ಪ್ರವೇಶ ಪರೀಕ್ಷೆಗೆ ದಿಕ್ಸೂಚಿ

ಇನ್ನೆರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳ ಭರಾಟೆ. ಎಸ್ಎಸ್ಎಲ್ಸಿ, ಪಿಯುಸಿ ಓದುವ ಮಕ್ಕಳಿದ್ದ ಮನೆಯಲ್ಲಿ ವಾತಾವರಣ ಕೊಂಚ ಗಂಭೀರ. ಅದಕ್ಕಾಗಿಯೇ ಒಂದು ತಿಂಗಳು ಕಳೆದಲ್ಲಿ ಟಿವಿ ತನಗೆ ಕೆಲಸವಿಲ್ಲ ಎಂಬಂತೆ ಸುಮ್ಮನಾಗುತ್ತದೆ. ಕೆಲ ಮನೆಗಳಲ್ಲಿ ಗೆಳೆಯ, ಗೆಳತಿಯರ ಜತೆಗೂಡಿ ‘ಜಾಯಿಂಟ್ ಸ್ಟಡಿ’ಯ ಗಮ್ಮತ್ತು.
‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಮಾಡುವ ಜಾಣ, ಜಾಣೆಯರ ನಡುವೆ ಗುರಿ ಸಾಧನೆಗೆ ತಪಸ್ಸುಗೈಯುವ ಕುಡುಮಿಗಳೂ ಕಾಣುತ್ತಾರೆ. ಎಸ್ಎಸ್ಎಲ್ಸಿ ಅಂಕ ಉತ್ತಮ ಕಾಲೇಜಿಗೆ ಪ್ರವೇಶ ಪಡೆಯಲು ರಹದಾರಿ ಅಷ್ಟೇ. ಆದರೆ, ಪಿಯುಸಿಯ ಅಂಕ, ಆಯಾ ಪ್ರವೇಶ ಪರೀಕ್ಷೆಗಳಲ್ಲಿ ಗಳಿಸುವ ಅಂಕ ಭವಿಷ್ಯಕ್ಕೆ ದಿಕ್ಸೂಚಿ.
ರಾಜ್ಯ ಪಠ್ಯಕ್ರಮದಲ್ಲಿ ಓದಿದ ಬಹುತೇಕ ಮಕ್ಕಳು ಸಿಇಟಿ, ಕಾಮೆಡ್- ಕೆ ಪರೀಕ್ಷೆಗಳತ್ತ ಕಣ್ಣು ನೆಟ್ಟಿರುತ್ತಾರೆ. ಆದರೆ, ಸಿಬಿಎಸ್ಸಿ, ಐಸಿಎಸ್ಸಿ ಪಠ್ಯಕ್ರಮದಲ್ಲಿ ಓದಿದವರು ಅಖಿಲ ಭಾರತ ಮಟ್ಟದ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಸಿದ್ಧತೆ ನಡೆಸಿರುತ್ತಾರೆ. ಇನ್ನೂ 9,10ನೇ ತರಗತಿಯಲ್ಲಿರುವಾಗಲೇ ಐಐಟಿ ಜಂಟಿ ಪರೀಕ್ಷೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪರೀಕ್ಷೆಗೆ ಕೋಚಿಂಗ್ ಪಡೆಯುವವರು ಉಂಟು...! ದಶಕಗಳ ಹಿಂದೆ ಬಿಹಾರ, ಉತ್ತರ ಪ್ರದೇಶಗಳಲ್ಲಿ ಕಾಣುತ್ತಿದ್ದ ಟ್ರೆಂಡ್ ಈಗ ಇಲ್ಲಿ ಶುರುವಾಗಿದೆ.
ಐಐಟಿಯ ಎಂಜಿನಿಯರಿಂಗ್ ಪದವೀಧರರು, ಎಐಎಎಂಎಸ್ನಲ್ಲಿ ವೈದ್ಯಕೀಯ ಪದವಿ ಪಡೆದವರಿಗೆ ಇರುವ ಉದ್ಯೋಗಾವಕಾಶ, ಬೇಡಿಕೆ ಮನಗಂಡ ನಗರ ಪ್ರದೇಶಗಳ ಪಾಲಕರು ಇತ್ತೀಚೆಗೆ ಮಕ್ಕಳನ್ನು ಇಂಥ ಪರೀಕ್ಷೆಗೆ ಸಜ್ಜುಗೊಳಿಸಲು ಆಸಕ್ತಿ ತೋರುತ್ತಿದ್ದಾರೆ. ನಗರದ ಯಾವುದೇ ಕೋಚಿಂಗ್ ಸೆಂಟರ್ಗೆ ಭೇಟಿ ನೀಡಿದರೂ ಅಖಿಲ ಭಾರತ ಮಟ್ಟದ ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳ ಹಿಂಡೇ ಕಾಣುತ್ತದೆ.
ಐಐಟಿ ಪದವೀಧರರು ಕಾಲೇಜಿನಿಂದ ಹೊರಬೀಳುವುದೇ ತಡ. ವಿದೇಶಿ ಕಂಪೆನಿಗಳು ಪೈಪೋಟಿಯ ಮೇಲೆ ಸೇರಿಸಿಕೊಳ್ಳುತ್ತವೆ.
ಹಾಗೆಯೇ ಎಐಎಎಂಎಸ್. ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರವೇಶ ಪಡೆದರೆ ಮುಗಿಯಿತು. ಆ ಅಭ್ಯರ್ಥಿ ಅಲ್ಲಿಂದ ಹೊರಬೀಳುವಾಗ ಅತ್ಯುತ್ತಮ ವೈದ್ಯನಾಗಿರುತ್ತಾನೆ.
ಈ ಸಂಸ್ಥೆಗಳ ಸಾಲಿಗೆ ಸೇರುವ ಮತ್ತೊಂದು ಸಂಸ್ಥೆ ‘ನ್ಯಾಷನಲ್ ಲಾ ಸ್ಕೂಲ್’. ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲೇ ಇರುವ ‘ನ್ಯಾಷನಲ್ ಲಾ ಸ್ಕೂಲ್’ನಲ್ಲಿ ದೇಶದ ಅತ್ಯುತ್ತಮ ಕಾನೂನು ತಜ್ಞರು ಪಾಠ ಮಾಡುತ್ತಾರೆ. ಅಲ್ಲಿ ಕಾನೂನು ಅಭ್ಯಾಸ ಮಾಡಿದ ವಿದ್ಯಾರ್ಥಿ ವಿದೇಶದಲ್ಲೂ ವಕೀಲಿ ವೃತ್ತಿ ಕೈಗೊಳ್ಳುವಷ್ಟು ಪರಿಣತನಾಗುತ್ತಾನೆ. ಇಂಥ ಅಭ್ಯರ್ಥಿಗಳು ಹಾಗೂ ಅವರ ಪಾಲಕರಿಗೆ ಸಂಸ್ಥೆಗಳ ಕುರಿತು ಮಾಹಿತಿ, ಪ್ರವೇಶ ಪರೀಕ್ಷೆಗಳ ವಿವರ ನೀಡಲು ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಬಳಗ ಮುಂದಾಗಿದೆ. ಸದುದ್ದೇಶದ ಈ ಕಾರ್ಯಕ್ರಮದಲ್ಲಿ ಸಂಭ್ರಮ್ ಇನ್ಸ್ಟಿಟ್ಯೂಷನ್ಸ್ ಹಾಗೂ ಏಸ್ ಕ್ರಿಯೇಟಿವ್ ಲರ್ನಿಂಗ್ ದೀಕ್ಷಾ ಇಂಟಿಗ್ರೇಟೆಡ್ ಸಂಸ್ಥೆಗಳು ಕೈಜೋಡಿಸಿವೆ.
ಶನಿವಾರ ನಗರದಲ್ಲಿ ನಡೆಯಲಿರುವ ‘ಮಿಷನ್ ಅಡ್ಮಿಷನ್-2011’ ಸಲಹಾ ಕಾರ್ಯಾಗಾರದಲ್ಲಿ ಅಖಿಲ ಭಾರತ ಮಟ್ಟದ ಪರೀಕ್ಷೆಗಳ ಕುರಿತು ಸಮಗ್ರ ಮಾಹಿತಿ ಒದಗಿಸಲಾಗುತ್ತಿದೆ. ಆಯಾ ಕ್ಷೇತ್ರಗಳ ತಜ್ಞರು ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಸಿದ್ಧವಾಗುವ ಬಗೆ, ಪರೀಕ್ಷೆ ಬರೆಯುವಾಗ ಅನುಸರಿಸಬೇಕಾದ ನಿಯಮ, ಆಯಾ ಕ್ಷೇತ್ರದ ವ್ಯಾಪ್ತಿಯ ಕುರಿತು ವಿವರಿಸಲಿದ್ದಾರೆ. ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವವಿಜ್ಞಾನಗಳನ್ನು ಅಧ್ಯಯನ ಮಾಡುವ ಕ್ರಮ ಹೇಳಿಕೊಡಲಿದ್ದಾರೆ.
ಸ್ವತಃ ಹೃದ್ರೋಗ ತಜ್ಞರಾಗಿರುವ ಬೆಂಗಳೂರು ವಿವಿ ಕುಲಪತಿ ಡಾ. ಎನ್. ಪ್ರಭುದೇವ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜಿನ ಡಾ. ಎಸ್. ಸಚ್ಚಿದಾನಂದ್ ವೈದ್ಯಕೀಯ ಕುರಿತು ಮಾತನಾಡುವರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ (ಐಐಐಟಿ)ಯ ಮುಖ್ಯಸ್ಥರಾದ ಪ್ರೊ. ಸಡಗೋಪನ್, ಎಂಜಿನಿಯರಿಂಗ್ ಕುರಿತು ಚರ್ಚಿಸುವರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಪ್ರೊ. ಆರ್. ವೆಂಕಟರಾವ್ ಕಾನೂನು ಪ್ರವೇಶ ಪರೀಕ್ಷೆ ಕುರಿತು ವಿವರಿಸುವರು. ಇವರ ಜತೆ ‘ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್’ನ ಡಾ. ಜಿ. ಶ್ರೀಧರ್ ಎಂಜಿನಿಯರಿಂಗ್ ಕುರಿತು, ‘ಪರಾಡಿಮ್ ಲಾ ಕೋಚಿಂಗ್ ಸೆಂಟರ್’ನ ಅನಿತಾ ಕಾನೂನು ವೃತ್ತಿ ಕುರಿತು ಮಾತನಾಡುವರು.
ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ವೃತ್ತಿಶಿಕ್ಷಣ ಕೋರ್ಸ್ಗಳ ಕುರಿತು ಸಂಪೂರ್ಣ ಮಾಹಿತಿ ಇರುವ ಕೈಪಿಡಿ ನೀಡಲಾಗುವುದು.
ಸ್ಥಳ: ಶಿಕ್ಷಕರ ಸದನ, ಕೆ.ಜಿ. ರಸ್ತೆ.
ಬೆಳಿಗ್ಗೆ 10 ರಿಂದ 2.
ಮಾಹಿತಿಗೆ 2588 0202/ 216
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.