ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜಿಕಿ ಇನ್ಯಾತಕಯ್ಯಾ ಅ(ನ)ರ್ಹರಿಗೆ..!

ವಿಡಂಬನೆ
Last Updated 15 ನವೆಂಬರ್ 2019, 20:16 IST
ಅಕ್ಷರ ಗಾತ್ರ

ಟೀವ್ಯಾಗ್‌ ಅನರ್ಹ ಶಾಸಕರ ತೀರ್ಪಿನ ಬ್ರೇಕಿಂಗ್‌ ನ್ಯೂಸ್‌ ನೋಡ್ತಾ ಕುತ್ಕೊಂಡಾಗ, ಗಡ್ಡಾ ಬಿಟ್ಕೊಂಡು– ‘ಅಂಜಿಕಿ ಇನ್ಯಾತಕಯ್ಯ ಅ(ನ)ರ್ಹರಿಗೆ, ಬಿಜೆಪಿ ಬಾವುಟ ಹಿಡಿದವ್ರಿಗೆ ಭಯವೂ ಇನ್ಯಾತಕಯ್ಯ...’ ಅಂತ ದಾಸರ ಪದವನ್ನ ತನಗ್ ಸರಿ ಕಂಡ್ಹಂಗ್‌ ಹೇಳ್ತಾ ಭಾರಿ ಖುಷಿಯೊಳಗ್‌ ಕುಣಿಯುತ್ತ ಬಂದ ಪ್ರಭ್ಯಾನ ಕಂಡು ತಕ್ಷಣಕ್ಕ ಗುರ್ತ ಸಿಗಲಿಲ್ಲ. ‘ಇದೇನೋ ಹೊಸಾ ದಾಸರ ವೇಷಾ ಮತ್ತ ಹೊಸ ಪದಾ’ ಎಂದೆ.

ಅವ್ನ ಮಾರಿಮ್ಯಾಗ್‌ ಕಮಲದ ಕಿಲಕಿಲ ನಗು ಕುಣ್ಯಾಕತ್ತಿದ್ದನ್ನ ನೋಡಿ, ‘ಲಾಟರಿ– ಗಿಟರಿ ಹೊಡ್ದಿ ಏನ್‌’ ಎಂದೂ ಸೇರಿಸಿದೆ. ‘ಬರೀ ಲಾಟರಿ ಅಲ್ಲಲೇ, ಬಂಪರ್‌, ಸುಪ್ರೀಂ ಬಂಪರ್‌’ ಎಂದು ಬಡಬಡಿಸಿದ.

‘ಮೊನ್ನೆ ಅಯೋಧ್ಯೆ ತೀರ್ಪು ಪ್ರಕಟವಾಗುವಾಗ ಈಕಡೆ ತಲಿ ಹಾಕ್ಲಾರ್‌ದಾಂವ ಈಗ್ಯಾಕ್ ಓಡಿಬಂದಿ’ ಎಂದೆ.

ಹ್ಹೆಹ್ಹೆಹ್ಹೆ ಎಂದು ಹಲ್ಕಿರಿತಾ, ‘ಅದು ನಂಬಿಕೆಯ ಪ್ರಶ್ನೆಯಾಗಿತ್ತು ಮಗ್ನ. ರಾಮನ ವನವಾಸ ಮುಗಿತದ ಅಂತ ಗೊತ್ತಿತ್ತು. ಮುಂದಿನ ಎಲೆಕ್ಷನ್‌ದಾಗ್ ‘ನಮೋ’ ಹ್ಯಾಟ್ರಿಕ್‌ ಗೆಲುವು ಗ್ಯಾರಂಟಿ ನೋಡ್‌’ ಎಂದ.

