ಸಂಕ್ಷಿಪ್ತ ವಿದೇಶಿ ಸುದ್ದಿಗಳು
ಮುಖ್ಯ ಹುದ್ದೆಗೆ ನೇಮಕ
ವಾಷಿಂಗ್ಟನ್ (ಪಿಟಿಐ): ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ಶ್ರೀಕಾಂತ್ ಶ್ರೀನಿವಾಸನ್ ಅವರನ್ನು ನ್ಯಾಯಾಂಗದ ಮುಖ್ಯ ಹುದ್ದೆಗೆ ನೇಮಕ ಮಾಡಿದ್ದಾರೆ.
ಶ್ರೀನಿವಾಸನ್ ಅವರು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಸರ್ಕ್ಯೂಟ್ನ ಕೋರ್ಟ್ನಲ್ಲಿ ಕೈತ್ಲಿನ್ ಹಲ್ಲಿಗನ್ ಅವರ ಜೊತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಚಂಡೀಗಢದಲ್ಲಿ ಜನಿಸಿ ಕನ್ಸಾಸ್ನಲ್ಲಿ ಬೆಳದ ಶ್ರೀನಿವಾಸನ್, ಅಮೆರಿಕದ ಪ್ರಿನ್ಸಿಪಲ್ ಡೆಪ್ಯುಟಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತದಲ್ಲಿ ಹೂಡಿಕೆಗೆ ಸಿಬಲ್ ಒತ್ತು
ವಾಷಿಂಗ್ಟನ್ (ಪಿಟಿಐ): `ಭಾರತದಲ್ಲಿ ಆರೋಗ್ಯ, ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತೆಯನ್ನು ಹೂಡಿಕೆಯ ಪ್ರಮುಖ ವಲಯಗಳಾಗಿ ಗುರುತಿಸಲಾಗಿದೆ. ಪರಸ್ಪರ ಲಾಭಕ್ಕಾಗಿ ಈ ಮೂರು ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ಒಗ್ಗೂಡಿ ಕಾರ್ಯನಿರ್ವಹಿಸಬಹುದು~ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಹೇಳಿದರು.
ಅಮೆರಿಕ -ಭಾರತ ಉದ್ಯಮ ಮಂಡಳಿ (ಯುಎಸ್ಐಬಿಸಿ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮಂಗಳವಾರ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಬಲ್, `ಅಮೆರಿಕದಂತೆ ಭಾರತ ಕೂಡ ಸ್ವತಂತ್ರ್ಯ ರಾಷ್ಟ್ರವಾಗಿದ್ದು, ಹೂಡಿಕೆಗೆ ಇಲ್ಲಿ ಒಳ್ಳೆಯ ವಾತಾವರಣವಿದೆ~ ಎಂದರು.
ಭೂಕಂಪನ: ಅವಶೇಷಗಳಡಿ 70 ಮಂದಿ
ಮಝರ್- ಎ- ಶರೀಫ್ (ಎಎಫ್ಪಿ): ಉತ್ತರ ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡು ಭೂಕಂಪನಗಳಿಗೆ ನೆಲಸಮಗೊಂಡಿರುವ ಮನೆಗಳ ಅವಶೇಷಗಳ ಅಡಿಯಲ್ಲಿ ಸುಮಾರು 70 ಗ್ರಾಮಸ್ಥರು ಸಿಕ್ಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬುರಕಾ ಜಿಲ್ಲೆಯಲ್ಲಿ ಮೂರು ದೇಹಗಳು ಪತ್ತೆಯಾಗಿವೆ. ಹಿಂದೂಕುಶ್ ಪರ್ವತಗಳಲ್ಲಿರುವ ಬಗ್ಲನ್ ಪ್ರಾಂತ್ಯದಲ್ಲಿ ಹೆಚ್ಚಿನ ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.