ಧಾರಾಕಾರ ಮಳೆಯಿಂದ ತೋಟಕ್ಕೆ ಹಾನಿ

ಶಿರಸಿ: ತಾಲ್ಲೂಕಿನಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಗುರುವಾರ ಬೆಳಿಗ್ಗೆ ಕೊನೆಗೊಂಡಂತೆ ಹಿಂದಿನ 24 ತಾಸುಗಳಲ್ಲಿ 96.5 ಮಿ.ಮೀ ಮಳೆಯಾಗಿದೆ. ಗುರುವಾರ ಬೆಳಗಿನಿಂದ ಒಂದೇ ಸವನೆ ಸುರಿದ ವರ್ಷಧಾರೆ ಸಂಜೆಯ ವೇಳೆಗೆ ತುಸು ಬಿಡುವು ಪಡೆದು ಕೊಂಡಿತು.
ಭಾರಿ ಮಳೆಯಿಂದಾಗಿ ನಗರ, ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ತಾಲ್ಲೂಕಿನ ನೆಗ್ಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೊಮ್ನಳ್ಳಿಯಲ್ಲಿ ಹಳ್ಳ ಉಕ್ಕಿ ಹರಿದ ಪರಿಣಾಮ ಗುರುಪಾದ ಹೆಗಡೆ, ನಾರಾಯಣ ಹೆಗಡೆ, ರಾಮಚಂದ್ರ ಹೆಗಡೆ, ದೇವರು ಹೆಗಡೆ ಅವರಿಗೆ ಸೇರಿದ ಒಟ್ಟು ಐದು ಎಕರೆ ತೋಟದಲ್ಲಿ ಗೊಬ್ಬರ ತೇಲಿ ಹೋಗಿದ್ದು, ಗಿಡಗಳಿಗೆ ಹಾನಿಯಾಗಿದೆ. ತಹಶೀಲ್ದಾರ್ ಬಸಪ್ಪ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಧಾರಾಕಾರ ಸುರಿದ ಮಳೆಗೆ ಸರಕುಳಿ, ಕಾನಸೂರು ಹೊಳೆಗಳು ತುಂಬಿ ಹರಿದವು. ಮಳೆಯಿಲ್ಲದೇ ಕಂಗಾಲಾಗಿದ್ದ ರೈತರು ಗದ್ದೆಯಲ್ಲಿ ನೀರಾಗಿದ್ದನ್ನು ಕಂಡು ಭತ್ತ ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಜೂನ್ 9ರಂದು ತಾಲ್ಲೂಕಿನಲ್ಲಿ 92 ಮಿ.ಮೀ ಮಳೆಯಾಗಿತ್ತು. ನಂತರದಲ್ಲಿ ಬುಧವಾರ ಸುರಿದ ಮಳೆಯ ಪ್ರಮಾ ಣವೇ ಈ ವರ್ಷದ ಮುಂಗಾರಿನಲ್ಲಿ ಅತ್ಯಧಿಕ ದಾಖಲೆಯಾಗಿದೆ. ಈ ವರ್ಷ ಈವರೆಗೆ 1275 ಮಿ.ಮೀ ಮಳೆಯಾಗಿದೆ.
ಗೋಡೆಯಲ್ಲಿ ಬಿರುಕು: ತಾಲ್ಲೂಕಿನ ಹುಲೇಕಲ್ ಉರ್ದು ಶಾಲೆಯ ಎರಡು ಕೊಠಡಿಗಳ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ.
‘ಶಿಥಿಲಾವಸ್ಥೆಯಲ್ಲಿರುವ ಕೊಠಡಿ ಕೆಡವಲು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಕೊಠಡಿಗಳನ್ನು ತರಗತಿಗೆ ಬಳಕೆ ಮಾಡುತ್ತಿಲ್ಲ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಬಿ.ವಿ. ನಾಯ್ಕ ಪ್ರತಿಕ್ರಿಯಿಸಿದರು.
ಸಿದ್ದಾಪುರ ವರದಿ
ತಾಲ್ಲೂಕಿನಾದ್ಯಂತ ಗುರುವಾರ ಮಳೆ ಅಬ್ಬರಿಸಿತು. ಬುಧವಾರ ರಾತ್ರಿಯಿಡಿ ಸುರಿದ ಮಳೆ, ಗುರುವಾರ ಕೂಡ ತನ್ನ ಆರ್ಭಟ ಮುಂದುವರಿಸಿತು.
ಗುರುವಾರ ಬೆಳಿಗ್ಗೆ ಬಿಡುವು ನೀಡುತ್ತ ಮಳೆ ಸುರಿದರೆ, ಮಧ್ಯಾಹ್ನದ ನಂತರ ನಿರಂತರವಾಗಿತ್ತು. ಮಳೆಯಿಂದ ತಾಲ್ಲೂಕಿನ ಹೊಳೆ–ಹಳ್ಳಗಳು ತುಂಬಿ ಹರಿದವು. ಮಳೆಯ ಕೊರತೆಯ ಕಾರಣದಿಂದ ನೀರಸವಾಗಿ ಸಾಗಿದ್ದ ಭತ್ತದ ನಾಟಿ ಕಾರ್ಯ ಉತ್ಸಾಹದಿಂದ ಮುಂದುವರಿಯಿತು.
ಗುರುವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದಲ್ಲಿ 66.4 ಮಿ.ಮೀ ಮಳೆ ಸುರಿದಿದ್ದು,ಇದುವರೆಗೆ ಒಟ್ಟು 1404.4 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ದಿನದವರೆಗೆ 1590.2 ಮಿ.ಮೀ ಮಳೆ ಸುರಿದಿತ್ತು. ಯಾವುದೇ ಹಾನಿಯ ವರದಿ ಬಂದಿಲ್ಲ ಎಂದು ಸ್ಥಳೀಯ ತಹಶೀಲ್ದಾರ್ ಕಚೇರಿಯ ಮೂಲಗಳು ತಿಳಿಸಿವೆ.
ಅಪಾಯದಲ್ಲಿ ಸೇತುವೆ: ಗುರುವಾರ ತಾಲ್ಲೂಕಿನಲ್ಲಿ ಸುರಿದ ಅಬ್ಬರದ ಮಳೆಯಿಂದ ಮಾಣಿಹೊಳೆಯಲ್ಲಿ ಸಾಕಷ್ಟು ನೀರು ಹರಿಯುತ್ತಿದೆ. ಇದರಿಂದ ಈಗಾಗಲೇ ಶಿಥಿಲಗೊಂಡಿದ್ದ ಮಾಣಿ ಹೊಳೆ ಸೇತುವೆ ಸಂಪೂರ್ಣ ಕುಸಿಯುವ ಭೀತಿಗೆ ಒಳಗಾಗಿದೆ.
ಸುಮಾರು ಎರಡು ವರ್ಷಗಳ ಹಿಂದೆ (2014ರ ಅಕ್ಟೋಬರ್ 30ರಂದು) ಮೊದಲ ಬಾರಿ ಕುಸಿತಕಂಡಿದ್ದ ಈ ಸೇತುವೆ, ಮಳೆ ಜೋರಾಗುತ್ತಿದ್ದಂತೆ ಈಗ ಇನ್ನಷ್ಟು ದುರ್ಬಲವಾಗಿದ್ದು, ಈಗಲೋ ಆಗಲೋ ಎಂಬ ಸ್ಥಿತಿ ತಲುಪಿತು.ಮಾಣಿಹೊಳೆ ಸೇತುವೆಯ ಸದ್ಯದ ಸ್ಥಿತಿ ನೋಡಿದರೆ ಯಾವುದೇ ಕ್ಷಣದಲ್ಲಿಅದು ಸಂಪೂರ್ಣ ಕುಸಿದುಹೋಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೀನುಗಾರರು ಮುನ್ನೆಚ್ಚರಿಕೆ ವಹಿಸಲು ಸೂಚನೆ
ಕಾರವಾರ: ಮಳೆ ಜೋರಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿವೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವವರು ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ಇಲ್ಲಿನ ಕೋಸ್ಟ್ ಗಾರ್ಡ್ನ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೀನುಗಾರರು ಹವಾಮಾನ ವರದಿಗಳನ್ನು ಸದಾ ಗಮನಿಸುತ್ತಿರಬೇಕು. ಮೀನುಗಾರಿಕೆಗೆ ತೆರಳುವ ಸಂದರ್ಭದಲ್ಲಿ ರೇಡಿಯೋ ಸಂಪರ್ಕ ಉಪಕರಣ(ಪಿಎಚ್ಪಿ), ಜೀವ ರಕ್ಷಕ ಸಾಧನ, ಪ್ರಥಮ ಚಿಕಿತ್ಸೆಯ ಔಷಧ, ಹೆಚ್ಚುವರಿ ಇಂಧನ, ಫ್ಲಾಶ್ ಲೈಟ್ ಮುಂತಾದ ವ್ಯವಸ್ಥೆಗಳನ್ನು ಹೊಂದಿರಬೇಕು. ಒಂದೇ ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳುವುದಕ್ಕಿಂತ ಹೆಚ್ಚು ದೋಣಿಗಳಲ್ಲಿ ತೆರಳಿದರೆ ಸುರಕ್ಷತೆಯಿಂದ ಉತ್ತಮ ಎಂದು ತಿಳಿಸಲಾಗಿದೆ.
ಸಮುದ್ರದ ಮಧ್ಯದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ತಕ್ಷಣ ಕೋಸ್ಟ್ ಗಾರ್ಡ್ ಅಥವಾ ಇತರೇ ತಟ ರಕ್ಷಣೆಯಲ್ಲಿ ನಿರತವಾದ ಪಡೆಗೆ ಮಾಹಿತಿ ನೀಡಬೇಕು. ಕೋಸ್ಟ್ ಗಾರ್ಡ್ ಸಹಾಯವಾಣಿ ಸಂಖ್ಯೆ 1554/2405269/ 2405270ಕರೆ ಮಾಡಬಹುದಾಗಿದೆ.
ತೊಂದರೆಗೆ ಸಿಲುಕುವ ಮೀನುಗಾರರು ತಮ್ಮ ಜಿಪಿಎಸ್ನ ಸ್ಥಳ, ಸಂಭವಿಸಿದ ಅವಘಡದ ಪ್ರಾಥಮಿಕ ಮಾಹಿತಿ, ದೋಣಿಯ ಬಣ್ಣ ಹಾಗೂ ಅದರಲ್ಲಿರುವ ಮೀನುಗಾರರ ಸಂಖ್ಯೆಯನ್ನು ಸಾಧ್ಯವಾದಷ್ಟು ತಿಳಿಸಬೇಕು. ಇದರಿಂದ ತ್ವರಿತವಾಗಿ ರಕ್ಷಣಾ ಕಾರ್ಯ ಕೈಗೊಳ್ಳಲು ಅನುಕೂಲವಾಗುತ್ತದೆ ಎನ್ನಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.