ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆಪತ್ಬಾಂಧವ ಕೂಲ್‌ ಕ್ರಾಪ್‌

Last Updated 18 ಮಾರ್ಚ್ 2020, 7:23 IST
ಅಕ್ಷರ ಗಾತ್ರ

ರೈತರು ಫಸಲಿನ ಕೊಯ್ಲು ಮುಗಿಯುತ್ತಿದ್ದಂತೆ ಸರಕನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಅನಿವಾರ್ಯತೆ ಇರುವ ಕಾರಣಕ್ಕೆ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಬೆಲೆಯಿಂದ ವಂಚಿತರಾಗುತ್ತಾರೆ. ಶೀಘ್ರವಾಗಿ ಕೊಳೆಯುವ ಕೃಷಿ ಉತ್ಪನ್ನಗಳನ್ನು ಶೈತ್ಯಾಗಾರಗಳಲ್ಲಿ ದಾಸ್ತಾನು ಮಾಡುವುದರಿಂದ ಬೇಡಿಕೆಗೆ ತಕ್ಕಂತೆ ಪೂರೈಸಿ ಉತ್ತಮ ಬೆಲೆ ಪಡೆಯಬಹುದು. ಆದರೆ, ಸಾಕಷ್ಟು ಸಂಖ್ಯೆಯಲ್ಲಿ ಶೈತ್ಯಾಗಾರಗಳು ಲಭ್ಯವಾಗದೆ ನ್ಯಾಯೋಚಿತ ಬೆಲೆಯಿಂದ ವಂಚಿತರಾಗುತ್ತಾರೆ. ಶುದ್ಧ ಇಂಧನದ ಕೃಷಿ ತಂತ್ರಜ್ಞಾನದ ನವೋದ್ಯಮವಾಗಿರುವ ಕೂಲ್‌ ಕ್ರಾಪ್‌ (Cool Crop) ರೈತರ ಈ ಬಗೆಯ ಸಂಕಷ್ಟ ದೂರಮಾಡಲು ಶ್ರಮಿಸುತ್ತಿದೆ. ಸ್ಥಳೀಯರ ಪಾಲುದಾರಿಕೆಯಡಿ ಸೌರಶಕ್ತಿ ಚಾಲಿತ ಶೈತ್ಯಾಗಾರಗಳನ್ನು ನಿರ್ಮಿಸಿ ರೈತರ ಸಂಕಷ್ಟಕ್ಕೆ ನೆರವಾಗುವುದು ಈ ನವೋದ್ಯಮ ಸ್ಥಾಪಕರ ಮುಖ್ಯ ಆಶಯವಾಗಿದೆ.

ಜೀವನಾಧಾರಕ್ಕೆ ಕೃಷಿ ಚಟುವಟಿಕೆಗಳನ್ನೇ ನೆಚ್ಚಿಕೊಂಡಿರುವ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಣ್ಣ ರೈತರಿಗೆ ನೆರವಾಗುವುದು ಈ ನವೋದ್ಯಮದ ಮುಖ್ಯ ಉದ್ದೇಶವಾಗಿದೆ. ರೈತರು, ಬೆಳೆಗಾರರ ಸಹಕಾರ ಸಂಘಗಳ ಸಹಯೋಗದಲ್ಲಿ ಈ ಸ್ಟಾರ್ಟ್‌ಅಪ್‌ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಆರ್ಥಿಕತೆ, ಕೃಷಿ ಉತ್ಪನ್ನಗಳ ಪೂರೈಕೆ ಸರಪಳಿ ಅಧ್ಯಯನ ನಡೆಸಿರುವ ಸಹ ಸ್ಥಾಪಕರು ಸೌರ ಶಕ್ತಿಯನ್ನು ಹೆಚ್ಚು ಉತ್ಪಾದಕೆಗೆ ಬಳಸುವ ನಿಟ್ಟಿನಲ್ಲಿ ಈ ನವೋದ್ಯಮ ಸ್ಥಾಪಿಸಿದ್ದಾರೆ.

‘ಆರಂಭದಲ್ಲಿ ದಾಂಡೇಲಿಯ ಸಮೀಪದ ರೈತರಿಗೆ ಪ್ರಾಯೋಗಿಕ ನೆಲೆಯಲ್ಲಿ ಈ ಸೌಲಭ್ಯ ಒದಗಿಸಲಾಗಿತ್ತು. ಸೌರಶಕ್ತಿ ಚಾಲಿತ ಶೈತ್ಯಾಗಾರಗಳನ್ನು ಸಮರ್ಪಕವಾಗಿ ಬಳಸಿಕೊಂಡ ರೈತರ ಆದಾಯ ಹೆಚ್ಚಿದೆ. ಅಲ್ಲಿನ ಯಶಸ್ಸು, ಇತರ ರಾಜ್ಯಗಳಿಗೆ ಈ ಸೌಲಭ್ಯ ವಿಸ್ತರಿಸಲು ನೆರವಾಗಿದೆ. ತರಕಾರಿ ಮತ್ತು ಹಣ್ಣು ಬೆಳೆಯುವ ರೈತರು ಇದರ ಹೆಚ್ಚು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ’ ಎಂದು ಕಂಪನಿಯ ಸಹ ಸ್ಥಾಪಕ ಮತ್ತು ಸಿಇಒ ನೀರಜ್‌ ಮರಾಠೆ ಹೇಳುತ್ತಾರೆ.

‘ರೈತರ ಅನುಕೂಲ, ಹಣಕಾಸು ಅಗತ್ಯ ಮತ್ತು ಸ್ಥಳದ ಲಭ್ಯತೆ ಆಧರಿಸಿ ಶೈತ್ಯಾಗಾರಗಳನ್ನು ನಿರ್ಮಿಸಲಾಗುವುದು. ಪ್ರತಿ ಕೆಜಿ ಸರಕಿಗೆ, ಪ್ರತಿ ದಿನಕ್ಕೆ ಬಾಡಿಗೆ ನಿಗದಿ ಮಾಡಲಾಗಿದೆ. ಶೈತ್ಯಾಗಾರಗಳನ್ನು ಬಳಸಿಕೊಳ್ಳಲು ಬಾಡಿಗೆ ಆಧಾರದಲ್ಲಿ ನೀಡುವುದರಿಂದ ಬೆಳೆಗಾರರಿಗೆ ಹೊರೆಯಾಗುವುದಿಲ್ಲ. ಮೂರರಿಂದ ಐದು ವರ್ಷಗಳವರೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಟೊಮೆಟೊ, ಈರುಳ್ಳಿ, ಆಲೂಗೆಡ್ಡೆ, ಬೆಂಡೆಕಾಯಿ, ಹಣ್ಣುಗಳ ಬಾಳಿಕೆ ಅವಧಿ ಆಧರಿಸಿ ಬಾಡಿಗೆ ದರ ನಿಗದಿಪಡಿಸಲಾಗುವುದು. ಈ ಸೌರಶಕ್ತಿ ಚಾಲಿತ ಶೈತ್ಯಾಗಾರಗಳಲ್ಲಿ ಕೂಲಿಂಗ್‌ ಪ್ರೊಸೆಸ್‌ಗೆ ಕಡಿಮೆ ವಿದ್ಯುತ್‌ ಖರ್ಚಾಗಲಿದೆ. ರೈತ ಸಂಘಟನೆಗಳೇ ಇವುಗಳನ್ನು ನಿರ್ವಹಿಸಲಿವೆ.

‘ರೈತರಿಗೆ ನೆರವಾಗುವ ಉದ್ದೇಶದ ಈ ಕಾರ್ಯಕ್ರಮಕ್ಕೆ ಕೇಂದ್ರ ಕೃಷಿ ಸಚಿವಾಲಯ, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌), ತೋಟಗಾರಿಕಾ ಇಲಾಖೆಗಳ ಸಹಕಾರ ಪಡೆಯಲಾಗಿದೆ. ಕೆಲ ಅಡೆತಡೆಗಳ ಹೊರತಾಗಿಯೂ ಯಶಸ್ವಿಯಾಗಿ ಮುನ್ನಡೆದಿದೆ. ಸಮಾನಮನಸ್ಕ ಪಾಲುದಾರರನ್ನು ಗುರುತಿಸಿ ರೈತರಿಗೆ ನೆರವು ನೀಡಲಾಗುತ್ತಿದೆ. ಹಣಕಾಸು ಸಂಸ್ಥೆಗಳ ನೆರವನ್ನೂ ಪಡೆಯಲಾಗಿದೆ. ನವೋದ್ಯಮದ ವಹಿವಾಟು ಸದ್ಯಕ್ಕೆ ಲಾಭದಾಯಕವಾಗಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಲಾಭದ ಹಾದಿಗೆ ಮರಳಲಿದೆ.