‘2024ರಲ್ಲಿನ ಭಾಜಪದ ಗೆಲುವಿನ ಗ್ಯಾರಂಟಿ ಬಗ್ಗೆ ಇಷ್ಟ ಬೇಗ್‌ ಜಪಾ ಮಾಡಾಕತ್ತಿಯಲ್ಲ. ಡಿಸೆಂಬರ್‌ ಉಪ ಚುನಾವಣೆದಾಗ ಅನರ್ಹ ಶಾಸಕರೆಲ್ಲ ಗೆದ್ದು ಬರ್ತಾರ ಅಂತ ಅದೇ ಗ್ಯಾರಂಟಿ ಕೊಡ್ತಿ ಏನಪಾ’ ಎಂದೆ.

‘ನನ್ನ ಗ್ಯಾರಂಟಿ ತಗೊಂಡು ಯಾರಿಗೆ ಏನ್‌ ಲಾಭ ಐತಿ. ಆಡಿಯೋರಪ್ನೋರ್‌ ಸೀಟು ಮೂರೂವರೆ ವರ್ಷ ಭದ್ರ ಅಂತ ದೊಡ್ಡ ಗೌಡ್ರು ಹೇಳಿದ್ದಕ್ಕ ಭಾಳ್ ‘ಅರ್ಥ’ ಅದಲೇ. ಅದ್ರಿಂದ ಭಾಳ್‌ ಮಂದಿಗೆ ಲಾಭಾನೂ ಐತಿ. ಸಿಎಂ ಆಡಿಯೋರಪ್ನೋರs ರೊಟ್ಟಿ ಜಾರಿ ತುಪ್ಪದಾಗ್‌ ಬಿದ್ಹಂಗ್‌ ಕಾಣತೈತಿ’ ಎಂದ.

ಅಷ್ಟೊತ್ತಿಗೆ ಸಾಲಿಯಿಂದ ಓಡೋಡಿ ಬಂದ ಪ್ರಭ್ಯಾನ ಮಗಾ ಪಕ್ಯಾ, ‘ಗೇರ್‌ ಗೇರ್‌ ಮಂಗಣ್ಣ, ಕಡ್ಲೆಕಾಯಿ ನುಂಗಣ್ಣಾ, ಕೊಂಬೆಯಿಂದ ಕೊಂಬೆಗೆ ಹೈಜಂಪ್‌ ಮಾಡೊ ಹನುಮಣ್ಣಾ...’ ಅಂತ ಹಾಡ್‌ ಹೇಳ್ತಾ ಬಂದವ್ನ ಪಾಟಿಚೀಲಾನ್‌ ಮೂಲ್ಯಾಗ್‌ ಬಿಸಾಕಿ
ಅವರಪ್ಪನ ಎದುರು ಬಂದು ನಿಂತ. ‘ಯಪ್ಪಾ, ಸಾಲ್ಯಾಗ್‌ ಟೀಚರ‍್ರು, ಮಂಗಗಳ ಉದ್ಯಾನದ ಬಗ್ಗೆ ಪ್ರಬಂಧ ಬರ್ಕೊಂಡ್‌ ಬರಾಕ್‌
ಹೇಳ್ಯಾರ’ ಎಂದ.

ಮಗನ ಹಿಂದನs ಬಂದಿದ್ದ ಪ್ರಭ್ಯಾನ ಹೆಂಡ್ತಿ ಪಾರೋತಿ, ‘ಏಯ್‌ ಮಂಗ್ಯಾನ ಮಗ್ನ, ಸೀದಾ ಮನಿಗಿ ಬಂದ್‌ ಊಟಾ ಮಾಡೋದು ಬಿಟ್ಟು ಮಂದಿ ಮನಿಗಿ ಯಾಕ್‌ ಓಡಿ ಬಂದಿ’ ಎಂದು ಕಕ್ಕುಲಾತಿ ತೋರುತ್ತಲೆ ಮಗನ್ನ ಹಿಡ್ಕೊಳ್ಳಾಕ್‌ ಹೋದ್ಲು. ಅಂವಾ ಕೈಗೆ ಸಿಗ್ದ ಹೋದಾಗ ಸಿಟ್ಟಿನಿಂದ, ‘ಕುಂಬಿಯಿಂದ ಕುಂಬಿಗೆ ಹಾರುವ ಇಂಥಾ ಮಂಗ್ಯಾನಂಥವರ‍್ನ ಮೊದ್ಲು ಮಂಕಿ ಪಾರ್ಕ್‌ಗೆ ಒಯ್ದು ಒಗಿಬೇಕ್‌ ನೋಡ್ರಿ ಅಣ್ಣಾವ್ರ’ ಅಂತ ಗಂಡನ ಮುಖ ನೋಡ್ತಾ ನನ್ನನ್ನ ಉದ್ದೇಶಿಸಿ ಅ(ನ)ರ್ಥಗರ್ಭಿತವಾಗಿ ಹೇಳಿದ್ಳು.

ಅದ್ಕ ಏನ್‌ ಉತ್ರಾ ಕೊಡಬೇಕಂತ ಗೊತ್ತಾಗ್ದ ಪ್ರಭ್ಯಾ ಮಿಕಿಮಿಕಿ ನನ್ನ ಮಾರಿ ನೋಡ್ದಾ. ಚೆಡ್ಡಿ ದೋಸ್ತನನ್ನ ಬಿಕ್ಕಟ್ಟಿನಿಂದ ಪಾರ್‌ ಮಾಡಬೇಕಂತ ನಾನು, ‘ಪಕ್ಷದಿಂದ ಪಕ್ಷಕ್ಕೆ ಹಾರೋ ಕೋತಿಗಳಿಗೆ ಕಡಿವಾಣ ಹಾಕಾಕ್‌ ಸುಪ್ರೀಂ ಕೋರ್ಟ್‌ನಿಂದನs ಆಗಿಲ್ಲ. ಇನ್ನs ಪಾರ್ಕ್‌ನ್ಯಾಗ್‌ ಕೂಡಿಹಾಕಾಕ್‌ ಆಗ್ತದ ಏನ್‌. ನೀ ಎಂಥಾ ದಡ್ಡಿ ಅದಿ’ ಎಂದೆ.

‘ದಡ್ಡಿ ಇದ್ದಿದ್ದಕ್ಕ ಇಂಥಾವ್ರನ್ನ ಕಟ್ಕೊಂಡಿನಿ. ನಾ ಶಾಣೆಕಿ ಇದ್ರ ಇಂತಾ ಮಂಗ್ಯಾನ ಮಾರಿಯವ್ನ ಕೈಯ್ಯಾಗ್‌ ನಾ ಯಾಕ್‌ ತಾಳಿ ಕಟ್ಕೊತಿದ್ಯಾ. ಈ ಮಂಗ್ಯಾಗ ಹೊಸ ದಾಡಿ ಒಂದ್‌ ಕೇಡ್‌’ ಎಂದು ಕಿಸಕ್ಕನೆ ನಕ್ಕಳು.

‘ಇಂವಾ ದಾಡಿ ಬಿಟ್ಟಿದ್ದಕ್ಕ ನಿನಗ್‌ ಏನರ ಕಾರಣ ಗೊತ್ತೈತಿ ಏನಬೆ’ ಎಂದೆ. ‘ನಂಗೇನ್‌ ಗೊತ್ತಿಲ್ಲಾರೀ, ಆ ಮಂಗ್ಯಾಗs ಕೇಳ್ರಿ’ ಅಂತ ಹೇಳ್ತಾ ನಗುತ್ತಲೇ ತನ್ನ ಮನಿಗೆ ಹೋದ್ಳು.

