ಸೋಮವಾರ, ಮಾರ್ಚ್ 27, 2023
24 °C
ನಿಮ್ಮೂರಲ್ಲೂ ಇದ್ದಾರಾ ಬಿಜಿನೆಸ್‌‌ ಕರೆಸ್ಪಾಂಡೆಂಟ್?

ಬ್ಯಾಂಕ್‌ ಸಾಥಿ; ಗ್ರಾಮೀಣರ ಸಂಗಾತಿ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಬ್ಯಾಂಕ್‌ ಸಾಥಿ; ಗ್ರಾಮೀಣರ ಸಂಗಾತಿ

ದೇಶದ ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ಒದಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ‘ಜನಧನ’ ಯೋಜನೆಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಟ್ಯಂತರ ಮಂದಿ ಹೊಸದಾಗಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ತೆರೆದಿದ್ದಾರೆ. ಕರ್ನಾಟಕದಲ್ಲಿಯೂ ಈ ಸಂಖ್ಯೆ ಅರ್ಧ ಲಕ್ಷವನ್ನು ದಾಟಿದೆ.

ಹೊಸದಾಗಿ ಬ್ಯಾಂಕ್‌ ಖಾತೆ ತೆರೆದವರಲ್ಲಿ ಗ್ರಾಮೀಣ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹೆಚ್ಚಿನ ಗ್ರಾಮಗಳಲ್ಲಿ ಬ್ಯಾಂಕ್‌ ಶಾಖೆಗಳೂ ಇಲ್ಲ. ಬ್ಯಾಂಕಿಂಗ್ ಸೇವೆಗಳೂ ಸುಲಭದಲ್ಲಿ ಲಭ್ಯವಿಲ್ಲ.



ಬ್ಯಾಂಕ್‌ ಸೌಲಭ್ಯ ಪಡೆಯಲು ಕೆಲವು ಗ್ರಾಮಗಳವರು 10 ಕಿ.ಮೀ.ಗೂ ಅಧಿಕ ದೂರ ನಡೆದು ಹೋಗಬೇಕಿದೆ. ತಮ್ಮ ಖಾತೆಯಲ್ಲಿರುವ ಹಣವನ್ನು ಪಡೆದುಕೊಳ್ಳಲು ಇಲ್ಲವೇ ಖಾತೆ ಹಣ ಜಮಾ ಮಾಡಲೂ ಸಹ ಬ್ಯಾಂಕ್ ಶಾಖೆ ಅರಸಿ ಸಮೀಪದ ಪಟ್ಟಣಗಳಿಗೇ ಹೋಗಬೇಕಾದ ಪರಿಸ್ಥಿತಿ ಇದೆ.



ಒಂದು ಸಾವಿರವೋ, ಎರಡು ಸಾವಿರವೋ ಹಣ ಇಡಲು ಅಥವಾ ತುರ್ತು ಕೆಲಸಕ್ಕೆಂದು ಹಣ ತೆಗೆಯಲು ಒಂದಿಡೀ ದಿನವನ್ನು ಮೀಸಲಿಟ್ಟು, ಊರಲ್ಲಿನ ಎಲ್ಲ ಕೆಲಸ ಬಿಟ್ಟು ಪರದಾಡಬೇಕಾದ ಪರಿಸ್ಥಿತಿ ಇದೆ. ರೈತರು ವ್ಯವಸಾಯದ ಕೆಲಸಗಳಿಗೆ ವಿರಾಮ ಹೇಳಿ ಪಟ್ಟಣಕ್ಕೆ ಹೋಗಿ ಬರಬೇಕು. ಬಸ್‌ ಪ್ರಯಾಣ, ಊಟ ತಿಂಡಿ ಎಂದು ಒಂದಿಷ್ಟು ಖರ್ಚು ಬೇರೆ.



ಇನ್ನು ಕೆಲ ಗ್ರಾಮಗಳಲ್ಲಿ ಬ್ಯಾಂಕ್‌ಗಳ ಶಾಖೆಗಳಿವೆ. ಆದರೆ, ವಹಿವಾಟು ಕಡಿಮೆ. ಜತೆಗೆ ದೂರವಾಣಿ, ವಿದ್ಯುತ್‌, ಕಟ್ಟಡ ಬಾಡಿಗೆ, ಸಿಬ್ಬಂದಿ ವೇತನ, ಭದ್ರತಾ ಸಿಬ್ಬಂದಿ ಎಂದೆಲ್ಲಾ ಹೆಚ್ಚು ಖರ್ಚು. ಹೀಗಾಗಿ ನಷ್ಟ ಅನುಭವಿಸುತ್ತಿವೆ.



ಅಷ್ಟೇ ಅಲ್ಲ; ಕೆಲ ಹಳ್ಳಿಗಳಲ್ಲಿ ಸೌಲಭ್ಯದ ಕೊರತೆಯೂ ಇದೆ. ಬ್ಯಾಂಕ್‌ ಸಿಬ್ಬಂದಿ ಇಂತಹ ಸ್ಥಳದಲ್ಲಿರುವ ಶಾಖೆಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಬ್ಯಾಂಕ್‌ಗಳೂ ಹಳ್ಳಿಗಳಲ್ಲಿ ಶಾಖೆ ತೆರೆಯಲು ಹಿಂದೆ ಮುಂದೆ ನೋಡುತ್ತಿವೆ. ಕೆಲ ಹಳ್ಳಿಗಳಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಸೌಲಭ್ಯವೂ ಇರುವುದಿಲ್ಲ.



ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ ಉದಾಹರಣೆ ತೆಗೆದುಕೊಳ್ಳಿ. ಈ ಜಿಲ್ಲೆಗಳ ಕಾಫಿ ತೋಟಗಳಲ್ಲಿ ಲಕ್ಷಾಂತರ ಮಂದಿ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಕೆಲ ಕಾಫಿ ತೋಟಗಳು ದುರ್ಗಮ ಪ್ರದೇಶದಲ್ಲಿವೆ. ಅಲ್ಲಿಗೆ ಬಸ್‌ ಸಂಚಾರವೂ ಅಷ್ಟಕಷ್ಟೆ. ಇಲ್ಲಿನ ಕೆಲ ಗ್ರಾಮಗಳಲ್ಲಿ ಸಾವಿರಾರು ಮಂದಿ ನೆಲೆಸಿದ್ದಾರೆ.



ಉದಾಹರಣೆಗೆ ಚಿಕ್ಕಮಗಳೂರು ಜಿಲ್ಲೆಯ ಗಿರಿಖಾನ್‌, ಅತ್ತಿಗುಂಡಿ, ಗುಡ್ಡದೂರು, ಇಳೇಖಾನ್ ಮುಂತಾದ ಗ್ರಾಮಗಳು ಜನರು ಬ್ಯಾಂಕ್ ಹುಡುಕಿಕೊಂಡು ಮೂಡಿಗೆರೆ, ಆಲ್ದೂರು ಅಥವಾ ಚಿಕ್ಕಮಗಳೂರಿಗೇ ಹೋಗಿಬರಬೇಕು. ಇಲ್ಲಿರುವವರು ಹೆಚ್ಚಿನವರು ಕೃಷಿ ಕೂಲಿ ಕಾರ್ಮಿಕರು. ಬ್ಯಾಂಕ್‌ಗೆ ಹೋಗಬೇಕೆಂದು ಒಂದು ದಿನ ರಜೆ ಹಾಕಿದರೆ ಅಂದಿನ ಸಂಬಳಕ್ಕೆ ಕತ್ತರಿ.



ನೇರ ಹಣ ವರ್ಗಾವಣೆ

ಕೇಂದ್ರ ಸರ್ಕಾರವು ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ತೆರೆಯುವ ಅವಕಾಶ ಕಲ್ಪಿಸುತ್ತಿರುವುದರ ಜತೆಗೇ ವಿದ್ಯಾರ್ಥಿ ವೇತನ, ಪಿಂಚಣಿ, ಸಬ್ಸಿಡಿ, ಪ್ರೋತ್ಸಾಹ ಧನವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೇ ನೇರವಾಗಿ ವರ್ಗಾಯಿಸುತ್ತಿದೆ.  ಇದಕ್ಕಾಗಿಯೇ ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್‌ (ಡಿಬಿಟಿ) ಯೋಜನೆಯನ್ನು 2013ರ ಜನವರಿ 1ರಿಂದಲೇ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದರಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ನೀಡುವ ಸಬ್ಸಿಡಿಯೂ ಸೇರಿದೆ.



ಡಿಬಿಟಿ ಯೋಜನೆಯ ಉದ್ದೇಶ ಒಳ್ಳೆಯದಾಗಿದ್ದರೂ ಬ್ಯಾಂಕ್‌ ಖಾತೆ ಹೊಂದಿಲ್ಲದ ಗ್ರಾಮೀಣ ಭಾಗದ ಜನರು ಮಾತ್ರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮೀಣ ಜನರಿಗೆ ಆಪ್ತಮಿತ್ರನಂತೆ ನೆರವಾಗುತ್ತಿದ್ದಾರೆ ಬ್ಯಾಂಕ್‌ಗಳ ಬಿಜಿನೆಸ್‌ ಕರೆಸ್ಪಾಂಡೆಂಟ್ಸ್‌ (ಬಿ.ಸಿ).



ಅನಕ್ಷರತೆ ಸಮಸ್ಯೆ

ಇನ್ನು ಕೆಲವರಿಗೆ ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಿಂದ ಹಣ ಪಡೆಯಲು ಅರ್ಜಿ ಭರ್ತಿ ಮಾಡಲೂ ಗೊತ್ತಿಲ್ಲ. ವಿದ್ಯಾವಂತರಿಗೇ ಬ್ಯಾಂಕ್‌ ವ್ಯವಹಾರದ ಕೆಲವೊಂದು ವಿಚಾರಗಳು ಗೊತ್ತಿರುವುದಿಲ್ಲ, ಇನ್ನು ಅವಿದ್ಯಾವಂತರ ಪಾಡು ಹೇಳುವಂತೆಯೇ ಇಲ್ಲ. ಜತೆಗೆ ಇಂತಹವರಿಗೆ ಬ್ಯಾಂಕ್‌ನ ಸಹಕಾರವೂ ಕಡಿಮೆ. ಹಾಗಾಗಿ ಗಂಟೆಗಟ್ಟಲೇ ಕಾಯಬೇಕು, ಮತ್ತೊಬ್ಬರ ನೆರವಿಗಾಗಿ ಅಂಗಲಾಚಬೇಕಾದ ಸ್ಥಿತಿ ಇದೆ. ಅದರಲ್ಲೂ ಸಾಲಕ್ಕೆ ಅರ್ಜಿ ಸಲ್ಲಿಸಬೇಕಾದಾಗ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ.



ಇದೋ ಬಿಜಿನೆಸ್‌ ಕರೆಸ್ಪಾಂಡೆಂಟ್‌

ಕಡಿಮೆ ಜನರಿರುವ ಹಳ್ಳಿಗಳಿಗೂ ಪ್ರಾಥಮಿಕ ಹಂತದ ಬ್ಯಾಂಕಿಂಗ್‌ ಸೌಲಭ್ಯಗಳಾದರೂ  ದೊರೆಯಲಿದೆ ಎಂಬ ಉದ್ದೇಶದಿದಂ ಆರಂಭಿಸಿರುವ ಯೋಜನೆಯೇ ಬ್ಯಾಂಕ್‌ಗಳ ಬಿಜಿನೆಸ್‌ ಕರೆಸ್ಪಾಂಡೆಂಟ್‌. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಬಿಜಿನೆಸ್‌‌ ಕರೆಸ್ಪಾಂಡೆಂಟ್‌ (ಬ್ಯಾಂಕ್‌ನ ವ್ಯವಹಾರಿಕ ಪ್ರತಿನಿಧಿಗಳು) ಮತ್ತು ಬಿಜಿನೆಸ್‌‌ ಕರೆಸ್ಪಾಂಡೆಂಟ್‌ ಏಜೆಂಟ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಇವರು ಗ್ರಾಮೀಣ ಪ್ರದೇಶದ ಜನರ ಮನೆ ಬಾಗಿಲಿಗೇ ಹೋಗಿ ಬ್ಯಾಂಕಿಂಗ್‌ ಸೌಲಭ್ಯ ಒದಗಿಸುತ್ತಿದ್ದಾರೆ.



ಬಿಜಿನೆಸ್‌‌ ಕರೆಸ್ಪಾಂಡೆಂಟ್‌ಗಳು ಹಳ್ಳಿಗಾಡಿನ ಜನರ ಮನೆ ಬಾಗಿಲಿಗೆ ಹೋಗಿ ಖಾತೆ ತೆರೆಯಲು ನೆರವಾಗುವುದಷ್ಟೇ ಅಲ್ಲ, ಅವರಿಗೆ ಬೇಕೆಂದಾಗ ಖಾತೆಯಿಂದ ಹಣ ತೆಗೆದುಕೊಳ್ಳಲು, ಜಮಾ ಮಾಡಲು ಕೂಡ ನೆರವಾಗುತ್ತಾರೆ. ಇವರನ್ನು ಬ್ಯಾಂಕ್‌ಗಳೇ ಅಧಿಕೃತವಾಗಿ ಈ ಕೆಲಸಕ್ಕೆ ನೇಮಿಸಿರುತ್ತವೆ. ಬ್ಯಾಂಕ್‌ನ ಅಧಿಕೃತ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಾರೆ. ಇವರನ್ನು ಬ್ಯಾಂಕ್‌ ಸಾಥಿ ಎಂದೂ ಕರೆಯಲಾಗುತ್ತದೆ.

ಬ್ಯಾಂಕ್‌ ನೀಡಿರುವ (ವಾಣಿಜ್ಯ ಮಳಿಗೆಗಳಲ್ಲಿ ಇರುವ ಪಾಯಿಂಟ್‌ ಆಫ್‌ ಸೇಲ್‌ ಮೆಷಿನ್‌ಗಳಂತಹ) ಎಲೆಕ್ಟ್ರಾನಿಕ್‌ ಉಪಕರಣದ ಮೂಲಕ ಬಿಜಿನೆಸ್‌‌ ಕರೆಸ್ಪಾಂಡೆಂಟ್‌ಗಳು ಬ್ಯಾಂಕ್‌ ಮತ್ತು ಖಾತೆದಾರರ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಾರೆ.



ಖಾತೆದಾರ ಅನಕ್ಷರಸ್ತನಾಗಿದ್ದರೂ ಹೆಬ್ಬೆಟ್ಟು ಒತ್ತಿ ಸುಲಭವಾಗಿ ವ್ಯವಹಾರ ನಡೆಸಬಹುದು, ಹಣ ಕಟ್ಟಬಹುದು ಅಥವಾ ತೆಗೆಯಬಹುದು. ಮೊಬೈಲ್‌ ಫೋನ್‌ ಇದ್ದರೆ ಪ್ರತಿ ವಹಿವಾಟಿಗೂ ಸಂದೇಶ ಬರುತ್ತದೆ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಬ್ಯಾಂಕಿಂಗ್‌ ಸೇವೆ ನೀಡಲೆಂದೇ ಬ್ಯಾಂಕ್‌ಗಳು ಗ್ರಾಹಕರ ಸೇವಾ ಕೇಂದ್ರಗಳನ್ನೂ ಸ್ಥಾಪಿಸುತ್ತಿವೆ. ಇಲ್ಲಿನ ಬ್ಯಾಂಕ್‌ ಪ್ರತಿನಿಧಿಗಳಿಗೆ ಬಯೋಮೆಟ್ರಿಕ್‌ ಸಾಧನವನ್ನೂ ನೀಡಲಾಗಿರುತ್ತದೆ.



ಗ್ರಾಮೀಣ ಭಾಗದಲ್ಲಿ ಬ್ಯಾಂಕಿಂಗ್‌ ವಹಿವಾಟುಗಳನ್ನು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಬಿಜಿನೆಸ್‌‌ ಕರೆಸ್ಪಾಂಡೆಂಟ್‌ಗಳಿಗೆ ತರಬೇತಿ ಕೂಡ ನೀಡಲಾಗಿರುತ್ತದೆ. ವಹಿವಾಟಿನ ಪ್ರಮಾಣ ಅನುಸರಿಸಿ ಇವರಿಗೆ ಬ್ಯಾಂಕ್‌ನಿಂದ ಕಮಿಷನ್‌ ಲಭಿಸುತ್ತದೆ. ದೇಶದಾದ್ಯಂತ ಸದ್ಯ ಎರಡು ಲಕ್ಷಕ್ಕೂ ಅಧಿಕ ಬಿಜಿನೆಸ್‌‌ ಕರೆಸ್ಪಾಂಡೆಂಟ್‌ಗಳಿದ್ದಾರೆ.



ಯಾರು ಬಿ.ಸಿ ಆಗಬಹುದು?

ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಗುಂಪುಗಳು, ಲಘು ಹಣಕಾಸು ನೆರವು ಸಂಸ್ಥೆಗಳು, ಅಂಚೆ ಕಚೇರಿ, ವಿಮಾ  ಏಜೆಂಟರು, ಗ್ರಾಮ ಪಂಚಾಯಿತಿ, ಸಹಕಾರ ಸಂಘಗಳು, ರೈತ ಸಮುದಾಯ ಸಂಘ ಮೊದಲಾದ ಸಂಸ್ಥೆಗಳು, ಅದರ ಸಿಬ್ಬಂದಿಗಳು, ಬ್ಯಾಂಕ್‌ ವಿಧಿಸುವ ಕೆಲ ಷರತ್ತುಗಳನ್ನು ಪಾಲಿಸಿದರೆ ಬ್ಯಾಂಕ್‌ನ ವ್ಯವಹಾರಿಕ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಬಹುದು.



ಬಿ.ಸಿ ಕೆಲಸವೇನು?

ಹಳ್ಳಿಯ ಜನರಲ್ಲಿ ಬ್ಯಾಂಕ್‌ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು, ಹಣ ಉಳಿತಾಯ ಮಹತ್ವದ ಬಗ್ಗೆ ತಿಳಿಹೇಳುವುದು, ಬ್ಯಾಂಕ್‌ ಖಾತೆ ತೆರೆಯಲು ನೆರವಾಗುವುದು, ಸಾಲ ಪಡೆಯಲು ಅರ್ಜಿಗಳನ್ನು ಭರ್ತಿ ಮಾಡಿಸಿ ಬ್ಯಾಂಕ್‌ಗೆ ನೀಡುವುದು. ಸಾಲ ದೊರಕಿಸಿ ಕೊಡುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದು.



ಉದಾಹರಣೆಗೆ ಮನೆ ವಿಳಾಸ, ಸ್ವತ್ತಿನ ವಿವರವನ್ನು ಪರಿಶೀಲಿಸುವುದು. ಅಷ್ಟೇ ಅಲ್ಲ; ಸಾಲವನ್ನು ಬ್ಯಾಂಕ್‌ಗೆ ಮರಳಿಸುವಲ್ಲಿ ಸಹಾಯ ಮಾಡುವುದೂ ಬಿಜಿನೆಸ್‌‌ ಕರೆಸ್ಪಾಂಡೆಂಟ್‌ ಕೆಲಸವೇ ಆಗಿರುತ್ತದೆ. ಅದಕ್ಕಾಗಿ ಗ್ರಾಹಕರನ್ನು ನೋಂದಾಯಿಸಿಕೊಂಡು ಗ್ರಾಹಕರ ಸೇವಾ ಕೇಂದ್ರದಲ್ಲಿ ವಹಿವಾಟು ನಡೆಸಲು ಅನುವು ಮಾಡಿಕೊಡಬೇಕು. ಇದಕ್ಕೂ ಮುನ್ನ ಬ್ಯಾಂಕ್‌ಗೆ ಬಿಜಿನೆಸ್‌ ಕರೆಸ್ಪಾಂಡೆಂಟ್‌ಗಳು ನಿಗದಿತ ಮೊತ್ತವನ್ನು ಠೇವಣಿ ಇಡಬೇಕಾಗುತ್ತದೆ. ಅಷ್ಟೆ ಅಲ್ಲ; ವಹಿವಾಟು ನಡೆಸುವ ಗ್ರಾಹಕರ ಸೇವಾ ಕೇಂದ್ರಗಳ ಪಟ್ಟಿಯನ್ನು ಬ್ಯಾಂಕ್‌ಗೆ ನೀಡಬೇಕಿರುತ್ತದೆ.



2011ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಸ್ವಾಭಿಮಾನ್‌’ ಯೋಜನೆ ಕೂಡ ಇದೇ ದೃಷ್ಟಿಕೋನ ಹೊಂದಿತ್ತು. ಇಷ್ಟರವರೆಗೆ ಒಂದು ಬ್ಯಾಂಕ್‌ ನೇಮಿಸಿದ ಬಿಜಿನೆಸ್‌‌ ಕರೆಸ್ಪಾಂಡೆಂಟ್‌ ಆ ಬ್ಯಾಂಕ್‌ಗೆ ಮಾತ್ರವೇ ಸೇವೆ ಸಲ್ಲಿಸಬೇಕಿತ್ತು.



ಆದರೆ, ಈಗ ಯಾವುದೇ ಬಿಜಿನೆಸ್‌‌ ಕರೆಸ್ಪಾಂಡೆಂಟ್‌ ಯಾವುದೇ ಬ್ಯಾಂಕ್‌ನ ಸೌಲಭ್ಯವನ್ನು ಜನರಿಗೆ ತಲುಪಿಸಲು ಅವಕಾಶ ಮಾಡಿಕೊಡುವ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಯೋಜನೆ ರೂಪಿಸುತ್ತಿದೆ. ಬ್ಯಾಂಕ್‌ಗಳ ಎಟಿಎಂ ವ್ಯವಸ್ಥೆ ಮಾದರಿಯಲ್ಲಿ ಈ ಯೋಜನೆಯನ್ನು ಸದ್ಯದಲ್ಲಿಯೇ ಜಾರಿಗೆ ತರಲಾಗುವುದು ಎಂದು ಹೇಳಿದೆ.



ಸ್ಟೇಟ್‌ ಬ್ಯಾಂಕ್‌ ಆಫ್‌‌ ಇಂಡಿಯಾ 2013–14ರಲ್ಲಿ ದೇಶದಾದ್ಯಂತ 45,487 ಬಿಜಿನೆಸ್‌‌ ಕರೆಸ್ಪಾಂಡೆಂಟ್‌ ಗ್ರಾಹಕರ ಸೇವಾ ಕೇಂದ್ರಗಳನ್ನು ನಿರ್ಮಿಸಿದೆ. ಬಿಜಿನೆಸ್‌‌ ಕರೆಸ್ಪಾಂಡೆಂಟ್‌ಗಳಿಗೆ ತಂತ್ರಜ್ಞಾನದ ನೆರವನ್ನೂ ನೀಡಿದೆ. 2014ರಲ್ಲಿ ಬಿಸಿನೆಟ್‌ ಕರೆಸ್ಪಾಂಡೆಂಟ್‌ಗಳ ನೆರವಿನಿಂದ ₹22,525 ಕೋಟಿ ವ್ಯವಹಾರವನ್ನು ನಡೆಸಿದೆ.

*

‘ನನಗೂ ಕೆಲಸ ಸಿಕ್ಕಂತಾಗಿದೆ’

ಮೈಸೂರು ಜಿಲ್ಲೆಯ ಕೆ.ಆರ್‌. ನಗರ ತಾಲ್ಲೂಕಿನ ಗೊರಗುಂಡಿ, ಚಾಮಲಪುರ, ಕನಕನಗರ, ತಿಪ್ಪೂರಿನಲ್ಲಿ ಎಸ್‌ಬಿಐನ ಬಿಜಿನೆಸ್‌ ಕರೆಸ್ಪಾಂಡೆಂಟ್‌ ಆಗಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಭಾಗದಲ್ಲಿ ಬ್ಯಾಂಕ್‌ ಗಳು ಇಲ್ಲ. ಬ್ಯಾಂಕ್‌ನ ಸೌಲಭ್ಯ ಪಡೆದುಕೊ ಳ್ಳಲು ಜನರು ತುಂಬಾ ಕಷ್ಟಪಡುತ್ತಿದ್ದರು. ಈಗ ಈ ಭಾಗದ ಜನರ ಸಮಸ್ಯೆ ನೀಗಿದೆ. ನನಗೂ ಕೆಲಸ ಸಿಕ್ಕಿದಂತಾಗಿದೆ.

–ಟಿ.ಎನ್‌. ಮಹದೇವ,

ಬಿಜಿನೆಸ್‌ ಕರೆಸ್ಪಾಂಡೆಂಟ್‌

‘ಖಾತೆ ತೆರೆಯಲು ನೆರವು’

ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿಯಲ್ಲಿ ಬಿಜಿನೆಸ್‌ ಕರೆಸ್ಪಾಂಡೆಂಟ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಗ್ರಾಮದಲ್ಲಿ ಸುಮಾರು ಮೂರು ಸಾವಿರ ಜನ ಇದ್ದಾರೆ. ಖಾತೆ ತೆರೆಯಲು ಸಹಾಯ ಮಾಡುತ್ತಿದ್ದೇನೆ. ಪಿಂಚಣಿ ತಲುಪಿಸುತ್ತೇನೆ. ನನಗೂ ಕಮಿಷನ್‌ ಸಿಗುತ್ತದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದವರು ಎಲೆಕ್ಟ್ರಾನಿಕ್‌ ಉಪಕರಣ ನೀಡಿದ್ದಾರೆ.

–ನರಸಿಂಹಮೂರ್ತಿ,

ಬಿಜಿನೆಸ್‌ ಕರೆಸ್ಪಾಂಡೆಂಟ್‌




‘ಈಗ ದೂರದೂರಿಗೆ ನಡೆಯುವುದು ತಪ್ಪಿದೆ’

ನನ್ನದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೊಣಸೂರು ಗ್ರಾಮ. ನಮ್ಮೂರಲ್ಲಿ ಬ್ಯಾಂಕ್‌ ಇಲ್ಲ. ಆದರೂ ಬ್ಯಾಂಕ್‌ನ ಎಲ್ಲಾ ಸೌಲಭ್ಯ ಸಿಗುತ್ತದೆ. ಖಾತೆ ತೆರೆಸಿ, ಬ್ಯಾಂಕ್‌ ಕಾರ್ಡ್‌ ಕೂಡ ನೀಡಿದ್ದಾರೆ. ಈ ವ್ಯವಸ್ಥೆ ಇರದಿದ್ದರೆ ನಾವೆಲ್ಲಾ 10 ಕಿ.ಮೀ. ನಡೆದು ಬ್ಯಾಂಕ್‌ಗೆ ಹೋಗಿ ಸೌಲಭ್ಯ ಪಡೆದುಕೊಳ್ಳಬೇಕಿತ್ತು. ಈಗ ಸುಲಭವಾಗಿದೆ, ಅಡುಗೆ ಅನಿಲ ಸಬ್ಸಿಡಿ ಪಡೆಯಲು ಸಹಾಯವಾಗಿದೆ.

–ಮಲ್ಲೇಶಯ್ಯ,

ಬ್ಯಾಂಕ್‌ ಗ್ರಾಹಕ


*

ಬಿಜಿನೆಸ್‌ ಕರೆಸ್ಪಾಂಡೆಂಟ್‌ಗೆ ಬೇಡಿಕೆ

ಬ್ಯಾಂಕ್‌ಗಳ ಸಾಥಿಯಾಗಿ ಕಾರ್ಯನಿರ್ವಹಿಸಲು ಬಿಜಿನೆಸ್‌ ಕರೆಸ್ಪಾಂಡೆಂಟ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್‌ಗಳು ಬಿಜಿನೆಸ್‌ ಕರೆಸ್ಪಾಂಡೆಂಟ್‌ಗಳ ಹುದ್ದೆಗೆ ಅರ್ಜಿ ಆಹ್ವಾನಿಸುತ್ತಿರುತ್ತವೆ.

ಬ್ಯಾಂಕ್‌ನ ಮಾಜಿ ಸಿಬ್ಬಂದಿ, ನಿವೃತ್ತ ಯೋಧರು, ಸರ್ಕಾರಿ ನಿವೃತ್ತ ಸಿಬ್ಬಂದಿ, ಮೆಡಿಕಲ್‌ ಶಾಪ್‌ಗಳ ಮಾಲೀಕರು, ನಿವೃತ್ತ ಶಿಕ್ಷಕರು, ನಿವೃತ್ತ ಪೋಸ್ಟ್‌ ಮಾಸ್ಟರ್‌ಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವಸಹಾಯ ಗುಂಪುಗಳು ಈ ಹುದ್ದೆಗೆ ಅರ್ಜಿ ಹಾಕಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.