<p>ಸಂಸ್ಕೃತ ಸಾಹಿತ್ಯವು ಸಾವಿರಾರು ವರ್ಷಗಳಿಂದ ಕನ್ನಡವೂ ಸೇರಿ ಭಾರತದ ಹಲವಾರು ಭಾಷೆಗಳಲ್ಲಿ ಸಾಹಿತ್ಯ ರಚನೆಗೆ ಪ್ರೇರಣೆ ಮತ್ತು ಆಕರವನ್ನು ಒದಗಿಸಿದೆ. ಸಂಸ್ಕೃತದ ಸತ್ವಯುತ ಕೃತಿಗಳು ಶತಮಾನಗಳ ನಂತರವೂ ಕನ್ನಡದ ಕವಿಗಳಿಗೆ ಮೆಚ್ಚುಗೆಯಾಗಿ ಅವರು ಅವುಗಳನ್ನು ಉತ್ಸಾಹದಿಂದ ಕನ್ನಡಕ್ಕೆ ತಂದಿದ್ದಾರೆ.<br /> <br /> ಹಾಗೆ ಕನ್ನಡಕ್ಕೆ ಬಂದ ಗಮನಾರ್ಹ ಕೃತಿಗಳಲ್ಲಿ 11ನೇ ಶತಮಾನದಲ್ಲಿ ಕೃಷ್ಣ ಮಿಶ್ರನು ರಚಿಸಿದ `ಪ್ರಬೋಧ ಚಂದ್ರೋದಯ~ ಎಂಬ ಸಂಸ್ಕೃತ ನಾಟಕವೂ ಸೇರಿದೆ. ಈ ನಾಟಕ ಶತಮಾನಗಳ ಅಂತರದ ನಂತರ 17ನೇ ಶತಮಾನದಲ್ಲಿ `ಪ್ರಬೋಧ ಚಂದ್ರೋದಯ~ ಹೆಸರಿನಲ್ಲೇ ಷಟ್ಪದಿ ಕಾವ್ಯವಾಗಿ ಕನ್ನಡಕ್ಕೆ ಬಂದಿದೆ.<br /> <br /> ಈ ಕಾವ್ಯವನ್ನು ರಚಿಸಿದ್ದು ತಿಪಟೂರು ಸಮೀಪ ಹೊನ್ನವಳ್ಳಿಯ ಮಠಾಧೀಶರಾಗಿದ್ದ ಶ್ರಿ ಕರಿಯ ಸಿದ್ಧೇಶ ಎಂಬ ಕವಿ. ರಚನೆಯಾಗಿ ಶತಮಾನಗಳ ಅನಂತರ `ಪ್ರಬೋಧ ಚಂದ್ರೋದಯ~ ಕಾವ್ಯ ಈಗ ಪ್ರಕಟಣೆಯ ಭಾಗ್ಯ ಕಾಣುತ್ತಿದೆ.<br /> <br /> ಶ್ರಿ ಕರಿಯಸಿದ್ಧೇಶರು ಕವಿಮನಸ್ಸಿನ ಅಧ್ಯಾತ್ಮ ಸಾಧಕರು. ಅವರ ಕಾವ್ಯದಲ್ಲಿ ಹನ್ನೊಂದು ಸಂಧಿಗಳಿದ್ದು ಸಾವಿರದ ತೊಂಬತ್ತೊಂಬತ್ತು ಪದ್ಯಗಳಿವೆ. ಚಾರಿತ್ರಿಕ ಸಂಗತಿಗಳ ಸಾಕ್ಷ್ಯದಿಂದ ಈ ಕಾವ್ಯದ ರಚನೆ ಸುಮಾರು 1650ರಲ್ಲಿ ಆಗಿದೆ ಎಂದು ಹೇಳಬಹುದು. ಸಂಸ್ಕೃತ ನಾಟಕವನ್ನು ಕನ್ನಡದಲ್ಲಿ ಕಾವ್ಯರೂಪದಲ್ಲಿ ತಂದಿದ್ದರೂ ಅದರೊಳಗೆ ಅರಿಷಡ್ವರ್ಗಗಳು, ನವರಸಗಳು, ಗುಣಗಳು ಮುಂತಾದುವೇ ಪಾತ್ರಧಾರಿಗಳಾಗಿರುವ ಒಂದು ಕಲ್ಪಿತ ನಾಟಕವೇ ನಡೆದುಹೋಗುತ್ತದೆ. <br /> <br /> ಕೊನೆಯಲ್ಲಿ ಮನುಷ್ಯನ ಒಳ್ಳೆಯ ಗುಣಗಳಿಗೇ ವಿಜಯ ಎಂಬುದು ಕಾವ್ಯನೀತಿಯಾಗಿದೆ.<br /> ಕ್ರಿ.ಶ. 1060ರ ಸುಮಾರಿಗೆ ರಚಿತವಾದ `ಪ್ರಬೋಧ ಚಂದ್ರೋದಯ~ ಒಂದು ವಿಶಿಷ್ಟ ರೂಪಕಾತ್ಮಕ ರಚನೆ. ಕೀರ್ತಿವರ್ಮ ಎಂಬ ರಾಜನು ಕರ್ಣದೇವ ಎಂಬುವನ ಮೇಲೆ ಸಾಧಿಸಿದ ವಿಜಯದ ನೆನಪಿಗೆ ಕೃಷ್ಣ ಮಿಶ್ರ ಎಂಬ ನಾಟಕಕಾರನು ಈ ರೂಪಕ ಪ್ರಧಾನ ನಾಟಕವನ್ನು ರಚಿಸಿದನೆಂದು ಹೇಳಲಾಗಿದೆ. <br /> <br /> ಈ ನಾಟಕದ ಮುಖ್ಯ ಉದ್ದೇಶ ಅದ್ವೈತ ಸಿದ್ಧಾಂತದ ಪ್ರಚಾರ. ಮನುಷ್ಯನ ಪರಸ್ಪರ ವಿರುದ್ಧ ಗುಣಗಳನ್ನೇ ಪಾತ್ರಗಳನ್ನಾಗಿ ಮಾಡಿ, ದುಷ್ಟ ಗುಣಗಳ ಮೇಲೆ ಶಿಷ್ಟ ಗುಣಗಳು ವಿಜಯ ಸಾಧಿಸುವುದನ್ನು, ಅದರಿಂದ ಜ್ಞಾನದ ಉದಯವಾಗುವುದನ್ನು ಸಂಕೇತಿಸುವುದು ಆ ನಾಟಕದ ವಸ್ತು. ಕರಿಯ ಸಿದ್ಧೇಶರ ಕಾವ್ಯದಲ್ಲೂ ಅದು ಸಾಧಿತವಾಗಿದೆ. <br /> <br /> ಕೃಷ್ಣ ಮಿಶ್ರನ ಸಂಸ್ಕೃತ ನಾಟಕ ಮುಂದಿನ ಶತಮಾನಗಳಲ್ಲಿ ಅನೇಕ ಕವಿಗಳು, ನಾಟಕಕಾರರನ್ನು ಆಕರ್ಷಿಸಿದೆ. ಸುಮಾರು 13ನೆಯ ಶತಮಾನದಲ್ಲೇ ವೇದಾಂತ ದೇಶಿಕನೆಂಬ ನಾಟಕಕಾರ ಇದೇ ನಾಟಕದ ವಸ್ತುವನ್ನು ಸ್ವಲ್ಪ ಬದಲಾಯಿಸಿಕೊಂಡು ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಚಾರಕ್ಕಾಗಿ `ಸಂಕಲ್ಪ ಸೂರ್ಯೋದಯ~ ಎಂಬ ನಾಟಕ ಬರೆದಿದ್ದಾನೆ. <br /> <br /> ನಂತರದಲ್ಲಿ ಸಂಸ್ಕೃತ `ಪ್ರಬೋಧ ಚಂದ್ರೋದಯ~ ನಾಟಕವನ್ನು ಷಹಜಹಾನನ ಮಗ ದಾರಾ ಷುಕೋ ಪರ್ಷಿಯನ್ ಭಾಷೆಗೆ ಅನುವಾದಿಸಿದ್ದಾನೆ. ಕ್ರಿ.ಶ. 1812ರಲ್ಲಿ ಜೆ. ಟೇಲರ್ ಎಂಬಾತ ಇದನ್ನು ಇಂಗ್ಲಿಷ್ಗೆ, ಕ್ರಿ.ಶ. 1835ರಲ್ಲಿ ಹರ್ಮನ್ ಬ್ರೂಕ್ಲಿಂಗ್ ಜರ್ಮನ್ಗೆ ಅನುವಾದಿಸಿದ್ದಾರೆ. <br /> <br /> ಸಂಸ್ಕೃತದ ನಾಟಕ `ಪ್ರಬೋಧ ಚಂದ್ರೋದಯ~ ತಮಿಳು, ತೆಲುಗು ಮುಂತಾದ ದೇಶೀ ಭಾಷೆಗಳಿಗೂ ನಾಟಕ ರೂಪದಲ್ಲಿಯೇ ಅನುವಾದಗೊಂಡಿದೆ. ಆದರೆ ಕನ್ನಡಕ್ಕೆ ಮಾತ್ರ ನಾಟಕವಾಗಿ ಅನುವಾದಗೊಳ್ಳದೆ ಕಾವ್ಯವಾಗಿ ಮೂಡಿ ಬಂದಿದೆ. ಇದೊಂದು ವಿಶೇಷ ಸಂಗತಿ. <br /> <br /> ಈ ಅಪೂರ್ವ ಕೃತಿಯ ಹಸ್ತಪ್ರತಿಯನ್ನು ತಮ್ಮ ಗುರುಗಳಾದ ಪ್ರೊ ಡಿ.ಎಲ್. ನರಸಿಂಹಾಚಾರ್ಯರಿಂದ ಪಡೆದಿದ್ದ ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಎನ್. ಬಸವಾರಾಧ್ಯ ಅವರು ಜೋಪಾನವಾಗಿ ಇಟ್ಟುಕೊಂಡಿದ್ದರು. ಈ ಕಾವ್ಯಕ್ಕೆ ಇದುವರೆಗೆ ಸಿಕ್ಕಿರುವುದು ಒಂದೇ ಹಸ್ತಪ್ರತಿ. ಪ್ರತಿಕಾರನ ದೋಷಗಳೂ ಸೇರಿಕೊಂಡು ಕಾವ್ಯ ಅನೇಕ ಕಡೆ ಕ್ಲಿಷ್ಟವಾಗಿದೆ. <br /> <br /> ಈ ಏಕೈಕ ಹಸ್ತಪ್ರತಿಯನ್ನು ಬಹಳ ಕಷ್ಟಪಟ್ಟು ಗ್ರಂಥಸಂಪಾದನೆ ಮಾಡಿ ಪ್ರಕಟನೆಗೆ ಸಿದ್ಧಪಡಿಸಿಕೊಟ್ಟು ಬಸವಾರಾಧ್ಯ ಅವರು ಕನ್ನಡ ಕಾವ್ಯಲೋಕಕ್ಕೆ ಗಮನಾರ್ಹ ಕಾಣಿಕೆ ನೀಡಿದ್ದಾರೆ. ಮುಂದೆ ಇದರ ಇನ್ನಷ್ಟು ಪ್ರತಿಗಳು ದೊರೆಯಬಹುದೆಂಬ ಆಶಾಭಾವನೆಯೊಡನೆ ಡಾ. ಸಿ. ವೀರಣ್ಣ ಅವರು ಈ ಕಾವ್ಯವನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸಿದ್ದಾರೆ.<br /> <br /> <strong>ಇಂದು ಬೆಂಗಳೂರಿನಲ್ಲಿ `ಪ್ರಬೋಧ ಚಂದ್ರೋದಯ~ ಕೃತಿಯ ಬಿಡುಗಡೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಸ್ಕೃತ ಸಾಹಿತ್ಯವು ಸಾವಿರಾರು ವರ್ಷಗಳಿಂದ ಕನ್ನಡವೂ ಸೇರಿ ಭಾರತದ ಹಲವಾರು ಭಾಷೆಗಳಲ್ಲಿ ಸಾಹಿತ್ಯ ರಚನೆಗೆ ಪ್ರೇರಣೆ ಮತ್ತು ಆಕರವನ್ನು ಒದಗಿಸಿದೆ. ಸಂಸ್ಕೃತದ ಸತ್ವಯುತ ಕೃತಿಗಳು ಶತಮಾನಗಳ ನಂತರವೂ ಕನ್ನಡದ ಕವಿಗಳಿಗೆ ಮೆಚ್ಚುಗೆಯಾಗಿ ಅವರು ಅವುಗಳನ್ನು ಉತ್ಸಾಹದಿಂದ ಕನ್ನಡಕ್ಕೆ ತಂದಿದ್ದಾರೆ.<br /> <br /> ಹಾಗೆ ಕನ್ನಡಕ್ಕೆ ಬಂದ ಗಮನಾರ್ಹ ಕೃತಿಗಳಲ್ಲಿ 11ನೇ ಶತಮಾನದಲ್ಲಿ ಕೃಷ್ಣ ಮಿಶ್ರನು ರಚಿಸಿದ `ಪ್ರಬೋಧ ಚಂದ್ರೋದಯ~ ಎಂಬ ಸಂಸ್ಕೃತ ನಾಟಕವೂ ಸೇರಿದೆ. ಈ ನಾಟಕ ಶತಮಾನಗಳ ಅಂತರದ ನಂತರ 17ನೇ ಶತಮಾನದಲ್ಲಿ `ಪ್ರಬೋಧ ಚಂದ್ರೋದಯ~ ಹೆಸರಿನಲ್ಲೇ ಷಟ್ಪದಿ ಕಾವ್ಯವಾಗಿ ಕನ್ನಡಕ್ಕೆ ಬಂದಿದೆ.<br /> <br /> ಈ ಕಾವ್ಯವನ್ನು ರಚಿಸಿದ್ದು ತಿಪಟೂರು ಸಮೀಪ ಹೊನ್ನವಳ್ಳಿಯ ಮಠಾಧೀಶರಾಗಿದ್ದ ಶ್ರಿ ಕರಿಯ ಸಿದ್ಧೇಶ ಎಂಬ ಕವಿ. ರಚನೆಯಾಗಿ ಶತಮಾನಗಳ ಅನಂತರ `ಪ್ರಬೋಧ ಚಂದ್ರೋದಯ~ ಕಾವ್ಯ ಈಗ ಪ್ರಕಟಣೆಯ ಭಾಗ್ಯ ಕಾಣುತ್ತಿದೆ.<br /> <br /> ಶ್ರಿ ಕರಿಯಸಿದ್ಧೇಶರು ಕವಿಮನಸ್ಸಿನ ಅಧ್ಯಾತ್ಮ ಸಾಧಕರು. ಅವರ ಕಾವ್ಯದಲ್ಲಿ ಹನ್ನೊಂದು ಸಂಧಿಗಳಿದ್ದು ಸಾವಿರದ ತೊಂಬತ್ತೊಂಬತ್ತು ಪದ್ಯಗಳಿವೆ. ಚಾರಿತ್ರಿಕ ಸಂಗತಿಗಳ ಸಾಕ್ಷ್ಯದಿಂದ ಈ ಕಾವ್ಯದ ರಚನೆ ಸುಮಾರು 1650ರಲ್ಲಿ ಆಗಿದೆ ಎಂದು ಹೇಳಬಹುದು. ಸಂಸ್ಕೃತ ನಾಟಕವನ್ನು ಕನ್ನಡದಲ್ಲಿ ಕಾವ್ಯರೂಪದಲ್ಲಿ ತಂದಿದ್ದರೂ ಅದರೊಳಗೆ ಅರಿಷಡ್ವರ್ಗಗಳು, ನವರಸಗಳು, ಗುಣಗಳು ಮುಂತಾದುವೇ ಪಾತ್ರಧಾರಿಗಳಾಗಿರುವ ಒಂದು ಕಲ್ಪಿತ ನಾಟಕವೇ ನಡೆದುಹೋಗುತ್ತದೆ. <br /> <br /> ಕೊನೆಯಲ್ಲಿ ಮನುಷ್ಯನ ಒಳ್ಳೆಯ ಗುಣಗಳಿಗೇ ವಿಜಯ ಎಂಬುದು ಕಾವ್ಯನೀತಿಯಾಗಿದೆ.<br /> ಕ್ರಿ.ಶ. 1060ರ ಸುಮಾರಿಗೆ ರಚಿತವಾದ `ಪ್ರಬೋಧ ಚಂದ್ರೋದಯ~ ಒಂದು ವಿಶಿಷ್ಟ ರೂಪಕಾತ್ಮಕ ರಚನೆ. ಕೀರ್ತಿವರ್ಮ ಎಂಬ ರಾಜನು ಕರ್ಣದೇವ ಎಂಬುವನ ಮೇಲೆ ಸಾಧಿಸಿದ ವಿಜಯದ ನೆನಪಿಗೆ ಕೃಷ್ಣ ಮಿಶ್ರ ಎಂಬ ನಾಟಕಕಾರನು ಈ ರೂಪಕ ಪ್ರಧಾನ ನಾಟಕವನ್ನು ರಚಿಸಿದನೆಂದು ಹೇಳಲಾಗಿದೆ. <br /> <br /> ಈ ನಾಟಕದ ಮುಖ್ಯ ಉದ್ದೇಶ ಅದ್ವೈತ ಸಿದ್ಧಾಂತದ ಪ್ರಚಾರ. ಮನುಷ್ಯನ ಪರಸ್ಪರ ವಿರುದ್ಧ ಗುಣಗಳನ್ನೇ ಪಾತ್ರಗಳನ್ನಾಗಿ ಮಾಡಿ, ದುಷ್ಟ ಗುಣಗಳ ಮೇಲೆ ಶಿಷ್ಟ ಗುಣಗಳು ವಿಜಯ ಸಾಧಿಸುವುದನ್ನು, ಅದರಿಂದ ಜ್ಞಾನದ ಉದಯವಾಗುವುದನ್ನು ಸಂಕೇತಿಸುವುದು ಆ ನಾಟಕದ ವಸ್ತು. ಕರಿಯ ಸಿದ್ಧೇಶರ ಕಾವ್ಯದಲ್ಲೂ ಅದು ಸಾಧಿತವಾಗಿದೆ. <br /> <br /> ಕೃಷ್ಣ ಮಿಶ್ರನ ಸಂಸ್ಕೃತ ನಾಟಕ ಮುಂದಿನ ಶತಮಾನಗಳಲ್ಲಿ ಅನೇಕ ಕವಿಗಳು, ನಾಟಕಕಾರರನ್ನು ಆಕರ್ಷಿಸಿದೆ. ಸುಮಾರು 13ನೆಯ ಶತಮಾನದಲ್ಲೇ ವೇದಾಂತ ದೇಶಿಕನೆಂಬ ನಾಟಕಕಾರ ಇದೇ ನಾಟಕದ ವಸ್ತುವನ್ನು ಸ್ವಲ್ಪ ಬದಲಾಯಿಸಿಕೊಂಡು ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಚಾರಕ್ಕಾಗಿ `ಸಂಕಲ್ಪ ಸೂರ್ಯೋದಯ~ ಎಂಬ ನಾಟಕ ಬರೆದಿದ್ದಾನೆ. <br /> <br /> ನಂತರದಲ್ಲಿ ಸಂಸ್ಕೃತ `ಪ್ರಬೋಧ ಚಂದ್ರೋದಯ~ ನಾಟಕವನ್ನು ಷಹಜಹಾನನ ಮಗ ದಾರಾ ಷುಕೋ ಪರ್ಷಿಯನ್ ಭಾಷೆಗೆ ಅನುವಾದಿಸಿದ್ದಾನೆ. ಕ್ರಿ.ಶ. 1812ರಲ್ಲಿ ಜೆ. ಟೇಲರ್ ಎಂಬಾತ ಇದನ್ನು ಇಂಗ್ಲಿಷ್ಗೆ, ಕ್ರಿ.ಶ. 1835ರಲ್ಲಿ ಹರ್ಮನ್ ಬ್ರೂಕ್ಲಿಂಗ್ ಜರ್ಮನ್ಗೆ ಅನುವಾದಿಸಿದ್ದಾರೆ. <br /> <br /> ಸಂಸ್ಕೃತದ ನಾಟಕ `ಪ್ರಬೋಧ ಚಂದ್ರೋದಯ~ ತಮಿಳು, ತೆಲುಗು ಮುಂತಾದ ದೇಶೀ ಭಾಷೆಗಳಿಗೂ ನಾಟಕ ರೂಪದಲ್ಲಿಯೇ ಅನುವಾದಗೊಂಡಿದೆ. ಆದರೆ ಕನ್ನಡಕ್ಕೆ ಮಾತ್ರ ನಾಟಕವಾಗಿ ಅನುವಾದಗೊಳ್ಳದೆ ಕಾವ್ಯವಾಗಿ ಮೂಡಿ ಬಂದಿದೆ. ಇದೊಂದು ವಿಶೇಷ ಸಂಗತಿ. <br /> <br /> ಈ ಅಪೂರ್ವ ಕೃತಿಯ ಹಸ್ತಪ್ರತಿಯನ್ನು ತಮ್ಮ ಗುರುಗಳಾದ ಪ್ರೊ ಡಿ.ಎಲ್. ನರಸಿಂಹಾಚಾರ್ಯರಿಂದ ಪಡೆದಿದ್ದ ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಎನ್. ಬಸವಾರಾಧ್ಯ ಅವರು ಜೋಪಾನವಾಗಿ ಇಟ್ಟುಕೊಂಡಿದ್ದರು. ಈ ಕಾವ್ಯಕ್ಕೆ ಇದುವರೆಗೆ ಸಿಕ್ಕಿರುವುದು ಒಂದೇ ಹಸ್ತಪ್ರತಿ. ಪ್ರತಿಕಾರನ ದೋಷಗಳೂ ಸೇರಿಕೊಂಡು ಕಾವ್ಯ ಅನೇಕ ಕಡೆ ಕ್ಲಿಷ್ಟವಾಗಿದೆ. <br /> <br /> ಈ ಏಕೈಕ ಹಸ್ತಪ್ರತಿಯನ್ನು ಬಹಳ ಕಷ್ಟಪಟ್ಟು ಗ್ರಂಥಸಂಪಾದನೆ ಮಾಡಿ ಪ್ರಕಟನೆಗೆ ಸಿದ್ಧಪಡಿಸಿಕೊಟ್ಟು ಬಸವಾರಾಧ್ಯ ಅವರು ಕನ್ನಡ ಕಾವ್ಯಲೋಕಕ್ಕೆ ಗಮನಾರ್ಹ ಕಾಣಿಕೆ ನೀಡಿದ್ದಾರೆ. ಮುಂದೆ ಇದರ ಇನ್ನಷ್ಟು ಪ್ರತಿಗಳು ದೊರೆಯಬಹುದೆಂಬ ಆಶಾಭಾವನೆಯೊಡನೆ ಡಾ. ಸಿ. ವೀರಣ್ಣ ಅವರು ಈ ಕಾವ್ಯವನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನಿಂದ ಪ್ರಕಟಿಸಿದ್ದಾರೆ.<br /> <br /> <strong>ಇಂದು ಬೆಂಗಳೂರಿನಲ್ಲಿ `ಪ್ರಬೋಧ ಚಂದ್ರೋದಯ~ ಕೃತಿಯ ಬಿಡುಗಡೆ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>