ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಹಣ ಹೂಡಿಕೆ ಲಾಭಗಳು

Last Updated 20 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹೂಡಿಕೆದಾರರಿಗೆ ಹಣ ಹೂಡಲು ಇಂದು ಬಹಳ ದೊಡ್ಡ ಅವಕಾಶ ಇದೆ. ಷೇರು, ಮ್ಯೂಚುವಲ್ ಫಂಡ್, ವಿಮೆ, ನಿಶ್ಚಿತ ಠೇವಣಿ, ಚಿನ್ನ, ರಿಯಲ್ ಎಸ್ಟೇಟ್‌ಯಾವುದನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ತ್ವರಿತ ನಿರ್ಧಾರ ಕೈಗೊಳ್ಳುವುದಷ್ಟೇ ಮುಖ್ಯ.

ಸದ್ಯದ ಅತಂತ್ರ ಮಾರುಕಟ್ಟೆ ಸ್ಥಿತಿಯಲ್ಲಿ `ಮ್ಯೂಚುವಲ್ ಫಂಡ್~ ಹೂಡಿಕೆಗೆ ಉತ್ತಮ ತಾಣ ಎಂದು ಕಾಣಿಸುತ್ತದೆ. ಎದುರಾಗಬಹುದಾದ ಅಪಾಯಗಳು, ಅಗತ್ಯಗಳನ್ನೆಲ್ಲ ಲೆಕ್ಕಾಚಾರ ಮಾಡಿಕೊಂಡು ಹೂಡಿಕೆದಾರರು ಜಾಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
 
ದೀರ್ಘ ಅವಧಿಯ ಹೂಡಿಕೆ ಮಾಡುವವರಿಗೆ ಪ್ರತಿಫಲ ದೊಡ್ಡಮಟ್ಟಿನದೇ ಆಗಿರುತ್ತದೆ ಎಂಬ ನಂಬಿಕೆಯನ್ನು ಫಿಡೆಲಿಟಿ ಇಂಟರ್‌ನ್ಯಾಷನಲ್ ಮ್ಯೂಚುವಲ್ ಫಂಡ್ ಸಂಸ್ಥೆ ಈಗಲೂ ಇಟ್ಟುಕೊಂಡಿದೆ.

ಹೂಡಿಕೆಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅವುಗಳಿಗೆ ಸಂಸ್ಥೆಯು ಸೂಕ್ತ ಉತ್ತರಗಳನ್ನು ಇಲ್ಲಿ ನೀಡಿದೆ.

1. ಈ ಹಂತದಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಬಹುದೇ?
ಮಾರುಕಟ್ಟೆ ಎಂಬುದು ಚಿಮ್ಮುವ ನಾಣ್ಯದಂತೆ. ಅದು ಭಾರಿ ಲಾಭವನ್ನೂ ತರಬಹುದು, ಭಾರಿ ನಷ್ಟವನ್ನೂ ಉಂಟುಮಾಡಬಹುದು.

ಷೇರು ನಿಧಿಗಳಲ್ಲಿ ಹೂಡಿಕೆ ಮಾಡುವಾಗ ದೀರ್ಘಾವಧಿಯ ದೃಷ್ಟಿಕೋನ ಇರಬೇಕು. ಷೇರು ಮಾರುಕಟ್ಟೆ ಭಾರಿ ಏರಿಳಿತ ಕಂಡರೂ, ಹೂಡಿಕೆದಾರರಿಗೆ ಮಾತ್ರ ಅವರ ದೀರ್ಘಾವಧಿಯ ಗುರಿಯಷ್ಟೇ ಇರಬೇಕು.

2.ಅತಂತ್ರ ಮಾರುಕಟ್ಟೆಯಲ್ಲಿ ಸಣ್ಣ ಮತ್ತು ಸಾಮಾನ್ಯ ಹೂಡಿಕೆದಾರ ತನ್ನನ್ನು ರಕ್ಷಿಸಿಕೊಳ್ಳುವುದಾದರೂ ಹೇಗೆ?

ಇದಕ್ಕೆ ಉತ್ತರ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ). ಒಂದು ಅರ್ಥದಲ್ಲಿ ಇದು ಚಿಲ್ಲರೆ ಹೂಡಿಕೆದಾರರಿಗೆ ವರದಾನವೇ.

ಷೇರುಗಳಲ್ಲಿ ಹೂಡಿಕೆಯ ಲಾಭ...
ಮಾರುಕಟ್ಟೆಯ ಏರಿಳಿತವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅಂತಹ ನಷ್ಟವೇನೂ ಆಗದು.

3.ಹಲವಾರು ಹೂಡಿಕೆ ಅವಕಾಶಗಳಿವೆ. ಕಷ್ಟಪಟ್ಟು ಗಳಿಸಿದ ದುಡ್ಡನ್ನು ಸಣ್ಣ ಹೂಡಿಕೆದಾರ ಹೂಡುವುದಾದರೂ ಎಲ್ಲಿ?

*ಹೂಡಿಕೆಯ ಅವಕಾಶಗಳನ್ನು ತಿಳಿಯುವ ಮೊದಲು ಹೂಡಿಕೆದಾರರು  ಕೆಲ ಪ್ರಶ್ನೆಗಳಿಗೆ ತಾವೇ ಉತ್ತರ ಕಂಡುಕೊಳ್ಳಬೇಕು. 

ಹೂಡಿಕೆ ಮಾಡುವುದರ ಉದ್ದೇಶ, ಹೂಡಿಕೆಗೆ ಇಳಿಯುವ ಸಮಯ, ಎಷ್ಟರ ಮಟ್ಟಿನ ಅಪಾಯ ಎದುರಿಸಲು ಸಿದ್ಧ ಎಂಬುದನ್ನು ನಿರ್ಧರಿಸುವುದು. ಈ ಮೂರು ವಿಚಾರ ಸ್ಪಷ್ಟವಾದಾಗ ಹೂಡಿಕೆಯ ವಿಚಾರವೂ ಸ್ಪಷ್ಟವಾಗುತ್ತ ಹೋಗುತ್ತದೆ.

ಅಲ್ಪಾವಧಿಯ ಹಣವನ್ನು ಷೇರು ಅಥವಾ ಷೇರು ನಿಧಿಗಳಲ್ಲಿ ತೊಡಗಿಸಲೇಬಾರದು.

4. ಹೂಡಿಕೆ ಮಾಡುವಾಗ ಚಿಲ್ಲರೆ ಹೂಡಿಕೆದಾರ ಎಂತಹ ಕಾರ್ಯತಂತ್ರ ರೂಪಿಸಿಕೊಳ್ಳಬೇಕು?
*ಈಗಾಗಲೇ ತಿಳಿಸಿದಂತೆ ದೀರ್ಘಾವಧಿಯ ಚಿಂತನೆಯೇ ಬಹಳ ಮುಖ್ಯ. ಹೆಚ್ಚಿನ ಸಂದರ್ಭಗಳಲ್ಲಿ ಚಿಲ್ಲರೆ ಹೂಡಿಕೆದಾರರಿಗೆ ಮಾರುಕಟ್ಟೆಯನ್ನು ಅಭ್ಯಸಿಸುವ ಸಮಯ ಇರುವುದಿಲ್ಲ ಅಥವಾ ಅಸ್ಥಿರ ಮಾರುಕಟ್ಟೆಯಲ್ಲಿ ಸಮರ್ಪಕ ನಿರ್ಧಾರ ಕೈಗೊಳ್ಳುವಲ್ಲಿ ಅವರು ವಿಫಲರಾಗುತ್ತಾರೆ (ಕೆಲವೊಮ್ಮೆ ನುರಿತವರೂ ಸೋಲುವುದುಂಟು).

ಸಾಮಾನ್ಯವಾಗಿ ಷೇರು ಮಾರುಕಟ್ಟೆಯು ದೀರ್ಘಾವಧಿಯ ಹೂಡಿಕೆಗೆ ಅನ್ಯಾಯ ಮಾಡಿದ್ದು ಕಡಿಮೆ. ಹೀಗಾಗಿ ಕನಿಷ್ಠ 5 ವರ್ಷ ಅಥವಾ 10-15 ವರ್ಷಗಳ ಅವಧಿವರೆಗೆ ಷೇರುಗಳಲ್ಲಿ ಹಣ ಹೂಡಿದರೆ ಅದರಿಂದ ಅಧಿಕ ಲಾಭ ಖಂಡಿತ.

* ಹಣ ತೊಡಗಿಸುವ ಮೊತ್ತಕ್ಕಿಂತಲೂ ದೀರ್ಘಾವಧಿಯ ಯೋಜನೆಗಾಗಿ ಇಡುವ ಪ್ರತ್ಯೇಕ ಹಣ ಇದು ಎಂಬ ಲೆಕ್ಕದಲ್ಲಿ ಇಂತಹ ಹಣ ತೊಡಗಿಸಬೇಕಾಗುತ್ತದೆ. ಸ್ಥಿರಾಸ್ತಿಯ ಮಾದರಿಯಲ್ಲೇ ಈ ಹಣವೂ ಭವಿಷ್ಯದಲ್ಲಿ ನೆರವಿಗೆ ಬರುತ್ತದೆ ಎಂಬ ವಿಚಾರ ಮಡಬೇಕು.

