ಮಕ್ಕಳ ಮುಂದೆ ದುಡ್ಡಿನ ವಿಷಯ ಮಾತನಾಡಬಾರದು, ಹಣ ಹೊಂದಿಸಲು ನಾವು ಪಡುತ್ತಿರುವ ಕಷ್ಟ ಅವರಿಗೆ ತಿಳಿಯಬಾರದು, ದುಡ್ಡು ಕಾಸಿನ ವಿಚಾರದಲ್ಲಿ ಮಕ್ಕಳನ್ನು ದೂರ ಇಡುವುದೇ ಒಳಿತು– ಹಣದ ಚರ್ಚೆ ಬಂದಾಗ ಪೋಷಕರು ತಳೆಯುವ ನಿಲುವುಗಳಿವು. ಆದರೆ, ಮೊದಲ ಪಾಠಶಾಲೆ ಎನಿಸಿಕೊಳ್ಳುವ ಮನೆಯಿಂದಲೇ ಮಕ್ಕಳಿಗೆ ಹಣಕಾಸು ಶಿಕ್ಷಣ ಕೂಡ ಆರಂಭವಾಗುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಮಕ್ಕಳ ಮುಂದೆ ಸಕಾರಾತ್ಮಕ ರೀತಿಯಲ್ಲಿ ಹಣದ ವಿಚಾರಗಳನ್ನು ಪ್ರಸ್ತಾಪಿಸಿದರೆ ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ದುಡ್ಡಿನ ಮೌಲ್ಯ ತಿಳಿಯುತ್ತದೆ. ದೊಡ್ಡವರಾದ ಮೇಲೆ ಅವರು ಹಣಕಾಸಿನ ನಿರ್ವಹಣೆಯಲ್ಲಿ ಸೋಲುವುದಿಲ್ಲ.
ಅವಶ್ಯಕತೆ ಮತ್ತು ಬೇಡಿಕೆಗಳ ವ್ಯತ್ಯಾಸ ತಿಳಿಸಿ: ಹಣದ ಮೌಲ್ಯ ತಿಳಿಸುವ ಹಾದಿಯಲ್ಲಿ ಪೋಷಕರು ಮಕ್ಕಳಿಗೆ ಮೊದಲು ತಿಳಿಸಿಕೊಡಬೇಕಾದದ್ದು ಅವಶ್ಯಕತೆ ಮತ್ತು ಬೇಡಿಕೆಗಳ ನಡುವಣ ವ್ಯತ್ಯಾಸ. ಆಹಾರ, ಬಟ್ಟೆ, ಮನೆ, ಶಿಕ್ಷಣ, ಔಷಧೋಪಚಾರ ಇವೆಲ್ಲಾ ಅಗತ್ಯ ಖರ್ಚುಗಳಾದರೆ , ಐಷಾರಾಮಿ ಕಾರ್ ಖರೀದಿಸುವುದು, ದುಬಾರಿ ಸೂಟ್ ತೊಡುವುದು, ಅಗತ್ಯವಿಲ್ಲದಿದ್ದರೂ ವೀಕೆಂಡ್ ಶಾಪಿಂಗ್ ಮಾಡುವುದು ಇವೆಲ್ಲಾ ಬೇಡಿಕೆಗಳಾಗುತ್ತವೆ ಎನ್ನುವುದನ್ನು ಮಕ್ಕಳಿಗೆ ವಿವರಿಸಬೇಕು.
ಯಾವ ವಸ್ತು ನಮಗೆ ಅನಾವಶ್ಯಕವೊ ಅದನ್ನು ಖರೀದಿಸಿದರೆ ಅವಶ್ಯಕ ವಸ್ತುಗಳನ್ನು ಮಾರಾಟ ಮಾಡಬೇಕಾಗುತ್ತದೆ ಎಂದು ಜಗತ್ತಿನ ಶ್ರೀಮಂತ ಹೂಡಿಕೆದಾರ ವಾರನ್ ಬಫೆಟ್ ಹೇಳಿರುವುದನ್ನು ಮಕ್ಕಳಿಗೆ ತಿಳಿಸಬೇಕು.
ನೀತಿ ಕತೆ ಹೇಳಿ: ಮಕ್ಕಳು ಸಣ್ಣವರಿದ್ದಾಗ ನೀತಿ ಕತೆಗಳನ್ನು ಹೇಳುವುದು ಹಣಕಾಸು ಶಿಕ್ಷಣ ಕಲಿಸಲು ಇರುವ ಒಳ್ಳೆಯ ಮಾರ್ಗ. ಉದಾಹರಣೆಗೆ ಇರುವೆ ಮತ್ತು ಮಿಡತೆಯ ಕತೆಯೊಂದರಲ್ಲಿ ನಾಳಿನ ಯಶಸ್ಸಿಗಾಗಿ ನಾವು ಇಂದೇ ದುಡಿಯಬೇಕು, ದೀರ್ಘಾವಧಿಗೆ ಯಾರು ಯೋಜನೆ ರೂಪಿಸುವುದಿಲ್ಲವೋ ಅವರು ಜೀವನದಲ್ಲಿ ಸೋಲುತ್ತಾರೆ ಎನ್ನುವ ಸಂದೇಶವಿದೆ. ಇಂತಹ ಕತೆಗಳನ್ನು ಹೇಳುವಾಗ ಮಕ್ಕಳಿಗೆ ದುಡ್ಡಿನ ಮೌಲ್ಯ ಮನದಟ್ಟಾಗುತ್ತದೆ.
ಶಾಲಾ ಮಕ್ಕಳಲ್ಲಿ ಹಣಕಾಸು ಜಾಗೃತಿ ಮೂಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ( ಆರ್ ಬಿಐ) ಕೂಡ ಕೆಲ ಕತೆ ಪುಸ್ತಕಗಳನ್ನು ಹೊರತಂದಿದೆ. ಆನ್ಲೈನ್ನಲ್ಲಿ ಸಿಗುವ ‘ಮನಿ ಕುಮಾರ್ ಆ್ಯಂಡ್ ದಿ ಮಾನಿಟರಿ ಪಾಲಿಸಿ’, ‘ರಾಜು ಆ್ಯಂಡ್ ದಿ ಎಟಿಎಂ’, ‘ರಾಜು ಆ್ಯಂಡ್ ದಿ ಮನಿ ಟ್ರೀ’ ನಂತಹ ಕಾರ್ಟೂನ್ ಆಧಾರಿತ ಕತೆ ಪುಸ್ತಕಗಳು ಮಕ್ಕಳಿಗೆ ಇಷ್ಟವಾಗುತ್ತವೆ.
ಪಿಗ್ಗಿ ಬ್ಯಾಂಕ್ ಕೊಡಿಸಿ: ಮಕ್ಕಳಿಗೆ ಉಳಿತಾಯದ ಪಾಠ ಹೇಳಲು ಸರಳ ಮಾರ್ಗ ಪಿಗ್ಗಿ ಬಾಕ್ಸ್ ( ಹಣ ಕೂಡಿಡುವ ಡಬ್ಬ) ಕೊಡಿಸುವುದು. ಪಿಗ್ಗಿ ಬಾಕ್ಸ್, ಖರ್ಚು ಮಾಡುವುದಕ್ಕೆ ಮುನ್ನ ಉಳಿತಾಯ ಮಾಡುವುದು ಹೇಗೆ ಎಂಬುದನ್ನು ಮಕ್ಕಳಿಗೆ ಕಲಿಸುತ್ತದೆ.
ಅಲ್ಪಾವಧಿ ಗುರಿಗಳನ್ನು ನೀಡಿ ಪಿಗ್ಗಿ ಬಾಕ್ಸ್ನಲ್ಲಿ ಕೂಡಿಟ್ಟ ಹಣದಿಂದ ಮಗುವಿಗೆ ನೆಚ್ಚಿನ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಬೇಕು. ಮಗು ಖರೀದಿಸಲು ಇಚ್ಛಿಸಿರುವ ವಸ್ತುವಿಗೆ ಹಣದ ಕೊರತೆ ಉಂಟಾದಾಗ ಮತ್ತಷ್ಟು ಹಣ ಹೊಂದಿಸಿ ನಂತರ ಕೊಳ್ಳಲು ಪ್ರೇರೇಪಿಸಬೇಕು. ಕೂಡಿಟ್ಟ ಹಣದಿಂದ ಮಗು ಅನಗತ್ಯ ವಸ್ತುಗಳನ್ನು ಕೊಂಡರೆ ತಡೆಯಬಾರದು. ಅನಗತ್ಯ ವಸ್ತುಗಳನ್ನು ಮಗು ಆ ಕ್ಷಣಕ್ಕೆ ಖರೀದಿಸಿದರೂ ಕ್ರಮೇಣ ತಾನು ಮಾಡಿದ್ದು ತಪ್ಪು ಎಂದು ಅರಿವಾಗುತ್ತದೆ .
ಮಕ್ಕಳ ಬ್ಯಾಂಕ್ ಖಾತೆ ಆರಂಭಿಸಿ: ಮಕ್ಕಳಿಗೆ 10 ವರ್ಷ ತುಂಬಿದ್ದರೆ ಸಾಕು, ಬಹುತೇಕ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳು ಸ್ವತಂತ್ರವಾಗಿ ಖಾತೆ ಆರಂಭಿಸಲು ಅವಕಾಶ ನೀಡುತ್ತವೆ.
ನಿಮ್ಮ ಮಕ್ಕಳು 10 ವರ್ಷದ ಒಳಗಿನವರಾಗಿದ್ದರೆ ಜಂಟಿ ಬ್ಯಾಂಕ್ ಖಾತೆ ತೆರೆಯಲು ಅವಕಾಶವಿರುತ್ತದೆ. 10 ವರ್ಷದಿಂದ 18 ವರ್ಷ ವಯಸ್ಸಿನ ಮಕ್ಕಳು ಸ್ವತಂತ್ರವಾಗಿ ಬ್ಯಾಂಕ್ ಖಾತೆ ಆರಂಭಿಸಲು ಸಾಧ್ಯವಿದೆ. ಈ ಪ್ರಕ್ರಿಯೆಯಿಂದ ಹಣಕಾಸು ನಿರ್ವಹಣೆಯ ಪ್ರಕ್ರಿಯೆ ಸಲೀಸಾಗುತ್ತದೆ.
ಅಸ್ಥಿರತೆಯತ್ತ ಮುಖ ಮಾಡಿದ ಪೇಟೆ
ನವೆಂಬರ್ 20 ರಂದು ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೆನ್ಸೆಕ್ಸ್ 40,652 ಅಂಶಗಳ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಬರೆದಿತ್ತು. ಆದರೆ ವಾರಾಂತ್ಯಕ್ಕೆ ಸೆನ್ಸೆಕ್ಸ್ 40,395 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ್ದರೆ, ನಿಫ್ಟಿ 11,914 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿದೆ.
ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ ಶೇ 0.01, ಮತ್ತು ಶೇ 0.16 ರಷ್ಟು ಮಾತ್ರ ಏರಿಕೆ ಕಂಡಿವೆ. ಐಟಿ ವಲಯದ ಪ್ರಮುಖ ಕಂಪನಿಗಳಾದ ಇನ್ಫೊಸಿಸ್ ಮತ್ತು ಟಿಸಿಎಸ್ ಷೇರುಗಳು ಕ್ರಮವಾಗಿ ಶೇ 2.85 ಮತ್ತು ಶೇ 2.41 ರಷ್ಟು ಇಳಿದಿರುವುದರಿಂದ ನಿಫ್ಟಿ ಐಟಿ ಸೂಚ್ಯಂಕ ಶೇ 1.95 ರಷ್ಟು ಕುಸಿದಿದೆ.
ಗಳಿಕೆ – ಇಳಿಕೆ: ಜೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸ್ ಷೇರುಗಳು ಶೇ 24 ರಷ್ಟು ಜಿಗಿದಿವೆ. ಕಂಪನಿಯ ಪ್ರವರ್ತಕ ಎಸ್ಸೆಲ್ ಗ್ರೂಪ್, ಜೀ ಎಂಟರ್ಪ್ರೈಸಸ್ನ ಶೇ 14.87 ರಷ್ಟು ಪಾಲುದಾರಿಕೆಯನ್ನು ಮಾರಾಟ ಮಾಡಿ ₹ 4,300 ಕೋಟಿ ಬಂಡವಾಳ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಷೇರುಗಳು ಏರಿಕೆ ಕಂಡಿವೆ.
ಸನ್ ಫಾರ್ಮಾ ಶೇ 8.6 ರಷ್ಟು ಹೆಚ್ಚಳವಾಗಿದೆ. ಐಷರ್ ಮೋಟರ್ಸ್ ಶೇ 6.5 ರಷ್ಟು ಏರಿಕೆಯಾಗಿದೆ. ಏರ್ಟೆಲ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ತಲಾ ಶೇ 6 ರಷ್ಟು ಗಳಿಸಿವೆ.
ಯೆಸ್ ಬ್ಯಾಂಕ್ ತನ್ನ ಸುಸ್ತಿ ಸಾಲದ ಬಗ್ಗೆ ಆರ್ಬಿಐಗೆ ಸರಿಯಾದ ಮಾಹಿತಿ ನೀಡದಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಂಪನಿ ಷೇರುಗಳು ಶೇ 5.7 ರಷ್ಟು ಇಳಿಕೆಯಾಗಿವೆ. ಹೊಸ ಉತ್ಪನ್ನಗಳ ಬಿಡುಗಡೆಯನ್ನು ವಿಳಂಬ ಮಾಡಿದ ಕಾರಣ ಬ್ರಿಟಾನಿಯಾ ಷೇರುಗಳು ಶೇ 5.7 ರಷ್ಟು ಕುಸಿದಿವೆ. ಟಿಸಿಎಸ್ ಮತ್ತು ಏಷ್ಯನ್ ಪೇಂಟ್ಸ್ ಶೇ 4.4 ಮತ್ತು ಶೇ 4.7 ರಷ್ಟು ತಗ್ಗಿವೆ.
ವಾರದ ಪ್ರಮುಖ ಬೆಳವಣಿಗೆ: ಡಿಎಚ್ಎಫ್ಎಲ್ ಮಂಡಳಿಯನ್ನು ಸೂಪರ್ ಸೀಡಿ ಮಾಡಿದ ಆರ್ಬಿಐ,
ವೋಡಾಪೋನ್ ಐಡಿಯಾ, ಏರ್ಟೆಲ್ ದರ ಹೆಚ್ಚಳ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ದರ ಹೆಚ್ಚಳಕ್ಕೆ ಅಸ್ತು ಎಂದ ಜಿಯೊ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ., , ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಷೇರುಗಳ ಮಾರಾಟಕ್ಕೆ ಸರ್ಕಾರದ ಒಪ್ಪಿಗೆ. ಟಿಎಚ್ಡಿಸಿ ಇಂಡಿಯಾ ಮತ್ತು ನಾರ್ತ್ ಈಸ್ಟ್ ಎಲೆಕ್ಟ್ರಿಕ್ ಕಾರ್ಪೊರೇಷನ್ ಪಾಲು ಸರ್ಕಾರಿ ಸ್ವಾಮ್ಯದ ಎನ್ಟಿಪಿಸಿಗೆ ನೀಡಿಕೆ.
ಮುನ್ನೋಟ: ಒಟ್ಟು ಮೌಲ್ಯವರ್ಧನೆ (ಜಿವಿಎ), ದೇಶದ ಆರ್ಥಿಕ ವೃದ್ಧಿ ದರ ( ಜಿಡಿಪಿ), ವಿತ್ತೀಯ ಕೊರತೆ, ಸೇರಿ ಇನ್ನಿತರ ಪ್ರಮುಖ ದತ್ತಾಂಶಗಳು ಈ ವಾರ ಹೊರಬೀಳಲಿವೆ.
ಇದರ ಜತೆ ಅಮೆರಿಕ- ಚೀನಾ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಕೈಗೊಳ್ಳುವ ನಿರ್ಣಯವೂ ಪ್ರಭಾವ ಬೀರಲಿದೆ. ಐಟಿ ವಲಯದಲ್ಲಿ ಎಚ್ 1 ಬಿ ವೀಸಾ ವಿಚಾರ ಪ್ರಮುಖವಾಗಿದೆ. ಸದ್ಯದ ಸ್ಥಿತಿಯಲ್ಲಿ ಹೂಡಿಕೆದಾರರಿಗೆ ಉತ್ತೇಜನ ನೀಡುವಂತಹ ಯಾವುದೇ ಬೆಳವಣಿಗೆ ಇಲ್ಲ. ಹೀಗಾಗಿ ನಿರ್ದಿಷ್ಟ ಕಂಪನಿಗಳ ಸಾಧನೆ ಆಧಾರದಲ್ಲಿ ಹೂಡಿಕೆದಾರರು ಮುಂದುವರಿಯುವುದು ಸೂಕ್ತ ಎನ್ನಬಹುದಾಗಿದೆ.
(ಲೇಖಕ, ಸುವಿಷನ್ ಹೋಲ್ಡಿಂಗ್ಸ್ನ ಸಂಶೋಧನಾ ವಿಭಾಗದ ಮುಖ್ಯಸ್ಥ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.