‘ರೈತರ ಅನುಕೂಲಕ್ಕೆ ಮೊಬೈಲ್‌ ಕಿರುತಂತ್ರಾಂಶ (ಆ್ಯಪ್‌) ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ದಿಷ್ಟ ಸರಕಿಗೆ ನಿರ್ದಿಷ್ಟ ಮಾರುಕಟ್ಟೆಯಲ್ಲಿನ ಬೆಲೆ ವಿವರವು ಮೊಬೈಲ್‌ನಲ್ಲಿಯೇ ಒದಗಿಸಲು ಕಂಪನಿ ಕಾರ್ಯಪ್ರವೃತ್ತವಾಗಿದೆ. ಆನ್‌ಲೈನ್‌ ಮಂಡಿ, ಸಾರ್ವಜನಿಕವಾಗಿ ಲಭ್ಯ ಇರುವ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಲೆ ಪರಿಗಣಿಸಿ ಬೆಲೆ ಅಂದಾಜಿನ ವಿವರಗಳು ಇಲ್ಲಿ ದೊರೆಯಲಿವೆ. ಬೆಳೆಗಾರರು ಈ ಮಾಹಿತಿ ಆಧರಿಸಿ ತಮ್ಮ ಉತ್ಪನ್ನಗಳ ಮಾರಾಟ ಕುರಿತು ಖಚಿತ ತೀರ್ಮಾನಕ್ಕೆ ಬರಬಹುದಾಗಿದೆ’ ಎಂದು ನೀರಜ್‌ ಹೇಳುತ್ತಾರೆ.

ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಶೈತ್ಯಾಗಾರ ಘಟಕಗಳನ್ನು ನಿರ್ಮಿಸಿ ಉತ್ತಮ ಬೆಲೆ ಬರುವವರೆಗೆ ಕೃಷಿ ಉತ್ಪನ್ನಗಳನ್ನು ದಾಸ್ತಾನು ಇರಿಸಿ ಬೆಳೆಗಾರರಿಗೆ ನ್ಯಾಯೋಚಿತ ದರ ದೊರೆಯಲು ಈ ನವೋದ್ಯಮ ನೆರವಾಗುತ್ತಿದೆ. ಕಂಪನಿಯು ಸ್ಥಳೀಯರ ನೆರವಿನಿಂದ ನಿರ್ಮಿಸಿರುವ ಸೌರಶಕ್ತಿ ಚಾಲಿತ ಶೈತ್ಯಾಗಾರಗಳಲ್ಲಿ ಕೃಷಿ ಉತ್ಪನ್ನಗಳನ್ನು ಅಗ್ಗದ ದರಕ್ಕೆ ಸಂಗ್ರಹಿಸಿ ಇಟ್ಟುಕೊಳ್ಳಲು ಇದು ನೆರವಾಗುತ್ತಿದೆ. ಇದರಿಂದ ಕೃಷಿ ಉತ್ಪನ್ನಗಳ ತಾಜಾತನ ಸಂರಕ್ಷಿಸಿ ಉತ್ತಮ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಲಿದೆ.

‘ದುಬೈನಲ್ಲಿ ನಡೆಯಲಿರುವ ‘ಎಕ್ಸ್‌ಪೊ ಲೈವ್‌’ನ ನೆರವಿನ ಕಾರ್ಯಕ್ರಮಕ್ಕೆ ಈ ನವೋದ್ಯಮ (http://coolcrop.in) ಆಯ್ಕೆಯಾಗಿದೆ. ನವೋದ್ಯಮಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವು ಸಾಮಾಜಿಕ, ಪರಿಸರ ಮತ್ತು ಆರ್ಥಿಕತೆಗೆ ಎಷ್ಟು ಪ್ರಯೋಜನಕಾರಿಯಾಗಿದೆ ಎನ್ನುವುದು ಆಯ್ಕೆಯ ಪ್ರಮುಖ ಮಾನದಂಡವಾಗಿದೆ. ಅಲ್ಲಿ ದೊರೆಯಲಿರುವ ಹಣಕಾಸು ನೆರವನ್ನು ಸ್ಟಾರ್ಟ್‌ಅಪ್‌ನ ಸಂಘಟನಾ ಸಾಮರ್ಥ್ಯ ಹೆಚ್ಚಿಸಿ, ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಿ ಇನ್ನಷ್ಟು ಪ್ರಾಯೋಗಿಕ ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ’ ಎಂದು ನೀರಜ್‌ ಹೇಳುತ್ತಾರೆ. ಮಾಹಿತಿಗೆ 99727 67937 ಸಂಪರ್ಕಿಸಿ.

ಸ್ಟಾರ್ಟ್‌ಅಪ್‌ಗಳಿಗೆ ಎಕ್ಸ್‌ಪೋ ಲೈವ್‌ ವೇದಿಕೆ
‘ದುಬೈನಲ್ಲಿ ಈ ವರ್ಷ ನಡೆಯಲಿರುವ ‘ಎಕ್ಸ್‌ಪೋ ಲೈವ್‌’, ಜನರ ಬದುಕನ್ನು ಗಮನಾರ್ಹವಾಗಿ ಬದಲಿಸುವ ಸ್ಟಾರ್ಟ್‌ಅಪ್‌ಗಳಿಗೆ ಮಾರ್ಗದರ್ಶನ ನೀಡಲು ಮತ್ತು ಅವಕಾಶಗಳನ್ನು ಹೆಚ್ಚಿಸಲು ಜಾಗತಿಕ ವೇದಿಕೆ ಕಲ್ಪಿಸಿಕೊಡಲಿದೆ. ಕೂಲ್‌ಕ್ರಾಪ್‌ ಸೇರಿದಂತೆ ಭಾರತದ ನವೋದ್ಯಮಗಳು ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿವೆ. ಸಣ್ಣ ರೈತರ ಆದಾಯ ಮತ್ತು ಕೃಷಿ ಕ್ಷೇತ್ರದ ಉತ್ಪಾದನೆ ಹೆಚ್ಚಿಸಲು ಕೂಲ್‌ ಕ್ರಾಪ್‌ ನೆರವಾಗುತ್ತಿದೆ.ಸಾಮಾಜಿಕ, ಆರ್ಥಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬದಲಾವಣೆ ತರುತ್ತಿರುವ ನವೋದ್ಯಮಿಗಳಿಗೆ ‘ಎಕ್ಸ್‌ಪೋ ಲೈವ್‌’ ಸಂದರ್ಭದಲ್ಲಿ ಹಣಕಾಸು ನೆರವು ನೀಡುತ್ತಿರುವುದು ಇತರರಿಗೂ ಸ್ಫೂರ್ತಿದಾಯಕವಾಗಿರಲಿದೆ. ಉದ್ಯಮಶೀಲತೆಗೆ ಒತ್ತು ನೀಡುವ ಅರಬ್‌ ಅಮೀರರ ಒಕ್ಕೂಟವು (ಯುಎಇ) ವಿಶ್ವದಾದ್ಯಂತ ಸ್ಟಾರ್ಟ್‌ಅಪ್‌ಗಳಿಗೆ ನೆರವು ನೀಡುತ್ತಿದೆ. ಜಾಗತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದರ ಜತೆಗೆ ಜನರ ಜೀವನ ಮಟ್ಟ ಸುಧಾರಿಸಲು ಎಕ್ಸ್‌ಪೋ ಲೈವ್‌, ವಿನೂತನ ಪಾಲುದಾರಿಕೆ ಕಾರ್ಯಕ್ರಮವಾಗಿದೆ. ತಮ್ಮ ವಹಿವಾಟು ವಿಸ್ತರಿಸಲು ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ನೆರವು ಒದಗಿಸಲಾಗುತ್ತಿದೆ’ ಎಂದು ಎಕ್ಸ್‌ಪೋ ಲೈವ್‌ನ ಹಿರಿಯ ಉಪಾಧ್ಯಕ್ಷ ಯುಸೂಫ್‌ ಕ್ಯಾರಿಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT