ಆಂಬುಲೆನ್ಸ್ ಡಿಕ್ಕಿ: ಬೈಕ್ ಸವಾರ ಸಾವು

ಬೆಂಗಳೂರು: ಮಿನರ್ವ ವೃತ್ತ ಸಮೀಪದ ಭಾರತ್ ಜಂಕ್ಷನ್ ಬಳಿ ಸೋಮವಾರ ರಾತ್ರಿ ‘108’ ಆಂಬುಲೆನ್ಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಅಮ್ಜದ್ ಪಾಷಾ (26) ಎಂಬುವರು ಮೃತಪಟ್ಟಿದ್ದು, ಅವರ ಸ್ನೇಹಿತ ಇಮ್ರಾನ್ ಗಾಯಗೊಂಡಿದ್ದಾರೆ.
ಸುಧಾಮನಗರ ನಿವಾಸಿಗಳಾದ ಅಮ್ಜದ್ ಮತ್ತು ಇಮ್ರಾನ್, ಮನೆ ಸಮೀಪದ ಮಾಂಸದ ಅಂಗಡಿ ಇಟ್ಟುಕೊಂಡಿದ್ದರು. ಮೂರು ತಿಂಗಳ ಹಿಂದಷ್ಟೇ ಅಮ್ಜದ್ ಅವರಿಗೆ ವಿವಾಹವಾಗಿತ್ತು. ಸಂಬಂಧಿಕರ ಮನೆಯ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಇಮ್ರಾನ್ನನ್ನು ಕರೆದುಕೊಂಡು ಬೈಕ್ನಲ್ಲಿ ಸಾರಕ್ಕಿಗೆ ಹೋಗಿದ್ದ ಅವರು, ರಾತ್ರಿ 12.30ರ ಸುಮಾರಿಗೆ ಸಿದ್ದಯ್ಯ ರಸ್ತೆ ಮಾರ್ಗವಾಗಿ ವಾಪಸಾಗುತ್ತಿ ದ್ದಾಗ ಈ ದುರ್ಘಟನೆ ನಡೆದಿದೆ.
ಸಿದ್ದಯ್ಯ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಇದ್ದರೂ ಅಮ್ಜದ್ ಅದೇ ಮಾರ್ಗವಾಗಿ ಬೈಕ್ ಓಡಿಸಿಕೊಂಡು ಬಂದಿದ್ದಾರೆ. ಇದೇ ವೇಳೆ ಆಂಬುಲೆನ್ಸ್, ರೋಗಿಯನ್ನು ಕರೆದುಕೊಂಡು ಪುರಭವನದಿಂದ ಮಿನರ್ವ ವೃತ್ತದ ಕಡೆಗೆ ಬಂದಿದೆ. ಭಾರತ್ ಜಂಕ್ಷನ್ ತಿರುವಿನಲ್ಲಿ ಎರಡೂ ವಾಹನಗಳಿಗೂ ಡಿಕ್ಕಿಯಾಗಿದ್ದು, ಅಮ್ಜದ್ ತಲೆಗೆ ಗಂಭೀರ ಪೆಟ್ಟು ಬಿದ್ದಿದೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕೊಂಡೊಯ್ದರಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಟ್ಯಾಂಕರ್ ಡಿಕ್ಕಿ: ಸಾವು ಪೀಣ್ಯ ಎರಡನೇ ಹಂತದ ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಸುನೀಲ್ ಕುಮಾರ್ (28) ಎಂಬುವರು ಸಾವನ್ನಪ್ಪಿದ್ದಾರೆ.
ಬಿಹಾರ ಮೂಲದ ಸುನೀಲ್, ಕಡಬಗೆರೆ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ರಾಜಗೋಪಾಲನಗರದ ವಾಸವಾಗಿದ್ದ ಅವರು ಬೆಳಿಗ್ಗೆ 7.45ರ ಸುಮಾರಿಗೆ ಬೈಕ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.