ಅಜ್ಜಂಪುರ: ಹಾವು ಎಂದರೆ ಎಲ್ಲರಿಗೂ ಒಂದು ತೆರನಾದ ಭಯ, ಆತಂಕ. ಅದರಲ್ಲೂ ಬೇಸಿಗೆಯ ತಾಪಕ್ಕೆ ಹೊರಬರುವ ವಿಷಜಂತುಗಳನ್ನು ಕಂಡರೆ ಒಂದುಬಾರಿ ಹೌಹಾರಿ ಬಿಡಲೇಬೇಕಾದ ಸ್ಥಿತಿ. ಮನೆ ಸಮೀಪ ಅವು ಬಂದರೆ ತಕ್ಷಣ ನೆನಪಾಗುವುದು ಹಾವು ಹಿಡಿಯುವವರು. ಅವರು ಎಲ್ಲಿದ್ದರೂ ಬರಲೇಬೇಕೆಂಬ ಬಲವಂತವನ್ನೂ ಮಾಡುತ್ತಾರೆ.
ಅಜ್ಜಂಪುರ ತೋಟದ ಮನೆಯ ಹಿಂಬದಿಯ ಜಾಗದಲ್ಲಿ ಮಟ ಮಟ ಮಧ್ಯಾಹ್ನ ಹಾವು ಕಾಣಿಸಿಕೊಂಡಿತು. ಆಗ ಅವರಿಗೆ ನೆನಪಾಗಿದ್ದು ಈ ಭಾಗದ ಉರಗ ಪ್ರೇಮಿ, ನಾಡವಳಿ ತಜ್ಞ ಮಹಮದ್ ಕರೀಂ. ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ ಆ ನಾಗರಹಾವನ್ನು ಭಯವಿಲ್ಲದೆ ಸಂದಿಯಿಂದ ಹೊರ ತೆಗೆದರು. ಪಕ್ಕದಲ್ಲಿದ್ದ ಅಂಗಡಿ ಮುಂದೆ ನೆರೆದಿದ್ದ ಜನ ಗುಂಪುಸೇರಿದರು. ಹಿಡಿದ ಹಾವಿನ ಜತೆ ತುಸು ಹೊತ್ತು ಆಟ ಆಡಿ ನೆರೆದವರನ್ನು ರಂಜಿಸಿದರು. ಬಳಿಕ ಹಾವನ್ನು ಅದರ ಪಾಡಿಗೆ ಬಿಟ್ಟರು.
‘ನಾನು ಹಾವು ಹಿಡಿಯುವ ಕೆಲಸವನ್ನು ಚಿಕ್ಕ ವಯಸ್ಸಿನಿಂದಲೇ ಕಲಿತಿದ್ದೇನೆ. ಈ ಕೆಲಸವನ್ನು ಯಾವುದೇ ಅಪೇಕ್ಷೆ ಇಲ್ಲದೇ ಮಾಡುತ್ತಿದ್ದೇನೆ. ಹಾವು ಹಿಡಿಯುವ ಸಮಯದಲ್ಲಿ ಬಹಳ ಸೂಕ್ಷ್ಮ ಹಾಗೂ ಧೈರ್ಯದಿಂದ ವಿಕ್ಷಿಸಬೇಕು. ನಾನು ಕ್ಲಿಷ್ಟಕರ ಸಮಯದಲ್ಲಿ ಹಾವುಗಳನ್ನು ಹಿಡಿದಿದ್ದೇನೆ. ಸೋಡಾ ಮಾರುವುದು ನನ್ನ ನಿತ್ಯಕಾಯಕ. ನಾನು ಹಾವು ಹಿಡಿಯುವ ಈ ಕಲೆಯನ್ನು ತನ್ನ ಅಣ್ಣನ ಮಗನಿಗೆ ಕಲಿಸುತ್ತಿದ್ದೇನೆ. ತುರ್ತು ಸಂದರ್ಭ ಅಗತ್ಯ ಬಿದ್ದರೆ ದೂ. 96111 08494 ಸಂಪರ್ಕಿಸಿ’ ಎಂದು ಉದಾರತೆಯನ್ನೂ ಮೆರೆಯುತ್ತಾರೆ.