ಅಲ್ಪಾವಧಿಯ ಲಾಭಕ್ಕಾದರೆ ಮ್ಯೂಚುವಲ್ ಫಂಡ್ ಬದಲಿಗೆ ಕ್ಯಾಷ್ ಫಂಡ್‌ಗಳು ಅಥವಾ ಬ್ಯಾಂಕ್ ಠೇವಣಿಯಲ್ಲಿ ಹಣ ಹೂಡಬಹುದು. ನಿರ್ದಿಷ್ಟ ಮೊತ್ತದ ಹಣ ಮಾತ್ರ ಇದ್ದರೆ, ವಿವಿಧ ಆಯಾಮಗಳಿರುವ ಒಂದು ಅಥವಾ ಎರಡು ನಿಧಿಗಳಲ್ಲಿ ಹಣ ತೊಡಗಿಸುವುದು ಲೇಸು.

5. ಷೇರು ಅಥವಾ ಷೇರು (ಈಕ್ವಿಟಿ)  ಸಂಬಂಧಿತ ಉತ್ಪನ್ನಗಳಲ್ಲಿ ಶೇಕಡಾ ಎಷ್ಟರ ಪ್ರಮಾಣದಲ್ಲಿ ಹಣ ಹೂಡಬಹುದು?
* ಒಬ್ಬ ಹೂಡಿಕೆದಾರನಿಂದ ಮತ್ತೊಬ್ಬ ಹೂಡಿಕೆದಾರನಿಗೆ ಈ ವಿಚಾರದಲ್ಲಿ ಭಿನ್ನತೆ ಇರುತ್ತದೆ.
 
ಆದರೂ ಹೂಡಿಕೆದಾರನ ವಯಸ್ಸು, ನಿವೃತ್ತಿಗೆ ಇರುವ ಸಮಯ ನೋಡಿಕೊಂಡು ಸೂಕ್ತ ನಿರ್ಧಾರಕ್ಕೆ ಬರಬೇಕು. ಲಾಭಾಂಶ ತಂದುಕೊಡುವ ಷೇರುಗಳನ್ನು ಆಯ್ದುಕೊಳ್ಳುವುದು ಸೂಕ್ತ.

ಇದನ್ನು ವ್ಯಕ್ತಿಯ ವೈಯಕ್ತಿಕ ಖರ್ಚು, ವೆಚ್ಚಗಳನ್ನು ನೋಡಿದ ಮೇಲಷ್ಟೇ ನಿರ್ಧರಿಸಬಹುದಷ್ಟೇ. ವೃತ್ತಿಪರ ಹೂಡಿಕೆ ಸಲಹೆಗಾರರು ವ್ಯಕ್ತಿಯ ಉಳಿತಾಯದ ಹಣವನ್ನು ವಿವಿಧ ಆಸ್ತಿಗಳಾಗಿ ವಿಂಗಡಿಸಿ ವಿನಿಯೋಗಿಸುವ ಸಲಹೆ ನೀಡಬಹುದು.

ಆದರೂ ಹೂಡಿಕೆಗೆ ಮೊದಲು ವ್ಯಕ್ತಿಯ ವಯಸ್ಸು, ಇನ್ನು ಎಷ್ಟು ವರ್ಷ ಕೆಲಸ ಮಾಡುವ ಅವಕಾಶ ಇದೆ ಎಂಬ ವಿಚಾರ ಮಾಡಬೇಕು. ವಯಸ್ಸಾದಂತೆ ಷೇರುಗಳಲ್ಲಿ ಹೂಡುವ ಪ್ರಮಾಣವನ್ನು ಕಡಿಮೆ ಮಾಡುತ್ತ ಬರುವುದು ಒಳ್ಳೆಯದು.

7.ಎಷ್ಟು ಸಮಯದವರೆಗೆ ಷೇರುಗಳಲ್ಲಿ ಹಣ ಹೂಡಬಹುದು?

*ಹೂಡಿಕೆಯ ಉದ್ದೇಶದ ಆಧಾರದಲ್ಲಿ ಷೇರುಗಳಲ್ಲಿ ಹಣ ತೊಡಗಿಸಬಹುದು. ಷೇರು ಅವಧಿ ಕನಿಷ್ಠ 5 ವರ್ಷ. 10-15 ವರ್ಷಗಳ ಮಟ್ಟಿಗೆ ಷೇರುಗಳಲ್ಲಿ ತೊಡಗಿಸಿದರೆ ಉತ್ತಮ. ದೀರ್ಘ ಅವಧಿಗೆ ಹೂಡಿಕೆ ಮಾಡಿದರೆ ಅನುಕೂಲ ಅಧಿಕವೇ ಹೊರತು ನಷ್ಟವಿಲ್ಲ.
 
8. ನಿರ್ದಿಷ್ಟ ಕಾಲಮಿತಿಯಲ್ಲಿ ಚಿಲ್ಲರೆ ಹೂಡಿಕೆದಾರ ಷೇರುಗಳಿಂದ ಪಡೆಯಬಹುದಾದ ಲಾಭವಾದರೂ ಏನು?

*ಅಲ್ಪಾವಧಿಯಲ್ಲಿ ಮಾರುಕಟ್ಟೆಯ ಸ್ಥಿತಿಗತಿಯನ್ನು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಮಾರುಕಟ್ಟೆಯ ವಿಶೇಷ ಏನೆಂದರೆ, ಈ ಮೊದಲಿನ ಮಾರುಕಟ್ಟೆ ಸಾಧನೆಯ ಆಧಾರದಲ್ಲಿ ಭವಿಷ್ಯದ ಸಾಧನೆಯನ್ನೂ ಲೆಕ್ಕ ಹಾಕಲಾಗದು.

ಆದರೆ, ಕಳೆದ ಎಂಟು ವರ್ಷಗಳಲ್ಲಿ ಷೇರು ನಿಧಿಗಳು (ಈಕ್ವಿಟಿ ಫಂಡ್) ಇತರ ಪ್ರಮುಖ ಹೂಡಿಕೆಯ ಕ್ಷೇತ್ರಗಳಾದ ಡೆಟ್ ಫಂಡ್ ಮತ್ತು ಚಿನ್ನಕ್ಕಿಂತ ಹೆಚ್ಚಿನ ಸಾಧನೆ ಮಾಡಿರುವುದು ಗೊತ್ತಾಗುತ್ತದೆ.

9. ಮ್ಯೂಚುವಲ್  ಫಂಡ್‌ಗಳಲ್ಲಿ ಹಣ ತೊಡಗಿಸುವಾಗ ಸಣ್ಣ ಹೂಡಿಕೆದಾರರ ಹಿತ ರಕ್ಷಣೆ ಹೇಗೆ?
*ಚಿಲ್ಲರೆ ಅಥವಾ ಸಣ್ಣ ಹೂಡಿಕೆದಾರರು ಫಂಡ್‌ಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಹೊಂದಿರಬೇಕು. ಜತೆಯಲ್ಲಿ ಕೊಟ್ಟಿರುವ ಮಾಹಿತಿಗಳನ್ನು ಮನನ ಮಾಡಿಕೊಳ್ಳಬೇಕು. ಕೆಲವೊಮ್ಮೆ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಫಂಡ್‌ಗಳ ಮೇಲೆ ಹೂಡಿಕೆ ಮಾಡುವುದುಂಟು.

ಸೂಕ್ತ ತಿಳಿವಳಿಕೆಯ ಕೊರತೆಯೇ ಅದಕ್ಕೆ ಕಾರಣವಾಗಿರುತ್ತದೆ. ಮಾರುಕಟ್ಟೆಯ್ಲ್ಲಲಿ ಅಲ್ಲೋಲ ಕಲ್ಲೋಲ ಆದಾಗ ಇಂತಹ ಹೂಡಿಕೆದಾರರಿಗೆ ತೊಂದರೆಯಾಗುತ್ತದೆ.

10. ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಒಳ್ಳೆಯದೇ. ಏಕೆ
*~ಎಸ್‌ಐಪಿ~ ಮಾದರಿಯಲ್ಲಿ ಹಣ ಹೂಡಿಕೆ ಮಾಡುವುದೇ ಉಪಯುಕ್ತ ಮತ್ತು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಣದ ಅಗತ್ಯವೂ ಇರುವುದಿಲ್ಲ. ಹಂತ ಹಂತವಾಗಿ ಉಳಿತಾಯ ಮಾಡುತ್ತಲೇ ಹೂಡಿಕೆ ಮಾಡುವುದು ಸಾಧ್ಯವಾಗುತ್ತದೆ.

ಕೆಲವರು ತಮ್ಮ ಹೂಡಿಕೆಯ ದುಡ್ಡೆಲ್ಲ ಷೇರು ಮಾರುಕಟ್ಟೆಯಲ್ಲಷ್ಟೇ ಇರುವುದು ಬೇಡ ಎಂದು  ಭಾವಿಸುತ್ತಾರೆ. ಮಾರುಕಟ್ಟೆ ಕುಸಿತದ ಅವಧಿಯಲ್ಲಿ ಹಣದ ವೆಚ್ಚದ ಸರಾಸರಿಯಲ್ಲಿ ಲಾಭವಾಗುತ್ತದೆ.
 

ಅಧಿಕ ಯೂನಿಟ್ ಸಂಪಾದನೆಯಾಗುತ್ತದೆ. ಮಾರುಕಟ್ಟೆ ತೇಜಿಯಲ್ಲಿದ್ದಾಗಲಂತೂ ಯೂನಿಟ್‌ಗಳ ಮೌಲ್ಯ ಸಹ ಹೆಚ್ಚುತ್ತದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT