ನವದೆಹಲಿ: ಆರ್ಥಿಕ ಪುನಶ್ಚೇತನಕ್ಕೆ ಎರಡನೆಯ ಹಂತದ ಪ್ಯಾಕೇಜ್ ಘೋಷಿಸುವ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ದೇಶದ ಅರ್ಥ ವ್ಯವಸ್ಥೆಯು ಕುಸಿತ ಕಂಡಷ್ಟೇ ವೇಗವಾಗಿ ಚೇತರಿಕೆಯನ್ನೂ ಕಾಣಲಿದೆ ಎಂಬ ಭರವಸೆ ಕೇಂದ್ರದ್ದು. ಜಿಎಸ್ಟಿ ಸಂಗ್ರಹ ಪ್ರಮಾಣ, ತಯಾರಿಕಾ ವಲಯದ ಚೇತರಿಕೆ, ಸರಕು ಸಾಗಣೆ ವಾಹನಗಳ ಸಂಚಾರ, ವಿದ್ಯುತ್ ಬಳಕೆ... ಇವೆಲ್ಲವೂ ಆಶಾದಾಯಕವಾಗಿ ಇವೆ ಎಂದು ಅಧಿಕಾರಿಗಳು ಹೇಳುತ್ತಾರೆ.
‘ಈಚೆಗೆ ಬಿಡುಗಡೆ ಆಗಿರುವ ಕೆ.ವಿ. ಕಾಮತ್ ಸಮಿತಿಯ ವರದಿಯು ವಿವಿಧ ಉದ್ಯಮ ವಲಯಗಳ ಸಾಲಗಳನ್ನು ಮರುಹೊಂದಾಣಿಕೆ ಮಾಡಿಕೊಡಬೇಕು ಎಂಬ ಸಲಹೆ ನೀಡಿದೆ. ಇದು ಕಾರ್ಯರೂಪಕ್ಕೆ ಬಂದ ನಂತರ, ಹಲವು ವಲಯಗಳ ಆರ್ಥಿಕ ಹೊರೆ ನಿವಾರಣೆ ಆಗಲಿದೆ ಎಂಬ ಭಾವನೆ ಕೂಡ ಇದೆ’ ಎಂದು ಮೂಲಗಳು ಹೇಳಿವೆ.