<p>ಬಂಡಾಯ ಸಾಹಿತ್ಯ ಚಳವಳಿಯ ಕಾಲದಲ್ಲಿ ಪ್ರಭಾವಶಾಲಿ ಕಥೆಗಳನ್ನು ಬರೆಯುತ್ತಿದ್ದ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸಮಗ್ರ ಕಥೆಗಳ ಸಂಕಲನ ಇದೀಗ ಪ್ರಕಟವಾಗಿದ್ದು, ಅವರ ಎಲ್ಲಾ ಕಥೆಗಳನ್ನು ಒಟ್ಟಾಗಿ ಓದುವ ಅವಕಾಶ ಕನ್ನಡಿಗರಿಗೆ ಲಭ್ಯವಾಗಿದೆ.<br /> <br /> ರಾಮಣ್ಣನವರು ಪ್ರಕಟಿಸಿದ್ದ `ನೆಲದ ಒಡಲು~ (1967), `ಗರ್ಜನೆ~ (1972), `ನೆಲದ ಸಿರಿ~ (1974), `ಒಂದು ಹುಡುಗನಿಗೆ ಬಿದ್ದ ಕನಸು~ (1979), `ಕೊಳಲು ಮತ್ತು ಖಡ್ಗ~ (1998) ಹಾಗೂ `ತೋಳಗಳ ನಡುವೆ~ (1983, ಕಿರುಕಾದಂಬರಿ)<br /> <br /> - ಹೀಗೆ ರಾಮಣ್ಣನವರ ಎಲ್ಲ ಸಂಕಲನಗಳ ಕಥೆಗಳು ಈ ಸಂಪುಟದಲ್ಲಿ ಸೇರ್ಪಡೆಯಾಗಿವೆ. ಇಲ್ಲಿನ ಕಥೆಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಸೊಗಸಾದ ಮುನ್ನುಡಿಯೊಂದನ್ನು ಬರೆದಿರುವ ಡಾ. ಕೆ.ವಿ.ನಾರಾಯಣ ಅವರು ಸಂಪುಟದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.<br /> <br /> ರಾಮಣ್ಣನವರ ಎಲ್ಲಾ ಕಥೆಗಳು ಮಾನವ ಪ್ರಕೃತಿಯನ್ನು ನಿಸರ್ಗ ವ್ಯಾಪಾರಗಳ ನಡುವೆ ಇರಿಸಿ ಚರ್ಚಿಸಲು ಪ್ರಯತ್ನಿಸುತ್ತವೆ. ಈ ಸಂಬಂಧ ನಿಷ್ಕರ್ಷೆಯಲ್ಲಿ ಕೆಲವು ಬಾರಿ ನಿಸರ್ಗ ಗೆಲುವು ಸಾಧಿಸಿದರೆ, ಕೆಲವು ಬಾರಿ ಮಾನವ ಗೆಲುವು ಸಾಧಿಸುತ್ತಾನೆ.<br /> <br /> ಎಲ್ಲೆಲ್ಲಿ ನಿಸರ್ಗ ಗೆಲುವು ಸಾಧಿಸುತ್ತದೆಯೋ ಅಲ್ಲಿ ಗ್ರಾಮೀಣ ಪರಿಸರದ ಪಾತ್ರಗಳು ವಿಜೃಂಭಿಸಿದರೆ, ಎಲ್ಲೆಲ್ಲಿ ಮಾನವ ಜಯ ಸಾಧಿಸುತ್ತಾನೆಯೋ ಅಲ್ಲಿ ಆಧುನಿಕತೆ ಪ್ರವೇಶ ಮಾಡಿರುತ್ತದೆ.<br /> <br /> ಉದಾಹರಣೆಗೆ, ರಾಮಣ್ಣನವರ ಮೊದಲ ಸಂಕಲನದಲ್ಲಿ ಪ್ರಕಟವಾದ `ಮಳೆಗರೆಯಿತು ಬಾನು, ಹಸುರಾಯಿತು ಮನ~ ಕಥೆಯನ್ನು ಗಮನಿಸಬಹುದು. ಇಲ್ಲಿ ಗದ್ದೆಯ ನೀರು ಕಾರಣವಾಗಿ ಸಣ್ಣ ಮತ್ತು ಪುಟ್ಟರಾಮರ ನಡುವೆ ಜಗಳ ಏರ್ಪಡುತ್ತದೆ. <br /> <br /> ಆದರೆ ಈ ಜಗಳ ಅವರ ನಡುವಣ ಸಂಬಂಧಗಳನ್ನು ತುಂಡು ಮಾಡುವುದಿಲ್ಲ. ಮದುವೆಯಲ್ಲಿ ಎರೆಯಲಾಗುವ `ಧಾರೆ ನೀರು~ ಹೇಗೆ ದಂಪತಿಗಳನ್ನು ಶಾಶ್ವತವಾಗಿ ಒಗ್ಗೂಡಿಸುತ್ತದೆಯೋ ಹಾಗೆಯೇ ಇಲ್ಲಿ ಕೂಡಾ ಬೀಳುವ `ಮೊಮೇರಿ ಮಳೆ~ಯು ಅವರಿಬ್ಬರ ನಡುವಣ ವೈಷಮ್ಯವನ್ನು ಅಳಿಸಿ ಹಾಕುತ್ತದೆ. ನಿಸರ್ಗದ ತೆಕ್ಕೆಯಲ್ಲಿ ಮನುಷ್ಯ ಸಂಬಂಧಗಳು ಹಾಳಾಗದೆ ಉಳಿಯುತ್ತವೆ.<br /> <br /> ಇಂಥ ನಿಲುವಿಗೆ ವಿರುದ್ಧವಾದ `ಕ್ಷಯ~ ಕಥೆಯಲ್ಲಿ ನಿಸರ್ಗವಿಲ್ಲ. ಬದಲು ನಿಸರ್ಗವನ್ನು ಲೂಟಿ ಮಾಡುವ ನೀಲಕಂಠರಾಯನಂಥವರಿದ್ದಾರೆ. ಅವನಿಗೆ ಸಹಕಾರಿಯಾಗಿ ನಿಲ್ಲಬಲ್ಲ ಜಯರಾಮನಂಥ ವಿದ್ಯಾವಂತರಿದ್ದಾರೆ. ಈ ಶಕ್ತಿಗಳು ದೇವೇಗೌಡರಂಥ ಅಮಾಯಕರನ್ನು ಸುಲಭವಾಗಿ ಬಲಿ ತೆಗೆದುಕೊಳ್ಳುತ್ತವೆ. ನಿಸರ್ಗವನ್ನು ನಿರ್ಲಕ್ಷಿಸಿ ವಿಜೃಂಭಿಸುವ ಮಾನವನ ಕರಾಳ ಇತಿಹಾಸದ ಕಥೆಯಿದು.<br /> <br /> `ಕೆಂಪು ಹುಂಜ~ ಕಥೆಯು ಇಂತಹದ್ದೇ ನಿಲುವಿನ ಇನ್ನೊಂದು ಬಗೆಯ ಅಭಿವ್ಯಕ್ತಿಯಾಗಿದೆ. ಈ ಕಥೆಯಲ್ಲಿ `ನಿಂಗಕ್ಕ~ನಿಗೆ ಕೆಂಪು ಹುಂಜದೊಡನೆ ಸಾಧ್ಯವಾದ ಸಂಬಂಧ ಜೈವಿಕವಾದುದು. ಆಕೆಗೆ ನಿದ್ದೆಯಲ್ಲಿ ಕೂಡಾ ಅದು ಕಾಣಿಸುತ್ತದೆ. ಆದರೆ ಸಂಪುಟದ ಇನ್ನೊಂದು ಕಥೆ `ಗೋಸುಂಬೆ~ಯಲ್ಲಿ ಉಗ್ರ ನರಸಿಂಹಯ್ಯನಿಗೆ `ನಾಯಿ~ಯೊಡನೆ ಏರ್ಪಡುವ ಸಂಬಂಧವು ಜೈವಿಕವಾದುದಲ್ಲ.<br /> <br /> ಅದು ಅಧಿಕಾರದೊಡನೆ ಸಂಬಂಧಹೊಂದಿ ಗೋಸುಂಬೆಯಂತೆ ಬದಲಾಗುತ್ತಾ ಹೋಗುತ್ತದೆ. ಈ ಎರಡೂ ಕಥೆಗಳು ಮಾನವನು ನಿಸರ್ಗದ ಭಾಗವಾದ ಪ್ರಾಣಿವರ್ಗದೊಡನೆ ಏರ್ಪಡಿಸಿಕೊಂಡ ಸಂಬಂಧಗಳಲ್ಲಾದ ಬದಲಾವಣೆಯನ್ನು ತುಂಬ ಪರಿಣಾಮಕಾರಿಯಾಗಿ ಧ್ವನಿಸುತ್ತವೆ.<br /> <br /> ರಾಮಣ್ಣ ಅವರಿಗೆ ಹೆಸರು ತಂದುಕೊಟ್ಟ `ಜೀತ~ ಕಥೆಯಲ್ಲಿ ಚಿಕ್ಕರಾಮ ಮತ್ತು ಪುಟ್ಟನಿಂಗರ ಮೂಲಕ ಸಾಂಪ್ರದಾಯಿಕ ಜೀತದ ವಿವರಣೆಯನ್ನು ನೀಡಲಾಗಿದೆ. ಜೊತೆಗೆ ಶೋಷಿತ ಸಮುದಾಯದ ಜೀವನದೊಳಗಡೆ ಹುದುಗಿರುವ ಅದಮ್ಯ ಜೀವನೋತ್ಸಾಹವನ್ನು ತೆರೆದಿಡಲಾಗಿದೆ.</p>.<p> <br /> ಆದರೆ ಜೀತದ ಯುಗ ಮುಗಿದು ಸ್ವಾತಂತ್ರ್ಯದ ಕಾಲ ಬಂದಾಗ ಮಾನವನಿಗೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬ ಪ್ರಶ್ನೆಯನ್ನು ರಾಮಣ್ಣ ಕೇಳಿಕೊಳ್ಳುತ್ತಾರೆ. `ಒಂದು ಹುಡುಗನಿಗೆ ಬಿದ್ದ ಕನಸು~ ಕಥೆಯಲ್ಲಿ ಹುಡುಗ ನೋಡುವುದು ಹಾಳು ಬಿದ್ದ ಕೋಟೆಗಳನ್ನು, ಬಂಧೀಖಾನೆಗಳನ್ನು ಮತ್ತು ಮೃಗಾಲಯದಲ್ಲಿ ಬಂಧಿತವಾದ ಪ್ರಾಣಿಗಳನ್ನು. <br /> <br /> ಈ ಸ್ಥಿತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುಡುಗ ಕರುಣಾಕರನ ಕಥೆ ಮಾತ್ರ ಹುಡುಗನಿಗೆ ಇಷ್ಟವಾಗುತ್ತದೆ. ಆದರೆ ಬಿಡುಗಡೆಯ ಕಥೆ ಹೇಳಿದ ಮಾಸ್ತರರನ್ನು ಹುಡುಗ ಕನಸಲ್ಲಿ ಕಳೆದುಕೊಳ್ಳುತ್ತಾನೆ. ಬಿಡುಗಡೆಯೇ ಇಲ್ಲದೆ ಸೊರಗುವ ಮನುಕುಲದ ಕಥೆಯನ್ನು ರಾಮಣ್ಣ ಮನಮುಟ್ಟುವಂತೆ ವಿವರಿಸುತ್ತಾರೆ. `ಗಾಂಧಿ, ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು~ ಮೊದಲಾದ ಕಥೆಯಲ್ಲಿ ಇದು ವಿಡಂಬನೆಯ ಸ್ವರೂಪವನ್ನು ಪಡೆದುಕೊಂಡಿದೆ.<br /> <br /> ಬಹಳ ವಿಶಿಷ್ಟವಾದ `ಧರ್ಮ~ ಕಥೆಯನ್ನು ಗಮನಿಸಿದರೆ ರಾಮಣ್ಣನವರ ಮಾನವೀಯ ಕಳಕಳಿ ಎಷ್ಟು ವಿಸ್ತಾರವಾದುದು ಮತ್ತು ಉದಾರವಾದುದು ಎಂಬುದು ಸ್ಪಷ್ಟವಾಗುತ್ತದೆ. ಈ ಕಥೆಯು ಭೂ ಮಸೂದೆ ಕಾಲಕ್ಕೆ ಭೂಮಿ ಕಳಕೊಂಡ ಬ್ರಾಹ್ಮಣನೊಬ್ಬನ ಕರುಣ ಕಥೆ. ಅವನ ಉದಾತ್ತತೆಗೆ ಗೇಣಿದಾರ ಚನ್ನೇಗೌಡನೂ ಒಲಿದುಬಿಡುತ್ತಾನೆ. ದೇವರಾಜ ಅರಸು ಅವರ ಕಾಲದಲ್ಲಿ ನಡೆದ ಕ್ರಾಂತಿಕಾರೀ ಬದಲಾವಣೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಈ ಕಥೆ ಒತ್ತಾಯಿಸುತ್ತದೆ.<br /> <br /> ಹೀಗೆ, ಬೆಸಗರಹಳ್ಳಿ ರಾಮಣ್ಣನವರ ಕಥೆಗಳು ಗ್ರಾಮೀಣ ಪರಿಸರದ ಜನರ ನಡುವಣ ಬದುಕಿನ ಸಹನೀಯತೆಯನ್ನು ಹಾಗೂ ಆಧುನಿಕ ಕಾಲದ ಜನರ ನಡುವಣ ಅಸಹನೆಗಳನ್ನು ಒಟ್ಟೊಟ್ಟಾಗಿ ಪ್ರಕಟಪಡಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಂಡಾಯ ಸಾಹಿತ್ಯ ಚಳವಳಿಯ ಕಾಲದಲ್ಲಿ ಪ್ರಭಾವಶಾಲಿ ಕಥೆಗಳನ್ನು ಬರೆಯುತ್ತಿದ್ದ ಡಾ. ಬೆಸಗರಹಳ್ಳಿ ರಾಮಣ್ಣ ಅವರ ಸಮಗ್ರ ಕಥೆಗಳ ಸಂಕಲನ ಇದೀಗ ಪ್ರಕಟವಾಗಿದ್ದು, ಅವರ ಎಲ್ಲಾ ಕಥೆಗಳನ್ನು ಒಟ್ಟಾಗಿ ಓದುವ ಅವಕಾಶ ಕನ್ನಡಿಗರಿಗೆ ಲಭ್ಯವಾಗಿದೆ.<br /> <br /> ರಾಮಣ್ಣನವರು ಪ್ರಕಟಿಸಿದ್ದ `ನೆಲದ ಒಡಲು~ (1967), `ಗರ್ಜನೆ~ (1972), `ನೆಲದ ಸಿರಿ~ (1974), `ಒಂದು ಹುಡುಗನಿಗೆ ಬಿದ್ದ ಕನಸು~ (1979), `ಕೊಳಲು ಮತ್ತು ಖಡ್ಗ~ (1998) ಹಾಗೂ `ತೋಳಗಳ ನಡುವೆ~ (1983, ಕಿರುಕಾದಂಬರಿ)<br /> <br /> - ಹೀಗೆ ರಾಮಣ್ಣನವರ ಎಲ್ಲ ಸಂಕಲನಗಳ ಕಥೆಗಳು ಈ ಸಂಪುಟದಲ್ಲಿ ಸೇರ್ಪಡೆಯಾಗಿವೆ. ಇಲ್ಲಿನ ಕಥೆಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಸೊಗಸಾದ ಮುನ್ನುಡಿಯೊಂದನ್ನು ಬರೆದಿರುವ ಡಾ. ಕೆ.ವಿ.ನಾರಾಯಣ ಅವರು ಸಂಪುಟದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.<br /> <br /> ರಾಮಣ್ಣನವರ ಎಲ್ಲಾ ಕಥೆಗಳು ಮಾನವ ಪ್ರಕೃತಿಯನ್ನು ನಿಸರ್ಗ ವ್ಯಾಪಾರಗಳ ನಡುವೆ ಇರಿಸಿ ಚರ್ಚಿಸಲು ಪ್ರಯತ್ನಿಸುತ್ತವೆ. ಈ ಸಂಬಂಧ ನಿಷ್ಕರ್ಷೆಯಲ್ಲಿ ಕೆಲವು ಬಾರಿ ನಿಸರ್ಗ ಗೆಲುವು ಸಾಧಿಸಿದರೆ, ಕೆಲವು ಬಾರಿ ಮಾನವ ಗೆಲುವು ಸಾಧಿಸುತ್ತಾನೆ.<br /> <br /> ಎಲ್ಲೆಲ್ಲಿ ನಿಸರ್ಗ ಗೆಲುವು ಸಾಧಿಸುತ್ತದೆಯೋ ಅಲ್ಲಿ ಗ್ರಾಮೀಣ ಪರಿಸರದ ಪಾತ್ರಗಳು ವಿಜೃಂಭಿಸಿದರೆ, ಎಲ್ಲೆಲ್ಲಿ ಮಾನವ ಜಯ ಸಾಧಿಸುತ್ತಾನೆಯೋ ಅಲ್ಲಿ ಆಧುನಿಕತೆ ಪ್ರವೇಶ ಮಾಡಿರುತ್ತದೆ.<br /> <br /> ಉದಾಹರಣೆಗೆ, ರಾಮಣ್ಣನವರ ಮೊದಲ ಸಂಕಲನದಲ್ಲಿ ಪ್ರಕಟವಾದ `ಮಳೆಗರೆಯಿತು ಬಾನು, ಹಸುರಾಯಿತು ಮನ~ ಕಥೆಯನ್ನು ಗಮನಿಸಬಹುದು. ಇಲ್ಲಿ ಗದ್ದೆಯ ನೀರು ಕಾರಣವಾಗಿ ಸಣ್ಣ ಮತ್ತು ಪುಟ್ಟರಾಮರ ನಡುವೆ ಜಗಳ ಏರ್ಪಡುತ್ತದೆ. <br /> <br /> ಆದರೆ ಈ ಜಗಳ ಅವರ ನಡುವಣ ಸಂಬಂಧಗಳನ್ನು ತುಂಡು ಮಾಡುವುದಿಲ್ಲ. ಮದುವೆಯಲ್ಲಿ ಎರೆಯಲಾಗುವ `ಧಾರೆ ನೀರು~ ಹೇಗೆ ದಂಪತಿಗಳನ್ನು ಶಾಶ್ವತವಾಗಿ ಒಗ್ಗೂಡಿಸುತ್ತದೆಯೋ ಹಾಗೆಯೇ ಇಲ್ಲಿ ಕೂಡಾ ಬೀಳುವ `ಮೊಮೇರಿ ಮಳೆ~ಯು ಅವರಿಬ್ಬರ ನಡುವಣ ವೈಷಮ್ಯವನ್ನು ಅಳಿಸಿ ಹಾಕುತ್ತದೆ. ನಿಸರ್ಗದ ತೆಕ್ಕೆಯಲ್ಲಿ ಮನುಷ್ಯ ಸಂಬಂಧಗಳು ಹಾಳಾಗದೆ ಉಳಿಯುತ್ತವೆ.<br /> <br /> ಇಂಥ ನಿಲುವಿಗೆ ವಿರುದ್ಧವಾದ `ಕ್ಷಯ~ ಕಥೆಯಲ್ಲಿ ನಿಸರ್ಗವಿಲ್ಲ. ಬದಲು ನಿಸರ್ಗವನ್ನು ಲೂಟಿ ಮಾಡುವ ನೀಲಕಂಠರಾಯನಂಥವರಿದ್ದಾರೆ. ಅವನಿಗೆ ಸಹಕಾರಿಯಾಗಿ ನಿಲ್ಲಬಲ್ಲ ಜಯರಾಮನಂಥ ವಿದ್ಯಾವಂತರಿದ್ದಾರೆ. ಈ ಶಕ್ತಿಗಳು ದೇವೇಗೌಡರಂಥ ಅಮಾಯಕರನ್ನು ಸುಲಭವಾಗಿ ಬಲಿ ತೆಗೆದುಕೊಳ್ಳುತ್ತವೆ. ನಿಸರ್ಗವನ್ನು ನಿರ್ಲಕ್ಷಿಸಿ ವಿಜೃಂಭಿಸುವ ಮಾನವನ ಕರಾಳ ಇತಿಹಾಸದ ಕಥೆಯಿದು.<br /> <br /> `ಕೆಂಪು ಹುಂಜ~ ಕಥೆಯು ಇಂತಹದ್ದೇ ನಿಲುವಿನ ಇನ್ನೊಂದು ಬಗೆಯ ಅಭಿವ್ಯಕ್ತಿಯಾಗಿದೆ. ಈ ಕಥೆಯಲ್ಲಿ `ನಿಂಗಕ್ಕ~ನಿಗೆ ಕೆಂಪು ಹುಂಜದೊಡನೆ ಸಾಧ್ಯವಾದ ಸಂಬಂಧ ಜೈವಿಕವಾದುದು. ಆಕೆಗೆ ನಿದ್ದೆಯಲ್ಲಿ ಕೂಡಾ ಅದು ಕಾಣಿಸುತ್ತದೆ. ಆದರೆ ಸಂಪುಟದ ಇನ್ನೊಂದು ಕಥೆ `ಗೋಸುಂಬೆ~ಯಲ್ಲಿ ಉಗ್ರ ನರಸಿಂಹಯ್ಯನಿಗೆ `ನಾಯಿ~ಯೊಡನೆ ಏರ್ಪಡುವ ಸಂಬಂಧವು ಜೈವಿಕವಾದುದಲ್ಲ.<br /> <br /> ಅದು ಅಧಿಕಾರದೊಡನೆ ಸಂಬಂಧಹೊಂದಿ ಗೋಸುಂಬೆಯಂತೆ ಬದಲಾಗುತ್ತಾ ಹೋಗುತ್ತದೆ. ಈ ಎರಡೂ ಕಥೆಗಳು ಮಾನವನು ನಿಸರ್ಗದ ಭಾಗವಾದ ಪ್ರಾಣಿವರ್ಗದೊಡನೆ ಏರ್ಪಡಿಸಿಕೊಂಡ ಸಂಬಂಧಗಳಲ್ಲಾದ ಬದಲಾವಣೆಯನ್ನು ತುಂಬ ಪರಿಣಾಮಕಾರಿಯಾಗಿ ಧ್ವನಿಸುತ್ತವೆ.<br /> <br /> ರಾಮಣ್ಣ ಅವರಿಗೆ ಹೆಸರು ತಂದುಕೊಟ್ಟ `ಜೀತ~ ಕಥೆಯಲ್ಲಿ ಚಿಕ್ಕರಾಮ ಮತ್ತು ಪುಟ್ಟನಿಂಗರ ಮೂಲಕ ಸಾಂಪ್ರದಾಯಿಕ ಜೀತದ ವಿವರಣೆಯನ್ನು ನೀಡಲಾಗಿದೆ. ಜೊತೆಗೆ ಶೋಷಿತ ಸಮುದಾಯದ ಜೀವನದೊಳಗಡೆ ಹುದುಗಿರುವ ಅದಮ್ಯ ಜೀವನೋತ್ಸಾಹವನ್ನು ತೆರೆದಿಡಲಾಗಿದೆ.</p>.<p> <br /> ಆದರೆ ಜೀತದ ಯುಗ ಮುಗಿದು ಸ್ವಾತಂತ್ರ್ಯದ ಕಾಲ ಬಂದಾಗ ಮಾನವನಿಗೆ ನಿಜವಾಗಿ ಸ್ವಾತಂತ್ರ್ಯ ಸಿಕ್ಕಿದೆಯೇ ಎಂಬ ಪ್ರಶ್ನೆಯನ್ನು ರಾಮಣ್ಣ ಕೇಳಿಕೊಳ್ಳುತ್ತಾರೆ. `ಒಂದು ಹುಡುಗನಿಗೆ ಬಿದ್ದ ಕನಸು~ ಕಥೆಯಲ್ಲಿ ಹುಡುಗ ನೋಡುವುದು ಹಾಳು ಬಿದ್ದ ಕೋಟೆಗಳನ್ನು, ಬಂಧೀಖಾನೆಗಳನ್ನು ಮತ್ತು ಮೃಗಾಲಯದಲ್ಲಿ ಬಂಧಿತವಾದ ಪ್ರಾಣಿಗಳನ್ನು. <br /> <br /> ಈ ಸ್ಥಿತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹುಡುಗ ಕರುಣಾಕರನ ಕಥೆ ಮಾತ್ರ ಹುಡುಗನಿಗೆ ಇಷ್ಟವಾಗುತ್ತದೆ. ಆದರೆ ಬಿಡುಗಡೆಯ ಕಥೆ ಹೇಳಿದ ಮಾಸ್ತರರನ್ನು ಹುಡುಗ ಕನಸಲ್ಲಿ ಕಳೆದುಕೊಳ್ಳುತ್ತಾನೆ. ಬಿಡುಗಡೆಯೇ ಇಲ್ಲದೆ ಸೊರಗುವ ಮನುಕುಲದ ಕಥೆಯನ್ನು ರಾಮಣ್ಣ ಮನಮುಟ್ಟುವಂತೆ ವಿವರಿಸುತ್ತಾರೆ. `ಗಾಂಧಿ, ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು~ ಮೊದಲಾದ ಕಥೆಯಲ್ಲಿ ಇದು ವಿಡಂಬನೆಯ ಸ್ವರೂಪವನ್ನು ಪಡೆದುಕೊಂಡಿದೆ.<br /> <br /> ಬಹಳ ವಿಶಿಷ್ಟವಾದ `ಧರ್ಮ~ ಕಥೆಯನ್ನು ಗಮನಿಸಿದರೆ ರಾಮಣ್ಣನವರ ಮಾನವೀಯ ಕಳಕಳಿ ಎಷ್ಟು ವಿಸ್ತಾರವಾದುದು ಮತ್ತು ಉದಾರವಾದುದು ಎಂಬುದು ಸ್ಪಷ್ಟವಾಗುತ್ತದೆ. ಈ ಕಥೆಯು ಭೂ ಮಸೂದೆ ಕಾಲಕ್ಕೆ ಭೂಮಿ ಕಳಕೊಂಡ ಬ್ರಾಹ್ಮಣನೊಬ್ಬನ ಕರುಣ ಕಥೆ. ಅವನ ಉದಾತ್ತತೆಗೆ ಗೇಣಿದಾರ ಚನ್ನೇಗೌಡನೂ ಒಲಿದುಬಿಡುತ್ತಾನೆ. ದೇವರಾಜ ಅರಸು ಅವರ ಕಾಲದಲ್ಲಿ ನಡೆದ ಕ್ರಾಂತಿಕಾರೀ ಬದಲಾವಣೆಯನ್ನು ಹೊಸ ದೃಷ್ಟಿಕೋನದಿಂದ ನೋಡಲು ಈ ಕಥೆ ಒತ್ತಾಯಿಸುತ್ತದೆ.<br /> <br /> ಹೀಗೆ, ಬೆಸಗರಹಳ್ಳಿ ರಾಮಣ್ಣನವರ ಕಥೆಗಳು ಗ್ರಾಮೀಣ ಪರಿಸರದ ಜನರ ನಡುವಣ ಬದುಕಿನ ಸಹನೀಯತೆಯನ್ನು ಹಾಗೂ ಆಧುನಿಕ ಕಾಲದ ಜನರ ನಡುವಣ ಅಸಹನೆಗಳನ್ನು ಒಟ್ಟೊಟ್ಟಾಗಿ ಪ್ರಕಟಪಡಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>