ಕೇರಳ: ಮತ್ತೋರ್ವ ಅಥ್ಲೀಟ್ ಆತ್ಮಹತ್ಯೆಗೆ ಯತ್ನ

ತಿರುವನಂತಪುರ, ಕೇರಳ (ಪಿಟಿಐ):19 ವರ್ಷದ ಅಥೀಟ್ ಒಬ್ಬರು ಎಡಗೈ ನರವನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೇರಳದ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಬುಧವಾರ ನಡೆದಿದೆ. ಆದರೆ, ಘಟನೆಗೆ ತಕ್ಷಣವೇ ನಿಖರ ಕಾರಣ ತಿಳಿದು ಬಂದಿಲ್ಲ.
ಇತ್ತೀಚೆಗೆ ಕೇರಳದ ಅಲೆಪ್ಪಿಯಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ (ಎಸ್ಎಐ) ತರಬೇತಿ ಕೇಂದ್ರದಲ್ಲಿ ಮಹಿಳಾ ಅಥ್ಲೀಟ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಯು ಲಕ್ಷ್ಮಿಬಾಯಿ ರಾಷ್ಟ್ರೀಯ ದೈಹಿಕ ಶಿಕ್ಷಣ ಕಾಲೇಜಿಗೆ ಸೇರಿದವರು.
‘ಗಾಜಿನ ಚೂರಿನಿಂದ ತನ್ನ ಎಡಗೈಯನ್ನು ಕೊಯ್ದುಕೊಂಡು ಹಾನಿಗೊಳಿಸಿಕೊಳ್ಳಲು ಅಥ್ಲೀಟ್ ಯತ್ನಿಸಿದ್ದರು. ಅವರನ್ನು ತ್ರಿವೇಂದ್ರಂ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ’ ಎಂದು ಎಲ್ಎನ್ಸಿಪಿಇ ಪ್ರಾಂಶುಪಾಲ ಡಾ. ಜಿ.ಕಿಶೋರ್ ಅವರು ತಿಳಿಸಿದ್ದಾರೆ.
‘ತುಂಬಾ ಆಳದ ಗಾಯವೇನೂ ಆಗಿಲ್ಲ. ಅಥ್ಲೀಟ್ ಮಾನಸಿಕ ಉದ್ವಿಗ್ನತೆಯಲ್ಲಿದ್ದಂತೆ ಅನಿಸುತ್ತಿತ್ತು. ನಡೆದಿದ್ದೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅದಕ್ಕಾಗಿ ಭಾರತ ಕ್ರೀಡಾ ಪ್ರಾಧಿಕಾರದ ಒಬ್ಬರು ಹಿರಿಯ ಅಧಿಕಾರಿ ನೇತೃತ್ವದ ಮೂರು ಸದಸ್ಯರ ಸಮಿತಿ ನೇಮಿಸಲಾಗಿದೆ’ ಎಂದೂ ಡಾ. ಕಿಶೋರ್ ಅವರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.