<p> `ಶಿಸ್ತು, ಸಂಯಮ, ಸಂಗೀತವನ್ನು ಪ್ರೀತಿಸಿದರೆ ಸಂಗೀತಗಾರರಾಗಬಹುದು. ಸಂಗೀತ ಭಾಷೆ ಗೊತ್ತಿದ್ದರೆ ಸಾಕು. ಇಡೀ ಪ್ರಪಂಚವನ್ನೆಲ್ಲಾ ಸುತ್ತಬಹುದು. ಇದಕ್ಕೆ ನಾನೇ ಉದಾಹರಣೆ~ ಎಂದಿದ್ದ ಗಂಗೂಬಾಯಿ ಹಾನಗಲ್ ಸಂಗೀತ ಕ್ಷೇತ್ರದ ಮಹಾನ್ ಚೇತನ.<br /> <br /> ಪಂಡಿತ್ ಭೀಮಸೇನ ಜೋಷಿ ಹಾಗೂ ಗಂಗೂಬಾಯಿಯವರ ಸ್ವರ ತಾರಕಕ್ಕೆ ಹೋದಾಗ ಅದೊಂದು ಬ್ರಹ್ಮಾನಂದದ ಕಲ್ಪನೆಯೇ ಸರಿ. ಅಜ್ಜಿ, ತಾಯಿಯಿಂದ ಬಂದ ಸಂಗೀತದ ಕೊಡುಗೆಯನ್ನು ಉನ್ನತ ಶಿಖರಕ್ಕೆ ಕೊಂಡೊಯ್ದ ಗಂಗೂಬಾಯಿ ಸಹೃದಯಿ, ಮಾನವತಾವಾದಿ ಆಗಿದ್ದರು.<br /> <br /> ಅವರು ಬಾಲ್ಯದಲ್ಲಿ ಸಂಗೀತ ಕಲಿಯಲು ಪುರುಷ ಪ್ರಧಾನ ಸಮಾಜದಿಂದ ಅನೇಕ ವಿರೋಧಗಳು ಎದುರಾಗಿದ್ದವು. ಆದರೂ ದಿಟ್ಟತನದಿಂದ ಸಂಗೀತಾಭ್ಯಾಸ ಮಾಡುತ್ತಿದ್ದ ಗಂಗೂಬಾಯಿ ರಸ್ತೆಯಲ್ಲಿ ನಡೆದು ಬಂದರೆ `ಗಾನೇವಾಲಿ~ ಬರುತ್ತಿದ್ದಾಳೆ ಎನ್ನುತ್ತಿದ್ದರಂತೆ. <br /> <br /> ಇದನ್ನು ಕೇಳಿದಾಗ ಮೊದಲಿಗೆ ಬೇಸರ, ಅವಮಾನ ಎನಿಸಿದರೂ ಅದೇ ಜನ ಅತ್ಯುನ್ನತ ಗೌರವ ನೀಡುವ ಮಟ್ಟಿಗೆ ಅವರು ಬೆಳೆದರು. ಇದು ಅವರ ಮನೋಸ್ಥೈರ್ಯಕ್ಕೆ ಒಂದು ಉದಾಹರಣೆ.<br /> <br /> 1924ರ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಹನ್ನೊಂದು ವರ್ಷದವರಿದ್ದಾಗಲೇ ಹಾಡಿ ಗಾಂಧೀಜಿಯವರಿಂದ `ಶಹಬ್ಬಾಸ್~ ಎನಿಸಿಕೊಂಡಿದ್ದ ಅವರು, ಸುಮಾರು 60 ವರ್ಷಗಳ ಕಾಲ ಸಂಗೀತ ಲೋಕದ ಧ್ರುವತಾರೆಯಾಗಿ ಮೆರೆದರು.<br /> <br /> ಪತಿ ಗುರುರಾವ ಕೌಲಗಿ ಮದುವೆಯಾದ ನಾಲ್ಕನೇ ವರ್ಷಕ್ಕೇ ತೀರಿಕೊಂಡಾಗ ಮೂರು ಮಕ್ಕಳ ಜವಾಬ್ದಾರಿಯನ್ನು ಸಂಗೀತ ಕಲಿಯುತ್ತಲೇ ನಿಭಾಯಿಸಿದರು. ಇಂತಹ ಮಹಾ ತಾಯಿಯ ಸ್ವರವೂ ತಾಯಿಯಂತಹ ವಾತ್ಸಲ್ಯವನ್ನು ಕೇಳುಗರಿಗೆ ನೀಡುತ್ತಿತ್ತಂತೆ.<br /> <br /> ಒಮ್ಮೆ ಮೈಸೂರಿನಲ್ಲಿ ನಡೆಯುತ್ತಿದ್ದ ಹನುಮ ಜಯಂತಿಯ ಸಂಗೀತೋತ್ಸವದಲ್ಲಿ ಕಚೇರಿ ಕೊಡುತ್ತಿರುವಾಗ ಸರಕ್ಕನೇ ಒಬ್ಬ ಹುಡುಗ ಅಲ್ಲಿಗೆ ಬಂದ. ಗಂಗೂಬಾಯಿಯವರ ಸಂಗೀತ ಸುಧೆಯಿಂದ ನಿಗೂಢವಾದ ಭಾವ ಹೊಮ್ಮುತ್ತಿತ್ತು. ಆ ಭಾವ ಹುಡುಗನಲ್ಲಿ ತುಂಬಿ ಹೋಗಿ `ನನಗಾಗಿಯೇ ಹಾಡುತ್ತಿದ್ದಾರೇನೋ~ ಎಂದೆನಿಸಿ ಕಾಲದ ಅರಿವೇ ಸತ್ತು ಹೋಗಿತ್ತಂತೆ- <br /> <br /> ಹೀಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ. ಕುಂದಗೋಳದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಬರುವ ಸವಾಯಿ ಗಂಧರ್ವರ ಪುಣ್ಯತಿಥಿಯಲ್ಲಿ ಎರಡು ದಿನಗಳವರೆಗೆ ಅಹೋರಾತ್ರಿ ಸಂಗೀತೋತ್ಸವ ನಡೆಯುತ್ತದೆ. <br /> <br /> ದೇಶದ ಮೂಲೆ ಮೂಲೆಯಿಂದ ಸಂಗೀತಗಾರರು ಬಂದು ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ಒಮ್ಮೆ ಬಸವರಾಜ ರಾಜಗುರು ಅವರು ಹಾಡುತ್ತಾ ಮೈಮರೆತಿದ್ದಾಗ ಸಭೆಯಲ್ಲಿ ಇದ್ದ ಗಂಗೂಬಾಯಿಯವರು `ಈ ಸಭೆ ನಮ್ಮ - ನಿಮ್ಮಂಥವರಿಗಲ್ಲ, ಬೆಳೆದು ಬರಬೇಕೆನ್ನುವ ತರುಣ ಕಲಾವಿದರಿಗೆ. <br /> <br /> ದಯಮಾಡಿ ಲಗೂನ ಮುಗಿಸಿರಿ~ ಎಂದರಂತೆ. ತಮ್ಮನ್ನು ಬಿಟ್ಟು ಮತ್ತೊಬ್ಬರು ಮುಂದೆ ಬರಬಾರದೆಂಬ ಧೋರಣೆಯುಳ್ಳ ಅನೇಕ ಪಂಡಿತರು, ವಿದ್ವಾಂಸರ ನಡುವೆ, ಬೆಳೆಯುವ ಸಾಮರ್ಥ್ಯವುಳ್ಳ ತರುಣ ಕಲಾವಿದರಿಗೆ ಅವಕಾಶ ನೀಡಬೇಕೆಂಬ ಗಂಗೂಬಾಯಿ ಅವರ ಧ್ಯೇಯಕ್ಕೆ ಇದೊಂದು ಉದಾಹರಣೆ.<br /> <br /> ಸರಳತೆ ಮೈಗೂಡಿಸಿಕೊಂಡಿದ್ದ ಅವರು ಎಲ್ಲರಿಗೂ ಅಕ್ಕ ಆಗಿದ್ದವರು. ಹುಬ್ಬಳ್ಳಿಯ ತಮ್ಮ ಮನೆಗೆ ಬಂದವರನ್ನು ಆತ್ಮೀಯ ನುಡಿಗಳಿಂದ ಉಪಚರಿಸಿ, ಪಕ್ಕದಲ್ಲೇ ಕೂರಿಸಿಕೊಂಡು ಫೋಟೋ ತೆಗೆಸಿ ಕೊಡುತ್ತಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಗಂಗೂಬಾಯಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದಾಗ, ಅವರು ನಗುತ್ತಾ, `ಅಯ್ಯೋ ನಾನು ಓದಿದ್ದು ಐದನೇ ಇಯತ್ತೆ. ನನಗಾವ ಡಾಕ್ಟರೇಟ್~ ಎಂದರಂತೆ.<br /> <br /> ಗುರು - ಶಿಷ್ಯ ಪರಂಪರೆಯನ್ನು ಅಪಾರವಾಗಿ ಅನುಮೋದಿಸುತ್ತಿದ್ದ ಅವರು ಶಾಸ್ತ್ರೀಯ ಸಂಗೀತ ಅಭ್ಯಾಸದ ಮೂಲಕ ಸಂಸ್ಕೃತಿ ಕಾಪಾಡುವ ಕೆಲಸ ಮಾಡಬೇಕು ಎನ್ನುತ್ತಿದ್ದರು. ಸಂಗೀತದಲ್ಲಿ ಆಗುವ ಸಂಶೋಧನೆ, ಒಂದೇ ಘರಾಣಾದಲ್ಲಿ ಏನೆಲ್ಲಾ ಪ್ರಯೋಗಗಳನ್ನು ಮಾಡಬಹುದು ಎಂಬುದು ಎಲ್ಲರಿಗೂ ತಿಳಿಯುವಂತಾಗಬೇಕು ಎನ್ನುವ ಕಳಕಳಿಯನ್ನೂ ಹೊಂದಿದ್ದರು.<br /> <br /> ಪದ್ಮ ಭೂಷಣ, ಪದ್ಮ ವಿಭೂಷಣ, ತಾನ್ಸೇನ್ ಪುರಸ್ಕಾರ, ಸವಾಯಿ ಗಂಧರ್ವರ ರಾಷ್ಟ್ರೀಯ ಪುರಸ್ಕಾರ ಹೀಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದ ಗಂಗೂಬಾಯಿ ಅವರ ಜೀವಮಾನದ ಸಾಧನೆಗೆ ನೆದರ್ಲೆಂಡ್ ಸರ್ಕಾರದಿಂದಲೂ ಪ್ರಶಸ್ತಿ ಲಭಿಸಿತ್ತು.<br /> <br /> ಮೈಸೂರಿನಲ್ಲಿರುವ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗಂಗೂಬಾಯಿ ಅವರ ಹೆಸರನ್ನು ಹೊತ್ತು ಸಾರ್ಥಕಗೊಂಡಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p> `ಶಿಸ್ತು, ಸಂಯಮ, ಸಂಗೀತವನ್ನು ಪ್ರೀತಿಸಿದರೆ ಸಂಗೀತಗಾರರಾಗಬಹುದು. ಸಂಗೀತ ಭಾಷೆ ಗೊತ್ತಿದ್ದರೆ ಸಾಕು. ಇಡೀ ಪ್ರಪಂಚವನ್ನೆಲ್ಲಾ ಸುತ್ತಬಹುದು. ಇದಕ್ಕೆ ನಾನೇ ಉದಾಹರಣೆ~ ಎಂದಿದ್ದ ಗಂಗೂಬಾಯಿ ಹಾನಗಲ್ ಸಂಗೀತ ಕ್ಷೇತ್ರದ ಮಹಾನ್ ಚೇತನ.<br /> <br /> ಪಂಡಿತ್ ಭೀಮಸೇನ ಜೋಷಿ ಹಾಗೂ ಗಂಗೂಬಾಯಿಯವರ ಸ್ವರ ತಾರಕಕ್ಕೆ ಹೋದಾಗ ಅದೊಂದು ಬ್ರಹ್ಮಾನಂದದ ಕಲ್ಪನೆಯೇ ಸರಿ. ಅಜ್ಜಿ, ತಾಯಿಯಿಂದ ಬಂದ ಸಂಗೀತದ ಕೊಡುಗೆಯನ್ನು ಉನ್ನತ ಶಿಖರಕ್ಕೆ ಕೊಂಡೊಯ್ದ ಗಂಗೂಬಾಯಿ ಸಹೃದಯಿ, ಮಾನವತಾವಾದಿ ಆಗಿದ್ದರು.<br /> <br /> ಅವರು ಬಾಲ್ಯದಲ್ಲಿ ಸಂಗೀತ ಕಲಿಯಲು ಪುರುಷ ಪ್ರಧಾನ ಸಮಾಜದಿಂದ ಅನೇಕ ವಿರೋಧಗಳು ಎದುರಾಗಿದ್ದವು. ಆದರೂ ದಿಟ್ಟತನದಿಂದ ಸಂಗೀತಾಭ್ಯಾಸ ಮಾಡುತ್ತಿದ್ದ ಗಂಗೂಬಾಯಿ ರಸ್ತೆಯಲ್ಲಿ ನಡೆದು ಬಂದರೆ `ಗಾನೇವಾಲಿ~ ಬರುತ್ತಿದ್ದಾಳೆ ಎನ್ನುತ್ತಿದ್ದರಂತೆ. <br /> <br /> ಇದನ್ನು ಕೇಳಿದಾಗ ಮೊದಲಿಗೆ ಬೇಸರ, ಅವಮಾನ ಎನಿಸಿದರೂ ಅದೇ ಜನ ಅತ್ಯುನ್ನತ ಗೌರವ ನೀಡುವ ಮಟ್ಟಿಗೆ ಅವರು ಬೆಳೆದರು. ಇದು ಅವರ ಮನೋಸ್ಥೈರ್ಯಕ್ಕೆ ಒಂದು ಉದಾಹರಣೆ.<br /> <br /> 1924ರ ಐತಿಹಾಸಿಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಹನ್ನೊಂದು ವರ್ಷದವರಿದ್ದಾಗಲೇ ಹಾಡಿ ಗಾಂಧೀಜಿಯವರಿಂದ `ಶಹಬ್ಬಾಸ್~ ಎನಿಸಿಕೊಂಡಿದ್ದ ಅವರು, ಸುಮಾರು 60 ವರ್ಷಗಳ ಕಾಲ ಸಂಗೀತ ಲೋಕದ ಧ್ರುವತಾರೆಯಾಗಿ ಮೆರೆದರು.<br /> <br /> ಪತಿ ಗುರುರಾವ ಕೌಲಗಿ ಮದುವೆಯಾದ ನಾಲ್ಕನೇ ವರ್ಷಕ್ಕೇ ತೀರಿಕೊಂಡಾಗ ಮೂರು ಮಕ್ಕಳ ಜವಾಬ್ದಾರಿಯನ್ನು ಸಂಗೀತ ಕಲಿಯುತ್ತಲೇ ನಿಭಾಯಿಸಿದರು. ಇಂತಹ ಮಹಾ ತಾಯಿಯ ಸ್ವರವೂ ತಾಯಿಯಂತಹ ವಾತ್ಸಲ್ಯವನ್ನು ಕೇಳುಗರಿಗೆ ನೀಡುತ್ತಿತ್ತಂತೆ.<br /> <br /> ಒಮ್ಮೆ ಮೈಸೂರಿನಲ್ಲಿ ನಡೆಯುತ್ತಿದ್ದ ಹನುಮ ಜಯಂತಿಯ ಸಂಗೀತೋತ್ಸವದಲ್ಲಿ ಕಚೇರಿ ಕೊಡುತ್ತಿರುವಾಗ ಸರಕ್ಕನೇ ಒಬ್ಬ ಹುಡುಗ ಅಲ್ಲಿಗೆ ಬಂದ. ಗಂಗೂಬಾಯಿಯವರ ಸಂಗೀತ ಸುಧೆಯಿಂದ ನಿಗೂಢವಾದ ಭಾವ ಹೊಮ್ಮುತ್ತಿತ್ತು. ಆ ಭಾವ ಹುಡುಗನಲ್ಲಿ ತುಂಬಿ ಹೋಗಿ `ನನಗಾಗಿಯೇ ಹಾಡುತ್ತಿದ್ದಾರೇನೋ~ ಎಂದೆನಿಸಿ ಕಾಲದ ಅರಿವೇ ಸತ್ತು ಹೋಗಿತ್ತಂತೆ- <br /> <br /> ಹೀಗೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಕಾದಂಬರಿಕಾರರಾದ ಎಸ್.ಎಲ್. ಭೈರಪ್ಪ. ಕುಂದಗೋಳದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಬರುವ ಸವಾಯಿ ಗಂಧರ್ವರ ಪುಣ್ಯತಿಥಿಯಲ್ಲಿ ಎರಡು ದಿನಗಳವರೆಗೆ ಅಹೋರಾತ್ರಿ ಸಂಗೀತೋತ್ಸವ ನಡೆಯುತ್ತದೆ. <br /> <br /> ದೇಶದ ಮೂಲೆ ಮೂಲೆಯಿಂದ ಸಂಗೀತಗಾರರು ಬಂದು ಕಾರ್ಯಕ್ರಮ ನಡೆಸಿ ಕೊಡುತ್ತಾರೆ. ಒಮ್ಮೆ ಬಸವರಾಜ ರಾಜಗುರು ಅವರು ಹಾಡುತ್ತಾ ಮೈಮರೆತಿದ್ದಾಗ ಸಭೆಯಲ್ಲಿ ಇದ್ದ ಗಂಗೂಬಾಯಿಯವರು `ಈ ಸಭೆ ನಮ್ಮ - ನಿಮ್ಮಂಥವರಿಗಲ್ಲ, ಬೆಳೆದು ಬರಬೇಕೆನ್ನುವ ತರುಣ ಕಲಾವಿದರಿಗೆ. <br /> <br /> ದಯಮಾಡಿ ಲಗೂನ ಮುಗಿಸಿರಿ~ ಎಂದರಂತೆ. ತಮ್ಮನ್ನು ಬಿಟ್ಟು ಮತ್ತೊಬ್ಬರು ಮುಂದೆ ಬರಬಾರದೆಂಬ ಧೋರಣೆಯುಳ್ಳ ಅನೇಕ ಪಂಡಿತರು, ವಿದ್ವಾಂಸರ ನಡುವೆ, ಬೆಳೆಯುವ ಸಾಮರ್ಥ್ಯವುಳ್ಳ ತರುಣ ಕಲಾವಿದರಿಗೆ ಅವಕಾಶ ನೀಡಬೇಕೆಂಬ ಗಂಗೂಬಾಯಿ ಅವರ ಧ್ಯೇಯಕ್ಕೆ ಇದೊಂದು ಉದಾಹರಣೆ.<br /> <br /> ಸರಳತೆ ಮೈಗೂಡಿಸಿಕೊಂಡಿದ್ದ ಅವರು ಎಲ್ಲರಿಗೂ ಅಕ್ಕ ಆಗಿದ್ದವರು. ಹುಬ್ಬಳ್ಳಿಯ ತಮ್ಮ ಮನೆಗೆ ಬಂದವರನ್ನು ಆತ್ಮೀಯ ನುಡಿಗಳಿಂದ ಉಪಚರಿಸಿ, ಪಕ್ಕದಲ್ಲೇ ಕೂರಿಸಿಕೊಂಡು ಫೋಟೋ ತೆಗೆಸಿ ಕೊಡುತ್ತಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಗಂಗೂಬಾಯಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದಾಗ, ಅವರು ನಗುತ್ತಾ, `ಅಯ್ಯೋ ನಾನು ಓದಿದ್ದು ಐದನೇ ಇಯತ್ತೆ. ನನಗಾವ ಡಾಕ್ಟರೇಟ್~ ಎಂದರಂತೆ.<br /> <br /> ಗುರು - ಶಿಷ್ಯ ಪರಂಪರೆಯನ್ನು ಅಪಾರವಾಗಿ ಅನುಮೋದಿಸುತ್ತಿದ್ದ ಅವರು ಶಾಸ್ತ್ರೀಯ ಸಂಗೀತ ಅಭ್ಯಾಸದ ಮೂಲಕ ಸಂಸ್ಕೃತಿ ಕಾಪಾಡುವ ಕೆಲಸ ಮಾಡಬೇಕು ಎನ್ನುತ್ತಿದ್ದರು. ಸಂಗೀತದಲ್ಲಿ ಆಗುವ ಸಂಶೋಧನೆ, ಒಂದೇ ಘರಾಣಾದಲ್ಲಿ ಏನೆಲ್ಲಾ ಪ್ರಯೋಗಗಳನ್ನು ಮಾಡಬಹುದು ಎಂಬುದು ಎಲ್ಲರಿಗೂ ತಿಳಿಯುವಂತಾಗಬೇಕು ಎನ್ನುವ ಕಳಕಳಿಯನ್ನೂ ಹೊಂದಿದ್ದರು.<br /> <br /> ಪದ್ಮ ಭೂಷಣ, ಪದ್ಮ ವಿಭೂಷಣ, ತಾನ್ಸೇನ್ ಪುರಸ್ಕಾರ, ಸವಾಯಿ ಗಂಧರ್ವರ ರಾಷ್ಟ್ರೀಯ ಪುರಸ್ಕಾರ ಹೀಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದ ಗಂಗೂಬಾಯಿ ಅವರ ಜೀವಮಾನದ ಸಾಧನೆಗೆ ನೆದರ್ಲೆಂಡ್ ಸರ್ಕಾರದಿಂದಲೂ ಪ್ರಶಸ್ತಿ ಲಭಿಸಿತ್ತು.<br /> <br /> ಮೈಸೂರಿನಲ್ಲಿರುವ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗಂಗೂಬಾಯಿ ಅವರ ಹೆಸರನ್ನು ಹೊತ್ತು ಸಾರ್ಥಕಗೊಂಡಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>