ನವದೆಹಲಿ: ಎಟಿಎಂ ಕೇಂದ್ರಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣ ಹಿಂಪಡೆಯುವುದರ ಮೇಲಿನ ಶುಲ್ಕಗಳನ್ನು ಮೂರು ತಿಂಗಳ ಅವಧಿಗೆಕೇಂದ್ರ ಸರ್ಕಾರ ತೆಗೆದುಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೊರೊನಾವೈರಸ್ ಭೀತಿಯಿಂದ ದೇಶದ ಆರ್ಥಿಕತೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಅವರು, ಉಳಿತಾಯ ಖಾತೆಗಳಿಗೆ(ಸೇವಿಂಗ್ಸ್ ಬ್ಯಾಂಕ್) ಇರುವ ಕನಿಷ್ಠ ಮೊತ್ತದ ನಿಬಂಧನೆಯನ್ನು ಸಡಿಲಿಸಲಾಗಿದೆ ಎಂದರು.
ಕೊರೊನಾವೈರಸ್ ಸೋಂಕು ಹರುಡುವುದನ್ನು ಪ್ರತಿಬಂಧಿಸಲೆಂದು ದೇಶವ್ಯಾಪಿ ಲಾಕ್ಡೌನ್ ಘೋಷಣೆಯಾಗಿರುವುದರಿಂದ ಕೇಂದ್ರ ಸರ್ಕಾರವು ಜಿಎಸ್ಟಿ ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಅವಧಿಯನ್ನು ಜೂನ್ 30ಕ್ಕೆ ಮುಂದೂಡಿದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ನೀಡಿದ್ದ ಗಡುವನ್ನೂ ಜೂನ್ 30ಕ್ಕೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೊರೊನಾವೈರಸ್ ಪಿಡುಗು ಭಾರತದ ಆರ್ಥಿಕತೆಯನ್ನು ಪ್ರಭಾವಿಸದಂತೆ ತಡೆಯಲು ಆರ್ಥಿಕ ಪ್ಯಾಕೇಜ್ ರೂಪಿಸಲು ಹಣಕಾಸು ಇಲಾಖೆ ಪ್ರಯತ್ನಿಸುತ್ತಿದೆ. ಇದಕ್ಕಾಗಿ ನಿರ್ಮಲಾ ಸೀತಾರಾಮನ್ ಅವರ ನಾಯಕತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಾರ್ಯಪಡೆ ರೂಪಿಸಿದ್ದಾರೆ.
ಏಪ್ರಿಲ್ 1ರ ಗಡುವು ನೀಡಿದ್ದ'ವಿವಾದ್ ಸೇ ವಿಶ್ವಾಸ್' ಯೋಜನೆಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಶೇ 10ರ ಹೆಚ್ಚುವರಿ ಪಾವತಿಗೆ ವಿನಾಯ್ತಿ ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.
ತಡವಾದಟಿಡಿಎಸ್ ಪಾವತಿಗೆಜೂನ್ ಮಾಸಾಂತ್ಯದರೆಗೆಶೇ 9ರ ಬಡ್ಡಿ ವಿಧಿಸಲಾಗುವುದು. ಟಿಡಿಎಸ್ ಪಾವತಿಗೆ ಗಡುವು ವಿಸ್ತರಣೆ ಇಲ್ಲ ಎಂದು ಸಚಿವರು ಘೋಷಿಸಿದರು.