ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್‌ 2023| ಗ್ರಾಮೀಣ ಪ್ರದೇಶಕ್ಕೆ ಹಲವು ಭರವಸೆ

Last Updated 17 ಫೆಬ್ರುವರಿ 2023, 17:27 IST
ಅಕ್ಷರ ಗಾತ್ರ

ದೊಡ್ಡ ಮಟ್ಟದಲ್ಲಿಯೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಬಿಜೆಪಿ ಸರ್ಕಾರವು ನಿರೀಕ್ಷೆಯಂತೆಯೇ ಚುನಾವಣಾ ಬಜೆಟ್‌ ಅನ್ನೇ ಮಂಡಿಸಿದೆ. ಗ್ರಾಮೀಣ ಪ್ರದೇಶದ ಜೀವನ ಮತ್ತು ಜೀವನೋಪಾಯಗಳನ್ನು ಗಮನದಲ್ಲಿ ಇರಿಸಿಕೊಂಡರೆ ಈ ಬಜೆಟ್‌ ಮಿಶ್ರ ಫಲ ನೀಡಿದೆ ಎನ್ನಬಹುದು. ಕೃಷಿ ಮತ್ತು ನೀರಾವರಿ ಕ್ಷೇತ್ರಕ್ಕೆ ಪ್ರಸ್ತುತ ವರ್ಷದ ಪರಿಷ್ಕೃತ ಅಂದಾಜು ಪ್ರಕಾರ ₹55,000 ಕೋಟಿ ನೀಡಲಾಗಿತ್ತು; 2023–24ರ ಬಜೆಟ್‌ ಅಂದಾಜಿನಲ್ಲಿ ₹57,000 ಕೋಟಿ ನಿಗದಿ ಮಾಡಲಾಗಿದೆ.

ಹಾಗಿದ್ದರೂ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಎಸ್‌ಜಿಡಿಪಿ) ಹೋಲಿಸಿ ನೋಡಿದರೆ, ಈ ಕ್ಷೇತ್ರಗಳಿಗೆ ವೆಚ್ಚ ಮಾಡಲು ಉದ್ದೇಶಿಸಿರುವ ಮೊತ್ತವು ಕಡಿಮೆಯಾಗಿದೆ. 2022–23ರ ಪರಿಷ್ಕೃತ ಅಂದಾಜಿನ ಪ್ರಕಾರ ಈ ಕ್ಷೇತ್ರಗಳ ಪಾಲು ಜಿಎಸ್‌ಡಿಪಿಯ ಶೇ 2.52 ಇದ್ದರೆ, 2023–24ರ ಬಜೆಟ್ ಅಂದಾಜಿನಲ್ಲಿ ನಿಗದಿ ಮಾಡಲಾದ ಮೊತ್ತವು ಜಿಎಸ್‌ಡಿಪಿಯ ಶೇ 2.46ರಷ್ಟಿದೆ. ನೈಜ ವೆಚ್ಚವು 2020–21ರಲ್ಲಿ ಶೇ 2.81 ಮತ್ತು 2021–22ರಲ್ಲಿ ಶೇ 2.57ರಷ್ಟಾಗಿತ್ತು. ಕೃಷಿ
ಮತ್ತು ನೀರಾವರಿ ಕ್ಷೇತ್ರಗಳಿಗೆ ನೀಡುತ್ತಿರುವ ಮೊತ್ತವು ಕಡಿಮೆ ಆಗುತ್ತಲೇ ಸಾಗಿದ್ದನ್ನು ಗಮನಿಸಿದರೆ, ಈ ಎರಡು ಕ್ಷೇತ್ರಗಳು ಅತ್ಯಂತ ಮಹತ್ವದ ಕ್ಷೇತ್ರಗಳಲ್ಲ ಎಂಬುದು ಅರಿವಾಗುತ್ತದೆ. ಜಮೀನು ಹೊಂದಿರುವ ರೈತ ವರ್ಗದಂತಹ ಗ್ರಾಮೀಣ ಪ್ರದೇಶದ ಕೆಲವು ವರ್ಗಗಳು ಖುಷಿಪಡುವಂತಹ ಹಲವು ಯೋಜನೆಗಳು ಬಜೆಟ್‌ನಲ್ಲಿ ಇವೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಅಥವಾ ಅಲ್ಲಿ ಬೇರುಗಳನ್ನು ಹೊಂದಿರುವ ದೊಡ್ಡ ಸಂಖ್ಯೆಯ ಮತದಾರ ವರ್ಗಗಳನ್ನು ನಿರ್ಲಕ್ಷಿಸಲು ಸರ್ಕಾರ ಸಿದ್ಧವಿಲ್ಲ ಎಂಬುದನ್ನು ಇದು ತೋರಿಸುತ್ತದೆ.

ರೈತರ ಅಲ್ಪಾವಧಿ ಬಡ್ಡಿರಹಿತ ಸಾಲದ ಮೊತ್ತವನ್ನು ಈಗಿನ ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಐದು ಎಕರೆ ವರೆಗೆ ಜಮೀನು ಹೊಂದಿರುವವರಿಗೆ ಎಕರೆಗೆ ₹250ರಂತೆ ಡೀಸೆಲ್‌ ಸಬ್ಸಿಡಿ ಘೋಷಿಸಲಾಗಿದೆ.

ಭೂರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಪ್ರತಿ ತಿಂಗಳು ₹500 ನೀಡುವ ‘ಶ್ರಮ ಶಕ್ತಿ’ ಎಂಬ ಯೋಜನೆಯನ್ನು ಘೋಷಿಸಲಾಗಿದೆ. ಇದೊಂದು ಸ್ವಾಗತಾರ್ಹ ಕ್ರಮ; ಏಕೆಂದರೆ, ನರೇಗಾಗೆ ನೀಡುವ ಮೊತ್ತವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡುತ್ತಲೇ ಬಂದಿದೆ. ಇದು ಭೂರಹಿತ ಕೃಷಿ ಕಾರ್ಮಿಕರ ಕೆಲಸದ ಅವಕಾಶಗಳು ಮತ್ತು ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುವ ಅಡುಗೆಯವರು ಮತ್ತು ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು ಗ್ರಂಥಪಾಲಕರ ಗೌರವಧನವನ್ನು ಮಾಸಿಕ ₹1,000 ಹೆಚ್ಚಿಸಲಾಗಿದೆ. ಇದರಿಂದ ಸಾವಿರಾರು ಮಹಿಳೆಯರಿಗೆ ಅನುಕೂಲ ಆಗಲಿದೆ ಮತ್ತು ಇದೊಂದು ಮಹತ್ವದ ಕ್ರಮವಾಗಿದೆ.

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಅವುಗಳಿಗೆ ಮಾರುಕಟ್ಟೆ ಸೃಷ್ಟಿಯನ್ನು ಉತ್ತೇಜಿಸಲು ಹೆಚ್ಚು ವೆಚ್ಚ ಮಾಡಲು ನಿರ್ಧರಿಸಲಾಗಿದೆ; ಹಾಗೆಯೇ ಆಡಳಿತ ವ್ಯವಸ್ಥೆ ಉತ್ತಮಪಡಿಸಲೂ ಯೋಜಿಸಲಾಗಿದೆ.

ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಯಂತಹ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಹೂಡಿಕೆಗಳನ್ನು ಪ್ರಕಟಿಸಲಾಗಿದೆ. ಇವು ಗ್ರಾಮೀಣ ಪ್ರದೇಶದಲ್ಲಿ ಬಂಡವಾಳ ವೆಚ್ಚವನ್ನು ಹೆಚ್ಚಿಸಲಿದೆ. ಸಮರ್ಪಕವಾಗಿ ಜಾರಿ ಮಾಡಿದರೆ ಎರಡು ರೀತಿಯ ಲಾಭ ಇವುಗಳಿಂದ ಉಂಟಾಗಬಹುದು. ಇವು ದೀರ್ಘಾವಧಿಯಲ್ಲಿ ಗ್ರಾಮೀಣ ಸಾಮಾಜಿಕ ಮೂಲಸೌಕರ್ಯವನ್ನು ಬಲಪಡಿಸಬಹುದು ಮತ್ತು ಜನರ ಆದಾಯವನ್ನು ಹೆಚ್ಚಿಸಬಹುದು. ಇದರಿಂದಾಗಿ ವಿಕೇಂದ್ರೀಕೃತ ಹಂತದಲ್ಲಿ ಸರಕುಗಳ ಬೇಡಿಕೆ ಹೆಚ್ಚಲಿದೆ. ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಇಂತಹ ಬೆಳವಣಿಗೆ ಅಗತ್ಯವಾಗಿ ಬೇಕಾಗಿದೆ.

ಲೇಖಕಿ: ಮುಖ್ಯಸ್ಥೆ, ಸೆಂಟರ್‌ ಫಾರ್‌ ಬಜೆಟ್‌ ಆ್ಯಂಡ್ ಪಾಲಿಸಿ ಸ್ಟಡೀಸ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT