ನವದೆಹಲಿ: ದೇಶದಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ನವೋದ್ಯಮಗಳಿಗೆ ಇನ್ನೂ ಹೆಚ್ಚಿನ ತೆರಿಗೆ ರಿಯಾಯಿತಿ ನೀಡುವ ಬಗ್ಗೆ ರೆವಿನ್ಯೂ ಇಲಾಖೆ ಮತ್ತು ಕೈಗಾರಿಕಾ ಉತ್ತೇಜನೆ ಮತ್ತು ಆಂತರಿಕ ವ್ಯಾಪಾರ ಇಲಾಖೆಗಳು (ಡಿಪಿಐಐಟಿ) ಕಾರ್ಯಪ್ರವೃತ್ತವಾಗಿವೆ.
‘ನೇರ ಮತ್ತು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ನವೋದ್ಯಮಗಳಿಗೆ ಇನ್ನೂ ಹೆಚ್ಚಿನ ತೆರಿಗೆ ರಿಯಾಯಿತಿಗಳನ್ನು ನೀಡಲು ಇರುವ ಆಯ್ಕೆಗಳ ಬಗ್ಗೆ ಎರಡೂ ಇಲಾಖೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ’ ಎಂದು ಡಿಪಿಐಐಟಿ ಕಾರ್ಯದರ್ಶಿ ಗುರುಪ್ರಸಾದ್ ಮಹಾ ಪಾತ್ರ ತಿಳಿಸಿದ್ದಾರೆ.
ಈ ಸಂಬಂಧ ಇಲಾಖೆಗಳು ‘ಸ್ಟಾರ್ಟ್ಅಪ್ ಇಂಡಿಯಾ ವಿಷನ್’ ವರದಿ ಸಿದ್ಧಪಡಿಸಿದ್ದು ಕೇಂದ್ರ ಸಚಿವ ಸಂಪುಟಕ್ಕೆ ನೀಡಲಿವೆ.
‘ಉದ್ದಿಮೆ ಆರಂಭಿಸಲು ಸಾಲ ಪಡೆಯುವುದು ಪ್ರಮುಖ ಸಮಸ್ಯೆ ಯಾಗಿದೆ. ಈ ನಿಟ್ಟಿನಲ್ಲಿ ಇಲಾಖೆಯು ಕೆಲವು ಉತ್ತೇಜನಾ ಕ್ರಮಗಳನ್ನು ಕೈಗೊಂಡಿದೆ. ನವೋದ್ಯಮಗಳು ದುಡಿಯುವ ಬಂಡವಾಳಕ್ಕಾಗಿ ಹಣ ಕಾಸು ಸಂಸ್ಥೆಗಳನ್ನು ಸಂಪರ್ಕಿಸಿದಾಗ ಅವುಗಳಿಗೆಸಾಲ ಖಾತರಿ ಯೋಜನೆ ನೀಡಲು ನಿರ್ಧರಿಸಲಾಗಿದೆ.
‘ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಮುಂಬೈನಲ್ಲಿ ಇರುವ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆ ಜಾರಿಗೊಳಿಸಿದ್ದು, ಹಕ್ಕುಪತ್ರಗಳ ನಕಲು ತಪ್ಪಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ನವೋದ್ಯಮಗಳಿಗೆ ಇದು ಹೆಚ್ಚು ಉಪಯುಕ್ತವಾಗಲಿದೆ.
‘ಇಲಾಖೆಯು ಇದುವರೆಗೆ 2 ಸಾವಿರ ನವೋದ್ಯಮಗಳನ್ನು ಗುರುತಿಸಿದ್ದು, ಅವುಗಳನ್ನು ಬಲಪಡಿಸಲು ಆದಾಯ ತೆರಿಗೆ ಪ್ರಯೋಜನಗಳನ್ನು ವಿಸ್ತರಿಸುವುದು ಮತ್ತು ನೋಂದಣಿ ಪ್ರಕ್ರಿಯೆಗಳನ್ನು ಸುಲಭಗೊಳಿಸುವ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಅವರು ವಿವರಿಸಿದ್ದಾರೆ.
ಪ್ರಮುಖ ಕ್ರಮಗಳು
*ಫಂಡ್ಸ್ ಆಫ್ ಫಂಡ್ಸ್ ಯೋಜನೆ ಯಲ್ಲಿ ನವೋದ್ಯಮಗಳಿಗೆ ಈ ವರ್ಷವೂ ಹೆಚ್ಚಿನ ನೆರವು. ಕಳೆದ ವರ್ಷ ₹ 1 ಸಾವಿರ ಕೋಟಿ ನೀಡಲಾಗಿತ್ತು.
* ತಯಾರಿಕಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ನವೋದ್ಯಮಗಳಿಗೆ ಮಾರುಕಟ್ಟೆ ಬೆಂಬಲ