ಮುಂಬೈ (ಪಿಟಿಐ): ಕೊರೊನಾ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ದೇಶದ ಶೇ 50ಕ್ಕೂ ಅಧಿಕ ಕಂಪನಿಗಳ ವಹಿವಾಟಿಗೆ ಧಕ್ಕೆಯಾಗಿದ್ದು, ಶೇ 80ರಷ್ಟು ಕಂಪನಿಗಳು ನಗದು ಹರಿವಿನ ಸಮಸ್ಯೆ ಎದುರಿಸುತ್ತಿವೆ ಎಂದುಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ತಿಳಿಸಿದೆ.
ಈ ಮಹಾಮಾರಿಯು ದೇಶದ ಆರ್ಥಿಕತೆಗೆ ಹೊಸ ಸವಾಲನ್ನು ಒಡ್ಡಿದೆ. ಪೂರೈಕೆ ಮತ್ತು ಬೇಡಿಕೆ ಮೇಲೆ ತೀವ್ರತರದ ಪರಿಣಾಮ ಉಂಟುಮಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಭಾರಿ ಪ್ರಮಾಣದಲ್ಲಿ ಹಿನ್ನಡೆಯುಂಟುಮಾಡಲಿದೆ ಎಂದು ಎಫ್ಐಸಿಸಿಐ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿದೆ.
ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿ ಬೆಳವಣಿಗೆ ಸ್ಥಿತಿಯಲ್ಲಿದೆ. ಮೂರನೇ ತ್ರೈಮಾಸಿಕದಲ್ಲಿ ಶೇ 4.7ರಷ್ಟು ಆರು ವರ್ಷಗಳ ಕನಿಷ್ಠ ಮಟ್ಟದ ಪ್ರಗತಿಯಾಗಿದೆ.ಕೊರೊನಾದ ಆರಂಭಿಕ ಹಂತದಲ್ಲಿಯೇ ವಾಣಿಜ್ಯ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪರಿಸ್ಥಿತಿ ಕೈಮೀರಿದರೆ ಇನ್ನೂ ಹೆಚ್ಚಿನ ಸಮಸ್ಯೆ ಆಗಲಿದೆ.
ಸಿಬ್ಬಂದಿ ವೇತನ, ಸಾಲ ಮರುಪಾವತಿ, ಬಡ್ಡಿದರ ಹಾಗೂ ತೆರಿಗೆ ಪಾವತಿಗೂ ಸಮಸ್ಯೆಯಾಗುತ್ತಿದೆ ಎಂದು ಕಂಪನಿಗಳು ತಿಳಿಸಿವೆ.
ಕೋವಿಡ್–19 ತುರ್ತು ಸಾಲ: ಎಸ್ಬಿಐ
ಕೊರೊನಾದಿಂದಾಗಿ ದೇಶದಾದ್ಯಂತ ವಾಣಿಜ್ಯ ವಹಿವಾಟು ಇಳಿಮುಖವಾಗಿದೆ. ಹೀಗಾಗಿ ನಗದು ಕೊರತೆ ಬೀಳದಂತೆ ನೋಡಿಕೊಳ್ಳಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಕೋವಿಡ್–19 ತುರ್ತು ಸಾಲ (ಸಿಇಸಿಎಲ್) ಸೌಲಭ್ಯ ಆರಂಭಿಸಿದೆ.
12 ತಿಂಗಳ ಅವಧಿಗೆ ಶೇ 7.25ರ ಬಡ್ಡಿದರದಲ್ಲಿ ₹200 ಕೋಟಿಯವರೆಗೂ ಸಾಲ ನೀಡಲಾಗುವುದು. ಜೂನ್ 30ರವರೆಗೆ ಈ ಸೌಲಭ್ಯ ಜಾರಿಯಲ್ಲಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
31 ರಿಂದ 60 ದಿನಗಳವರೆಗೆ ಹಾಗೂ 61 ರಿಂದ 90ದಿನಗಳವರೆಗೆಬಾಕಿ ಪಾವತಿಸದೇ ಇರುವ ಖಾತೆಗಳಿಗೆ ಈ ಸಾಲ ಸೌಲಭ್ಯ ಸಿಗುವುದಿಲ್ಲ ಎಂದು ತಿಳಿಸಿದೆ.ಹಾಲಿ ಇರುವ ನಿಧಿ ಆಧಾರಿತ ದುಡಿಯುವ ಬಂಡವಾಳದ ಮೇಲೆ ಗರಿಷ್ಠ ಶೇ 10ರಷ್ಟು ಸಾಲ ಸಿಗಲಿದೆ.