ಬೈಕ್ ಸವಾರರ ಆಪತ್ಬಾಂಧವ ‘ಲೆಟ್ಸ್ಸರ್ವೀಸ್’

ದ್ವಿಚಕ್ರ ವಾಹನಗಳನ್ನು ಮನೆ ಅಥವಾ ಕಚೇರಿಗಳಿಂದ ಸರ್ವಿಸ್ ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ, ದುರಸ್ತಿ ಮಾಡಿಸಿ ಸಕಾಲಕ್ಕೆ ಮರಳಿ ತಂದೊಪ್ಪಿಸುವ ಸೇವೆಗೆ ಸಂಬಂಧಿಸಿದ ಸ್ಟಾರ್ಟ್ಅಪ್ (ಹೊಸ ಉದ್ದಿಮೆ) ಆರಂಭಿಸಿರುವ ಸಚಿನ್ ಶೆಣೈ (27) ಅವರು, ಈಗ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಉತ್ಸಾಹದಲ್ಲಿದ್ದಾರೆ.
ಮಂಗಳೂರಿನ ಮಧ್ಯಮವರ್ಗದ ಕುಟುಂಬದಿಂದ ಬಂದಿರುವ ಸಚಿನ್, ತಮ್ಮ ಇತರ ಮೂವರು ಸಮಾನಮನಸ್ಕರ ಜತೆ ಸೇರಿಕೊಂಡು ಸ್ಥಾಪಿಸಿರುವ ಲೆಟ್ಸ್ಸರ್ವಿಸ್ (*etsService) ಹೊಸ ಪ್ರಯತ್ನಕ್ಕೆ ಆರಂಭಿಕ ಹಂತದಲ್ಲಿಯೇ ಬೆಂಗಳೂರಿನಲ್ಲಿ ಉತ್ತೇಜಕರ ಪ್ರತಿಕ್ರಿಯೆ ದೊರೆತಿರುವುದು ಅವರ ಉದ್ಯಮಶೀಲತೆಯ ಉತ್ಸಾಹ ಹೆಚ್ಚಿಸಿದೆ.
ಪೆರಕಂ ಎಂ, ಸಚಿನ್ ರಡ್ಡರ್, ಸಚಿನ್ ಶೆಣೈ ಮತ್ತು ಗಿರೀಶ್ ಗಂಗಾಧರ ತಮ್ಮ ಬಳಿಯಲ್ಲಿ ಇದ್ದ ಹಣ ಹೊಂದಿಸಿಕೊಂಡು ಆರಂಭಿಸಿರುವ ಈ ಸ್ಟಾರ್ಟ್ಅಪ್, ಈಗ ವಹಿವಾಟು ವಿಸ್ತರಿಸಲು ಹೊಸ ಸಂಪನ್ಮೂಲ ಸಂಗ್ರಹದಲ್ಲಿ ತೊಡಗಿದೆ.
ಬೆಂಗಳೂರಿನ ಸೇಂಟ್ ಜೋಸೆಫ್ನಲ್ಲಿ ಎಂಬಿಎ ಪದವಿ ಮುಗಿಸಿಕೊಂಡ ತಕ್ಷಣ ಐಬಿಎಂ ಸೇರಿ 3 ವರ್ಷ, ಆನಂತರ 1 ವರ್ಷ ಮೆಸ್ಟ್ರಿಕ್ ಸ್ಟ್ರೀಮ್ನಲ್ಲಿ ಕೆಲಸ ಮಾಡಿದ ಸಚಿನ್ ಅವರಲ್ಲಿ, ಇನ್ನೊಬ್ಬರ ಕೈಕೆಳಗೆ ಉದ್ಯೋಗಿಯಾಗಿ ಕೆಲಸ ಮಾಡುವ ಬದಲಿಗೆ, ಹಲವರ ಪಾಲಿಗೆ ಉದ್ಯೋಗದಾತ ಆಗಬೇಕೆನ್ನುವ ತಹ ತಹಿಕೆಯು ಅವರನ್ನು ‘ಸ್ಟಾರ್ಟ್ಅಪ್ ಸಾಹಸಿ’ಯನ್ನಾಗಿ ಮಾಡಿದೆ.
ತಮ್ಮ ಮಿತ್ರರೊಬ್ಬರು ಆರಂಭಿಸಿದ್ದ ಮಾರುಕಟ್ಟೆ ಮತ್ತು ವಹಿವಾಟು ಅಭಿವೃದ್ಧಿಗೆ ಸಂಬಂಧಿಸಿದ ಫ್ಲಿಟ್ ಡಾಟ್ ಇನ್ (www.f*it.in) ಸ್ಟಾರ್ಟ್ಅಪ್ನ ಸಹ ಸ್ಥಾಪಕರಾಗಿಯೂ ಕೆಲಸ ಮಾಡಿದ್ದಾರೆ. ಸಹ ಸ್ಥಾಪಕರ ಜತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಅಲ್ಲಿಂದ ಹೊರ ಬಂದ ಸಚಿನ್ ಅವರಿಗೆ, ಮೊದಲ ಸ್ಟಾರ್ಟ್ಅಪ್ನಲ್ಲಿನ ಅನುಭವವು, ಹೊಸ ಬಗೆಯ ಉದ್ದಿಮೆ ಆರಂಭಿಸಲು ಅಗತ್ಯವಾದ ವಿಶ್ವಾಸ ನೀಡಿದೆ.
ಮೂರು ತಿಂಗಳ ಹಿಂದೆಯಷ್ಟೇ ಆರಂಭಗೊಂಡಿರುವ ಈ ಸ್ಟಾರ್ಟ್ಅಪ್ ಬೆಂಗಳೂರಿನ ಬೈಕ್ ಸವಾರರಲ್ಲಿ ದಿನೇ ದಿನೇ ಜನಪ್ರಿಯವಾಗುತ್ತಿದೆ. ಎಲ್ಲ ಬಗೆಯ ಬೈಕ್ ತಯಾರಿಕಾ ಸಂಸ್ಥೆಗಳಿಗೆ ಸೇರಿದ ನಗರದಲ್ಲಿನ 100 ಅಧಿಕೃತ ದ್ವಿಚಕ್ರ ವಾಹನ ಸರ್ವಿಸ್ ಕೇಂದ್ರಗಳ ಜತೆ ಒಪ್ಪಂದ ಮಾಡಿಕೊಂಡಿರುವ ಸಂಸ್ಥೆಯು, ವಾಹನ ಮಾಲೀಕರಿಗೆ ಗುಣಮಟ್ಟದ ಸೇವೆ ನೀಡಲು ಸರ್ವರೀತಿಯಿಂದಲೂ ಶ್ರಮಿಸುತ್ತಿದೆ.
ಸಂಸ್ಥೆಯ ಸಿಬ್ಬಂದಿ ವೃತ್ತಿಪರತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಬೈಕ್ ಮಾಲೀಕರು ಪ್ರೋತ್ಸಾಹದ ಮಾತುಗಳನ್ನಾಡಿ ಬೆನ್ನು ತಟ್ಟಿರುವುದು ಉದ್ದಿಮೆ ವಿಸ್ತರಿಸಲು ಇವರಿಗೆ ಇನ್ನಷ್ಟು ಉತ್ತೇಜನ ನೀಡಿದೆ. ಬೆಂಗಳೂರಿನಲ್ಲಿನ ಬೈಕ್ ಮಾಲೀಕರು ಅದರಲ್ಲೂ ವಿಶೇಷವಾಗಿ ವೃತ್ತಿ ಸಂಬಂಧಿ ಕಾರಣಗಳಿಗೆ ನಗರಕ್ಕೆ ವಲಸೆ ಬಂದವರು ತಮ್ಮ ದ್ವಿಚಕ್ರ ವಾಹನಗಳನ್ನು ಯಾವಾಗ, ಎಲ್ಲಿ ಸರ್ವಿಸ್ ಮಾಡಿಸಬೇಕು ಎಂದು ಇನ್ನು ಮುಂದೆ ತಲೆಕೆಡಿಸಿಕೊಳ್ಳುವಂತಿಲ್ಲ.
ಹೊಸ ಊರಿನಲ್ಲಿ ಬೈಕ್ ಸರ್ವಿಸ್ನ ವಿವರಗಳನ್ನೆಲ್ಲ ಕಲೆ ಹಾಕಲು ಪುರುಸೊತ್ತು ಇಲ್ಲದವರು, ಅಸಂಘಟಿತ ವಲಯದ ಗ್ಯಾರೇಜ್ಗಳನ್ನು ಹುಡುಕಿಕೊಂಡು ಹೋಗಲಿಕ್ಕಾಗದವರು, ಸರ್ವಿಸ್ಗೆ ಬೈಕ್ ಒಯ್ಯಲೂ ಪುರುಸೊತ್ತಿಲ್ಲದವರಿಗೆ ಈ ‘ಲೆಟ್ಸ್ ಸರ್ವೀಸ್’ ಸೇವೆ ಆಪತ್ಬಾಂಧವನಂತೆ ನೆರವಾಗುತ್ತಿದೆ.
ಬೈಕ್ ಮಾಲೀಕರು ಸಂಸ್ಥೆಯ ಅಂತರ್ಜಾಲ ತಾಣ www.*etsservice.in ದಲ್ಲಿ ತಮ್ಮ ವೈಯಕ್ತಿಕ ವಿವರ ಭರ್ತಿ ಮಾಡಿದರೆ ಸಾಕು. ಸಂಸ್ಥೆಯ ಪರಿಣತ ರೈಡರ್ಸ್ಗಳು ಮನೆ ಅಥವಾ ಕಚೇರಿಗೆ ಬಂದು ಬೈಕ್ಗಳನ್ನು ಸರ್ವಿಸ್ ಕೇಂದ್ರಗಳಿಗೆ ಒಯ್ದು, ದುರಸ್ತಿ ನಂತರ ಮತ್ತೆ ತಲುಪಿಸುತ್ತಾರೆ.
ಇದೊಂದು ಅತ್ಯಂತ ಸುಲಭದ ಮತ್ತು ಕಿರಿಕಿರಿರಹಿತ ಸೇವೆಯಾಗಿದೆ. ಈ ಸೇವೆಗೆ ಪ್ರತಿಯಾಗಿ ಸಂಸ್ಥೆಯು ಮಾಲೀಕರಿಂದ ನಿರ್ದಿಷ್ಟ ಮೊತ್ತದ ಶುಲ್ಕ ವಸೂಲಿ ಮಾಡುತ್ತದೆ. ದ್ವಿಚಕ್ರ ವಾಹನ ಮಾಲೀಕರು ಇನ್ನು ಮುಂದೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ, ಬಿಡುವಿಲ್ಲದ ಕೆಲಸಗಳಿಂದ ವಾರಾಂತ್ಯದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ಅಥವಾ ಕಾಲ ಮಿತಿಯೊಳಗೆ ಕೆಲಸ ಪೂರ್ಣಗೊಳಿಸುವ ಧಾವಂತದಲ್ಲಿದ್ದಾಗ ಬೈಕ್ಗಳನ್ನು ಲೆಟ್ಸ್ಸರ್ವಿಸ್ನ ಸುಪರ್ದಿಗೆ ಕೊಟ್ಟು ನಿಶ್ಚಿಂತೆಯಿಂದ ಇರಬಹುದು.
ಬಿಡುವಿಲ್ಲದ ಕೆಲಸದ ಮಧ್ಯೆ ತಮ್ಮ ಬೈಕ್ ಸರ್ವೀಸ್ಗೆ ಕೊಡುವುದನ್ನೇ ಮರೆತಿದ್ದ ಸಚಿನ್ ಅವರಿಗೆ ಒಂದು ದಿನ ಬೈಕ್ ಕೈಕೊಟ್ಟು ದುಬಾರಿ ದುರಸ್ತಿಯ ಬಿಲ್ ಕೈಸೇರಿದಾಗ, ಇಂತಹದೇ ಸಮಸ್ಯೆಯನ್ನು ಪ್ರತಿ ದಿನ ಎದುರಿಸುವ ಕೆಲಸ ದಾಹಿಗಳ, ಒತ್ತಡದಲ್ಲಿ ಕೆಲಸ ಮಾಡುವವರ ಸಮಸ್ಯೆ ದೂರ ಮಾಡಲು ಪರಿಹಾರ ಕಂಡುಕೊಳ್ಳುವುದೇ ಈ ಸ್ಟಾರ್ಟ್ಅಪ್ ಆರಂಭಿಸಲು ಪ್ರೇರಣೆ ನೀಡಿತು ಎಂದು ಸಚಿನ್ ಶೆಣೈ ಅಭಿಪ್ರಾಯಪಡುತ್ತಾರೆ.
300 ಬೈಕ್ ಮಾಲೀಕರ ಸಮೀಕ್ಷೆ ನಡೆಸಿ ಬೈಕ್ ಸರ್ವೀಸ್ ಮಾರುಕಟ್ಟೆಯ ಒಳ ಹೊರಗನ್ನು ಅಭ್ಯಸಿಸಿ ಈ ಸ್ಟಾರ್ಟ್ಅಪ್ನ ನೀಲನಕ್ಷೆ ರೂಪಿಸಿ ಕಾರ್ಯರೂಪಕ್ಕೆ ತಂದಿದ್ದಾರೆ.
ಸಚಿನ್ ಶೆಣೈ ಅವರ ಜತೆಗಿನ ಸಂದರ್ಶನದ ಆಯ್ದ ಭಾಗಗಳು.
*ಇಂತಹ ಪ್ರಯತ್ನ ಇದೇ ಮೊದಲೇ?
ದೇಶದ ಇತರ ನಗರಗಳಲ್ಲಿ ಈ ತರಹದ ಸ್ಟಾರ್ಟ್ಅಪ್ ಇರುವ ಬಗ್ಗೆ ಮಾಹಿತಿ ಇಲ್ಲ. ಇದೇ ಮೊದಲು ಎಂದು ನಮಗೆ ಅನಿಸುತ್ತಿದೆ.
*ಈ ಸೇವೆಯ ಮಾರುಕಟ್ಟೆ ಹೇಗಿದೆ?
ದೇಶಿ ಮಾರುಕಟ್ಟೆಯು 5 ವರ್ಷಗಳಲ್ಲಿ ₹ 6,000 ಸಾವಿರ ಕೋಟಿಗಳಷ್ಟಾಗಲಿದೆ. ಹೆಚ್ಚುವರಿ ಸೇವೆ ಸೇರಿಸುತ್ತ ಹೋದಂತೆ ಈ ಮೊತ್ತ ಇನ್ನಷ್ಟು ಹೆಚ್ಚಬಹುದು.
*ಹೂಡಿಕೆಗೆ ಇನ್ನಷ್ಟು ಹಣದ ಅಗತ್ಯ ಇದೆಯೇ?
ಗ್ರಾಹಕರಿಗೆ ಒದಗಿಸುವ ಸೇವೆಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಇದಾಗಿರುವುದರಿಂದ ವೆಚ್ಚದ ಪ್ರಮಾಣ ಹೆಚ್ಚಿಗೆ ಇರುತ್ತದೆ. ಹೀಗಾಗಿ ಆರಂಭದಲ್ಲಿ ಹಣದ ಅಗತ್ಯ ಹೆಚ್ಚಿಗೆ ಇದ್ದೇ ಇರುತ್ತದೆ.
*ಅಧಿಕೃತ ಡೀಲರ್ಗಳಿಂದ ಪ್ರತಿಕ್ರಿಯೆ ಹೇಗಿದೆ?
ಉತ್ತೇಜಕರವಾಗಿದೆ. ಬೈಕ್ ಮಾಲೀಕರು ಈ ಸೇವೆ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿರುವುದರಿಂದ ಅಧಿಕೃತ ಡೀಲರ್ಗಳು ಲೆಟ್ಸ್ಸರ್ವಿಸ್ನಿಂದ ಬರುವ ಬೈಕ್ಗಳಿಗೆ ಆದ್ಯತೆ ಮೇರೆಗೆ ಸೇವೆ ಒದಗಿಸುತ್ತಿದ್ದಾರೆ.
*ಸೇವಾ ಅವಧಿ ಎಷ್ಟು?
ಬೆಳಿಗ್ಗೆ 8 ರಿಂದ ರಾತ್ರ 8ರವರೆಗೆ ಮಾತ್ರ
*ಬ್ರೆಕ್ಡೌನ್ಗೆ ಸೇವೆ ದೊರೆಯುವುದೇ?
ಖಂಡಿತ. ಎಂಜಿನ್ ಸಮಸ್ಯೆ ಸೇರಿದಂತೆ ರಸ್ತೆ ಮಧ್ಯೆ ಸ್ಥಗಿತಗೊಂಡು ನಿಲ್ಲುವ ವಾಹನಗಳಿಗೆ ತುರ್ತಾಗಿ ಸೇವೆ ಸಲ್ಲಿಸಲು ನಮ್ಮ ಸಿಬ್ಬಂದಿ ಸಿದ್ಧ ಇದ್ದಾರೆ.
*ಸೇವೆಗೆ ಹೆಚ್ಚು ಬೇಡಿಕೆ ಕಂಡುಬರುವ ಪ್ರದೇಶಗಳು ಯಾವವು?
ಕೋರಮಂಗಲ, ಸರ್ಜಾಪುರ, ಬೆಳಂದೂರು, ಎಲೆಕ್ಟ್ರಾನಿಕ್ ಸಿಟಿ. ವೈಟ್ಫೀಲ್ಡ್.
*ಬೆಂಗಳೂರು ನಗರದಾದ್ಯಂತ ಸೇವೆ ವಿಸ್ತರಿಸಲು ಇನ್ನೆಷ್ಟು ಸಮಯ ಬೇಕಾಗಬಹುದು?
ಇನ್ನೂ 10 ತಿಂಗಳು.
*ದುಬಾರಿ ವೆಚ್ಚದ ಬೈಕ್ಗಳಿಗೆ ಸೇವೆ ಇದೆಯೇ?
ಇಲ್ಲ. ₹ 3 ಲಕ್ಷದಿಂದ ಹೆಚ್ಚಿನ ಮೊತ್ತದ ದುಬಾರಿ ಬೈಕ್ಗಳಿಗೆ ಸದ್ಯಕ್ಕೆ ಈ ಸೇವೆ ಲಭ್ಯ ಇಲ್ಲ.
*ಇತರ ಹೆಚ್ಚುವರಿ ಸೇವೆಗಳು ಯಾವವು?
ವಿಮೆ ಪಾಲಿಸಿ ನವೀಕರಣ, ವಾಯು ಮಾಲಿನ್ಯ ಪರೀಕ್ಷೆ ಮಾಡಿಸಲೂ ನೆರವಾಗುತ್ತಿದ್ದೇವೆ.
*ಇತರ ನಗರಗಳಿಗೆ ಸೇವೆ ವಿಸ್ತರಣೆ ಉದ್ದೇಶ ಇದೆಯೇ?
ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ವಿಸ್ತರಿಸುವ ಆಲೋಚನೆ ಇದೆ.
*ಸಿಬ್ಬಂದಿಯ ಸುರಕ್ಷತೆ ಹೇಗೆ?
ಸಿಬ್ಬಂದಿಯ ಪೂರ್ವಾಪರ ತಿಳಿದುಕೊಂಡೇ ನೇಮಿಸಿಕೊಳ್ಳಲಾಗುತ್ತಿದೆ. ಅವರಿಗೆ ಗುರುತಿನ ಕಾರ್ಡ್ ನೀಡಲಾಗಿರುತ್ತದೆ. ಬೈಕ್ ತೆಗೆದುಕೊಂಡು ಬರಲು ಹೋಗುವ ಮುಂಚೆಯೇ ಮಾಲೀಕರಿಗೆ ಇವರ ಹೆಸರು,ಮೊಬೈಲ್ ಸಂಖ್ಯೆ ಬಗ್ಗೆ ಎಸ್ಎಂಎಸ್ ಮಾಹಿತಿ ರವಾನೆಯಾಗಿರುತ್ತದೆ. ಮಾಲೀಕರು ನಿಗದಿ ಪಡಿಸಿದ ಸಮಯಕ್ಕೆ ರೈಡರ್ಸ್ಗಳು ಹೋಗುತ್ತಾರೆ.
*ದುರಸ್ತಿಯ ಹಣ ಪಾವತಿ ಹೇಗೆ?
ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದು. ಚೆಕ್ ಮೂಲಕವೂ ಹಣ ಸ್ವೀಕರಿಸಲಾಗುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.