ಅರೆಭಾಷೆ ಸಂಸ್ಕೃತಿ, ಪರಂಪರೆ ಉಳಿಸಿ

ಸೋಮವಾರಪೇಟೆ: ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿ ಹೊಂದಿರುವ ಅರೆಭಾಷೆ ಸಂಸ್ಕೃತಿ, ಸಮಾಜದ ಪರಂಪರೆ ಉಳಿಸಿ ಬೆಳೆಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಕರೆ ನೀಡಿದರು.
ಕೊಡಗು ಗೌಡ ಯುವ ವೇದಿಕೆ, ಐಗೂರು ಅರೆಭಾಷೆ ಗೌಡ ಸಂಘ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಕಾಜೂರಿನಲ್ಲಿ ನಡೆದ ಅರೆಭಾಷೆ ಗೌಡರ ಸಮ್ಮಿಲನ ಜಂಬರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಉಳಿಸುವ ಜವದ್ಬಾರಿ ನಮ್ಮ ಮೇಲಿದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಾತೃ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಅರೆಭಾಷೆಯಲ್ಲಿ ಸಾಹಿತ್ಯ ರಚನೆ ಕಡಿಮೆಯಿದ್ದರೂ, ಬರೆಯುವವರು ಹೆಚ್ಚು ಇದ್ದಾರೆ ಎಂದರು.
ಸಮಾಜದಲ್ಲಿ ಓದುಗರ ಸಂಖ್ಯೆ ಕಡಿಮೆ ಇದ್ದು ಎಲ್ಲರೂ ಸಾಹಿತ್ಯಾಭಿಮಾನ ಬೆಳೆಸಿಕೊಳ್ಳುವಂತೆ ಮನವಿ ಮಾಡಿದರು. ಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸುವ ಮೂಲಕ ನಮ್ಮ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಸಹಕಾರಿ ಆಗಬೇಕು ಎಂದರು.
ನಿವೃತ್ತ ಶಿಕ್ಷಕ ಪೊನ್ನಚನ ಸೋಮಯ್ಯ, ನಮ್ಮ ಸಂಸ್ಕೃತಿ ಸಮಾಜದ ಇತರ ಸಂಸ್ಕೃತಿಗಿಂತಲೂ ಭಿನ್ನತೆಯಿಂದ ಕೂಡಿದ್ದು, ಸಮಾಜ ಬಾಂಧವರು ಉಳಿಸಬೇಕು. ಯುವ ಪೀಳಿಗೆ ಸಂಸ್ಕೃತಿ ಮರೆಯುತ್ತಿದೆ ಎಂದರು. ಯುವ ಪೀಳಿಗೆಗೆ ಸಂಸ್ಕೃತಿ ಕಲಿಸುವ ಸಮಾಜದ ಹಿರಿಯರು, ಯುವ ಸಂಘಟನೆಗಳು ಮಾಡಬೇಕು ಎಂದರು.
ಅರೆಭಾಷೆ ಗೌಡ ಸಂಘದ ಅಧ್ಯಕ್ಷ ಪೊನ್ನಚನ ಗಣಪತಿ ಅವರು, ಮುಂದೆ ಸಮಾಜದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಅದಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದ ಅವರು ಸಮಾಜದ ಯುವಕರು ಮುಂದೆ ಬಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕರೆ ನೀಡಿದರು.
ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರು, ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುವ ಪೀಳಿಗೆಯಲ್ಲಿ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದು, ಸಮುದಾಯವನ್ನು ಒಗ್ಗೂಡಿಸುವುದು ವೇದಿಕೆ ಉದ್ದೇಶ ಎಂದರು.
ವೇದಿಕೆ ಕಾರ್ಯಯೋಜನೆಗಳನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಸೋಮವಾರಪೇಟೆ ತಾಲ್ಲೂಕಿನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜನಾಂಗ ಬಾಂಧವರು ಸಹಕಾರ ನೀಡಬೇಕೆಂದು ಹೇಳಿದರು. ಯುವ ವೇದಿಕೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಕಾಂಚನ ಗೌಡ, ಅರೆಭಾಷೆ ಸಾಂಸ್ಕೃತಿಕ ಅಕಾಡೆಮಿ ಸದಸ್ಯ ಕುಡೆಕಲ್ ಸಂತೋಷ್ ಉಪಸ್ಥಿತರಿದ್ದರು. ಕಾಜೂರಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.