ಪುಣೆ : ಭಾರತವು ಸೆಮಿಕಂಡಕ್ಟರ್ ಚಿಪ್ಗಳ ತಯಾರಿಕೆಯಲ್ಲಿ ದಾಪುಗಾಲು ಇಟ್ಟಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಪುಣೆಯಲ್ಲಿ ಗುರುವಾರ ಆಯೋಜಿಸಿದ್ದ ‘ವಿಕಸಿತ ಭಾರತ ರಾಯಭಾರಿ ಸಭೆ’ಯಲ್ಲಿ ಮಾತನಾಡಿದ ಅವರು, ಈ ವಲಯದಲ್ಲಿ ಬಂಡವಾಳ ಹೂಡಲು ಜಾಗತಿಕ ಹೂಡಿಕೆದಾರರು ಉತ್ಸಾಹ ತೋರುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ₹2.50 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಸರ್ಕಾರವು ಪ್ರಸ್ತಾವಗಳನ್ನು ಸ್ವೀಕರಿಸಿದೆ ಎಂದರು.
2022ರಲ್ಲಿ ಸೆಮಿಕಂಡಕ್ಟರ್ ನೀತಿಯ ಜಾರಿಯಿಂದಾಗಿ ದೇಶವು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿತು. ಇದರಿಂದ ದೇಶವು ಸೆಮಿಕಂಡಕ್ಟರ್ ವಲಯದಲ್ಲಿ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೇಳಿದರು.
ಕಳೆದ 10 ವರ್ಷದಲ್ಲಿ ದೇಶವು ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಸರ್ಕಾರ ನೀತಿ–ನಿಯಮಗಳು, ಪಾರದರ್ಶಕ ಆಡಳಿತದಿಂದ ಈ ಗುರಿ ಸಾಧನೆಯಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ‘ವಿಕಸಿತ ಭಾರತ’ ನಿರ್ಮಾಣ ಮಾಡುವುದೇ ಪ್ರಧಾನಿ ಮೋದಿ ಅವರ ಗುರಿಯಾಗಿದೆ ಎಂದು ತಿಳಿಸಿದರು.