕರ್ತರಾದವರು ಇರಲಿಕ್ಕಿಲ್ಲ.” ಎಂದು ಹೇಳಿ ನಕ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT