ಈ ಬಜೆಟ್ನಲ್ಲಿ ಮಹಿಳಾ ಉದ್ಯಮಶೀಲತೆಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ, ಸಾಮಾನ್ಯ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಯಾವ ರೀತಿಯಿಂದಲೂ ಸಹಾಯವಾಗಲಾರದು.
ಪ್ರಸ್ತುತ ಕೋವಿಡ್ ಮತ್ತು ಖಾಸಗೀಕರಣದ ದಿನಗಳಲ್ಲಿ ಬಡ ಕುಟುಂಬದವರು ಹಾಗೂ ಮಹಿಳೆಯರು ದಿನನಿತ್ಯ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅವರಿಗಾಗಿ ಯಾವ ಯೋಜನೆಯೂ ಬಜೆಟ್ನಲ್ಲಿ ಇಲ್ಲ.
ಬೇರೆ ಬೇರೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಆಶಾ, ಅಂಗನವಾಡಿ, ಬಿಸಿಯೂಟದ ಕಾರ್ಯಕರ್ತೆಯರು, ಸಫಾಯಿ ಕರ್ಮಚಾರಿಗಳಾಗಿ ದುಡಿಯುತ್ತಿರುವ ಮಹಿಳೆಯರಿಗೆ ಕನಿಷ್ಠ ವೇತನವನ್ನೂ ನೀಡದೆ ದುಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಬಜೆಟ್ನಲ್ಲಿ ಪರಿಹಾರ ಸಿಕ್ಕಿಲ್ಲ.
ಮನೆಗೆಲಸ ಮಾಡಿ, ಕೂಲಿ ಮಾಡಿ ಬದುಕುವ ಮಹಿಳೆಯರು ಕೊರೊನಾದಿಂದಾಗಿ ವರ್ಷದಿಂದ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹ ಮಹಿಳೆಯರಿಗೆ ಸಹಾಯವಾಗಲು ಉಚಿತ ಆರೋಗ್ಯ ಮತ್ತು ಉದ್ಯೋಗವನ್ನು ಖಾತ್ರಿ ಪಡಿಸುವ ಯಾವುದೇ ಅಂಶ ಇಲ್ಲ.
ದುಬಾರಿಯಾದ ಖಾಸಗಿ ಶಿಕ್ಷಣವನ್ನು ಪಡೆಯುವುದು ಮಹಿಳೆಯರಿಗೆ ಕಷ್ಟವಾಗಿದೆ. ಶಾಲಾ, ಕಾಲೇಜುಗಳಲ್ಲಿ ಬೋಧನಾ ಶುಲ್ಕ ಬಿಟ್ಟು ಬೇರೆಬೇರೆ ಶುಲ್ಕವೆಂದು ದುಡ್ಡು ಕಟ್ಟಿಸಿಕೊಳ್ಳುತ್ತಾರೆ. ಹೀಗಾಗಿ ಪೂರ್ಣವಾದ ಉಚಿತ ಶಿಕ್ಷಣ ಮಹಿಳೆಯರಿಗೆ ಇನ್ನೂ ತಲುಪುತ್ತಿಲ್ಲ. ಈ ಬಗ್ಗೆ ಬಜೆಟ್ನಲ್ಲಿ ಯಾವುದೇ ಪ್ರಸ್ತಾಪವಿಲ್ಲ.
ಅಲ್ಲದೆ, ಎಷ್ಟೇ ಕಷ್ಟಪಟ್ಟು ಕಲಿತರೂ ಉದ್ಯೋಗ ಖಾತ್ರಿ ಇಲ್ಲ. ವರ್ಷದಿಂದ ವರ್ಷಕ್ಕೆ ಉದ್ಯೋಗಾಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ವಿಚಾರವಾಗಿಯೂ ಬಜೆಟ್ ಮೌನವಾಗಿದೆ.
ಬಹಳ ಜನ ಹೆಣ್ಣು ಮಕ್ಕಳು ಅಪೌಷ್ಟಿಕತೆ ಸೇರಿದಂತೆ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಸರಿಪಡಿಸಲು ಆದ್ಯತೆ ನೀಡಬೇಕಾಗಿತ್ತು.
(ಲೇಖಕಿ: ಜಿಲ್ಲಾ ಸಂಚಾಲಕಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ವಿಜಯಪುರ)