<p>ಅಂಬೇಡ್ಕರ್ವಾದಿ ವಿಚಾರವಾದದ ತಾತ್ವಿಕ ನೋಟ-ಕ್ರಮವನ್ನು ಮುಂದುವರಿಸಿರುವ ಹೊಸ ತಲೆಮಾರಿನ ದಲಿತ ಕಾವ್ಯ, ಸಾಮಾಜಿಕ ಸತ್ಯಗಳಿಗೆ ದನಿಯಾಗುವ ಮೂಲಕ ತನ್ನ ಪ್ರಖರತೆ ಹೆಚ್ಚಿಸಿಕೊಂಡಿದೆ.<br /> <br /> ಕನ್ನಡ ದಲಿತ ಕಾವ್ಯವನ್ನು ಇನ್ನೂ ಸಮರ್ಥನೆಯ ಮೊದಲ ಹಂತದಲ್ಲಿಯೇ ನೋಡುತ್ತಿರುವವರಿಗೆ ಈಗಾಗಲೇ ಕನ್ನಡ ದಲಿತ ಕಾವ್ಯದ ಮೂರು ಹಾಗೂ ನಾಲ್ಕನೆಯ ತಲೆಮಾರುಗಳು ಬಂದಿವೆಯೆಂಬ ಅಂಶ ಅಚ್ಚರಿ ಹುಟ್ಟಿಸಬಹುದು. ಸಹಜವಾಗಿಯೇ ಈ ತಲೆಮಾರುಗಳ ಕಾವ್ಯದ ಕಾಳಜಿ, ಬಂಧ ಮತ್ತು ಲಯ ಮಾದರಿಗಳು ಕೂಡ ಬದಲಾಗಿವೆ. <br /> <br /> ಈ ಹೊಸ ತಲೆಮಾರುಗಳಲ್ಲಿ ಎದ್ದು ಕಾಣುವ ಸುಬ್ಬು ಹೊಲೆಯಾರ್ ತಮ್ಮ ಹಿಂದಿನ ತಲೆಮಾರುಗಳಂತೆಯೇ ದಲಿತ ಚಳವಳಿಯಿಂದ ಕಾವ್ಯಕ್ಕೆ ಬಂದು ಕ್ರಮೇಣ ಅಂಬೇಡ್ಕರ್ವಾದವನ್ನು ಗಾಂಧಿವಾದದ ಹಿನ್ನೆಲೆಯಲ್ಲಿ ಹೊಸದಾಗಿ ವಿವರಿಸಿಕೊಂಡ ಕವಿ.<br /> <br /> ಅವರ `ಗಾಂಧಿಯನ್ನು ಪ್ರೀತಿಸಲಾರದವರು~ ಹಾಗೂ `ಗಾಂಧಿ ಬಂದಾಗ ಅಂಬೇಡ್ಕರ್ ಒಳಗಿದ್ದರು~ ಪದ್ಯಗಳು ಗಾಂಧೀಜಿಯನ್ನು ದಲಿತ ಕಾವ್ಯ ಹಾಗೂ ದಲಿತ ಚಿಂತನೆಯನ್ನು ಬೆಸೆಯಲೆತ್ನಿಸಿವೆ. ಒಟ್ಟು ಜಗತ್ತಿನ ದುಗುಡದ ಬಗೆಗೂ ಬರೆಯುವ ಸುಬ್ಬು ನವ್ಯ ಕಾಲದಂತೆ ಗದ್ಯದ ಲಯ ಮಾದರಿಗಳನ್ನು ಕಾವ್ಯಕ್ಕೆ ಒಗ್ಗಿಸಲೆತ್ನಿಸಿದ್ದಾರೆ. <br /> <br /> ಹೊಸ ತಲೆಮಾರಿನ ಅತ್ಯಂತ ಪ್ರತಿಭಾವಂತ ಕವಿಯಾಗಿದ್ದ ಎನ್.ಕೆ. ಹನುಮಂತಯ್ಯ ಸೀಮಿತ ಅರ್ಥದಲ್ಲಾದರೂ ಸಿದ್ಧಾಂತಗಳ ಪರೀಕ್ಷೆಯನ್ನು ತಮ್ಮ ಕಾವ್ಯಕ್ಕೆ ತಂದರು. ಸುಬ್ಬು, ಹನುಮಂತಯ್ಯ, ವಿ.ಎಂ.ಮಂಜುನಾಥ್, ವಿ.ಆರ್.ಕಾರ್ಪೆಂಟರ್- ಈ ನಾಲ್ವರೂ ತಾತ್ವಿಕತೆಯ ದೃಷ್ಟಿಯಿಂದ ಲಂಕೇಶರ ಪ್ರಭಾವವನ್ನು ಸ್ವೀಕರಿಸಿದವರು ಎಂಬ ಅಂಶ ಕೂಡ ಇವರ ಕಾವ್ಯದ ನುಡಿಗಟ್ಟು, ನೋಟಕ್ರಮ ಹಾಗೂ ತಾತ್ವಿಕತೆಗಳು ಭಿನ್ನವಾಗಿರಲು ಕಾರಣವಿರಬಹುದು.<br /> <br /> ಇವರಲ್ಲಿ ಕೆಲವರು ತಮ್ಮ ಕಾವ್ಯದ ಒಳಗೂ ಹಾಗೂ ಹೊರಗೂ ದಲಿತ ಚಳವಳಿಯನ್ನು ಪರೀಕ್ಷೆಗೆ ಒಳಪಡಿಸಲೆತ್ನಿಸಿರುವುದು ಇವರ ಕಾವ್ಯವನ್ನು ಪ್ರವೇಶಿಸಿರುವ ಸಾಮಾಜಿಕ ವಿಮರ್ಶೆಯ ಹೊಸ ಆಯಾಮಗಳನ್ನೂ ಸೂಚಿಸುವಂತಿದೆ. ನಗರದಲ್ಲಿ ಬೆಳೆದ ಮಂಜುನಾಥ್, ಕಾರ್ಪೆಂಟರ್ ದಲಿತ ಕಾವ್ಯದ ಸಿದ್ಧ ಮಾದರಿ ಮೀರಲೆತ್ನಿಸಿದ್ದಾರೆ. ಈ ಎಲ್ಲರ ಜೊತೆಗೇ ಬರೆಯುತ್ತಿರುವ ಲಕ್ಕೂರು ಆನಂದರಲ್ಲಿ ದಲಿತ ಕಾವ್ಯದ ಈವರೆಗಿನ ಅನೇಕ ಮಾದರಿಗಳು ಮರುಕಳಿಸಿವೆ. <br /> <br /> ಮೂರು ದಶಕಕ್ಕಿಂತಲೂ ಹೆಚ್ಚು ಕಾಲ ಹರಿದಿರುವ ದಲಿತ ಕಾವ್ಯದಲ್ಲಿ ಮಹಿಳಾ ದನಿಗಳು ತೀರಾ ಕಡಿಮೆ ಎಂಬ ಅಂಶ ಏಕಕಾಲಕ್ಕೆ ಸ್ತ್ರೀವಾದಿ ಚಿಂತನೆ ಹಾಗೂ ದಲಿತ ಚಿಂತನೆಗಳೆರಡೂ ದಲಿತ ಮಹಿಳೆಯರನ್ನು ದೊಡ್ಡ ಮಟ್ಟದಲ್ಲಿ ಮುಟ್ಟಲು ಆಗದಿರುವ ಕೊರತೆಯನ್ನು ಎತ್ತಿ ಹೇಳುತ್ತದೆ. <br /> <br /> ಇಂಥ ಸನ್ನಿವೇಶದಲ್ಲಿ ಅನಸೂಯ ಕಾಂಬಳೆ ದಲಿತ ಕಾವ್ಯಕ್ಕೆ ಸ್ತ್ರೀ ದೃಷ್ಟಿಕೋನವನ್ನು ಬೆಸೆದು, ದಲಿತ ಸ್ತ್ರೀವಾದದ ಸ್ವರೂಪವನ್ನೂ ರೂಪಿಸಲೆತ್ನಿಸಿದ್ದಾರೆ. `ಹಂಚವ್ವಳ ಹಾಡು~ ಥರದ ಪದ್ಯಗಳಲ್ಲಿ ಜನಪದ ದ್ರವ್ಯವನ್ನೂ ಬಳಸಿದ್ದಾರೆ. <br /> <br /> ಈ ಮಾದರಿಯಲ್ಲಿ ಜನಪದ ಲಯ ಹಾಗೂ ವಸ್ತುಗಳನ್ನು ವಡ್ಡಗೆರೆ ನಾಗರಾಜಯ್ಯನವರೂ ತಮ್ಮ ಕಾವ್ಯದಲ್ಲಿ ಪ್ರಯೋಗಿಸಿದ್ದಾರೆ. ಇದೇ ಬಗೆಯ ಮತ್ತೊಂದು ಹಾದಿಯ ಪಯಣವನ್ನು ಬಿಂಬಿಸುವ ಮಹದೇವ ಶಂಕನಪುರ ಅವರು ಮಂಟೇಸ್ವಾಮಿ ಚೈತನ್ಯವನ್ನು ತಮ್ಮ ಪದ್ಯಗಳಿಗೆ ತಂದಿದ್ದಾರೆ. <br /> <br /> ಈ ಎಲ್ಲ ಕವಿಗಳು ತಂತಮ್ಮ ಕಾವ್ಯದಲ್ಲಿ ಒಟ್ಟಾರೆಯಾಗಿ ಅಂಬೇಡ್ಕರ್ವಾದಿ ವಿಚಾರವಾದದ ತಾತ್ವಿಕ ನೋಟಕ್ರಮವನ್ನು ಮುಂದುವರಿಸಿದ್ದಾರೆ. ಜೊತೆಜೊತೆಗೇ ಅವರು ಧರ್ಮವನ್ನು ಹಾಗೂ ತಂತಮ್ಮ ದೇಶೀ ಭೂತಕಾಲವನ್ನು, ದಲಿತ ಪುರಾಣಗಳ ಲೋಕವನ್ನು ಹುಡುಕಿಕೊಳ್ಳುತ್ತಿರುವ ರೀತಿ ಕೂಡ ಕುತೂಹಲಕರವಾಗಿದೆ. <br /> <br /> ಸುಬ್ಬು ಹಾಗೂ ಹನುಮಂತಯ್ಯನವರ ಕಾವ್ಯದಲ್ಲಿ ಅಂಬೇಡ್ಕರ್ ರೂಪಿಸಿಕೊಟ್ಟ ನವಬೌದ್ಧ ಮಾರ್ಗ; ವಡ್ಡಗೆರೆ ನಾಗರಾಜಯ್ಯನವರ ಕಾವ್ಯದಲ್ಲಿರುವ ಆದಿಜಾಂಬವ ಮೂಲದ ಆಸರೆ; ಮಹದೇವ ಶಂಕನಪುರ ಅವರ ಕಾವ್ಯದಲ್ಲಿ ಮಂಟೇಸ್ವಾಮಿ - ಮಲೆಮಹದೇಶ್ವರ ಪರಂಪರೆಯ ಮರುಹುಡುಕಾಟ; ಮಂಜುನಾಥರ ಪದ್ಯಗಳಲ್ಲಿ ಅಲ್ಲಲ್ಲಿ ಸುಳಿಯುವ ಕ್ರೈಸ್ತ ಧರ್ಮ ಕೊಟ್ಟ ವಿಮೋಚನೆಯ ಹಾದಿಗಳು ಕೂಡ ಈ ಹೊಸ ತಲೆಮಾರಿನ ಕಾವ್ಯಕ್ಕೆ ಭಿನ್ನ ತಾತ್ವಿಕ ಭಿತ್ತಿಗಳನ್ನೂ ಭಾಷಾಲೋಕವನ್ನೂ ಒದಗಿಸಿವೆ.<br /> <br /> ಇಷ್ಟೆಲ್ಲ ವಿಶಿಷ್ಟ ಅಂಶಗಳು ಹೊಸ ಪೀಳಿಗೆಯ ದಲಿತ ಕಾವ್ಯದಲ್ಲಿ ಕಾಣಬರುತ್ತಿದ್ದರೂ ಇವು ಅಂತಿಮವಾಗಿ ಬಹುತೇಕ ಸಾಮಾಜಿಕ ಸತ್ಯಗಳನ್ನೇ ಹೆಚ್ಚು ಹೇಳುತ್ತಿರುವಂತೆ ಕಾಣುತ್ತವೆನ್ನುವುದು ನಿಜ. <br /> <br /> ಈ ಕವಿಗಳು ಬಳಸುತ್ತಿರುವ ಚೌಕಟ್ಟುಗಳು ಹಾಗೂ ಧೋರಣೆಗಳು ತಾವು ಮಂಡಿಸುತ್ತಿರುವ ಅನುಭವಗಳ ಎಲ್ಲ ಮುಖಗಳನ್ನು ಗಾಢ ಪರೀಕ್ಷೆಗೆ ಒಳಪಡಿಸುವಲ್ಲಿ ಶಕ್ತವಾಗಿದ್ದಂತಿಲ್ಲ; ಅಥವಾ ಆ ರೀತಿಯ ನಿಷ್ಠುರ ಪರೀಕ್ಷೆಯ ಅಗತ್ಯದ ಬಗ್ಗೆ ಈ ಕವಿಗಳು ಹೆಚ್ಚು ಯೋಚಿಸಿರುವ ಸೂಚನೆಗಳು ಅವರ ಕಾವ್ಯದಲ್ಲಿ ಕಂಡು ಬರುತ್ತಿಲ್ಲ. <br /> <br /> ಹೀಗಾಗಿ ಕಾವ್ಯರಚನೆ ಒದಗಿಸುವ ಬಹುಮುಖ್ಯ ಸ್ವಾತಂತ್ರ್ಯಗಳಲ್ಲಿ ಒಂದಾದ ಸಕಲ ಅನುಭವಗಳನ್ನು ಹಾಗೂ ಘಟನೆಗಳನ್ನು ತೀವ್ರವಾಗಿ ಪರೀಕ್ಷಿಸುವ ಸ್ವಾತಂತ್ರ್ಯವನ್ನು ಈ ಕವಿಗಳು ಉಪೇಕ್ಷಿಸಿದಂತೆ ಕಾಣುತ್ತದೆ. <br /> <br /> ಜೊತೆಗೆ, ಕಾವ್ಯದ ಮೂಲ ಪ್ರಾಣಗಳಲ್ಲಿ ಒಂದಾದ ಭಾಷಿಕ ಪ್ರಯೋಗಗಳ ಸಾಧ್ಯತೆಗಳ ಬಗ್ಗೆ ಈ ಕವಿಗಳಲ್ಲಿ ಹೆಚ್ಚಿನ ಉತ್ಸಾಹ ಇದ್ದಂತಿಲ್ಲ. ಹೀಗಾಗಿ, ಕಾವ್ಯ ಪ್ರಕಾರದಲ್ಲಿ ಕನ್ನಡದ ಶ್ರೇಷ್ಠ ಕವಿಗಳು ಸಾಧಿಸಿರುವ ಭಾಷಿಕ ಪ್ರಯೋಗಗಳು ಹಾಗೂ ಅವುಗಳ ಸೌಂದರ್ಯಾತ್ಮಕ ಆನಂದವನ್ನು ಈ ಕವಿಗಳು ಸಾಧಿಸಲಾಗದೆ ಅವರ ಕಾವ್ಯ ಬಳಲಿರುವಂತೆ ಕಾಣುತ್ತದೆ.<br /> <br /> ಈಗಾಗಲೇ ಹೆಚ್ಚು ಪರಿಚಿತರಾಗಿರುವ ಹೊಸ ತಲೆಮಾರಿನ ಕವಿಗಳ ಜೊತೆಗೆ ಈಚೆಗೆ ಒಂದೊಂದು ಕವನ ಸಂಕಲನವನ್ನು ತಂದಿರುವ ಅಥವಾ ಬಿಡಿಬಿಡಿ ಪದ್ಯಗಳನ್ನು ಬರೆದ ಕವಿಗಳು ಕೂಡ ಇದೀಗ ಕನ್ನಡ ಕಾವ್ಯರಂಗದ ಮೇಲೆ ಮಿಂಚುತ್ತಿದ್ದಾರೆ.<br /> <br /> ಎಂ.ಎಸ್.ಶೇಖರ್, ಶ್ರೀನಿವಾಸರಾಜು, ಟಿ. ಯಲ್ಲಪ್ಪ, ರಾಮಪ್ಪ ಮಾದರ್, ಹರೀಶ್ ಕಟ್ಟೆಬೆಳಗುಲಿ, ಶಿವಕುಮಾರ ಕಂಪ್ಲಿ ಅವರ ಕವನ ಸಂಕಲನಗಳಲ್ಲಿ ಹಾಗೂ ಕೆಲವೇ ಪದ್ಯಗಳನ್ನು ಬರೆದರೂ ವಿಶಿಷ್ಟವಾಗಿ ಕಾಣುವ ಗಂಗಪ್ಪ ತಳವಾರ ಅವರ ಪದ್ಯಗಳಲ್ಲಿ ಕೆಲವು ಹೊಸ ಮಾದರಿಗಳು ಕಾಣುತ್ತವೆ. ಈ ಎಲ್ಲದರ ನಡುವೆ ಸಿದ್ಧ ದಲಿತ ಐಡೆಂಟಿಟಿಯ ಹಂಗಿಲ್ಲದೆ ಬರೆಯುತ್ತಿರುವ ಹೊಸ ದಲಿತ ಕವಿಗಳೂ ಇದ್ದಾರೆ. <br /> <br /> ದಲಿತ ಕಾವ್ಯದಿಂದ ಬಗೆಬಗೆಯ ಪ್ರೇರಣೆಗಳನ್ನು ಪಡೆದು ದಲಿತ ಕಾವ್ಯದ ಗಡಿಗೆರೆಗಳನ್ನು ವಿಸ್ತರಿಸಲು ಯತ್ನಿಸುತ್ತಿರುವ ದಲಿತೇತರ ಕವಿಗಳೂ ಇದ್ದಾರೆ. ಈ ಅಂಶ ದಲಿತ ಕಾವ್ಯದ ಬಂಧ ಹಾಗೂ ತಾತ್ವಿಕತೆಗಳು ಒಟ್ಟಾರೆಯಾಗಿ ಕನ್ನಡ ಕಾವ್ಯದ ಹೊಸ ತಲೆಮಾರಿನ ಕಾವ್ಯವನ್ನು ಪ್ರಭಾವಿಸುತ್ತಿರುವುದರ ಸೂಚನೆಯಂತಿದೆ. <br /> <br /> ಕ್ರಮೇಣ ದಲಿತ ಕಾವ್ಯ ಎಂಬ ಪ್ರತ್ಯೇಕ ಮಾದರಿ ಹಿನ್ನೆಲೆಗೆ ಸರಿದು `ದಲಿತ ಚಿಂತನೆ~ ಅಥವಾ `ದಲಿತ ಕಾವ್ಯಮಾರ್ಗ~ ಕೂಡ ಈವರೆಗಿನ ಎಲ್ಲ ಆಧುನಿಕ ಕಾವ್ಯಮಾರ್ಗಗಳಂತೆ ಆಧುನಿಕ ಕನ್ನಡ ಕಾವ್ಯ ಪರಂಪರೆಯೊಳಗೆ ಬೆರೆತು, ಎಲ್ಲ ಕವಿಗಳನ್ನೂ ಪ್ರಭಾವಿಸುವ ಹಾಗೂ ಎಲ್ಲರ ಪ್ರಭಾವವನ್ನೂ ಸ್ವೀಕರಿಸುವ ಕಾವ್ಯವಾಗುವ ಲಕ್ಷಣಗಳು ಹೊಸ ತಲೆಮಾರಿನ ದಲಿತ ಕಾವ್ಯದಲ್ಲಿ ನಿಚ್ಚಳವಾಗಿ ಕಾಣುತ್ತಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಬೇಡ್ಕರ್ವಾದಿ ವಿಚಾರವಾದದ ತಾತ್ವಿಕ ನೋಟ-ಕ್ರಮವನ್ನು ಮುಂದುವರಿಸಿರುವ ಹೊಸ ತಲೆಮಾರಿನ ದಲಿತ ಕಾವ್ಯ, ಸಾಮಾಜಿಕ ಸತ್ಯಗಳಿಗೆ ದನಿಯಾಗುವ ಮೂಲಕ ತನ್ನ ಪ್ರಖರತೆ ಹೆಚ್ಚಿಸಿಕೊಂಡಿದೆ.<br /> <br /> ಕನ್ನಡ ದಲಿತ ಕಾವ್ಯವನ್ನು ಇನ್ನೂ ಸಮರ್ಥನೆಯ ಮೊದಲ ಹಂತದಲ್ಲಿಯೇ ನೋಡುತ್ತಿರುವವರಿಗೆ ಈಗಾಗಲೇ ಕನ್ನಡ ದಲಿತ ಕಾವ್ಯದ ಮೂರು ಹಾಗೂ ನಾಲ್ಕನೆಯ ತಲೆಮಾರುಗಳು ಬಂದಿವೆಯೆಂಬ ಅಂಶ ಅಚ್ಚರಿ ಹುಟ್ಟಿಸಬಹುದು. ಸಹಜವಾಗಿಯೇ ಈ ತಲೆಮಾರುಗಳ ಕಾವ್ಯದ ಕಾಳಜಿ, ಬಂಧ ಮತ್ತು ಲಯ ಮಾದರಿಗಳು ಕೂಡ ಬದಲಾಗಿವೆ. <br /> <br /> ಈ ಹೊಸ ತಲೆಮಾರುಗಳಲ್ಲಿ ಎದ್ದು ಕಾಣುವ ಸುಬ್ಬು ಹೊಲೆಯಾರ್ ತಮ್ಮ ಹಿಂದಿನ ತಲೆಮಾರುಗಳಂತೆಯೇ ದಲಿತ ಚಳವಳಿಯಿಂದ ಕಾವ್ಯಕ್ಕೆ ಬಂದು ಕ್ರಮೇಣ ಅಂಬೇಡ್ಕರ್ವಾದವನ್ನು ಗಾಂಧಿವಾದದ ಹಿನ್ನೆಲೆಯಲ್ಲಿ ಹೊಸದಾಗಿ ವಿವರಿಸಿಕೊಂಡ ಕವಿ.<br /> <br /> ಅವರ `ಗಾಂಧಿಯನ್ನು ಪ್ರೀತಿಸಲಾರದವರು~ ಹಾಗೂ `ಗಾಂಧಿ ಬಂದಾಗ ಅಂಬೇಡ್ಕರ್ ಒಳಗಿದ್ದರು~ ಪದ್ಯಗಳು ಗಾಂಧೀಜಿಯನ್ನು ದಲಿತ ಕಾವ್ಯ ಹಾಗೂ ದಲಿತ ಚಿಂತನೆಯನ್ನು ಬೆಸೆಯಲೆತ್ನಿಸಿವೆ. ಒಟ್ಟು ಜಗತ್ತಿನ ದುಗುಡದ ಬಗೆಗೂ ಬರೆಯುವ ಸುಬ್ಬು ನವ್ಯ ಕಾಲದಂತೆ ಗದ್ಯದ ಲಯ ಮಾದರಿಗಳನ್ನು ಕಾವ್ಯಕ್ಕೆ ಒಗ್ಗಿಸಲೆತ್ನಿಸಿದ್ದಾರೆ. <br /> <br /> ಹೊಸ ತಲೆಮಾರಿನ ಅತ್ಯಂತ ಪ್ರತಿಭಾವಂತ ಕವಿಯಾಗಿದ್ದ ಎನ್.ಕೆ. ಹನುಮಂತಯ್ಯ ಸೀಮಿತ ಅರ್ಥದಲ್ಲಾದರೂ ಸಿದ್ಧಾಂತಗಳ ಪರೀಕ್ಷೆಯನ್ನು ತಮ್ಮ ಕಾವ್ಯಕ್ಕೆ ತಂದರು. ಸುಬ್ಬು, ಹನುಮಂತಯ್ಯ, ವಿ.ಎಂ.ಮಂಜುನಾಥ್, ವಿ.ಆರ್.ಕಾರ್ಪೆಂಟರ್- ಈ ನಾಲ್ವರೂ ತಾತ್ವಿಕತೆಯ ದೃಷ್ಟಿಯಿಂದ ಲಂಕೇಶರ ಪ್ರಭಾವವನ್ನು ಸ್ವೀಕರಿಸಿದವರು ಎಂಬ ಅಂಶ ಕೂಡ ಇವರ ಕಾವ್ಯದ ನುಡಿಗಟ್ಟು, ನೋಟಕ್ರಮ ಹಾಗೂ ತಾತ್ವಿಕತೆಗಳು ಭಿನ್ನವಾಗಿರಲು ಕಾರಣವಿರಬಹುದು.<br /> <br /> ಇವರಲ್ಲಿ ಕೆಲವರು ತಮ್ಮ ಕಾವ್ಯದ ಒಳಗೂ ಹಾಗೂ ಹೊರಗೂ ದಲಿತ ಚಳವಳಿಯನ್ನು ಪರೀಕ್ಷೆಗೆ ಒಳಪಡಿಸಲೆತ್ನಿಸಿರುವುದು ಇವರ ಕಾವ್ಯವನ್ನು ಪ್ರವೇಶಿಸಿರುವ ಸಾಮಾಜಿಕ ವಿಮರ್ಶೆಯ ಹೊಸ ಆಯಾಮಗಳನ್ನೂ ಸೂಚಿಸುವಂತಿದೆ. ನಗರದಲ್ಲಿ ಬೆಳೆದ ಮಂಜುನಾಥ್, ಕಾರ್ಪೆಂಟರ್ ದಲಿತ ಕಾವ್ಯದ ಸಿದ್ಧ ಮಾದರಿ ಮೀರಲೆತ್ನಿಸಿದ್ದಾರೆ. ಈ ಎಲ್ಲರ ಜೊತೆಗೇ ಬರೆಯುತ್ತಿರುವ ಲಕ್ಕೂರು ಆನಂದರಲ್ಲಿ ದಲಿತ ಕಾವ್ಯದ ಈವರೆಗಿನ ಅನೇಕ ಮಾದರಿಗಳು ಮರುಕಳಿಸಿವೆ. <br /> <br /> ಮೂರು ದಶಕಕ್ಕಿಂತಲೂ ಹೆಚ್ಚು ಕಾಲ ಹರಿದಿರುವ ದಲಿತ ಕಾವ್ಯದಲ್ಲಿ ಮಹಿಳಾ ದನಿಗಳು ತೀರಾ ಕಡಿಮೆ ಎಂಬ ಅಂಶ ಏಕಕಾಲಕ್ಕೆ ಸ್ತ್ರೀವಾದಿ ಚಿಂತನೆ ಹಾಗೂ ದಲಿತ ಚಿಂತನೆಗಳೆರಡೂ ದಲಿತ ಮಹಿಳೆಯರನ್ನು ದೊಡ್ಡ ಮಟ್ಟದಲ್ಲಿ ಮುಟ್ಟಲು ಆಗದಿರುವ ಕೊರತೆಯನ್ನು ಎತ್ತಿ ಹೇಳುತ್ತದೆ. <br /> <br /> ಇಂಥ ಸನ್ನಿವೇಶದಲ್ಲಿ ಅನಸೂಯ ಕಾಂಬಳೆ ದಲಿತ ಕಾವ್ಯಕ್ಕೆ ಸ್ತ್ರೀ ದೃಷ್ಟಿಕೋನವನ್ನು ಬೆಸೆದು, ದಲಿತ ಸ್ತ್ರೀವಾದದ ಸ್ವರೂಪವನ್ನೂ ರೂಪಿಸಲೆತ್ನಿಸಿದ್ದಾರೆ. `ಹಂಚವ್ವಳ ಹಾಡು~ ಥರದ ಪದ್ಯಗಳಲ್ಲಿ ಜನಪದ ದ್ರವ್ಯವನ್ನೂ ಬಳಸಿದ್ದಾರೆ. <br /> <br /> ಈ ಮಾದರಿಯಲ್ಲಿ ಜನಪದ ಲಯ ಹಾಗೂ ವಸ್ತುಗಳನ್ನು ವಡ್ಡಗೆರೆ ನಾಗರಾಜಯ್ಯನವರೂ ತಮ್ಮ ಕಾವ್ಯದಲ್ಲಿ ಪ್ರಯೋಗಿಸಿದ್ದಾರೆ. ಇದೇ ಬಗೆಯ ಮತ್ತೊಂದು ಹಾದಿಯ ಪಯಣವನ್ನು ಬಿಂಬಿಸುವ ಮಹದೇವ ಶಂಕನಪುರ ಅವರು ಮಂಟೇಸ್ವಾಮಿ ಚೈತನ್ಯವನ್ನು ತಮ್ಮ ಪದ್ಯಗಳಿಗೆ ತಂದಿದ್ದಾರೆ. <br /> <br /> ಈ ಎಲ್ಲ ಕವಿಗಳು ತಂತಮ್ಮ ಕಾವ್ಯದಲ್ಲಿ ಒಟ್ಟಾರೆಯಾಗಿ ಅಂಬೇಡ್ಕರ್ವಾದಿ ವಿಚಾರವಾದದ ತಾತ್ವಿಕ ನೋಟಕ್ರಮವನ್ನು ಮುಂದುವರಿಸಿದ್ದಾರೆ. ಜೊತೆಜೊತೆಗೇ ಅವರು ಧರ್ಮವನ್ನು ಹಾಗೂ ತಂತಮ್ಮ ದೇಶೀ ಭೂತಕಾಲವನ್ನು, ದಲಿತ ಪುರಾಣಗಳ ಲೋಕವನ್ನು ಹುಡುಕಿಕೊಳ್ಳುತ್ತಿರುವ ರೀತಿ ಕೂಡ ಕುತೂಹಲಕರವಾಗಿದೆ. <br /> <br /> ಸುಬ್ಬು ಹಾಗೂ ಹನುಮಂತಯ್ಯನವರ ಕಾವ್ಯದಲ್ಲಿ ಅಂಬೇಡ್ಕರ್ ರೂಪಿಸಿಕೊಟ್ಟ ನವಬೌದ್ಧ ಮಾರ್ಗ; ವಡ್ಡಗೆರೆ ನಾಗರಾಜಯ್ಯನವರ ಕಾವ್ಯದಲ್ಲಿರುವ ಆದಿಜಾಂಬವ ಮೂಲದ ಆಸರೆ; ಮಹದೇವ ಶಂಕನಪುರ ಅವರ ಕಾವ್ಯದಲ್ಲಿ ಮಂಟೇಸ್ವಾಮಿ - ಮಲೆಮಹದೇಶ್ವರ ಪರಂಪರೆಯ ಮರುಹುಡುಕಾಟ; ಮಂಜುನಾಥರ ಪದ್ಯಗಳಲ್ಲಿ ಅಲ್ಲಲ್ಲಿ ಸುಳಿಯುವ ಕ್ರೈಸ್ತ ಧರ್ಮ ಕೊಟ್ಟ ವಿಮೋಚನೆಯ ಹಾದಿಗಳು ಕೂಡ ಈ ಹೊಸ ತಲೆಮಾರಿನ ಕಾವ್ಯಕ್ಕೆ ಭಿನ್ನ ತಾತ್ವಿಕ ಭಿತ್ತಿಗಳನ್ನೂ ಭಾಷಾಲೋಕವನ್ನೂ ಒದಗಿಸಿವೆ.<br /> <br /> ಇಷ್ಟೆಲ್ಲ ವಿಶಿಷ್ಟ ಅಂಶಗಳು ಹೊಸ ಪೀಳಿಗೆಯ ದಲಿತ ಕಾವ್ಯದಲ್ಲಿ ಕಾಣಬರುತ್ತಿದ್ದರೂ ಇವು ಅಂತಿಮವಾಗಿ ಬಹುತೇಕ ಸಾಮಾಜಿಕ ಸತ್ಯಗಳನ್ನೇ ಹೆಚ್ಚು ಹೇಳುತ್ತಿರುವಂತೆ ಕಾಣುತ್ತವೆನ್ನುವುದು ನಿಜ. <br /> <br /> ಈ ಕವಿಗಳು ಬಳಸುತ್ತಿರುವ ಚೌಕಟ್ಟುಗಳು ಹಾಗೂ ಧೋರಣೆಗಳು ತಾವು ಮಂಡಿಸುತ್ತಿರುವ ಅನುಭವಗಳ ಎಲ್ಲ ಮುಖಗಳನ್ನು ಗಾಢ ಪರೀಕ್ಷೆಗೆ ಒಳಪಡಿಸುವಲ್ಲಿ ಶಕ್ತವಾಗಿದ್ದಂತಿಲ್ಲ; ಅಥವಾ ಆ ರೀತಿಯ ನಿಷ್ಠುರ ಪರೀಕ್ಷೆಯ ಅಗತ್ಯದ ಬಗ್ಗೆ ಈ ಕವಿಗಳು ಹೆಚ್ಚು ಯೋಚಿಸಿರುವ ಸೂಚನೆಗಳು ಅವರ ಕಾವ್ಯದಲ್ಲಿ ಕಂಡು ಬರುತ್ತಿಲ್ಲ. <br /> <br /> ಹೀಗಾಗಿ ಕಾವ್ಯರಚನೆ ಒದಗಿಸುವ ಬಹುಮುಖ್ಯ ಸ್ವಾತಂತ್ರ್ಯಗಳಲ್ಲಿ ಒಂದಾದ ಸಕಲ ಅನುಭವಗಳನ್ನು ಹಾಗೂ ಘಟನೆಗಳನ್ನು ತೀವ್ರವಾಗಿ ಪರೀಕ್ಷಿಸುವ ಸ್ವಾತಂತ್ರ್ಯವನ್ನು ಈ ಕವಿಗಳು ಉಪೇಕ್ಷಿಸಿದಂತೆ ಕಾಣುತ್ತದೆ. <br /> <br /> ಜೊತೆಗೆ, ಕಾವ್ಯದ ಮೂಲ ಪ್ರಾಣಗಳಲ್ಲಿ ಒಂದಾದ ಭಾಷಿಕ ಪ್ರಯೋಗಗಳ ಸಾಧ್ಯತೆಗಳ ಬಗ್ಗೆ ಈ ಕವಿಗಳಲ್ಲಿ ಹೆಚ್ಚಿನ ಉತ್ಸಾಹ ಇದ್ದಂತಿಲ್ಲ. ಹೀಗಾಗಿ, ಕಾವ್ಯ ಪ್ರಕಾರದಲ್ಲಿ ಕನ್ನಡದ ಶ್ರೇಷ್ಠ ಕವಿಗಳು ಸಾಧಿಸಿರುವ ಭಾಷಿಕ ಪ್ರಯೋಗಗಳು ಹಾಗೂ ಅವುಗಳ ಸೌಂದರ್ಯಾತ್ಮಕ ಆನಂದವನ್ನು ಈ ಕವಿಗಳು ಸಾಧಿಸಲಾಗದೆ ಅವರ ಕಾವ್ಯ ಬಳಲಿರುವಂತೆ ಕಾಣುತ್ತದೆ.<br /> <br /> ಈಗಾಗಲೇ ಹೆಚ್ಚು ಪರಿಚಿತರಾಗಿರುವ ಹೊಸ ತಲೆಮಾರಿನ ಕವಿಗಳ ಜೊತೆಗೆ ಈಚೆಗೆ ಒಂದೊಂದು ಕವನ ಸಂಕಲನವನ್ನು ತಂದಿರುವ ಅಥವಾ ಬಿಡಿಬಿಡಿ ಪದ್ಯಗಳನ್ನು ಬರೆದ ಕವಿಗಳು ಕೂಡ ಇದೀಗ ಕನ್ನಡ ಕಾವ್ಯರಂಗದ ಮೇಲೆ ಮಿಂಚುತ್ತಿದ್ದಾರೆ.<br /> <br /> ಎಂ.ಎಸ್.ಶೇಖರ್, ಶ್ರೀನಿವಾಸರಾಜು, ಟಿ. ಯಲ್ಲಪ್ಪ, ರಾಮಪ್ಪ ಮಾದರ್, ಹರೀಶ್ ಕಟ್ಟೆಬೆಳಗುಲಿ, ಶಿವಕುಮಾರ ಕಂಪ್ಲಿ ಅವರ ಕವನ ಸಂಕಲನಗಳಲ್ಲಿ ಹಾಗೂ ಕೆಲವೇ ಪದ್ಯಗಳನ್ನು ಬರೆದರೂ ವಿಶಿಷ್ಟವಾಗಿ ಕಾಣುವ ಗಂಗಪ್ಪ ತಳವಾರ ಅವರ ಪದ್ಯಗಳಲ್ಲಿ ಕೆಲವು ಹೊಸ ಮಾದರಿಗಳು ಕಾಣುತ್ತವೆ. ಈ ಎಲ್ಲದರ ನಡುವೆ ಸಿದ್ಧ ದಲಿತ ಐಡೆಂಟಿಟಿಯ ಹಂಗಿಲ್ಲದೆ ಬರೆಯುತ್ತಿರುವ ಹೊಸ ದಲಿತ ಕವಿಗಳೂ ಇದ್ದಾರೆ. <br /> <br /> ದಲಿತ ಕಾವ್ಯದಿಂದ ಬಗೆಬಗೆಯ ಪ್ರೇರಣೆಗಳನ್ನು ಪಡೆದು ದಲಿತ ಕಾವ್ಯದ ಗಡಿಗೆರೆಗಳನ್ನು ವಿಸ್ತರಿಸಲು ಯತ್ನಿಸುತ್ತಿರುವ ದಲಿತೇತರ ಕವಿಗಳೂ ಇದ್ದಾರೆ. ಈ ಅಂಶ ದಲಿತ ಕಾವ್ಯದ ಬಂಧ ಹಾಗೂ ತಾತ್ವಿಕತೆಗಳು ಒಟ್ಟಾರೆಯಾಗಿ ಕನ್ನಡ ಕಾವ್ಯದ ಹೊಸ ತಲೆಮಾರಿನ ಕಾವ್ಯವನ್ನು ಪ್ರಭಾವಿಸುತ್ತಿರುವುದರ ಸೂಚನೆಯಂತಿದೆ. <br /> <br /> ಕ್ರಮೇಣ ದಲಿತ ಕಾವ್ಯ ಎಂಬ ಪ್ರತ್ಯೇಕ ಮಾದರಿ ಹಿನ್ನೆಲೆಗೆ ಸರಿದು `ದಲಿತ ಚಿಂತನೆ~ ಅಥವಾ `ದಲಿತ ಕಾವ್ಯಮಾರ್ಗ~ ಕೂಡ ಈವರೆಗಿನ ಎಲ್ಲ ಆಧುನಿಕ ಕಾವ್ಯಮಾರ್ಗಗಳಂತೆ ಆಧುನಿಕ ಕನ್ನಡ ಕಾವ್ಯ ಪರಂಪರೆಯೊಳಗೆ ಬೆರೆತು, ಎಲ್ಲ ಕವಿಗಳನ್ನೂ ಪ್ರಭಾವಿಸುವ ಹಾಗೂ ಎಲ್ಲರ ಪ್ರಭಾವವನ್ನೂ ಸ್ವೀಕರಿಸುವ ಕಾವ್ಯವಾಗುವ ಲಕ್ಷಣಗಳು ಹೊಸ ತಲೆಮಾರಿನ ದಲಿತ ಕಾವ್ಯದಲ್ಲಿ ನಿಚ್ಚಳವಾಗಿ ಕಾಣುತ್ತಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>