<p>ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ವಿದ್ಯಾಭ್ಯಾಸದ ಪ್ರಗತಿ ಅತೃಪ್ತಿಕರವಾಗಿತ್ತೆಂಬ ಕಾರಣಕ್ಕಾಗಿ ಮೈಸೂರಿನ ಒಬ್ಬ ತಂದೆ ಮಗಳಿಗೆ `ಬುದ್ಧಿ ಕಲಿಸಲು~ ಬೀದಿಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಿದ ಘಟನೆ ಇಂದು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.<br /> <br /> ನಗರದ ದೇವಸ್ಥಾನವೊಂದರ ಮುಂದೆ ಶಾಲಾ ಸಮವಸ್ತ್ರವನ್ನು ಧರಿಸಿ ತಟ್ಟೆ ಹಿಡಿದು ಅಳುತ್ತಾ ನಿಂತಿದ್ದ ಈ ಮಗುವಿನತ್ತ ಸಾರ್ವಜನಿಕರ ಗಮನ ಹರಿದಾಗ ಸನಿಹದಲ್ಲಿದ್ದ ಸ್ವಯಂಸೇವಾ ಸಂಸ್ಥೆಯೊಂದರ ಕಾರ್ಯಕರ್ತರು ಮಗುವನ್ನು ಪೊಲೀಸರ ಬಳಿ ಕರೆದೊಯ್ದರು.<br /> <br /> ಸರ್ಕಾರಿ ಉದ್ಯೋಗದಲ್ಲಿರುವ ತಂದೆಯನ್ನು ಪೊಲೀಸ್ ಬಂಧನಕ್ಕೆ ಒಳಪಡಿಸಿ 12 ವರ್ಷದ ಈ ಮಗುವನ್ನು ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಲಾಯಿತು. ಮನೆಯಲ್ಲಿ ಬಾಲಕಿಯ ಬೆಳವಣಿಗೆಗೆ ಸೂಕ್ತ ವಾತಾವರಣದ ಕೊರತೆಯನ್ನು ಮನಗಂಡ ಸಮಿತಿ ಆಕೆಯನ್ನು ಬಾಲಮಂದಿರಕ್ಕೆ ಕಳುಹಿಸಿತ್ತು.<br /> <br /> `ನನ್ನ ಮಗಳಿಗೆ ಜೀವನದ ಕಷ್ಟಕಾರ್ಪಣ್ಯಗಳ ಬಗ್ಗೆ ಅರಿವು ಮೂಡಿಸಿ, ವಿದ್ಯೆಯ ಮಹತ್ವದ ಬಗ್ಗೆ ಜ್ಞಾನೋದಯವಾಗುವಂತೆ ಮಾಡುವ `ಘನ~ಉದ್ದೇಶದಿಂದ ಆಕೆಯನ್ನು ಭಿಕ್ಷೆ ಬೇಡಲು ನಿಲ್ಲಿಸಿದೆ~ ಎಂಬುದು ಈ ತಂದೆಯ ವಾದ.<br /> <br /> ಬಾಲ ನ್ಯಾಯ ಕಾಯಿದೆಯ ಉಲ್ಲಂಘನೆಯನ್ನು ಮಾಡಿದನೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆತ ಜಾಮೀನನ ಮೇಲೆ ಹೊರ ಬಂದಿದ್ದೇ ಅಲ್ಲದೆ ಮಗಳ ಮೇಲಿದ್ದ `ಪ್ರೀತಿ~ ಮತ್ತು ಆಕೆಯ ಭವಿಷ್ಯವನ್ನು ಕುರಿತ `ಕಾಳಜಿ~ಗಳ ಹೆಸರಿನಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ!<br /> <br /> ಮಗಳ ಪರೀಕ್ಷೆಗಳು ಇನ್ನೂ ನಡೆಯುತ್ತಿರುವಾಗಲೇ ಆ ಎಳೆಯ ಜೀವವನ್ನು ಬೀದಿಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಿದ ಈ ತಂದೆಗೆ ತನ್ನ ಅತಿರೇಕದ ನಿರ್ಧಾರದ ಬಗ್ಗೆ ಪಶ್ಚಾತ್ತಾಪವಿದ್ದಂತೆ ಕಾಣುತ್ತಿಲ್ಲ. <br /> <br /> ನಿರಂತರವಾಗಿ ಪ್ರೀತಿಯ ಪಾಠ ಪಠಿಸಿ, ಇನ್ನು ಮುಂದೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಆಶ್ವಾಸನೆಯನ್ನಿತ್ತುಸುಮಾರು ಹತ್ತು ದಿನಗಳ ಕಾಲ ಬಾಲಮಂದಿರದಲ್ಲಿದ್ದ ಮಗಳನ್ನು ಮನೆಗೆ ಕರೆತರುವಲ್ಲಿ ಈ ತಂದೆ ಯಶಸ್ವಿಯಾಗಿದ್ದಾರೆ. <br /> <br /> ಮಕ್ಕಳ ಪಾಲನಾ ಸಮಿತಿಯ ಸದಸ್ಯರೇನೋ `ತಂದೆ ಮತ್ತು ಮಗಳಿಬ್ಬರಿಗೂ ಸೂಕ್ತ ಸಲಹೆಗಳನ್ನು ನೀಡಿದ್ದೇವೆ, ಪ್ರತಿ ಎರಡು ತಿಂಗಳಿಗೊಮ್ಮೆ ಈ ಬಾಲೆಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತೇವೆ~ ಎಂಬ ಹೇಳಿಕೆಯನ್ನಿತ್ತಿದ್ದಾರೆ. ಇಡೀ ಘಟನೆ ಸುಖಾಂತ್ಯ ಕಂಡಿತೇನೋ ಎಂಬಂತೆ ಬಿಂಬಿಸಲಾಗುತ್ತಿದೆ.<br /> <br /> ಭಿಕ್ಷಾಟನೆಯ ಪ್ರಕರಣ ನಡೆದ ಸಂದರ್ಭದಲ್ಲೇ ಮೈಸೂರು ನಗರ ಮತ್ತೊಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಯಿತು. ತನ್ನ ತಾಯಿ ಹಾಗೂ ಆಕೆಯ ಸಂಗಾತಿಯಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ದಿನನಿತ್ಯವೂ ಒಳಗಾಗುತ್ತಿದ್ದ ಒಂಬತ್ತು ವರ್ಷದ ಬಾಲಕನೊಬ್ಬ ಈಗ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿದ್ದಾನೆ.<br /> <br /> ಹೆತ್ತ ತಾಯಿಯಿಂದಲೇ ಅಸಹನೀಯ ಕ್ರೌರ್ಯಕ್ಕೆ ಒಳಗಾದ ಈ ಬಾಲಕ ಗೃಹಕೃತ್ಯಗಳ ಭಾರವನ್ನೆಲ್ಲಾ ಹೊರುವುದರ ಜೊತೆ ಜೊತೆಗೆ ಆಕೆಯ ಗೆಳೆಯನ ಬೆದರಿಕೆ ಹಾಗೂ ಹೊಡೆತಗಳಿಗೂ ಬಲಿಯಾಗುತ್ತಿದ್ದ. <br /> <br /> ಈ ಹಿಂಸೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಯ ಮೊರೆ ಹೊಕ್ಕ ಬಾಲಕನಿಗೆ ಈಗ ಬಾಲ ಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಈತ ತನ್ನ ಮನೆಗೆ ಮರಳಲು ನಿರಾಕರಿಸಿದ್ದಾನೆ. ಈ ಮಗುವನ್ನು ಹಿಂಸಿಸಿದ್ದಕ್ಕೆ ಶಿಕ್ಷೆಯ ರೂಪದಲ್ಲಿ ಬಾಲ ಮಂದಿರದಲ್ಲಿ ಶ್ರಮದಾನ ಮಾಡಲು ಆ ಮಗುವಿನ ತಾಯಿಯ ಗೆಳೆಯನಿಗೆ ನಿರ್ದೇಶಿಸಲಾಗಿದೆ.<br /> <br /> ಮೈಸೂರಿನಲ್ಲಿ ನಡೆದ ಈ ಎರಡು ಘಟನೆಗಳೂ ದಿನಗಳು ಉರುಳಿದ ಹಾಗೆ ಸಾರ್ವಜನಿಕರ ಹಾಗೂ ಆಡಳಿತ ವ್ಯವಸ್ಥೆಯ ಮನಃಪಟಲದಿಂದ ದೂರ ಸರಿಯುತ್ತವೆ. <br /> <br /> ಆದರೆ ದೇಶದಾದ್ಯಂತ ನಿರಂತರವಾಗಿ ಮನೆಯ ಒಳಗೆ, ಸಂಬಂಧಿಕರಿಂದ, ವಿಶೇಷವಾಗಿ ತಂದೆ-ತಾಯಿಗಳಿಂದ ಮಕ್ಕಳ ಮೇಲೆ ನಡೆಯುತ್ತಿರುವ ನಾನಾ ಬಗೆಯ ದೌರ್ಜನ್ಯಗಳ ಬಗ್ಗೆ ಪ್ರಜ್ಞಾವಂತ ಸಮಾಜ ಕಣ್ಣು ಮುಚ್ಚಿ ಕುಳಿತು ಕೊಳ್ಳುವ ಹಾಗಿಲ್ಲ. <br /> <br /> ಮನೆಯನ್ನು ದೇಗುಲಕ್ಕೂ ಮಾತಾ ಪಿತೃಗಳನ್ನು ದೇವ ದೇವತೆಗಳಿಗೂ ಹೋಲಿಸುವ ಹಾಗೂ ಕೌಟುಂಬಿಕ ಸಂಬಂಧಗಳನ್ನು ವೈಭವೀಕರಿಸುವ ಭಾರತೀಯ ಸಂಸ್ಕೃತಿಯ ಒಂದು ಪ್ರವೃತ್ತಿಯನ್ನು ಗಂಭೀರವಾದ ಚಿಂತನೆ-ಪ್ರಶ್ನೆಗಳಿಗೆ ಒಳಪಡಿಸುವ ಅಗತ್ಯವನ್ನು ಈಗಲಾದರೂ ಮನಗಾಣಬೇಕಾಗಿದೆ.<br /> <br /> ತೀರಾ ಇತ್ತೀಚಿನವರೆಗೂ ಕುಟುಂಬದ ಒಳಗೆ, ಅದರಲ್ಲೂ ಪೋಷಕರಿಂದ ಅಥವಾ ಇತರ ಬಂಧುಗಳಿಂದ ಮಕ್ಕಳ ಮೇಲೆ ದೈಹಿಕ ಅಥವಾ ಲೈಂಗಿಕ ಅತ್ಯಾಚಾರ ನಡೆಯಬಹುದು ಎಂಬುದನ್ನು ಒಪ್ಪಿಕೊಳ್ಳಲು ಕೂಡ ನಾವು ಸಿದ್ಧರಿರಲಿಲ್ಲ. <br /> <br /> ಆದರೆ ಸ್ವಲ್ಪ ದಿನಗಳ ಹಿಂದೆ ಕೌಟುಂಬಿಕ ವಲಯದಲ್ಲಿ ಮಕ್ಕಳು ಅನುಭವಿಸುವ ಕ್ರೌರ್ಯದ ಸ್ವರೂಪವನ್ನು ಕುರಿತಂತೆ ಕೈಗೊಂಡ ರಾಷ್ಟ್ರೀಯ ಮಟ್ಟದ ಅಧ್ಯಯನವೊಂದು ಹಲವಾರು ಅಘಾತಕಾರಿ ಸಂಗತಿಗಳನ್ನು ಬಯಲಿಗೆಳೆಯಿತು.<br /> <br /> ನಮ್ಮ ದೇಶದಲ್ಲಿ ದೌರ್ಜನ್ಯ ಹಾಗೂ ಶೋಷಣೆಗೊಳಗಾಗುವ ಮಕ್ಕಳಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು 5-12ರ ವಯೋಗುಂಪಿಗೆ ಸೇರಿದವರು. ಇವರಲ್ಲಿ ಶೇಕಡ 60 ರಷ್ಟು ಮಕ್ಕಳು ಅನುಭವಿಸುವ ಹಿಂಸೆ ಕುಟುಂಬದ ಪರಿಧಿಯ ಒಳಗೇ ನಡೆಯುವಂತಹುದು.<br /> <br /> ಈ ಅಧ್ಯಯನ ಹೊರ ಹಾಕಿದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಕುಟುಂಬದ ಒಳಗೆ ಮಕ್ಕಳು ಎದುರಿಸುವ ದೌರ್ಜನ್ಯದ ಪ್ರಕರಣಗಳಲ್ಲಿ ಶೇಕಡ 90ರಷ್ಟಕ್ಕೆ ಕಾರಣರಾಗುವವರು ಆ ಮಕ್ಕಳ ತಂದೆ-ತಾಯಿಗಳು ಎಂಬುದು.<br /> <br /> ಭಾರತೀಯ ಸಂಪ್ರದಾಯದಲ್ಲಿ ಮಕ್ಕಳ ಮೇಲೆ ಮಾತಾ-ಪಿತೃಗಳಿಗೆ ಅಪರಿಮಿತ ಅಧಿಕಾರವಿದೆ. ಆ ಕಾರಣದಿಂದಲೇ ತಮ್ಮ ಮಕ್ಕಳ ಬದುಕನ್ನು ನಿಯಂತ್ರಿಸುವ ಹಾಗೂ ನಿರ್ದೇಶಿಸುವ ಏಕೈಕ ಹಕ್ಕು ತಮಗಿದೆ ಎಂದು ಬಹುತೇಕ ಪೋಷಕರು ಭಾವಿಸಿರುತ್ತಾರೆ. <br /> ಅಪ್ರಾಪ್ತ ವಯಸ್ಸಿನ ಮಕ್ಕಳ ವಿಷಯದಲ್ಲಂತೂ ಈ ಹಕ್ಕು ಪ್ರಶ್ನಾತೀತವಾಗುತ್ತದೆ. ಸಣ್ಣ ವಯಸ್ಸಿನ ಮಕ್ಕಳು ತಮ್ಮ ಜೀವನಾವಶ್ಯಕತೆಗಳ ಪೂರೈಕೆಗಾಗಿ ಸಂಪೂರ್ಣವಾಗಿ ತಂದೆ-ತಾಯಿಗಳನ್ನೇ ಅವಲಂಬಿಸಬೇಕಾಗಿರುವುದರಿಂದ ಅವರಲ್ಲಿ ದೌರ್ಜನ್ಯವನ್ನು ಪ್ರತಿಭಟಿಸುವಂಥ ಶಕ್ತಿಯೇ ಇರುವುದಿಲ್ಲ.<br /> <br /> ಹಾಗೆಂದ ಮಾತ್ರಕ್ಕೆ ಎಲ್ಲ ಪೋಷಕರೂ ತಮ್ಮ ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಅರ್ಥೈಸಬಾರದು. ಅಧಿಕಾರ ಮತ್ತು ವಾತ್ಸಲ್ಯಗಳ ನಡುವೆ ಸಮತೋಲನವನ್ನು ಕಾದಿರಿಸಿಕೊಂಡು ತಮ್ಮ ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸಿದ-ಬೆಳೆಸುತ್ತಿರುವ ಕೋಟ್ಯಂತರ ಪೋಷಕರು ನಮ್ಮಲ್ಲಿದ್ದಾರೆ. <br /> <br /> ಆದರೆ ಇಲ್ಲಿ ಮುಖ್ಯವಾದುದು ಅಂಕಿ-ಸಂಖ್ಯೆಗಳಲ್ಲ. ಮಕ್ಕಳ ಹಕ್ಕುಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳು, ಬರಹಗಳು ಹೊರ ಹೊಮ್ಮತ್ತಿರುವ ಈ ದೇಶದಲ್ಲಿ ಅವರ ಪಾಲಿಗೆ ಅತಿ ಸುರಕ್ಷಿತ ವಲಯ ಎಂದು ಪರಿಗಣಿತವಾಗಿರುವ ಕುಟುಂಬದಲ್ಲೇ ಈ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವುದು ಗಮನಿಸಬೇಕಾದ ವಿಷಯ.<br /> <br /> ಕುಟುಂಬದ ಒಳಗೆ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಾಮಾನ್ಯವಾಗಿ ಮೂರು ಬಗೆಗಳಲ್ಲಿ ವಿಂಗಡಿಸಲಾಗುತ್ತದೆ. ಅವುಗಳೆಂದರೆ ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ. <br /> <br /> ಮಕ್ಕಳಿಗೆ ಹೊಡೆಯುವುದು, ತಮ್ಮ ಸ್ವಾರ್ಥ ಸಾಧನೆಗಾಗಿ ಅಥವಾ ಜೀವನ ನಿರ್ವಹಣೆಗಾಗಿ ಅವರನ್ನು ಕಷ್ಟಕರವಾದ ದುಡಿಮೆಯಲ್ಲಿ ತೊಡಗಿಸುವುದು. ತಮ್ಮ ಅಥವಾ ಇತರರ ಮನೆಗಳಲ್ಲಿ ಗೃಹ ಕೃತ್ಯಗಳನ್ನು ನಿಭಾಯಿಸುವಂತೆ ಒತ್ತಡ ಹೇರುವುದು-ಇವೇ ಮುಂತಾದವು ದೈಹಿಕ ದೌರ್ಜನ್ಯಕ್ಕೆ ಉದಾಹರಣೆಗಳು.<br /> <br /> ಮಕ್ಕಳನ್ನು ದೈಹಿಕವಾಗಿ ಹಿಂಸಿಸದಿದ್ದರೂ ಪೋಷಕರು ಅವರನ್ನು ಅಲಕ್ಷ್ಯ ಮಾಡುವುದು, ಪದೇ ಪದೇ ಅವಮಾನ ಮಾಡುವುದು ಅಥವಾ ತಮ್ಮ ಬದುಕಿನಲ್ಲಿ ಅವರ ಅಗತ್ಯವಿಲ್ಲವೆಂಬಂತೆ ವರ್ತಿಸುವುದು ಅನೇಕ ಕುಟುಂಬಗಳಲ್ಲಿ ಕಂಡು ಬರುವಂಥ ಪರಿಸ್ಥಿತಿ.<br /> <br /> ವೈವಾಹಿಕ ವಿಘಟನೆ, ವಿವಾಹ ವಿಚ್ಛೇದನ, ತಂದೆ ಅಥವಾ ತಾಯಿ ಬೇರೊಬ್ಬ ಸಂಗಾತಿಯನ್ನು ಮನೆಗೆ ಕರೆತಂದಿರುವುದು-ಇಂಥ ಸಂದರ್ಭಗಳಲ್ಲಿ ಮಕ್ಕಳು ಭಾವನಾತ್ಮಕ ಆಘಾತಗಳಿಗೆ ಬಳಗಾಗುತ್ತಾರೆ. <br /> <br /> ವಿಚ್ಛೇದನ ಪಡೆದ ದಂಪತಿಗಳು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸುವಂಥ ಪರಿಸ್ಥಿತಿ ಸೃಷ್ಟಿಯಾಗುವ ಸಂದರ್ಭಗಳಲ್ಲಂತೂ ಆ ಮಕ್ಕಳು ಅನುಭವಿಸುವ ಭಾವನಾತ್ಮಕ ಹಿಂಸೆ ಅಪಾರ. ಮಕ್ಕಳು ಅನುಭವಿಸುವ ಅನೇಕ ಶಿಕ್ಷೆಗಳು ದೈಹಿಕ ಹಾಗೂ ಭಾವನಾತ್ಮಕ ದೌರ್ಜನ್ಯಗಳ ಸಮ್ಮಿಶ್ರಣ ಎಂದೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ.<br /> <br /> ಕುಟುಂಬದ ಒಳಗೆ ತಂದೆ, ಸಹೋದರ ಅಥವಾ ಈ ಸ್ಥಾನಗಳಿಗೆ ಸಮಾನವಾದ ಸ್ಥಾನದಲ್ಲಿರುವ ಬಂಧುಗಳಿಂದ ಲೈಂಗಿಕ ದೌರ್ಜನ್ಯ ನಡೆಯುತ್ತದೆಂಬ ವಿಷಯ ನಮ್ಮ ಊಹೆಗೂ ನಿಲುಕಲಾರದಂಥದ್ದು.<br /> <br /> ಆದರೆ ಇದು ಭಾರತೀಯ ಕೌಟುಂಬಿಕ ಜೀವನದ ಒಂದು ಕಟು ಸತ್ಯ. ಬಹು ಕಾಲದಿಂದ ಆಪ್ತ ಬಂಧುಗಳಿಂದ ಲೈಂಗಿಕ ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಹೆಣ್ಣು ಮಕ್ಕಳ ಬವಣೆ ಗೋಪ್ಯತೆಯ ಸೆರಗಿನಲ್ಲಿ ಮುಚ್ಚಿದಂತೆಯೇ ಇದ್ದದ್ದು, ಈಗೀಗ ಕೆಲ ಪ್ರಕರಣಗಳು ಹೊರಬರುತ್ತಿವೆ. <br /> <br /> ಆದರೆ ಮನೆತನದ ಮರ್ಯಾದೆಯನ್ನು ಕಾಪಾಡುವ ಪ್ರಧಾನ ಜವಾಬ್ದಾರಿಯೂ ಹೆಣ್ಣು ಮಕ್ಕಳದ್ದೇ ಆಗಿರುವುದರಿಂದ ಅವರಲ್ಲನೇಕರು ಮೌನ ಸಾಂಗತ್ಯ ಮಾಡಿಕೊಳ್ಳುತ್ತಾರೆ. <br /> <br /> ಮಕ್ಕಳನ್ನು ಕೌಟುಂಬಿಕ ಹಿಂಸೆಯೂ ಸೇರಿದಂತೆ ಸಮಾಜದ ವಿವಿಧ ಸಂಸ್ಥೆಗಳಲ್ಲಿ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರೀಯ ಕಾಯಿದೆಯೊಂದನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಆಗಿಂದಾಗ್ಗೆ ನಡೆಯುತ್ತಲೇ ಇದ್ದರೂ ಇದುವರೆಗೂ ಆ ನಿಟ್ಟಿನಲ್ಲಿ ಸಂಬಂಧಪಟ್ಟ ವ್ಯವಸ್ಥೆ ಕಾರ್ಯ ಪ್ರವೃತ್ತವಾಗಿಲ್ಲ. <br /> <br /> ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದಂಥ ಸ್ಥಿತಿಯಲ್ಲೇ ಅನೇಕ ಮಕ್ಕಳಿರುವುದರಿಂದ ಅವರ ದೇಹ-ಮನಸ್ಸುಗಳು ಅವ್ಯಾಹತವಾಗಿ ದಾಳಿಗೆ ಒಳಗಾಗುತ್ತಲೇ ಇರುತ್ತವೆ. ಪ್ರತಿಭಟಿಸಬೇಕೆಂದಿರುವ ಮಕ್ಕಳಿಗೂ ಬೆಂಬಲಕ್ಕೆ ನಿಲ್ಲುವಂಥ ವ್ಯವಸ್ಥೆಯಾದರೂ ನಮ್ಮಲ್ಲಿ ಎಲ್ಲಿದೆ?<br /> <br /> ಮಗಳನ್ನು ಭಿಕ್ಷೆಗೆ ಹಚ್ಚುವ ಅಥವಾ ಮಗನನ್ನು ಚಿತ್ರ ಹಿಂಸೆಗೆ ಗುರಿಪಡಿಸಿ ಮನೆಯಿಂದ ಓಡಿಸುವ ದೌರ್ಜನ್ಯ ಯಾವುದಾದರೂ ಪಾಶ್ಚಿಮಾತ್ಯ ದೇಶದಲ್ಲಿ ಸಂಭವಿಸಿದ್ದರೆ ಏನಾಗುತಿತ್ತು ಎಂಬ ಪ್ರಶ್ನೆಯನ್ನೆತ್ತಿದಾಗ ನಮಗೆ ಥಟ್ಟನೆ ನೆನಪಿಗೆ ಬರುವುದು ನಾರ್ವೆ. <br /> <br /> ಇತ್ತೀಚೆಗಷ್ಟೇ ಭಾರತೀಯರ ದೃಷ್ಟಿಯಲ್ಲಿ ತೀರಾ ಸಾಧಾರಣ ಎನಿಸುವಂಥ ರೀತಿಯಲ್ಲಿ ಮಕ್ಕಳೊಡನೆ ತಂದೆ-ತಾಯಿಗಳು ನಡೆದುಕೊಂಡರು ಎನ್ನುವ ಕಾರಣಕ್ಕಾಗಿ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ನಾರ್ವೆಯ ಸಾಮಾಜಿಕ ಕಾರ್ಯಕರ್ತರು ಇದುವರೆಗೂ ಆ ಮಕ್ಕಳನ್ನು ಪೋಷಕರಿಗೆ ಹಿಂದಿರುಗಿಸಿಲ್ಲ. <br /> <br /> ಆ ಮಕ್ಕಳಿಗೆ ಪ್ರತ್ಯೇಕವಾದ ಮಲಗುವ ಕೊಠಡಿಯಿರಲಿಲ್ಲ ಹಾಗೂ ಪೋಷಕರು ಅವರಿಗೆ ಊಟ ಮಾಡಿಸುತ್ತಿದ್ದುದನ್ನೇ ದೊಡ್ಡ ಅಪರಾಧವೆಂಬಂತೆ ಪರಿಗಣಿಸಿದ ಆ ದೇಶದಲ್ಲಿ ನಮ್ಮ ನಡುವೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯದ ಕೃತ್ಯಗಳು ಯಾವ ಬಗೆಯ ಪ್ರತಿಕ್ರಿಯೆಯನ್ನು ತರುತ್ತಿತ್ತೋ ಎಂದು ಊಹಿಸಬಹುದಲ್ಲ. <br /> <br /> ಪೋಷಕರು ಮಕ್ಕಳಿಗೆ ಬುದ್ಧಿವಾದ ಹೇಳಬಾರದು ಅಥವಾ ಅವರು ತಪ್ಪುಗಳನ್ನು ಮಾಡಿದಾಗ ತಿದ್ದಬಾರದು ಎಂದಾಗಲಿ ಇದರ ಅರ್ಥವಲ್ಲ. ಆದರೆ ಬಾಲ್ಯಾವಸ್ಥೆಯ ಅಗತ್ಯಗಳು-ಆಶಯಗಳನ್ನು ಚಿವುಟಿ ತಾವು ಮಾಡಿದ್ದೇ ಸರಿ ಎಂಬ ಕೆಟ್ಟ ಹಟದಿಂದ ಅವರು ನಡೆದುಕೊಂಡರೆ ಆರಕ್ಷಕ ಹಾಗೂ ಆಡಳಿತ ವ್ಯವಸ್ಥೆ ಮತ್ತು ಸೂಕ್ಷ್ಮ ಮನಸ್ಸುಳ್ಳ ನಾಗರಿಕರು ಅದನ್ನು ಸಹಿಸಬಾರದು. <br /> <br /> ತಾಯಿಯ ಗರ್ಭದಿಂದ ಹಿಡಿದು ಎಲ್ಲಿಯೂ ಮಕ್ಕಳಿಗೆ ಸುರಕ್ಷಿತವಾದ ತಾಣವಿಲ್ಲವೆಂದರೆ ಅವರು ಹೋಗುವುದಾದರೂ ಎಲ್ಲಿಗೆ? ಮೈಸೂರಿನಲ್ಲಿ ನಡೆದ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳುವುದರಲ್ಲಿ ನಮ್ಮೆಲ್ಲರ ಪಾತ್ರವೂ ಇದೆ.<br /> <br /> (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ವಿದ್ಯಾಭ್ಯಾಸದ ಪ್ರಗತಿ ಅತೃಪ್ತಿಕರವಾಗಿತ್ತೆಂಬ ಕಾರಣಕ್ಕಾಗಿ ಮೈಸೂರಿನ ಒಬ್ಬ ತಂದೆ ಮಗಳಿಗೆ `ಬುದ್ಧಿ ಕಲಿಸಲು~ ಬೀದಿಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಿದ ಘಟನೆ ಇಂದು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.<br /> <br /> ನಗರದ ದೇವಸ್ಥಾನವೊಂದರ ಮುಂದೆ ಶಾಲಾ ಸಮವಸ್ತ್ರವನ್ನು ಧರಿಸಿ ತಟ್ಟೆ ಹಿಡಿದು ಅಳುತ್ತಾ ನಿಂತಿದ್ದ ಈ ಮಗುವಿನತ್ತ ಸಾರ್ವಜನಿಕರ ಗಮನ ಹರಿದಾಗ ಸನಿಹದಲ್ಲಿದ್ದ ಸ್ವಯಂಸೇವಾ ಸಂಸ್ಥೆಯೊಂದರ ಕಾರ್ಯಕರ್ತರು ಮಗುವನ್ನು ಪೊಲೀಸರ ಬಳಿ ಕರೆದೊಯ್ದರು.<br /> <br /> ಸರ್ಕಾರಿ ಉದ್ಯೋಗದಲ್ಲಿರುವ ತಂದೆಯನ್ನು ಪೊಲೀಸ್ ಬಂಧನಕ್ಕೆ ಒಳಪಡಿಸಿ 12 ವರ್ಷದ ಈ ಮಗುವನ್ನು ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಲಾಯಿತು. ಮನೆಯಲ್ಲಿ ಬಾಲಕಿಯ ಬೆಳವಣಿಗೆಗೆ ಸೂಕ್ತ ವಾತಾವರಣದ ಕೊರತೆಯನ್ನು ಮನಗಂಡ ಸಮಿತಿ ಆಕೆಯನ್ನು ಬಾಲಮಂದಿರಕ್ಕೆ ಕಳುಹಿಸಿತ್ತು.<br /> <br /> `ನನ್ನ ಮಗಳಿಗೆ ಜೀವನದ ಕಷ್ಟಕಾರ್ಪಣ್ಯಗಳ ಬಗ್ಗೆ ಅರಿವು ಮೂಡಿಸಿ, ವಿದ್ಯೆಯ ಮಹತ್ವದ ಬಗ್ಗೆ ಜ್ಞಾನೋದಯವಾಗುವಂತೆ ಮಾಡುವ `ಘನ~ಉದ್ದೇಶದಿಂದ ಆಕೆಯನ್ನು ಭಿಕ್ಷೆ ಬೇಡಲು ನಿಲ್ಲಿಸಿದೆ~ ಎಂಬುದು ಈ ತಂದೆಯ ವಾದ.<br /> <br /> ಬಾಲ ನ್ಯಾಯ ಕಾಯಿದೆಯ ಉಲ್ಲಂಘನೆಯನ್ನು ಮಾಡಿದನೆಂಬ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆತ ಜಾಮೀನನ ಮೇಲೆ ಹೊರ ಬಂದಿದ್ದೇ ಅಲ್ಲದೆ ಮಗಳ ಮೇಲಿದ್ದ `ಪ್ರೀತಿ~ ಮತ್ತು ಆಕೆಯ ಭವಿಷ್ಯವನ್ನು ಕುರಿತ `ಕಾಳಜಿ~ಗಳ ಹೆಸರಿನಲ್ಲಿ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ!<br /> <br /> ಮಗಳ ಪರೀಕ್ಷೆಗಳು ಇನ್ನೂ ನಡೆಯುತ್ತಿರುವಾಗಲೇ ಆ ಎಳೆಯ ಜೀವವನ್ನು ಬೀದಿಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಿದ ಈ ತಂದೆಗೆ ತನ್ನ ಅತಿರೇಕದ ನಿರ್ಧಾರದ ಬಗ್ಗೆ ಪಶ್ಚಾತ್ತಾಪವಿದ್ದಂತೆ ಕಾಣುತ್ತಿಲ್ಲ. <br /> <br /> ನಿರಂತರವಾಗಿ ಪ್ರೀತಿಯ ಪಾಠ ಪಠಿಸಿ, ಇನ್ನು ಮುಂದೆ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಆಶ್ವಾಸನೆಯನ್ನಿತ್ತುಸುಮಾರು ಹತ್ತು ದಿನಗಳ ಕಾಲ ಬಾಲಮಂದಿರದಲ್ಲಿದ್ದ ಮಗಳನ್ನು ಮನೆಗೆ ಕರೆತರುವಲ್ಲಿ ಈ ತಂದೆ ಯಶಸ್ವಿಯಾಗಿದ್ದಾರೆ. <br /> <br /> ಮಕ್ಕಳ ಪಾಲನಾ ಸಮಿತಿಯ ಸದಸ್ಯರೇನೋ `ತಂದೆ ಮತ್ತು ಮಗಳಿಬ್ಬರಿಗೂ ಸೂಕ್ತ ಸಲಹೆಗಳನ್ನು ನೀಡಿದ್ದೇವೆ, ಪ್ರತಿ ಎರಡು ತಿಂಗಳಿಗೊಮ್ಮೆ ಈ ಬಾಲೆಯ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತೇವೆ~ ಎಂಬ ಹೇಳಿಕೆಯನ್ನಿತ್ತಿದ್ದಾರೆ. ಇಡೀ ಘಟನೆ ಸುಖಾಂತ್ಯ ಕಂಡಿತೇನೋ ಎಂಬಂತೆ ಬಿಂಬಿಸಲಾಗುತ್ತಿದೆ.<br /> <br /> ಭಿಕ್ಷಾಟನೆಯ ಪ್ರಕರಣ ನಡೆದ ಸಂದರ್ಭದಲ್ಲೇ ಮೈಸೂರು ನಗರ ಮತ್ತೊಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಯಿತು. ತನ್ನ ತಾಯಿ ಹಾಗೂ ಆಕೆಯ ಸಂಗಾತಿಯಿಂದ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ದಿನನಿತ್ಯವೂ ಒಳಗಾಗುತ್ತಿದ್ದ ಒಂಬತ್ತು ವರ್ಷದ ಬಾಲಕನೊಬ್ಬ ಈಗ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿದ್ದಾನೆ.<br /> <br /> ಹೆತ್ತ ತಾಯಿಯಿಂದಲೇ ಅಸಹನೀಯ ಕ್ರೌರ್ಯಕ್ಕೆ ಒಳಗಾದ ಈ ಬಾಲಕ ಗೃಹಕೃತ್ಯಗಳ ಭಾರವನ್ನೆಲ್ಲಾ ಹೊರುವುದರ ಜೊತೆ ಜೊತೆಗೆ ಆಕೆಯ ಗೆಳೆಯನ ಬೆದರಿಕೆ ಹಾಗೂ ಹೊಡೆತಗಳಿಗೂ ಬಲಿಯಾಗುತ್ತಿದ್ದ. <br /> <br /> ಈ ಹಿಂಸೆಯಿಂದ ತಪ್ಪಿಸಿಕೊಳ್ಳಲು ಪೊಲೀಸ್ ಠಾಣೆಯ ಮೊರೆ ಹೊಕ್ಕ ಬಾಲಕನಿಗೆ ಈಗ ಬಾಲ ಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಈತ ತನ್ನ ಮನೆಗೆ ಮರಳಲು ನಿರಾಕರಿಸಿದ್ದಾನೆ. ಈ ಮಗುವನ್ನು ಹಿಂಸಿಸಿದ್ದಕ್ಕೆ ಶಿಕ್ಷೆಯ ರೂಪದಲ್ಲಿ ಬಾಲ ಮಂದಿರದಲ್ಲಿ ಶ್ರಮದಾನ ಮಾಡಲು ಆ ಮಗುವಿನ ತಾಯಿಯ ಗೆಳೆಯನಿಗೆ ನಿರ್ದೇಶಿಸಲಾಗಿದೆ.<br /> <br /> ಮೈಸೂರಿನಲ್ಲಿ ನಡೆದ ಈ ಎರಡು ಘಟನೆಗಳೂ ದಿನಗಳು ಉರುಳಿದ ಹಾಗೆ ಸಾರ್ವಜನಿಕರ ಹಾಗೂ ಆಡಳಿತ ವ್ಯವಸ್ಥೆಯ ಮನಃಪಟಲದಿಂದ ದೂರ ಸರಿಯುತ್ತವೆ. <br /> <br /> ಆದರೆ ದೇಶದಾದ್ಯಂತ ನಿರಂತರವಾಗಿ ಮನೆಯ ಒಳಗೆ, ಸಂಬಂಧಿಕರಿಂದ, ವಿಶೇಷವಾಗಿ ತಂದೆ-ತಾಯಿಗಳಿಂದ ಮಕ್ಕಳ ಮೇಲೆ ನಡೆಯುತ್ತಿರುವ ನಾನಾ ಬಗೆಯ ದೌರ್ಜನ್ಯಗಳ ಬಗ್ಗೆ ಪ್ರಜ್ಞಾವಂತ ಸಮಾಜ ಕಣ್ಣು ಮುಚ್ಚಿ ಕುಳಿತು ಕೊಳ್ಳುವ ಹಾಗಿಲ್ಲ. <br /> <br /> ಮನೆಯನ್ನು ದೇಗುಲಕ್ಕೂ ಮಾತಾ ಪಿತೃಗಳನ್ನು ದೇವ ದೇವತೆಗಳಿಗೂ ಹೋಲಿಸುವ ಹಾಗೂ ಕೌಟುಂಬಿಕ ಸಂಬಂಧಗಳನ್ನು ವೈಭವೀಕರಿಸುವ ಭಾರತೀಯ ಸಂಸ್ಕೃತಿಯ ಒಂದು ಪ್ರವೃತ್ತಿಯನ್ನು ಗಂಭೀರವಾದ ಚಿಂತನೆ-ಪ್ರಶ್ನೆಗಳಿಗೆ ಒಳಪಡಿಸುವ ಅಗತ್ಯವನ್ನು ಈಗಲಾದರೂ ಮನಗಾಣಬೇಕಾಗಿದೆ.<br /> <br /> ತೀರಾ ಇತ್ತೀಚಿನವರೆಗೂ ಕುಟುಂಬದ ಒಳಗೆ, ಅದರಲ್ಲೂ ಪೋಷಕರಿಂದ ಅಥವಾ ಇತರ ಬಂಧುಗಳಿಂದ ಮಕ್ಕಳ ಮೇಲೆ ದೈಹಿಕ ಅಥವಾ ಲೈಂಗಿಕ ಅತ್ಯಾಚಾರ ನಡೆಯಬಹುದು ಎಂಬುದನ್ನು ಒಪ್ಪಿಕೊಳ್ಳಲು ಕೂಡ ನಾವು ಸಿದ್ಧರಿರಲಿಲ್ಲ. <br /> <br /> ಆದರೆ ಸ್ವಲ್ಪ ದಿನಗಳ ಹಿಂದೆ ಕೌಟುಂಬಿಕ ವಲಯದಲ್ಲಿ ಮಕ್ಕಳು ಅನುಭವಿಸುವ ಕ್ರೌರ್ಯದ ಸ್ವರೂಪವನ್ನು ಕುರಿತಂತೆ ಕೈಗೊಂಡ ರಾಷ್ಟ್ರೀಯ ಮಟ್ಟದ ಅಧ್ಯಯನವೊಂದು ಹಲವಾರು ಅಘಾತಕಾರಿ ಸಂಗತಿಗಳನ್ನು ಬಯಲಿಗೆಳೆಯಿತು.<br /> <br /> ನಮ್ಮ ದೇಶದಲ್ಲಿ ದೌರ್ಜನ್ಯ ಹಾಗೂ ಶೋಷಣೆಗೊಳಗಾಗುವ ಮಕ್ಕಳಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು 5-12ರ ವಯೋಗುಂಪಿಗೆ ಸೇರಿದವರು. ಇವರಲ್ಲಿ ಶೇಕಡ 60 ರಷ್ಟು ಮಕ್ಕಳು ಅನುಭವಿಸುವ ಹಿಂಸೆ ಕುಟುಂಬದ ಪರಿಧಿಯ ಒಳಗೇ ನಡೆಯುವಂತಹುದು.<br /> <br /> ಈ ಅಧ್ಯಯನ ಹೊರ ಹಾಕಿದ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ಕುಟುಂಬದ ಒಳಗೆ ಮಕ್ಕಳು ಎದುರಿಸುವ ದೌರ್ಜನ್ಯದ ಪ್ರಕರಣಗಳಲ್ಲಿ ಶೇಕಡ 90ರಷ್ಟಕ್ಕೆ ಕಾರಣರಾಗುವವರು ಆ ಮಕ್ಕಳ ತಂದೆ-ತಾಯಿಗಳು ಎಂಬುದು.<br /> <br /> ಭಾರತೀಯ ಸಂಪ್ರದಾಯದಲ್ಲಿ ಮಕ್ಕಳ ಮೇಲೆ ಮಾತಾ-ಪಿತೃಗಳಿಗೆ ಅಪರಿಮಿತ ಅಧಿಕಾರವಿದೆ. ಆ ಕಾರಣದಿಂದಲೇ ತಮ್ಮ ಮಕ್ಕಳ ಬದುಕನ್ನು ನಿಯಂತ್ರಿಸುವ ಹಾಗೂ ನಿರ್ದೇಶಿಸುವ ಏಕೈಕ ಹಕ್ಕು ತಮಗಿದೆ ಎಂದು ಬಹುತೇಕ ಪೋಷಕರು ಭಾವಿಸಿರುತ್ತಾರೆ. <br /> ಅಪ್ರಾಪ್ತ ವಯಸ್ಸಿನ ಮಕ್ಕಳ ವಿಷಯದಲ್ಲಂತೂ ಈ ಹಕ್ಕು ಪ್ರಶ್ನಾತೀತವಾಗುತ್ತದೆ. ಸಣ್ಣ ವಯಸ್ಸಿನ ಮಕ್ಕಳು ತಮ್ಮ ಜೀವನಾವಶ್ಯಕತೆಗಳ ಪೂರೈಕೆಗಾಗಿ ಸಂಪೂರ್ಣವಾಗಿ ತಂದೆ-ತಾಯಿಗಳನ್ನೇ ಅವಲಂಬಿಸಬೇಕಾಗಿರುವುದರಿಂದ ಅವರಲ್ಲಿ ದೌರ್ಜನ್ಯವನ್ನು ಪ್ರತಿಭಟಿಸುವಂಥ ಶಕ್ತಿಯೇ ಇರುವುದಿಲ್ಲ.<br /> <br /> ಹಾಗೆಂದ ಮಾತ್ರಕ್ಕೆ ಎಲ್ಲ ಪೋಷಕರೂ ತಮ್ಮ ಮಕ್ಕಳ ಮೇಲೆ ದೌರ್ಜನ್ಯ ಮಾಡುತ್ತಾರೆ ಎಂದು ಅರ್ಥೈಸಬಾರದು. ಅಧಿಕಾರ ಮತ್ತು ವಾತ್ಸಲ್ಯಗಳ ನಡುವೆ ಸಮತೋಲನವನ್ನು ಕಾದಿರಿಸಿಕೊಂಡು ತಮ್ಮ ಮಕ್ಕಳನ್ನು ಸತ್ಪ್ರಜೆಗಳಾಗಿ ಬೆಳೆಸಿದ-ಬೆಳೆಸುತ್ತಿರುವ ಕೋಟ್ಯಂತರ ಪೋಷಕರು ನಮ್ಮಲ್ಲಿದ್ದಾರೆ. <br /> <br /> ಆದರೆ ಇಲ್ಲಿ ಮುಖ್ಯವಾದುದು ಅಂಕಿ-ಸಂಖ್ಯೆಗಳಲ್ಲ. ಮಕ್ಕಳ ಹಕ್ಕುಗಳ ಬಗ್ಗೆ ಪುಂಖಾನುಪುಂಖವಾಗಿ ಭಾಷಣಗಳು, ಬರಹಗಳು ಹೊರ ಹೊಮ್ಮತ್ತಿರುವ ಈ ದೇಶದಲ್ಲಿ ಅವರ ಪಾಲಿಗೆ ಅತಿ ಸುರಕ್ಷಿತ ವಲಯ ಎಂದು ಪರಿಗಣಿತವಾಗಿರುವ ಕುಟುಂಬದಲ್ಲೇ ಈ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುವುದು ಗಮನಿಸಬೇಕಾದ ವಿಷಯ.<br /> <br /> ಕುಟುಂಬದ ಒಳಗೆ ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಾಮಾನ್ಯವಾಗಿ ಮೂರು ಬಗೆಗಳಲ್ಲಿ ವಿಂಗಡಿಸಲಾಗುತ್ತದೆ. ಅವುಗಳೆಂದರೆ ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ. <br /> <br /> ಮಕ್ಕಳಿಗೆ ಹೊಡೆಯುವುದು, ತಮ್ಮ ಸ್ವಾರ್ಥ ಸಾಧನೆಗಾಗಿ ಅಥವಾ ಜೀವನ ನಿರ್ವಹಣೆಗಾಗಿ ಅವರನ್ನು ಕಷ್ಟಕರವಾದ ದುಡಿಮೆಯಲ್ಲಿ ತೊಡಗಿಸುವುದು. ತಮ್ಮ ಅಥವಾ ಇತರರ ಮನೆಗಳಲ್ಲಿ ಗೃಹ ಕೃತ್ಯಗಳನ್ನು ನಿಭಾಯಿಸುವಂತೆ ಒತ್ತಡ ಹೇರುವುದು-ಇವೇ ಮುಂತಾದವು ದೈಹಿಕ ದೌರ್ಜನ್ಯಕ್ಕೆ ಉದಾಹರಣೆಗಳು.<br /> <br /> ಮಕ್ಕಳನ್ನು ದೈಹಿಕವಾಗಿ ಹಿಂಸಿಸದಿದ್ದರೂ ಪೋಷಕರು ಅವರನ್ನು ಅಲಕ್ಷ್ಯ ಮಾಡುವುದು, ಪದೇ ಪದೇ ಅವಮಾನ ಮಾಡುವುದು ಅಥವಾ ತಮ್ಮ ಬದುಕಿನಲ್ಲಿ ಅವರ ಅಗತ್ಯವಿಲ್ಲವೆಂಬಂತೆ ವರ್ತಿಸುವುದು ಅನೇಕ ಕುಟುಂಬಗಳಲ್ಲಿ ಕಂಡು ಬರುವಂಥ ಪರಿಸ್ಥಿತಿ.<br /> <br /> ವೈವಾಹಿಕ ವಿಘಟನೆ, ವಿವಾಹ ವಿಚ್ಛೇದನ, ತಂದೆ ಅಥವಾ ತಾಯಿ ಬೇರೊಬ್ಬ ಸಂಗಾತಿಯನ್ನು ಮನೆಗೆ ಕರೆತಂದಿರುವುದು-ಇಂಥ ಸಂದರ್ಭಗಳಲ್ಲಿ ಮಕ್ಕಳು ಭಾವನಾತ್ಮಕ ಆಘಾತಗಳಿಗೆ ಬಳಗಾಗುತ್ತಾರೆ. <br /> <br /> ವಿಚ್ಛೇದನ ಪಡೆದ ದಂಪತಿಗಳು ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿರಾಕರಿಸುವಂಥ ಪರಿಸ್ಥಿತಿ ಸೃಷ್ಟಿಯಾಗುವ ಸಂದರ್ಭಗಳಲ್ಲಂತೂ ಆ ಮಕ್ಕಳು ಅನುಭವಿಸುವ ಭಾವನಾತ್ಮಕ ಹಿಂಸೆ ಅಪಾರ. ಮಕ್ಕಳು ಅನುಭವಿಸುವ ಅನೇಕ ಶಿಕ್ಷೆಗಳು ದೈಹಿಕ ಹಾಗೂ ಭಾವನಾತ್ಮಕ ದೌರ್ಜನ್ಯಗಳ ಸಮ್ಮಿಶ್ರಣ ಎಂದೇನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ.<br /> <br /> ಕುಟುಂಬದ ಒಳಗೆ ತಂದೆ, ಸಹೋದರ ಅಥವಾ ಈ ಸ್ಥಾನಗಳಿಗೆ ಸಮಾನವಾದ ಸ್ಥಾನದಲ್ಲಿರುವ ಬಂಧುಗಳಿಂದ ಲೈಂಗಿಕ ದೌರ್ಜನ್ಯ ನಡೆಯುತ್ತದೆಂಬ ವಿಷಯ ನಮ್ಮ ಊಹೆಗೂ ನಿಲುಕಲಾರದಂಥದ್ದು.<br /> <br /> ಆದರೆ ಇದು ಭಾರತೀಯ ಕೌಟುಂಬಿಕ ಜೀವನದ ಒಂದು ಕಟು ಸತ್ಯ. ಬಹು ಕಾಲದಿಂದ ಆಪ್ತ ಬಂಧುಗಳಿಂದ ಲೈಂಗಿಕ ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಹೆಣ್ಣು ಮಕ್ಕಳ ಬವಣೆ ಗೋಪ್ಯತೆಯ ಸೆರಗಿನಲ್ಲಿ ಮುಚ್ಚಿದಂತೆಯೇ ಇದ್ದದ್ದು, ಈಗೀಗ ಕೆಲ ಪ್ರಕರಣಗಳು ಹೊರಬರುತ್ತಿವೆ. <br /> <br /> ಆದರೆ ಮನೆತನದ ಮರ್ಯಾದೆಯನ್ನು ಕಾಪಾಡುವ ಪ್ರಧಾನ ಜವಾಬ್ದಾರಿಯೂ ಹೆಣ್ಣು ಮಕ್ಕಳದ್ದೇ ಆಗಿರುವುದರಿಂದ ಅವರಲ್ಲನೇಕರು ಮೌನ ಸಾಂಗತ್ಯ ಮಾಡಿಕೊಳ್ಳುತ್ತಾರೆ. <br /> <br /> ಮಕ್ಕಳನ್ನು ಕೌಟುಂಬಿಕ ಹಿಂಸೆಯೂ ಸೇರಿದಂತೆ ಸಮಾಜದ ವಿವಿಧ ಸಂಸ್ಥೆಗಳಲ್ಲಿ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರೀಯ ಕಾಯಿದೆಯೊಂದನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಆಗಿಂದಾಗ್ಗೆ ನಡೆಯುತ್ತಲೇ ಇದ್ದರೂ ಇದುವರೆಗೂ ಆ ನಿಟ್ಟಿನಲ್ಲಿ ಸಂಬಂಧಪಟ್ಟ ವ್ಯವಸ್ಥೆ ಕಾರ್ಯ ಪ್ರವೃತ್ತವಾಗಿಲ್ಲ. <br /> <br /> ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದಂಥ ಸ್ಥಿತಿಯಲ್ಲೇ ಅನೇಕ ಮಕ್ಕಳಿರುವುದರಿಂದ ಅವರ ದೇಹ-ಮನಸ್ಸುಗಳು ಅವ್ಯಾಹತವಾಗಿ ದಾಳಿಗೆ ಒಳಗಾಗುತ್ತಲೇ ಇರುತ್ತವೆ. ಪ್ರತಿಭಟಿಸಬೇಕೆಂದಿರುವ ಮಕ್ಕಳಿಗೂ ಬೆಂಬಲಕ್ಕೆ ನಿಲ್ಲುವಂಥ ವ್ಯವಸ್ಥೆಯಾದರೂ ನಮ್ಮಲ್ಲಿ ಎಲ್ಲಿದೆ?<br /> <br /> ಮಗಳನ್ನು ಭಿಕ್ಷೆಗೆ ಹಚ್ಚುವ ಅಥವಾ ಮಗನನ್ನು ಚಿತ್ರ ಹಿಂಸೆಗೆ ಗುರಿಪಡಿಸಿ ಮನೆಯಿಂದ ಓಡಿಸುವ ದೌರ್ಜನ್ಯ ಯಾವುದಾದರೂ ಪಾಶ್ಚಿಮಾತ್ಯ ದೇಶದಲ್ಲಿ ಸಂಭವಿಸಿದ್ದರೆ ಏನಾಗುತಿತ್ತು ಎಂಬ ಪ್ರಶ್ನೆಯನ್ನೆತ್ತಿದಾಗ ನಮಗೆ ಥಟ್ಟನೆ ನೆನಪಿಗೆ ಬರುವುದು ನಾರ್ವೆ. <br /> <br /> ಇತ್ತೀಚೆಗಷ್ಟೇ ಭಾರತೀಯರ ದೃಷ್ಟಿಯಲ್ಲಿ ತೀರಾ ಸಾಧಾರಣ ಎನಿಸುವಂಥ ರೀತಿಯಲ್ಲಿ ಮಕ್ಕಳೊಡನೆ ತಂದೆ-ತಾಯಿಗಳು ನಡೆದುಕೊಂಡರು ಎನ್ನುವ ಕಾರಣಕ್ಕಾಗಿ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿರುವ ನಾರ್ವೆಯ ಸಾಮಾಜಿಕ ಕಾರ್ಯಕರ್ತರು ಇದುವರೆಗೂ ಆ ಮಕ್ಕಳನ್ನು ಪೋಷಕರಿಗೆ ಹಿಂದಿರುಗಿಸಿಲ್ಲ. <br /> <br /> ಆ ಮಕ್ಕಳಿಗೆ ಪ್ರತ್ಯೇಕವಾದ ಮಲಗುವ ಕೊಠಡಿಯಿರಲಿಲ್ಲ ಹಾಗೂ ಪೋಷಕರು ಅವರಿಗೆ ಊಟ ಮಾಡಿಸುತ್ತಿದ್ದುದನ್ನೇ ದೊಡ್ಡ ಅಪರಾಧವೆಂಬಂತೆ ಪರಿಗಣಿಸಿದ ಆ ದೇಶದಲ್ಲಿ ನಮ್ಮ ನಡುವೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯದ ಕೃತ್ಯಗಳು ಯಾವ ಬಗೆಯ ಪ್ರತಿಕ್ರಿಯೆಯನ್ನು ತರುತ್ತಿತ್ತೋ ಎಂದು ಊಹಿಸಬಹುದಲ್ಲ. <br /> <br /> ಪೋಷಕರು ಮಕ್ಕಳಿಗೆ ಬುದ್ಧಿವಾದ ಹೇಳಬಾರದು ಅಥವಾ ಅವರು ತಪ್ಪುಗಳನ್ನು ಮಾಡಿದಾಗ ತಿದ್ದಬಾರದು ಎಂದಾಗಲಿ ಇದರ ಅರ್ಥವಲ್ಲ. ಆದರೆ ಬಾಲ್ಯಾವಸ್ಥೆಯ ಅಗತ್ಯಗಳು-ಆಶಯಗಳನ್ನು ಚಿವುಟಿ ತಾವು ಮಾಡಿದ್ದೇ ಸರಿ ಎಂಬ ಕೆಟ್ಟ ಹಟದಿಂದ ಅವರು ನಡೆದುಕೊಂಡರೆ ಆರಕ್ಷಕ ಹಾಗೂ ಆಡಳಿತ ವ್ಯವಸ್ಥೆ ಮತ್ತು ಸೂಕ್ಷ್ಮ ಮನಸ್ಸುಳ್ಳ ನಾಗರಿಕರು ಅದನ್ನು ಸಹಿಸಬಾರದು. <br /> <br /> ತಾಯಿಯ ಗರ್ಭದಿಂದ ಹಿಡಿದು ಎಲ್ಲಿಯೂ ಮಕ್ಕಳಿಗೆ ಸುರಕ್ಷಿತವಾದ ತಾಣವಿಲ್ಲವೆಂದರೆ ಅವರು ಹೋಗುವುದಾದರೂ ಎಲ್ಲಿಗೆ? ಮೈಸೂರಿನಲ್ಲಿ ನಡೆದ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳುವುದರಲ್ಲಿ ನಮ್ಮೆಲ್ಲರ ಪಾತ್ರವೂ ಇದೆ.<br /> <br /> (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>