ದೇಸಿ ಕಲೆ ಉಳಿಸಲು ಒತ್ತು ನೀಡಿ: ಉಮಾಶ್ರೀ

ಮೇಲುಕೋಟೆ: ಕಲಾವಿದರು ದೇಸಿ ಕಲೆಗಳನ್ನು ಕಲಿತು, ಬೆಳೆಸಲು ಒತ್ತು ನೀಡಬೇಕು ಎಂದು ಕನ್ನಡ ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಗುರುವಾರ ಅಭಿಪ್ರಾಯಪಟ್ಟರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಮಂಡ್ಯದ ಕಲಾವೃಂದ ಸಾಂಸ್ಕೃತಿಕ ವೇದಿಕೆ, ಸಂಸ್ಕೃತ ವಿವಿ ಆಶ್ರಯದಲ್ಲಿ ಏರ್ಪಡಿಸಿರುವ ನಾಲ್ಕು ದಿನಗಳ ರಾಜ್ಯಮಟ್ಟದ ಶ್ರಾವಣ ಚಿತ್ರಕಲಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವ ಕಲಾವಿದರು ಪಾಶ್ಚಿಮಾತ್ಯ ಕಲೆಗಳತ್ತ ಆಕರ್ಷಿತರಾಗಿ, ಸಂಸ್ಕೃತಿ ಮಹತ್ವ ಬಿಂಬಿಸುವ ದೇಸಿ ಕಲೆಗಳನ್ನು ಕಡೆಗಣಿಸುತ್ತಿದ್ದಾರೆ. ದೇಸಿ ಕಲೆಗಳಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬೇಡಿಕೆ ಇದೆ. ಈ ಕಲೆಗಳನ್ನು ಪ್ರಚುರಪಡಿಸುವ ಕಾರ್ಯ ಯುವ ಕಲಾವಿದರಿಂದ ಆಗಬೇಕು ಎಂದರು.
ಪಾರಂಪರಿಕ ಮತ್ತು ಪಾಶ್ಚಿಮಾತ್ಯ ಕಲೆ ಎಂದು ಪಕ್ಷಪಾತ ತೋರದೆ ಅವು ಗಳ ಪೋಷಿಸಿ ಉತ್ತಮ ಕಲಾವಿದರಾಗಿ ಬೆಳೆಯಬೇಕು ಎಂದು ಶಿಬಿರಾರ್ಥಿಗಳಿಗೆ ಸಲಹೆ ಮಾಡಿದರು.
ಅನುಕರಣೆ ಮಾಡದೆ ಸ್ವಂತಿಕೆ ಯೊಂದಿಗೆ ಹೊಸಪ್ರಯೋಗ, ಹೊಸತನ, ಶೈಲಿ ಕಾಪಾಡಿಕೊಂಡರೆ ಉನ್ನತ ಸ್ಥಾನಕ್ಕೇ ರಬಹುದು. ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡೆಯಬೇಕು ಎಂದರು.
ಖಾತೆಗೆ ಸಂಭಾವಗೆ ಜಮೆ: ಕನ್ನಡ ಸಂಸ್ಕೃತಿ ಇಲಾಖೆ ಕಾಗದ ರಹಿತ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಮೊದಲ ಇಲಾಖೆ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವೆ ಉಮಾಶ್ರೀ ಹೇಳಿದರು.
ಮೇಲುಕೋಟೆಯಲ್ಲಿ ಗುರುವಾರ ರಾಜ್ಯಮಟ್ಟದ ಶ್ರಾವಣ ಚಿತ್ರಕಲಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯ ಕಾಗದ ವ್ಯವಹಾರ ಈಗ ಆನ್ಲೈನ್ ಮೂಲಕವೇ ನಡೆದಿದೆ. ಸಂಭಾವನೆ ಕಲಾವಿದರಿಗೆ ನೇರ ಪಾವತಿಯಾಗುತ್ತಿದ್ದು, ಮಧ್ಯವರ್ತಿಗಳ ಹಾವಳಿ ತಗ್ಗಿದೆ ಎಂದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಕಲಾ ವಿದರ ಸಂಕಷ್ಟದಲ್ಲಿ ಇದ್ದಾರೆ. ನೈಜ ಕಲಾವಿದರಿಗೆ ಮಾಸಾಶನ ದೊರೆಯು ತ್ತಿಲ್ಲ. ಸಚಿವೆ ಇವರ ಸಮಸ್ಯೆಯತ್ತ ಗಮನಹರಿಸಬೇಕು ಎಂದು ಹೇಳಿದರು.
ಸಂಸ್ಕೃತ ಸಂಶೋಧನಾ ಸಂಸ್ಥೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ರವಿ ಕಾಂತೇಗೌಡ, ಕರ್ನಾಟಕ ಸಂಸ್ಕೃತ ವಿ.ವಿ ಅಧ್ಯಕ್ಷೆ ಡಾ.ಪದ್ಮಾಶೇಖರ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ. ಎಸ್.ಮೂರ್ತಿ, ಮಂಡ್ಯ ಯುವದ್ವನಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಕೃಷ್ಣ, ಸದಸ್ಯರಾದ ಮೈಸೂರು ಚಿಕ್ಕಣ್ಣ, ಸಂಸ್ಕೃತ ಸಂಶೋಧನಾ ಸಂಸ್ಥೆಯ ಕುಲಸಚಿವ ಕುಮಾರ್ ಹಾಜರಿದ್ದರು. ವಿವಿಧ ಜಿಲ್ಲೆಗಳ ಕಲಾವಿದರು ಭಾಗವಹಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.