ಮುಂಬೈ: ಹಣದುಬ್ಬರದ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ಸುಸ್ಥಿರ ಆರ್ಥಿಕ ಬೆಳವಣಿಗೆ ಸಾಧಿಸಲು ಸಾಂಸ್ಥಿಕ ಸುಧಾರಣೆಯ ಅಗತ್ಯ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಕ್ರವಾರ ಹೇಳಿದೆ.
ಸಗಟು ದರ ಹಣದುಬ್ಬರವು (ಡಬ್ಲ್ಯುಪಿಐ) ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಚಿಲ್ಲರೆ ಹಣದುಬ್ಬರದ ಮೇಲೆ ಒತ್ತಡವು ನಿಧಾನವಾಗಿ ಹೆಚ್ಚಾಗುವ ಸಾಧ್ಯತೆ ಇದೆ ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಕೈಗಾರಿಕೆಗಳಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳ ದರವು ಗರಿಷ್ಠ ಮಟ್ಟದಲ್ಲಿದೆ. ಸಾರಿಗೆ ಮತ್ತು ಸಾಗಣೆ ವೆಚ್ಚಗಳು ಹೆಚ್ಚಾಗಿವೆ. ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಯು ಹಣದುಬ್ಬರದ ಮೇಲೆ ಇನ್ನಷ್ಟು ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದೆ.
ಉಕ್ರೇನ್ ಬಿಕ್ಕಟ್ಟಿನಿಂದಾಗಿ ಸರಕುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದ್ದು, ಭಾರತವನ್ನೂ ಒಳಗೊಂಡು ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ವಿವರಿಸಿದೆ.
ಹಣದುಬ್ಬರ ನಿಯಂತ್ರಿಸಲು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡಿದೆ. ಅಲ್ಲದೆ, ಉಕ್ಕು ಮತ್ತು ಪ್ಲಾಸ್ಟಿಕ್ ಉದ್ಯಮದಲ್ಲಿ ಬಳಸುವ ಕಚ್ಚಾ ಸಾಮಗ್ರಿಗಳ ಆಮದು ಸುಂಕವನ್ನೂ ಮನ್ನಾ ಮಾಡಿದೆ.
ಇಂಧನ, ತರಕಾರಿ ಮತ್ತು ಅಡುಗೆ ಎಣ್ಣೆಗಳ ದರ ಹೆಚ್ಚಳದಿಂದಾಗಿ ಸಗಟು ದರ ಹಣದುಬ್ಬರವು ಏಪ್ರಿಲ್ನಲ್ಲಿ ದಾಖಲೆಯ ಶೇ 15.8ಕ್ಕೆ ಏರಿಕೆ ಆಗಿದೆ. ಚಿಲ್ಲರೆ ಹಣದುಬ್ಬರವು 8 ವರ್ಷಗಳ ಗರಿಷ್ಠ ಮಟ್ಟವಾದ ಶೇ 7.79ಕ್ಕೆ ತಲುಪಿದೆ.
ಹಣದುಬ್ಬರ ಏರಿಕೆ ಆಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಆರ್ಬಿಐ ದಿಢೀರ್ ಸಭೆ ನಡೆಸಿ ರೆಪೊ ದರವನ್ನು ಶೇ 0.40ರಷ್ಟು ಇಳಿಕೆ ಮಾಡಿದೆ.
*
ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸುವ ಕುರಿತು ಇರುವ ಸಾಧಕ–ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. –ಆರ್ಬಿಐ