ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ದಿನವೂ ಸಕಾರಾತ್ಮಕ ವಹಿವಾಟು ಮುಂದುವರಿಯಿತು.
ಗುರುವಾರ ಆರ್ಬಿಐ ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಆರ್ಥಿಕತೆಗೆ ಉತ್ತೇಜನ ನೀಡಲು ಬಡ್ಡಿದರ ಕಡಿತ ಮಾಡಲು ಅವಕಾಶ ಮುಕ್ತವಾಗಿದೆ ಎಂದೂ ಹೇಳಿದೆ. ಇದು ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 164 ಅಂಶ ಹೆಚ್ಚಾಗಿ 41,306 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 48 ಅಂಶ ಹೆಚ್ಚಾಗಿ 12,137 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಗಳಿಕೆ: ದರ ಸೂಕ್ಷ್ಮವಾದ ಹಣಕಾಸು, ಬ್ಯಾಂಕಿಂಗ್ ಮತ್ತು ವಾಹನ ವಲಯದ ಷೇರುಗಳು ಗಳಿಕೆ ಕಂಡುಕೊಂಡಿವೆ. ಬಿಎಸ್ಇ ಫೈನಾನ್ಸ್ ಶೇ 1.21ರವರೆಗೆ ಏರಿಕೆ ಕಂಡಿದೆ.
ಇಂಡಸ್ಇಂಡ್ ಬ್ಯಾಂಕ್ ಷೇರು ಶೇ 4.85ರಷ್ಟು ಏರಿಕೆಯಾಗಿದೆ. ಎಸ್ಬಿಐ, ಬಜಾಜ್ ಫೈನಾನ್ಸ್, ಭಾರ್ತಿ ಏರ್ಟೆಲ್, ಎಚ್ಡಿಎಫ್ಸಿ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಹೀರೊ ಮೋಟೊಕಾರ್ಪ್ ಷೇರುಗಳ ಮೌಲ್ಯದಲ್ಲಿಯೂ ಏರಿಕೆಯಾಗಿದೆ.
ಇಳಿಕೆ: ಇನ್ಫೊಸಿಸ್, ಟೈಟಾನ್, ಐಟಿಸಿ, ಕೋಟಕ್ ಬ್ಯಾಂಕ್ ಮತ್ತು ಏಷ್ಯನ್ ಪೇಂಟ್ಸ್ ಷೇರುಗಳು ಶೇ 1.73ರವರೆಗೂ ಇಳಿಕೆಯಾಗಿವೆ.
‘ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದು ನಿರೀಕ್ಷಿತ ನಿರ್ಧಾರವೇ ಆಗಿದೆ. ಆದರೆ, ನಗದು ಲಭ್ಯತೆ ಹೆಚ್ಚಿಸುವ ಆರ್ಬಿಐನ ಕ್ರಮ ಅಚ್ಚರಿ ಮೂಡಿಸಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಪ್ರತಿಕ್ರಿಯೆ ನೀಡಿದ್ದಾರೆ.