<p>ಕೆಲವು ಕವಿಗಳಿಗೆ ಮತ್ತು ಕಲಾವಿದರಿಗೆ ವಿಚಿತ್ರವಾದ ಸಮಸ್ಯೆಯೊಂದು ಕಾಡುತ್ತದೆ. ತಮ್ಮ ವ್ಯಕ್ತಿ ವಿಶಿಷ್ಟತೆಗಾಗಿ ತಾವೇ ಸೃಷ್ಟಿಸಿಕೊಂಡ ಕುರುಹುಗಳಲ್ಲಿ ಅವರು ಬಂಧಿಗಳಾಗಿರುತ್ತಾರೆ. ತಮ್ಮದೊಂದು ವಿಶಿಷ್ಟವಾದ ಸ್ಟ್ಯಾಂಪನ್ನು ಒತ್ತುವ ಮೂಲಕ ಪ್ರಾರಂಭವಾಗಿ ಕಡೆಗೆ ಅದರಲ್ಲೇ ಬಂಧಿಯಾಗಿಬಿಡುತ್ತಾರೆ. <br /> <br /> ಈ ಸಂಗತಿಯನ್ನು ಇಂದಿನ ಅನೇಕ ಕವಿಗಳಲ್ಲಿ, ಕಲಾವಿದರಲ್ಲಿ ಕಾಣಬಹುದು. ಇದಕ್ಕೆ ಇನ್ನೊಂದು ಮುಖವೂ ಇದೆ. ಹೀಗೆ ಮೇಲ್ಪದರದ ಯಾವುದೋ ಒಂದು ಹಂತದಲ್ಲಿ ಬಂಧಿಯಾಗಿರುವುದೇ ಸಾಧನೆಯೆಂಬ ಭಾವನೆಯನ್ನು ಸಮೂಹದಲ್ಲಿ ಮೂಡಿಸುವ ಪ್ರಯತ್ನಗಳನ್ನೂ ಅವರು ಮಾಡುತ್ತಾರೆ. <br /> <br /> ಗಿಡ-ಮರಗಳಲ್ಲಿ ಹೆಣ್ಣೊಂದನ್ನು ಮೂಡಿಸುವುದರಲ್ಲೇ ಜೀವಮಾನವನ್ನು ಕಳೆಯುವವರಿದ್ದಾರೆ. ನೆಲಮೂಲ, ಕರುಳಾಳ ಇತ್ಯಾದಿ ಪದ ವ್ಯಸನವನ್ನೇ ಕಾವ್ಯವೆಂದುಕೊಂಡಿರುವವರೂ ಇದ್ದಾರೆ. ತಾವೇ ಸೃಜಿಸಿದ ಸಂಕೇತಗಳನ್ನು ನಿರಸನಗೊಳಿಸುತ್ತ ಸಾಗುವ ಕವಿಗಳು ಕಲಾವಿದರು ತುಂಬಾ ಕಡಿಮೆ. ಕಾವ್ಯ ಪ್ರತಿಮೆಗಳ ವಿಸರ್ಜನೆ ಅವುಗಳ ನಿರ್ಮಾಣದಷ್ಟು ಸರಳವಲ್ಲ. <br /> <br /> ಒಮ್ಮೆ ಪ್ರತಿಮೆಯನ್ನು ನಿರ್ಮಿಸಿಕೊಂಡ ಮೇಲೆ ಅದಕ್ಕೇ ಅಂಟಿಕೂತುಬಿಡುತ್ತೇವೆ. ಆದರೆ ಸೀದಾ ಅವುಗಳ ನಡುನೆತ್ತಿಯ ಮೇಲೆ ಉಳಿಯಿಟ್ಟು ಹೊಡೆಯುವ, ಈ ಕವನ ಸಂಕಲನದ ಕವಿ ಹರಿಯಪ್ಪ ಪೇಜಾವರ ಅವರನ್ನು ಓದುವಾಗ `ಸ್ವಲ್ಪ ತಡಿಯೋ ಮಾರಾಯಾ, ಜನ ಓದುವವರೆಗಾದರೂ ಅವುಗಳನ್ನು ವಿಸರ್ಜಿಸಬೇಡ~ ಅನ್ನಬೇಕೆನಿಸುತ್ತದೆ. ನಿಜ, ವಿಸರ್ಜನೆಯೂ ವ್ಯಸನವಾಗಬಾರದಲ್ಲವೆ?</p>.<p>ತಮ್ಮ ಪಾಡಿಗೆ ತಾವಿರುವಾಗ<br /> ಜಗತ್ತು ಗಮನಿಸುತ್ತಿಲ್ಲ ಎಂದು ಖಾತ್ರಿಯಾಗಿದ್ದಾಗ<br /> ಎಲ್ಲರೂ ಸರಳವಾಗಿಯೇ ಇರುತ್ತಾರೆ<br /> ಆದರೆ ಜಗತ್ತಿನ ಕಣ್ಣು ನಿಮ್ಮತ್ತಲೇ ಇದೆ ಎಂದಾಗ ಮಾತ್ರ<br /> ನಿಮ್ಮ ವರ್ತನೆ ಘನವಾಗಿ ಬಿಡುತ್ತದೆ</p>.<p>ಸುಮ್ಮನಿದ್ದೇನೆ ಎಂದುಕೊಳ್ಳದೆ ಸುಮ್ಮನಿರುವ ಕಷ್ಟವನ್ನು ಕುರಿತು ಜಗತ್ತಿನ ಮಹಾನ್ ದಾರ್ಶನಿಕರು ಅಲವತ್ತುಕೊಂಡಿದ್ದಾರೆ. ಕವನವೂ ಹಾಗೆಯೇ ಸಂಜೆ ಗೂಡಿಗೆ ಮರುಳುವ, ಬೆಳಿಗ್ಗೆ ತೆರಳುವ ಹಕ್ಕಿಯ ತೆರದಲ್ಲಿ ಎಂಬಂತೆ ಅದರೊಡನೆ ನಡೆದುಕೊಳ್ಳಬಲ್ಲ ಈ ಕವಿಗೆ ಯಾವುದಕ್ಕಾದರೂ ಸಮಜಾಯಿಷಿ ಕೊಡುವುದು ಸಂಕಟದ ಕೆಲಸ. <br /> <br /> ಈ ಕವಿಯ ಕಾವ್ಯಕ್ಕೆ ದುಃಖದ ಅನುಸಂಧಾನವೇ ಮುಖ್ಯ ಉದ್ಯೋಗವಾಗಿದ್ದರೂ ಲೋಕಸಮಸ್ತವೂ ತಲ್ಲಣದಲ್ಲಿ ಇರುವಾಗ ಯಾರಾದರೊಬ್ಬರ ಸಂಕಟದ ವೈಭವೀಕರಣ ಸಮರ್ಥನೀಯವಲ್ಲ ಎಂಬ ಸಮೂಹ ಗೌರವವಿದೆ. ಇಲ್ಲಿ ಯಾರೂ ಮುಖ್ಯರೂ ಅಲ್ಲ ಅಮುಖ್ಯರೂ ಅಲ್ಲ ಎಂಬ ನಂಬಿಕೆಯಿದೆ.</p>.<p>ಸಮಾನತೆಯಲ್ಲಿ ನಂಬಿಕೆ ಇರುವುದಾದರೆ ನಿನಗೆ<br /> ಬದುಕು ಎಲ್ಲರ ಜತೆ ನಿನಗು ಕೆಳ ಅಂತಸ್ತಿನವರ ಜತೆ<br /> ಹಂಚಿಕೋ ಅವರ ಎಲ್ಲ ಕಷ್ಟ ಸುಖ<br /> ಬಿಸಿಲಿಗೆ ಬಾಡು ಮಳೆಯಲ್ಲಿ ನೆನೆ<br /> ಗಾಳಿಯಲ್ಲಿ ಒಣಗು<br /> ಸಾಯಬೇಡ ಸತ್ತು ಬದುಕಿರುವ ಇತರರೆಲ್ಲರಿಗಿಂತ<br /> ನೀನೊಬ್ಬ ಬೇರೆ ಎಂಬ ಸೂಕ್ಷ್ಮ ಭೇದ ಮಾಡಬೇಡ</p>.<p>ದ್ವಿ-ಮಾನ ಭಾಷೆಯ ತೀಕ್ಷ್ಣ ತರ್ಕದ ಹೊಸ ಪೀಳಿಗೆಯೆದುರಿಗೆ ಕಾವ್ಯವನ್ನಾಗಲೀ, ಕಲೆಯನ್ನಾಗಲೀ, ದಾರ್ಶನಿಕತೆಯನ್ನಾಗಲೀ ಇಡುವಾಗ ಎಚ್ಚರದಿಂದಿರಬೇಕಾಗುತ್ತದೆ. ಏಕೆಂದರೆ ಅವುಗಳಲ್ಲಿನ ಪೊಳ್ಳುತನವನ್ನು ಕೇವಲ ಸಜ್ಜನಿಕೆಯ ಕಾರಣಕ್ಕೆ ಎರಡು ಸಾವಿರ ವರ್ಷಗಳ ಕಾಲ ಒಪ್ಪಿಕೊಂಡು ಬಂದ ನಮ್ಮ-ನಿಮ್ಮ ಹಾಗೆ ಅವರು ಒಪ್ಪಿಕೊಳ್ಳುವುದಿಲ್ಲ. <br /> <br /> ನಿಗಿನಿಗಿ ವರ್ತಮಾನದಲ್ಲಿ ಬದುಕುವ ಅವರು ಕಾಲ-ದೇಶಗಳನ್ನು ಪರಿಭಾವಿಸುವ ಕ್ರಮ ಬೇರೆಯೇ ಇದೆ. ಭಾಷೆಯ ಪ್ರಾಥಮಿಕ ಅವಸ್ಥೆಯಾದ ದ್ವಿ-ಮಾನದ ಹಂತಕ್ಕೆ ಹೋಗಿ ವ್ಯವಹರಿಸಬಲ್ಲ ಅವರಿಗೆ ಈವರೆಗಿನ ಸಂರಚನೆಗಳನ್ನು ಕ್ಷಣಾರ್ಧದಲ್ಲಿ ದಾಟಬಲ್ಲ ಸಾಮರ್ಥ್ಯ ಬಂದಿದೆ. (ಅವರಿಗೆ ಅದು ನಮ್ಮಿಂದ ಬಂದಿಲ್ಲ!). <br /> <br /> ಹಿರಿಯರನ್ನು ಹೊಸಪೀಳಿಗೆಯು `ಕನ್ನದಲ್ಲಿ ಸವೆದ ಕಬ್ಬುನ~ದಂತೆ ಕಾಣಬಲ್ಲರು. ಹಾಗಾಗಿ ಇಂದು ಕಾವ್ಯಕ್ರಿಯೆಯೆನ್ನುವುದು ಅನಗತ್ಯ ಸಂಕೀರ್ಣವೂ ಆಗಬೇಕಿಲ್ಲ, ವ್ಯಸನವೂ ಆಗಬೇಕಿಲ್ಲ. ಇದರ ಅರಿವಿಲ್ಲದ ಇವತ್ತಿನ ಕಾವ್ಯದ ಫೋಟೋದ ಹಾಗಿದೆ ಈ ಕೆಳಗಿನ `ಕರ್ಣರಥ~ ಹೆಸರಿನ ಕವನ!</p>.<p>ಮೂರು ಚಕ್ರದ ಈ ಬೇಬಿ ಸೈಕಲ್ ನೆಲದ ಮೇಲೆ ಅಂಗಾತ ಮಲಗಿದೆ<br /> ಗಾಳಿ ತುಸುವೆ ಕಂಪಿಸಿದಂತೆ ಅದರ ಗಾಲಿ<br /> ಆಗಸಕೆ ಮೊಗವೆತ್ತಿ ಏನೋ ಹುಯ್ಯಲಿಡುವಂತಿದೆ<br /> ಮೂಕಿಯೋ ಹಳೆಯ ಜನುಮದ ವಾಸನೆಗೆಂಬಂತೆ</p>.<p>ಯಾವ ಅರ್ಜುನ ಎದುರಾದ ಹೀಗಾಗುವುದಕೆ<br /> ಸ್ವಂತದ ಅರಿವಿರದ ತನ್ನದೇ ತಮ್ಮ?<br /> ರಥ ನಡೆಸಿದ ನೆನಪೇ ಇಲ್ಲದಂತೆ ಅರ್ಧದಲ್ಲೆ<br /> ಆಟ ಮರೆತವನಂತೆ ಎದ್ದು ಎಲ್ಲಿ ಹೋದ?<br /> ಯಾವಾಧುನಿಕ ವಿದ್ಯೆಯ ರೈಲು ಹತ್ತಿ<br /> ಯಾವ ಕಾನ್ವೆಂಟಿನ ಯಾವ ಯೂನಿಫಾರ್ಮಿನ ಹಿಂದೆ ಕಳೆದು ಹೋದ?</p>.<p>ರಥದ ಮೆತ್ತನೆ ಸೀಟಿನ ಮೇಲೆ <br /> ಋತುಗಳೆಷ್ಟೋ ಹಾದು ಹೋಗಿವೆ<br /> ಯುಗದಾಚೆಗಿನ ಧೂಳು ಅದರ ಮೈ ತುಂಬ ಹೊಚ್ಚಿದೆ</p>.<p>ಛೇ! ಎಂಥ ಘನವಾಹನಕೆ ಇದು ಎಂಥ ಅಂತ್ಯ!</p>.<p>ಬಯಲನ್ನು ಬಯಲಾಗಿಸುವ ಸಂಕಟವನ್ನು ನಿರ್ವಹಿಸುತ್ತಿರುವ ಕವಿ ಹರಿಯಪ್ಪ ಪೇಜಾವರರಿಗೆ ಅಭಿನಂದನೆಗಳು.<br /> <br /> <strong>ಕಲಾವಿದನ ಕೊಲೆ <br /> ಲೇ: </strong>ಹರಿಯಪ್ಪ ಪೇಜಾವರ<br /> <strong>ಪು: </strong>118; ಬೆ: ರೂ. 75<br /> <strong>ಪ್ರ: </strong>ತಿಂಗಳ ಬೆಳಕು ಪ್ರಕಾಶನ, ವಿಠ್ಠಲವಾಡಿ, ಕುಂದಾಪುರ- 576 201, ಉಡುಪಿ ಜಿಲ್ಲೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವು ಕವಿಗಳಿಗೆ ಮತ್ತು ಕಲಾವಿದರಿಗೆ ವಿಚಿತ್ರವಾದ ಸಮಸ್ಯೆಯೊಂದು ಕಾಡುತ್ತದೆ. ತಮ್ಮ ವ್ಯಕ್ತಿ ವಿಶಿಷ್ಟತೆಗಾಗಿ ತಾವೇ ಸೃಷ್ಟಿಸಿಕೊಂಡ ಕುರುಹುಗಳಲ್ಲಿ ಅವರು ಬಂಧಿಗಳಾಗಿರುತ್ತಾರೆ. ತಮ್ಮದೊಂದು ವಿಶಿಷ್ಟವಾದ ಸ್ಟ್ಯಾಂಪನ್ನು ಒತ್ತುವ ಮೂಲಕ ಪ್ರಾರಂಭವಾಗಿ ಕಡೆಗೆ ಅದರಲ್ಲೇ ಬಂಧಿಯಾಗಿಬಿಡುತ್ತಾರೆ. <br /> <br /> ಈ ಸಂಗತಿಯನ್ನು ಇಂದಿನ ಅನೇಕ ಕವಿಗಳಲ್ಲಿ, ಕಲಾವಿದರಲ್ಲಿ ಕಾಣಬಹುದು. ಇದಕ್ಕೆ ಇನ್ನೊಂದು ಮುಖವೂ ಇದೆ. ಹೀಗೆ ಮೇಲ್ಪದರದ ಯಾವುದೋ ಒಂದು ಹಂತದಲ್ಲಿ ಬಂಧಿಯಾಗಿರುವುದೇ ಸಾಧನೆಯೆಂಬ ಭಾವನೆಯನ್ನು ಸಮೂಹದಲ್ಲಿ ಮೂಡಿಸುವ ಪ್ರಯತ್ನಗಳನ್ನೂ ಅವರು ಮಾಡುತ್ತಾರೆ. <br /> <br /> ಗಿಡ-ಮರಗಳಲ್ಲಿ ಹೆಣ್ಣೊಂದನ್ನು ಮೂಡಿಸುವುದರಲ್ಲೇ ಜೀವಮಾನವನ್ನು ಕಳೆಯುವವರಿದ್ದಾರೆ. ನೆಲಮೂಲ, ಕರುಳಾಳ ಇತ್ಯಾದಿ ಪದ ವ್ಯಸನವನ್ನೇ ಕಾವ್ಯವೆಂದುಕೊಂಡಿರುವವರೂ ಇದ್ದಾರೆ. ತಾವೇ ಸೃಜಿಸಿದ ಸಂಕೇತಗಳನ್ನು ನಿರಸನಗೊಳಿಸುತ್ತ ಸಾಗುವ ಕವಿಗಳು ಕಲಾವಿದರು ತುಂಬಾ ಕಡಿಮೆ. ಕಾವ್ಯ ಪ್ರತಿಮೆಗಳ ವಿಸರ್ಜನೆ ಅವುಗಳ ನಿರ್ಮಾಣದಷ್ಟು ಸರಳವಲ್ಲ. <br /> <br /> ಒಮ್ಮೆ ಪ್ರತಿಮೆಯನ್ನು ನಿರ್ಮಿಸಿಕೊಂಡ ಮೇಲೆ ಅದಕ್ಕೇ ಅಂಟಿಕೂತುಬಿಡುತ್ತೇವೆ. ಆದರೆ ಸೀದಾ ಅವುಗಳ ನಡುನೆತ್ತಿಯ ಮೇಲೆ ಉಳಿಯಿಟ್ಟು ಹೊಡೆಯುವ, ಈ ಕವನ ಸಂಕಲನದ ಕವಿ ಹರಿಯಪ್ಪ ಪೇಜಾವರ ಅವರನ್ನು ಓದುವಾಗ `ಸ್ವಲ್ಪ ತಡಿಯೋ ಮಾರಾಯಾ, ಜನ ಓದುವವರೆಗಾದರೂ ಅವುಗಳನ್ನು ವಿಸರ್ಜಿಸಬೇಡ~ ಅನ್ನಬೇಕೆನಿಸುತ್ತದೆ. ನಿಜ, ವಿಸರ್ಜನೆಯೂ ವ್ಯಸನವಾಗಬಾರದಲ್ಲವೆ?</p>.<p>ತಮ್ಮ ಪಾಡಿಗೆ ತಾವಿರುವಾಗ<br /> ಜಗತ್ತು ಗಮನಿಸುತ್ತಿಲ್ಲ ಎಂದು ಖಾತ್ರಿಯಾಗಿದ್ದಾಗ<br /> ಎಲ್ಲರೂ ಸರಳವಾಗಿಯೇ ಇರುತ್ತಾರೆ<br /> ಆದರೆ ಜಗತ್ತಿನ ಕಣ್ಣು ನಿಮ್ಮತ್ತಲೇ ಇದೆ ಎಂದಾಗ ಮಾತ್ರ<br /> ನಿಮ್ಮ ವರ್ತನೆ ಘನವಾಗಿ ಬಿಡುತ್ತದೆ</p>.<p>ಸುಮ್ಮನಿದ್ದೇನೆ ಎಂದುಕೊಳ್ಳದೆ ಸುಮ್ಮನಿರುವ ಕಷ್ಟವನ್ನು ಕುರಿತು ಜಗತ್ತಿನ ಮಹಾನ್ ದಾರ್ಶನಿಕರು ಅಲವತ್ತುಕೊಂಡಿದ್ದಾರೆ. ಕವನವೂ ಹಾಗೆಯೇ ಸಂಜೆ ಗೂಡಿಗೆ ಮರುಳುವ, ಬೆಳಿಗ್ಗೆ ತೆರಳುವ ಹಕ್ಕಿಯ ತೆರದಲ್ಲಿ ಎಂಬಂತೆ ಅದರೊಡನೆ ನಡೆದುಕೊಳ್ಳಬಲ್ಲ ಈ ಕವಿಗೆ ಯಾವುದಕ್ಕಾದರೂ ಸಮಜಾಯಿಷಿ ಕೊಡುವುದು ಸಂಕಟದ ಕೆಲಸ. <br /> <br /> ಈ ಕವಿಯ ಕಾವ್ಯಕ್ಕೆ ದುಃಖದ ಅನುಸಂಧಾನವೇ ಮುಖ್ಯ ಉದ್ಯೋಗವಾಗಿದ್ದರೂ ಲೋಕಸಮಸ್ತವೂ ತಲ್ಲಣದಲ್ಲಿ ಇರುವಾಗ ಯಾರಾದರೊಬ್ಬರ ಸಂಕಟದ ವೈಭವೀಕರಣ ಸಮರ್ಥನೀಯವಲ್ಲ ಎಂಬ ಸಮೂಹ ಗೌರವವಿದೆ. ಇಲ್ಲಿ ಯಾರೂ ಮುಖ್ಯರೂ ಅಲ್ಲ ಅಮುಖ್ಯರೂ ಅಲ್ಲ ಎಂಬ ನಂಬಿಕೆಯಿದೆ.</p>.<p>ಸಮಾನತೆಯಲ್ಲಿ ನಂಬಿಕೆ ಇರುವುದಾದರೆ ನಿನಗೆ<br /> ಬದುಕು ಎಲ್ಲರ ಜತೆ ನಿನಗು ಕೆಳ ಅಂತಸ್ತಿನವರ ಜತೆ<br /> ಹಂಚಿಕೋ ಅವರ ಎಲ್ಲ ಕಷ್ಟ ಸುಖ<br /> ಬಿಸಿಲಿಗೆ ಬಾಡು ಮಳೆಯಲ್ಲಿ ನೆನೆ<br /> ಗಾಳಿಯಲ್ಲಿ ಒಣಗು<br /> ಸಾಯಬೇಡ ಸತ್ತು ಬದುಕಿರುವ ಇತರರೆಲ್ಲರಿಗಿಂತ<br /> ನೀನೊಬ್ಬ ಬೇರೆ ಎಂಬ ಸೂಕ್ಷ್ಮ ಭೇದ ಮಾಡಬೇಡ</p>.<p>ದ್ವಿ-ಮಾನ ಭಾಷೆಯ ತೀಕ್ಷ್ಣ ತರ್ಕದ ಹೊಸ ಪೀಳಿಗೆಯೆದುರಿಗೆ ಕಾವ್ಯವನ್ನಾಗಲೀ, ಕಲೆಯನ್ನಾಗಲೀ, ದಾರ್ಶನಿಕತೆಯನ್ನಾಗಲೀ ಇಡುವಾಗ ಎಚ್ಚರದಿಂದಿರಬೇಕಾಗುತ್ತದೆ. ಏಕೆಂದರೆ ಅವುಗಳಲ್ಲಿನ ಪೊಳ್ಳುತನವನ್ನು ಕೇವಲ ಸಜ್ಜನಿಕೆಯ ಕಾರಣಕ್ಕೆ ಎರಡು ಸಾವಿರ ವರ್ಷಗಳ ಕಾಲ ಒಪ್ಪಿಕೊಂಡು ಬಂದ ನಮ್ಮ-ನಿಮ್ಮ ಹಾಗೆ ಅವರು ಒಪ್ಪಿಕೊಳ್ಳುವುದಿಲ್ಲ. <br /> <br /> ನಿಗಿನಿಗಿ ವರ್ತಮಾನದಲ್ಲಿ ಬದುಕುವ ಅವರು ಕಾಲ-ದೇಶಗಳನ್ನು ಪರಿಭಾವಿಸುವ ಕ್ರಮ ಬೇರೆಯೇ ಇದೆ. ಭಾಷೆಯ ಪ್ರಾಥಮಿಕ ಅವಸ್ಥೆಯಾದ ದ್ವಿ-ಮಾನದ ಹಂತಕ್ಕೆ ಹೋಗಿ ವ್ಯವಹರಿಸಬಲ್ಲ ಅವರಿಗೆ ಈವರೆಗಿನ ಸಂರಚನೆಗಳನ್ನು ಕ್ಷಣಾರ್ಧದಲ್ಲಿ ದಾಟಬಲ್ಲ ಸಾಮರ್ಥ್ಯ ಬಂದಿದೆ. (ಅವರಿಗೆ ಅದು ನಮ್ಮಿಂದ ಬಂದಿಲ್ಲ!). <br /> <br /> ಹಿರಿಯರನ್ನು ಹೊಸಪೀಳಿಗೆಯು `ಕನ್ನದಲ್ಲಿ ಸವೆದ ಕಬ್ಬುನ~ದಂತೆ ಕಾಣಬಲ್ಲರು. ಹಾಗಾಗಿ ಇಂದು ಕಾವ್ಯಕ್ರಿಯೆಯೆನ್ನುವುದು ಅನಗತ್ಯ ಸಂಕೀರ್ಣವೂ ಆಗಬೇಕಿಲ್ಲ, ವ್ಯಸನವೂ ಆಗಬೇಕಿಲ್ಲ. ಇದರ ಅರಿವಿಲ್ಲದ ಇವತ್ತಿನ ಕಾವ್ಯದ ಫೋಟೋದ ಹಾಗಿದೆ ಈ ಕೆಳಗಿನ `ಕರ್ಣರಥ~ ಹೆಸರಿನ ಕವನ!</p>.<p>ಮೂರು ಚಕ್ರದ ಈ ಬೇಬಿ ಸೈಕಲ್ ನೆಲದ ಮೇಲೆ ಅಂಗಾತ ಮಲಗಿದೆ<br /> ಗಾಳಿ ತುಸುವೆ ಕಂಪಿಸಿದಂತೆ ಅದರ ಗಾಲಿ<br /> ಆಗಸಕೆ ಮೊಗವೆತ್ತಿ ಏನೋ ಹುಯ್ಯಲಿಡುವಂತಿದೆ<br /> ಮೂಕಿಯೋ ಹಳೆಯ ಜನುಮದ ವಾಸನೆಗೆಂಬಂತೆ</p>.<p>ಯಾವ ಅರ್ಜುನ ಎದುರಾದ ಹೀಗಾಗುವುದಕೆ<br /> ಸ್ವಂತದ ಅರಿವಿರದ ತನ್ನದೇ ತಮ್ಮ?<br /> ರಥ ನಡೆಸಿದ ನೆನಪೇ ಇಲ್ಲದಂತೆ ಅರ್ಧದಲ್ಲೆ<br /> ಆಟ ಮರೆತವನಂತೆ ಎದ್ದು ಎಲ್ಲಿ ಹೋದ?<br /> ಯಾವಾಧುನಿಕ ವಿದ್ಯೆಯ ರೈಲು ಹತ್ತಿ<br /> ಯಾವ ಕಾನ್ವೆಂಟಿನ ಯಾವ ಯೂನಿಫಾರ್ಮಿನ ಹಿಂದೆ ಕಳೆದು ಹೋದ?</p>.<p>ರಥದ ಮೆತ್ತನೆ ಸೀಟಿನ ಮೇಲೆ <br /> ಋತುಗಳೆಷ್ಟೋ ಹಾದು ಹೋಗಿವೆ<br /> ಯುಗದಾಚೆಗಿನ ಧೂಳು ಅದರ ಮೈ ತುಂಬ ಹೊಚ್ಚಿದೆ</p>.<p>ಛೇ! ಎಂಥ ಘನವಾಹನಕೆ ಇದು ಎಂಥ ಅಂತ್ಯ!</p>.<p>ಬಯಲನ್ನು ಬಯಲಾಗಿಸುವ ಸಂಕಟವನ್ನು ನಿರ್ವಹಿಸುತ್ತಿರುವ ಕವಿ ಹರಿಯಪ್ಪ ಪೇಜಾವರರಿಗೆ ಅಭಿನಂದನೆಗಳು.<br /> <br /> <strong>ಕಲಾವಿದನ ಕೊಲೆ <br /> ಲೇ: </strong>ಹರಿಯಪ್ಪ ಪೇಜಾವರ<br /> <strong>ಪು: </strong>118; ಬೆ: ರೂ. 75<br /> <strong>ಪ್ರ: </strong>ತಿಂಗಳ ಬೆಳಕು ಪ್ರಕಾಶನ, ವಿಠ್ಠಲವಾಡಿ, ಕುಂದಾಪುರ- 576 201, ಉಡುಪಿ ಜಿಲ್ಲೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>