ಅವ್ವಾ ಮನಿಗೆ ಹೋಗ್‌ ತಿದ್ಹಂಗ್‌ ನಮ್ಮಲ್ಲಿಗೆ ಮತ್ತೆ ಓಡಿ ಬಂದ ಪಕ್ಯಾ, ‘ಯಪ್ಪಾ, ಪಕ್ಕದ ಓಣ್ಯಾಗಿನ ಹುಡುಗ್ರೆಲ್ಲಾ ಬಂದಾರ್‌. ನಮಗ್ ಕೋತಿ ಆಟಾ ಹೇಳಿಕೊಡು ಬಾ ಅಂತ ಪ್ರಭ್ಯಾನ್‌ ಎಳ್ಕೊಂಡ್‌ ಹೊರಗ್‌ ಹೋದ. ದೊಡ್ಡಂಗಳದಾಗ ಹುಡುಗ್ರನ್ನೆಲ್ಲಾ ಗುಂಪುಗೂಡಿಸಿದ ಪ್ರಭ್ಯಾ, ಡಮರುಗ ಬಾರಿಸುತ್ತ ‘ಮಂಗಣ್ಣಾ ಬಾರಣ್ಣಾ, ಮಕ್ಕಳ ಜತೆಗೆ ಕುಣಿಯಣ್ಣಾ’ ಅಂತ ಹಾಡ್ ಹೇಳಾಕ್‌ ಸುರು ಹಚ್ಕೊಂಡ.

ಆ ಕೋತಿ ಆಟಾ– ಹಾಡು ಕೇಳ್ತಾ ಇದ್ದಾಗ ನನಗ್‌ ಕಮಲದ ಕೈಹಿಡಿದ ಹೊಸ ಅಳಿಯಂದಿರಿಗೆ ಪಕ್ಷದ ಬಾವುಟ, ಸಿದ್ಧಾಂತಗಳ ಪುಸ್ತಕವನ್ನ ನೀಡಿದ, ಕಾಲಿಗೆ ಬಿದ್ದು ನಮಸ್ಕರಿಸಿದ ಅರ್ಧ ಅನರ್ಹರನ್ನು ಭಾವಿ ಶಾಸಕರು + ಸಚಿವರು ಅಂತ ಬೆನ್ನ ಚಪ್ಪರಿಸುತ್ತಲೇ ಬರಮಾಡಿಕೊಂಡ ಆಡಿಯೋರಪ್ನೋರ ಟೀವ್ಯಾಗಿನ ಚಿತ್ರ ಬ್ಯಾಡ ಬ್ಯಾಡ ಅಂದ್ರೂ ಮತ್ತೊಮ್ಮೆ, ಮಗದೊಮ್ಮೆ ನೆನಪಾಗಾಕತ್ತು.

‘ಮಯೂರ’ ಚಿತ್ರದ ‘ಕೇಳೋ ಮಂಗಣ್ಣಾ, ನೀ ಹೇಳೋ ತಿಮ್ಮಣ್ಣಾ, ಏಕೊ ನೀನು ಹೀಗೆ ಕುಂತೆ ಚಿಂತೆ ಬೇಡಣ್ಣಾ. ವೈರೀ... ಜನರು ನಾಶವಾಗೊ ಕಾಲ ಬಂತಣ್ಣಾ, ಒಳ್ಳೆ ಕಾಲಾ ಬಂತಣ್ಣ’ ಅಂತ ಹಾಡ್‌ ಹೇಳ್ತಾ ಸಂತೋಷದಿಂದ ಅವ್ರೆಲ್ಲ ಹೆಜ್ಜೆ ಹಾಕಿದ್ಹಂಗ್‌ ನಂಗ್‌ ಭಾಸವಾಯ್ತು.

ಅಷ್ಟೊತ್ತಿಗೆ ಅಲಾರಾಂ ಬಡ್ಕೊತ್ತಿದ್ದಂತೆ ನಿದ್ದೆಯಿಂದ ಧಿಗ್ಗನೆ ಎದ್ದು ಕುಂತೆ. ಸಕ್ಕರೆ ನಿದ್ದಿಯೊಳಗ್‌ ಕೋತಿ ಕನಸ್‌ ಬಿದ್ದಿದ್ದಕ್ಕೆ ಇವತ್ತೇನ್‌ ಗ್ರಹಚಾರ ಕಾದಿದೆಯೋ ಅಂತ ಗೊಣಗುತ್ತಲೇ ಹಾಸಿಗೆ ಝಾಡಿಸತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT