ಬಾಕಿ ಪಾವತಿಸದ ಕಾರ್ಖಾನೆಗಳಿಗೆ ಬೀಗ

ಮೈಸೂರು: ಕಬ್ಬು ಸರಬರಾಜು ಮಾಡಿದ ರೈತರಿಗೆ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ಪಾವತಿಸದ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಆದರೂ ಪಾವತಿಸದ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಹಾಕಲಾಗುತ್ತದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಎಚ್ಚರಿಕೆ ನೀಡಿದರು.
ಕಬ್ಬು ನಿಯಂತ್ರಣ ಮಂಡಳಿ ನಿರ್ಧರಿಸಿದಂತೆ 2014–15ನೇ ಸಾಲಿನಲ್ಲಿ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಮೇ 15ರವರೆಗೆ ನುರಿಸಿರುವ 446 ಲಕ್ಷ ಮೆಟ್ರಿಕ್ ಟನ್ ಕಬ್ಬಿಗೆ ₹ 11,355 ಕೋಟಿ ಪಾವತಿಸಬೇಕಿದೆ. ಇದುವರೆಗೆ ₹ 7,536 ಕೋಟಿ ಪಾವತಿಸಿದ್ದು, ₹ 3,818 ಕೋಟಿ ಪಾವತಿಸಲು ಬಾಕಿ ಇದೆ. ಪಾವತಿಸದ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಕೊಟ್ಟ 8–10 ದಿನಗಳೊಳಗೆ ಪಾವತಿಸದಿದ್ದರೆ ಬೀಗ ಹಾಕಲಾಗುತ್ತದೆ. ಅಲ್ಲಿಯ ಸಕ್ಕರೆಯನ್ನು ಮಾರಾಟ ಮಾಡಲಾಗುತ್ತದೆ. ಜತೆಗೆ, ಕಾರ್ಖಾನೆಯ ಚರ ಮತ್ತು ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮಾರಾಟ ಮಾಡಿ ರೈತರ ಬಾಕಿ ಪಾವತಿಸಲಾಗುತ್ತದೆ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ 2013-–14ನೇ ಸಾಲಿಗಿಂತ 2014–15ನೇ ಸಾಲಿನಲ್ಲಿ 87 ಸಾವಿರ ಹೆಕ್ಟೇರ್ ಕಬ್ಬು ಬೆಳೆಯುವ ಪ್ರದೇಶ ಹೆಚ್ಚಾಗಿದೆ. ಇದರಿಂದ ಕಳೆದ ವರ್ಷಕ್ಕಿಂತ 70 ಲಕ್ಷ ಮೆಟ್ರಿಕ್ ಟನ್ ಕಬ್ಬು ಹೆಚ್ಚಿಗೆ ನುರಿಸಲಾಗಿದ್ದು, ಸುಮಾರು 8 ಲಕ್ಷ ಟನ್ ಹೆಚ್ಚು ಸಕ್ಕರೆ ಉತ್ಪಾದನೆಯಾಗಿದೆ. ಆದರೆ, ರಾಜ್ಯದಲ್ಲಿ ಶೆ 20ರಷ್ಟು ಮಾತ್ರ ಸಕ್ಕರೆ ಬಳಕೆಯಾಗುತ್ತದೆ. ಇದಕ್ಕಾಗಿ ಉತ್ತರ ಭಾರತದ ರಾಜ್ಯಗಳಿಗೆ ರೈಲುಗಳ ಮೂಲಕ ಕಳುಹಿಸಿಕೊಡಲು ಪರವಾನಗಿ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ಸಕ್ಕರೆ ಬೆಲೆ ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ಕಬ್ಬಿಗೆ ಸ್ಥಿರ ಬೆಲೆ ಕೊಡಲು ಸಾಧ್ಯವಾಗುತ್ತದೆ. ಆದರೆ, ಪ್ರಧಾನಿ ಮೋದಿಯವರು ಪ್ರಚಾರದಲ್ಲಿಯೇ ಮುಳುಗಿದ್ದಾರೆ. ಕೃಷಿ, ಸಹಕಾರ ಇಲಾಖೆಯತ್ತ ಅವರು ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಎಲ್ಲ ಸದಸ್ಯರನ್ನು ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಅವರ ಸದಸ್ಯತ್ವಕ್ಕಾಗಿ ರಾಜ್ಯ ಸರ್ಕಾರ ₹ 30 ಕೋಟಿ ವ್ಯಯಿಸಲಿದೆ. ಇದರಿಂದ ₹ 10–15 ಸಾವಿರ ಸಾಲ ಸಿಗುತ್ತದೆ. ಈಮೂಲಕ ಬಿಪಿಎಲ್ ಕುಟುಂಬಗಳು ಆರ್ಥಿಕ ಅಭಿವೃದ್ಧಿ ಸಾಧಿಸಲಿವೆ ಎಂದು ಸಚಿವರು ಭರವಸೆ ನೀಡಿದರು.
9ರಂದು ದೆಹಲಿಗೆ ಸಿ.ಎಂ ಭೇಟಿ: ಜೂನ್ 9ರಂದು ದೆಹಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುವರು. ಅಲ್ಲಿಂದ ವಾಪಸು ಬಂದ ಮೇಲೆ ಸಚಿವ ಸಂಪುಟ ಪುನರ್ರಚನೆಗೆ ಚಾಲನೆ ಸಿಗಲಿದೆ. ಜತೆಗೆ, ನಿಗಮ ಹಾಗೂ ಮಂಡಳಿಗಳಿಗೆ ಸದಸ್ಯರ ನೇಮಕ ಇನ್ನೊಂದು ತಿಂಗಳೊಳಗೆ ಆಗಲಿದೆ ಎಂದು ಹೇಳಿದರು.
ಮುಖ್ಯಾಂಶಗಳು
* ₹ 3,818 ಕೋಟಿ ಪಾವತಿ ಬಾಕಿ
* ಪಾವತಿಸದ ಕಾರ್ಖಾನೆಗಳ ಆಸ್ತಿ ವಶ
ಹಾಲಿನ ಬೆಲೆ ಏರಿಕೆಗೆ ಸಂಬಂಧಿಸಿ ಶೀಘ್ರದಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದೆ
ಎಚ್.ಎಸ್. ಮಹದೇವಪ್ರಸಾದ್,ಸಹಕಾರ ಸಚಿವ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.