ನವದೆಹಲಿ: ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರಂತಹ ಉದ್ದೇಶಪೂರ್ವಕ ಸುಸ್ತಿದಾರರಿಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್ಗಳು ₹ 13,109 ಕೋಟಿ ವಸೂಲಿ ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಜಾರಿ ನಿರ್ದೇಶನಾಲಯವು ನೀಡಿರುವ 2021ರ ಜುಲೈವರೆಗಿನ ಮಾಹಿತಿಯ ಪ್ರಕಾರ, ಈ ಮೊತ್ತದ ಸಾಲವನ್ನು ವಸೂಲಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
2021ರ ಜುಲೈ 16ರಂದು ಮಲ್ಯ ಮತ್ತು ಇತರರಿಗೆ ಸೇರಿದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್ಗಳು ₹ 792 ಕೋಟಿ ವಸೂಲಿ ಮಾಡಿವೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಏಳು ಹಣಕಾಸು ವರ್ಷಗಳಲ್ಲಿ ₹ 5.49 ಲಕ್ಷ ಕೋಟಿಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ವಸೂಲಿ ಮಾಡಿವೆ. ದೇಶ ಬಿಟ್ಟು ಓಡಿ ಹೋಗಿರುವ ಉದ್ದೇಶಪೂರ್ವಕ ಸುಸ್ತಿದಾರರಿಂದ ಹಣವನ್ನು ನಾವು ಮರಳಿ ಪಡೆದಿದ್ದು, ಅದನ್ನು ಸರ್ಕಾರಿ ಬ್ಯಾಂಕ್ಗಳಿಗೆ ಹಾಕಿದ್ದೇವೆ. ಅದರಿಂದಾಗಿಯೇ ಬ್ಯಾಂಕ್ಗಳು ಇಂದು ಸುರಕ್ಷಿತವಾಗಿವೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ಬ್ಯಾಂಕ್ಗಳಲ್ಲಿ ಠೇವಣಿದಾರರ ಹಣವು ಸುರಕ್ಷಿತವಾಗಿವೆ ಎಂದೂ ಅವರು ತಿಳಿಸಿದ್ದಾರೆ.