<p>‘ಆ ಮ್ ಆದ್ಮಿ ಪಕ್ಷ’ದ ಮುಖಂಡರು ಮತ್ತವರ ಬೆಂಬಲಿಗರು ಕಳೆದ ತಿಂಗಳು ರಾಜಧಾನಿಯ ಮಾಳವೀಯ ನಗರದಲ್ಲಿ ಉಗಾಂಡದ ಯುವತಿಯರ ಮೇಲೆ ದೌರ್ಜನ್ಯ ಎಸಗಿದರು. ಈ ಕಹಿ ಘಟನೆ ಮರೆಯುವ ಮುನ್ನವೇ ಲಾಜಪತ್ ನಗರದಲ್ಲಿ ಅರುಣಾಚಲ ಪ್ರದೇಶದ ಯುವಕನನ್ನು ಕೊಲೆ ಮಾಡಲಾಗಿದೆ. ನಿಡೊ ಎಂಬಾತನ ಜೀವಕ್ಕೆ ಸಂಚು ತಂದಿದ್ದು ಆತನ ಕೂದಲಿನ ಬಣ್ಣ. ನಮ್ಮವರನ್ನೇ ಬಣ್ಣ ಮತ್ತು ಸೌಂದರ್ಯದ ಹೆಸರಿನಲ್ಲಿ ಅವಮಾನಿಸುವ ಬಹಳಷ್ಟು ಪ್ರಸಂಗಗಳು ನಡೆಯುತ್ತಿವೆ.<br /> <br /> ಗಾಂಧಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಹುಟ್ಟಿದ ನೆಲದಲ್ಲಿ ಜಾತಿ, ಧರ್ಮ, ಬಣ್ಣದ ಹೆಸರಿನಲ್ಲಿ ರಕ್ತಪಾತಗಳಾಗುತ್ತಿವೆ. ಭಾಷೆ, ಗಡಿ– ದಿಕ್ಕುಗಳ ಹೆಸರಿನಲ್ಲೂ ಜೀವಗಳು ಉರುಳುತ್ತಿವೆ. ‘ಇವನ್ಯಾರವ, ಇವನ್ಯಾರವ, ಇವನ್ಯಾರವ ಎಂದೆಣಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಎಂದೆಣಿಸಯ್ಯಾ’ ಎಂದು ಬಸವಣ್ಣ ಬೋಧಿಸಿದರು. ಆದರೆ, ನಾವು ಇವನ್ಯಾರು, ಇವನ್ಯಾರು ಎಂದು ಪತ್ತೆ ಹಚ್ಚಿ ಹುಡುಕಿ ಹೊಡೆಯುತ್ತಿದ್ದೇವೆ. ಬಡಿಯುತ್ತಿದ್ದೇವೆ...<br /> <br /> ರವೀಂದ್ರನಾಥ ಟ್ಯಾಗೋರ್ ರಾಷ್ಟ್ರಗೀತೆಯಲ್ಲಿ ‘ವಿಂಧ್ಯಾ, ಹಿಮಾಚಲ, ಯಮುನಾ, ಗಂಗಾ’ ಅಂದರು. ಅವರು ಮಾತನಾಡಿದ್ದು ನಿರ್ಜೀವ ಮಣ್ಣಿನ ಬಗೆಗಲ್ಲ. ಸರ್ವ ಜನಾಂಗ ಕುರಿತು. ಅಷ್ಟೇ ಏಕೆ, ರಾಷ್ಟ್ರಕವಿ ಕುವೆಂಪು ತಮ್ಮ ಕಾವ್ಯದಲ್ಲಿ ‘ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಜೈನರುದ್ಯಾನ’ ಎಂದು ಭಾರತವನ್ನು ಕೊಂಡಾಡಿದರು. ಇಂಥ ಅನನ್ಯ ಸಂಸ್ಕೃತಿ, ಪರಂಪರೆ– ಇತಿಹಾಸ ಹೊಂದಿರುವ ನಾಡಿನಲ್ಲಿ ಏನೆಲ್ಲ ಅನಾಹುತಗಳು ನಡೆಯುತ್ತಿವೆ.<br /> <br /> ಉಗಾಂಡದ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಎಲ್ಲೋ ಒಂದು ಅಪರೂಪದ ಘಟನೆ ಎಂದು ತಳ್ಳಿ ಹಾಕುವವರಿದ್ದಾರೆ. ನಿಜಕ್ಕೂ ಅದು ಅಕ್ಷಮ್ಯ. ಆಫ್ರಿಕಾ ಜನರನ್ನು ನಡೆಸಿಕೊಂಡ ಆ ಬಗೆ ಅಮಾನವೀಯವಾದದ್ದು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತವರ ಕಾನೂನು ಸಚಿವರು ಅದಕ್ಕಾಗಿ ಕ್ಷಮೆ ಕೇಳಬೇಕಿತ್ತು. ಹಾಗೆ ಮಾಡದೆ ತಾವು ಮಾಡಿದ್ದೇ ಸರಿ ಎಂದು ಇನ್ನೂ ಪ್ರತಿಪಾದಿಸುತ್ತಿದ್ದಾರೆ. ದೆಹಲಿಯ ಜನ ಬೇರೆಯವರನ್ನು ಹಿಂಸಿಸುವ ಮೂಲಕ ನಾಯಕರನ್ನು ಹಿಂಬಾಲಿಸುತ್ತಿದ್ದಾರೆ.<br /> <br /> ಆಫ್ರಿಕನ್ನರನ್ನು ಬಿಡಿ, ದೆಹಲಿಯವರು ದಕ್ಷಿಣ ಭಾರತದವರನ್ನು ‘ಮದ್ರಾಸಿಗಳು’ ಎಂದು ಕರೆಯುತ್ತಾರೆ. ಹೀಗೆ ಕರೆಯುವುದರ ಹಿಂದೆ ಅವಮಾನಗಳು ಅಡಗಿವೆ. ದಕ್ಷಿಣದ ಜನರ ಮೈ ಬಣ್ಣವೂ ಕಪ್ಪೆಂಬ ದನಿಯೂ ಅವರ ಮಾತಿನ ಹಿಂದಿದೆ. ದಕ್ಷಿಣ ಭಾರತ ಕರ್ನಾಟಕ, ಕೇರಳ, ಆಂಧ್ರಗಳನ್ನೂ ಒಳಗೊಂಡಿದೆ. ಪ್ರತಿಯೊಂದು ರಾಜ್ಯದವರಿಗೂ ಒಂದೊಂದು ಭಾಷೆ, ಅಸ್ತಿತ್ವವಿದೆ ಎಂಬ ಸಾಮಾನ್ಯ ತಿಳಿವಳಿಕೆ ಇವರಿಗಿದ್ದಂತಿಲ್ಲ. ಇದು ಉತ್ಪ್ರೇಕ್ಷೆಯ ಮಾತಲ್ಲ. ರಾಜಧಾನಿಯಲ್ಲಿರುವ ದಕ್ಷಿಣದ ಜನರಿಗೆ ಇಂಥ ಬೇಕಾದಷ್ಟು ಅನುಭವಗಳಾಗಿವೆ.<br /> <br /> ಈ ಮನೋಭಾವಕ್ಕೂ ಅರುಣಾಚಲ ಯುವಕನ ಕೊಲೆಗೂ ಸೂಕ್ಷ್ಮವಾದ ಸಂಬಂಧವಿದೆ. ದೆಹಲಿಯಲ್ಲಿ ನಿಡೊ ಕೊಂದಂತೆ ಅಸ್ಸಾಂ, ನಾಗಲ್ಯಾಂಡ್ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಮಾತಾಡುವ ಜನರನ್ನು ಹುಡುಕಿಕೊಂಡು ಹೋಗಿ ಹತ್ಯೆ ಮಾಡಲಾಗುತ್ತಿದೆ. ಇದುವರೆಗೆ ಲೆಕ್ಕವಿಲ್ಲದಷ್ಟು ಹಿಂದಿ ಭಾಷಿಗರು ಈಶಾನ್ಯದ ರಕ್ತದಾಹಿ ಹಂತಕರ ಗುಂಡಿಗೆ ಬಲಿಯಾಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವುದು ಸಂಘಟಿತವಾದ ದಾಳಿ. ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ.<br /> <br /> ಜಾತಿ, ಧರ್ಮ ಮತ್ತು ಜನಾಂಗ ದ್ವೇಷ ಯಾವುದೋ ಒಂದು ರಾಜ್ಯ ಅಥವಾ ಭಾಗಕ್ಕೆ ಸೀಮಿತವಾಗಿದೆ ಎಂದು ನಿರ್ಲಕ್ಷಿಸುವಂತಿಲ್ಲ. ಎಲ್ಲ ಕಾಲಕ್ಕೂ ಎಲ್ಲ ಭಾಗ, ರಾಜ್ಯಗಳಲ್ಲೂ ಇದು ಆಚರಣೆಯಲ್ಲಿದೆ. ಮಹಾರಾಷ್ಟ್ರದಿಂದ ಬಿಹಾರಿಗಳನ್ನು ಓಡಿಸಲಾಗಿದೆ. ಹೋದ ವರ್ಷ ಈಶಾನ್ಯ ರಾಜ್ಯಗಳ ಜನರು ಭಯಬಿದ್ದು ಬೆಂಗಳೂರು ಬಿಡಲಿಲ್ಲವೆ? ಅನಂತರ ಅವರನ್ನು ವಾಪಸ್ ಕರೆತರಲು ಸರ್ಕಾರ ಕಸರತ್ತು ನಡೆಸಲಿಲ್ಲವೆ?<br /> <br /> ಪ್ರತಿಯೊಂದು ಘಟನೆ ನಡೆದಾಗ ಸಂಸತ್ತಿನೊಳಗೆ ದೊಡ್ಡ ದೊಡ್ಡ ಚರ್ಚೆಗಳಾಗುತ್ತವೆ. ಕೊನೆಗೆ ಈಶಾನ್ಯ ರಾಜ್ಯಗಳು ಭಾರತದ ಅವಿಭಾಜ್ಯ ಅಂಗವೆಂದು ಸಾರಿ ಸಾರಿ ಹೇಳಲಾಗುತ್ತದೆ. ಘಟನೆ ಖಂಡಿಸುವ ನಿರ್ಣಯ ಮಾಡಿ ಕೈತೊಳೆದುಕೊಳ್ಳಲಾಗುತ್ತದೆ. ಕಾಲಕ್ರಮೇಣದಲ್ಲಿ ಅದು ಮರೆತೇ ಹೋಗುತ್ತದೆ. ಅದು ಪುನಃ ನೆನಪಿಗೆ ಬರುವುದು ಮತ್ತೊಂದು ಘಟನೆ ನಡೆದಾಗ.<br /> <br /> ಸಮೀಕ್ಷೆಯೊಂದರ ಪ್ರಕಾರ ವರ್ಣಭೇದ ನೀತಿ ಅನುಸರಿಸುವ ವಿಶ್ವದ ಐದು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು. 80ದೇಶಗಳ ಜನರ ಸಾಮಾಜಿಕ ಧೋರಣೆ ಕುರಿತು ‘ವರ್ಲ್ಡ್ ವ್ಯಾಲ್ಯೂ’ ಸಂಸ್ಥೆ ನಡೆಸಿರುವ ಈ ಸಮೀಕ್ಷೆ ಪ್ರಕಾರ ಮತ್ತೊಂದು ಜನಾಂಗ ಕುರಿತು ಅತ್ಯಂತ ಅಸಹನೆ ತೋರಿದ ಪ್ರದೇಶ ಹಾಂಕಾಂಗ್. ಗೋವಾದ ಸಂಸ್ಕೃತಿ ಸಚಿವ ಇತ್ತೀಚೆಗೆ ನೈಜೀರಿಯಾ ಜನರನ್ನು ಅವಮಾನಿಸುವ ಮಾತುಗಳನ್ನು ಆಡಿದ್ದಾರೆ.<br /> <br /> ಈಶಾನ್ಯ ರಾಜ್ಯಗಳ ಬಹುಭಾಗ ಭಾರತದೊಂದಿಗೆ ಭೌತಿಕವಾಗಿ ಮಿಳಿತವಾಗಿದೆ ವಿನಾ ಸಾಂಸ್ಕೃತಿಕವಾಗಿ ದೂರವೇ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಈಶಾನ್ಯದ ರಾಜ್ಯಗಳಲ್ಲಿ ನಡೆದಿರುವ ಜನಾಂಗೀಯ ಗಲಭೆಗಳು, ಸ್ವಾಯತ್ತತೆಗಾಗಿ ನಡೆದಿರುವ ಬಂಡಾಯಗಳು ನಿರಂತರ ಅಶಾಂತಿಯನ್ನು ಸೃಷ್ಟಿಸಿವೆ.<br /> <br /> ಉತ್ತಮ ಶಿಕ್ಷಣ ಮತ್ತು ಉದ್ಯೋಗ ಹುಡುಕಿಕೊಂಡು ದೆಹಲಿ, ಬೆಂಗಳೂರು ಮತ್ತಿತರ ನಗರಗಳಿಗೆ ಆ ಪ್ರದೇಶಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ರೀತಿ ಬರುವ ಎಲ್ಲರ ಮೇಲೆ ಹಲ್ಲೆ, ಅತ್ಯಾಚಾರಗಳು ನಡೆಯುವುದಿಲ್ಲ ಎನ್ನುವುದು ನಿಜ. ಆದರೆ ಅವರ ಕಣ್ಣುಗಳನ್ನು ‘ಚಿಂಕಿ ’ಎಂದೂ, ಅವರ ಚಹರೆಗೆ ನೇಪಾಳಿ ಗೂರ್ಖರನ್ನು ಕರೆಯುವಂತೆ ‘ಬಹಾದೂರ್’ ಎಂದು ಕೂಗಿ ಕರೆದು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ.<br /> <br /> ಉತ್ತರದ ಜನ, ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳವರನ್ನು ನಡೆಸಿಕೊಂಡಂತೆ; ಈಶಾನ್ಯದ ಜನ ಹಿಂದಿ ಭಾಷಿಕರನ್ನು ನಡೆಸಿಕೊಂಡಂತೆ; ಆಫ್ರಿಕಾದ ಬಿಳಿಯರು ಅಲ್ಲಿನ ಮೂಲ ನಿವಾಸಿಗಳನ್ನು ಅನಾಗರಿಕವಾಗಿ ನಡೆಸಿಕೊಳ್ಳುತ್ತಿರುವುದು, ರಾಜಕೀಯವಾಗಿ, ಧಾರ್ಮಿಕವಾಗಿ ಅವರನ್ನು ಶೋಷಿಸುತ್ತಿರುವುದು, ಕಪ್ಪು ಜನರ ಮಕ್ಕಳಿಗೆ ಶಿಕ್ಷಣ– ಸಂಸ್ಕೃತಿ ಕಲಿಸುವ ಹೆಸರಿನಲ್ಲಿ ಅವರದಲ್ಲದ ಕಥೆಗಳನ್ನು, ಇತಿಹಾಸ– ಸಂಸ್ಕೃತಿಯನ್ನು ಹೇಳಿಕೊಡುತ್ತಿರುವುದು ನಡೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ.<br /> <br /> ಬುಡಕಟ್ಟು ಪರಂಪರೆ, ಆಚರಣೆಗಳನ್ನು ಅಣಕಿಸುವಂತೆ ಯುವ ಪೀಳಿಗೆಯನ್ನು ಬೆಳೆಸುತ್ತಿರುವ ಬಗೆಗೆ ಚಿನುವಾ ಅಚಿಬೆ ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕಪ್ಪು ಜನರ ಆಶಾಕಿರಣ ನೆಲ್ಸನ್ ಮಂಡೇಲಾ ರಾಜಕೀಯ ಹಕ್ಕುಗಳಿಗಾಗಿ ದನಿ ಎತ್ತಿದ ಕಾರಣಕ್ಕಾಗಿಯೇ ಜೈಲು ಸೇರಿದ್ದು. ಬಹುಶಃ ಮಂಡೇಲಾ, ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಅವರಂಥ ಹೋರಾಟಗಾರರು ಹುಟ್ಟದಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಎನ್ನುವುದು ಊಹೆಗೂ ನಿಲುಕದ್ದು.<br /> <br /> ಜಾತಿಯ ಕಾರಣಕ್ಕೆ ಅಸ್ಪೃಶ್ಯರನ್ನು, ಧರ್ಮದ ಕಾರಣಕ್ಕೆ ಅಲ್ಪಸಂಖ್ಯಾತ ಮುಸ್ಲಿಮರನ್ನು, ಚಹರೆ ಮತ್ತು ಬಣ್ಣದ ಕಾರಣಕ್ಕೆ ಈಶಾನ್ಯ ಮತ್ತು ಆಫ್ರಿಕಾ ಜನರನ್ನು ನಡೆಸಿಕೊಳ್ಳುವ ಮನಸ್ಥಿತಿಗಳೆಲ್ಲವೂ ಒಂದೇ. ದಲಿತರು, ಮುಸ್ಲಿಮರಿಗೆ ಬಾಡಿಗೆ ಮನೆ ಸಿಗುವುದು ಎಷ್ಟು ಕಷ್ಟವೋ, ಈಶಾನ್ಯದವರಿಗೂ ಅಷ್ಟೇ ಕಷ್ಟ. ಹೀಗಾಗಿ ಅವರೆಲ್ಲರೂ ಒಂದೇ ಕಡೆಗಳಲ್ಲಿ ಗುಂಪು, ಗುಂಪಾಗಿ ನೆಲೆಸುವುದು. ದೆಹಲಿಯಲ್ಲಿ ಒಂದೊಂದು ಬಡಾವಣೆಯೂ ಒಂದೊಂದು ಸಮುದಾಯ ಇಲ್ಲವೆ ಜನಾಂಗಕ್ಕೆ ಸೀಮಿತವಾಗಿದೆ.<br /> <br /> ಈಚೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಜನರ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಡಿಜಿಟಲ್ ಉದ್ಯಮದ ಕೆಲಸಗಳನ್ನು ಹೊರಗುತ್ತಿಗೆಗೆ ಕೊಡಬೇಕೆಂದು ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನ ಮತ್ತು ಇಂಗ್ಲಿಷ್ ಭಾಷೆ ಬಲ್ಲ ಈಶಾನ್ಯದ ಜನರಿಗೆ ಮನೆ ಮುಂದೆ ಉದ್ಯೋಗ ಸಿಗುತ್ತದೆಂಬ ಭಾವನೆಯೂ ಇದರ ಹಿಂದೆ ಇದ್ದಿರಬಹುದು. ವಿಭಿನ್ನ ಭಾಷೆ, ಸಂಸ್ಕೃತಿ, ಜಾತಿ, ಧರ್ಮ ಮತ್ತು ಬಣ್ಣಗಳ ಜನರಿರುವ ಭಾರತದಂಥ ದೇಶದಲ್ಲಿ ಇಂಥ ನಿಲುವುಗಳನ್ನು ಒಪ್ಪಲಾಗದು. ಏಕೆಂದರೆ ಇದರ ಅನನ್ಯತೆ ಇರುವುದೇ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ.<br /> <br /> ಜಾತಿ– ಬಣ್ಣ ಮತ್ತು ಧರ್ಮದ ಕಾರಣಕ್ಕೆ ಅವಮಾನಕ್ಕೆ ಒಳಗಾಗುವ ಪ್ರಕರಣಗಳು ಶತಮಾನಗಳಿಂದಲೂ ನಡೆದು ಬಂದಿದೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿ ಜನಾಂಗ ನಿಂದನೆಗೆ ಒಳಗಾದ ತಕ್ಷಣ ಬೊಬ್ಬೆ ಹಾಕುವ ಭಾರತೀಯರು, ನಾವು ಬೇರೆಯವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎನ್ನುವ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.<br /> <br /> ಬೇರೆಯವರನ್ನು ಸಹಿಸದೆ ಅವಮಾನಿಸುತ್ತಿರುವಾಗ, ಬೇರೆಯವರು ನಮ್ಮನ್ನು ಹೀಯಾಳಿಸಿದರು– ಛೇಡಿಸಿದರು ಎಂದು ಆರೋಪಿಸುವ ನೈತಿಕ ಶಕ್ತಿ ಇರುವುದಿಲ್ಲ.<br /> <br /> ಜನಾಂಗ ದ್ವೇಷ ಮತ್ತು ನಿಂದನೆ ಒಂದು ಮಾನಸಿಕ ಸ್ಥಿತಿ. ಇದರ ನಿವಾರಣೆ ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ. ಜನರ ಮಾನಸಿಕ ಸ್ಥಿತಿಗತಿ ಬದಲಾಗಬೇಕು. ಸೂಕ್ತ ಶಿಕ್ಷಣ– ತಿಳಿವಳಿಕೆ, ಜಾಗೃತಿಯೂ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತಿಸಬೇಕು. ಸಂಸತ್ತಿನೊಳಗೆ ಕೂರುವ ಜನ ಪ್ರತಿನಿಧಿಗಳು ಇಂಥ ಗಂಭೀರ ವಿಷಯಗಳ ಬಗೆಗೆ ಸೂಕ್ಷ್ಮ ಮತಿಗಳಾಗಿರಬೇಕಾದ್ದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಇಂಥ ಮನಸ್ಥಿತಿ ಇನ್ನು ನೂರಾರು ವರ್ಷಗಳು ಮುಂದುವರಿಯಬಹುದು.<br /> <br /> ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಆ ಮ್ ಆದ್ಮಿ ಪಕ್ಷ’ದ ಮುಖಂಡರು ಮತ್ತವರ ಬೆಂಬಲಿಗರು ಕಳೆದ ತಿಂಗಳು ರಾಜಧಾನಿಯ ಮಾಳವೀಯ ನಗರದಲ್ಲಿ ಉಗಾಂಡದ ಯುವತಿಯರ ಮೇಲೆ ದೌರ್ಜನ್ಯ ಎಸಗಿದರು. ಈ ಕಹಿ ಘಟನೆ ಮರೆಯುವ ಮುನ್ನವೇ ಲಾಜಪತ್ ನಗರದಲ್ಲಿ ಅರುಣಾಚಲ ಪ್ರದೇಶದ ಯುವಕನನ್ನು ಕೊಲೆ ಮಾಡಲಾಗಿದೆ. ನಿಡೊ ಎಂಬಾತನ ಜೀವಕ್ಕೆ ಸಂಚು ತಂದಿದ್ದು ಆತನ ಕೂದಲಿನ ಬಣ್ಣ. ನಮ್ಮವರನ್ನೇ ಬಣ್ಣ ಮತ್ತು ಸೌಂದರ್ಯದ ಹೆಸರಿನಲ್ಲಿ ಅವಮಾನಿಸುವ ಬಹಳಷ್ಟು ಪ್ರಸಂಗಗಳು ನಡೆಯುತ್ತಿವೆ.<br /> <br /> ಗಾಂಧಿ, ಬುದ್ಧ, ಬಸವ ಮತ್ತು ಅಂಬೇಡ್ಕರ್ ಹುಟ್ಟಿದ ನೆಲದಲ್ಲಿ ಜಾತಿ, ಧರ್ಮ, ಬಣ್ಣದ ಹೆಸರಿನಲ್ಲಿ ರಕ್ತಪಾತಗಳಾಗುತ್ತಿವೆ. ಭಾಷೆ, ಗಡಿ– ದಿಕ್ಕುಗಳ ಹೆಸರಿನಲ್ಲೂ ಜೀವಗಳು ಉರುಳುತ್ತಿವೆ. ‘ಇವನ್ಯಾರವ, ಇವನ್ಯಾರವ, ಇವನ್ಯಾರವ ಎಂದೆಣಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಎಂದೆಣಿಸಯ್ಯಾ’ ಎಂದು ಬಸವಣ್ಣ ಬೋಧಿಸಿದರು. ಆದರೆ, ನಾವು ಇವನ್ಯಾರು, ಇವನ್ಯಾರು ಎಂದು ಪತ್ತೆ ಹಚ್ಚಿ ಹುಡುಕಿ ಹೊಡೆಯುತ್ತಿದ್ದೇವೆ. ಬಡಿಯುತ್ತಿದ್ದೇವೆ...<br /> <br /> ರವೀಂದ್ರನಾಥ ಟ್ಯಾಗೋರ್ ರಾಷ್ಟ್ರಗೀತೆಯಲ್ಲಿ ‘ವಿಂಧ್ಯಾ, ಹಿಮಾಚಲ, ಯಮುನಾ, ಗಂಗಾ’ ಅಂದರು. ಅವರು ಮಾತನಾಡಿದ್ದು ನಿರ್ಜೀವ ಮಣ್ಣಿನ ಬಗೆಗಲ್ಲ. ಸರ್ವ ಜನಾಂಗ ಕುರಿತು. ಅಷ್ಟೇ ಏಕೆ, ರಾಷ್ಟ್ರಕವಿ ಕುವೆಂಪು ತಮ್ಮ ಕಾವ್ಯದಲ್ಲಿ ‘ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿ, ಜೈನರುದ್ಯಾನ’ ಎಂದು ಭಾರತವನ್ನು ಕೊಂಡಾಡಿದರು. ಇಂಥ ಅನನ್ಯ ಸಂಸ್ಕೃತಿ, ಪರಂಪರೆ– ಇತಿಹಾಸ ಹೊಂದಿರುವ ನಾಡಿನಲ್ಲಿ ಏನೆಲ್ಲ ಅನಾಹುತಗಳು ನಡೆಯುತ್ತಿವೆ.<br /> <br /> ಉಗಾಂಡದ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಎಲ್ಲೋ ಒಂದು ಅಪರೂಪದ ಘಟನೆ ಎಂದು ತಳ್ಳಿ ಹಾಕುವವರಿದ್ದಾರೆ. ನಿಜಕ್ಕೂ ಅದು ಅಕ್ಷಮ್ಯ. ಆಫ್ರಿಕಾ ಜನರನ್ನು ನಡೆಸಿಕೊಂಡ ಆ ಬಗೆ ಅಮಾನವೀಯವಾದದ್ದು. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತವರ ಕಾನೂನು ಸಚಿವರು ಅದಕ್ಕಾಗಿ ಕ್ಷಮೆ ಕೇಳಬೇಕಿತ್ತು. ಹಾಗೆ ಮಾಡದೆ ತಾವು ಮಾಡಿದ್ದೇ ಸರಿ ಎಂದು ಇನ್ನೂ ಪ್ರತಿಪಾದಿಸುತ್ತಿದ್ದಾರೆ. ದೆಹಲಿಯ ಜನ ಬೇರೆಯವರನ್ನು ಹಿಂಸಿಸುವ ಮೂಲಕ ನಾಯಕರನ್ನು ಹಿಂಬಾಲಿಸುತ್ತಿದ್ದಾರೆ.<br /> <br /> ಆಫ್ರಿಕನ್ನರನ್ನು ಬಿಡಿ, ದೆಹಲಿಯವರು ದಕ್ಷಿಣ ಭಾರತದವರನ್ನು ‘ಮದ್ರಾಸಿಗಳು’ ಎಂದು ಕರೆಯುತ್ತಾರೆ. ಹೀಗೆ ಕರೆಯುವುದರ ಹಿಂದೆ ಅವಮಾನಗಳು ಅಡಗಿವೆ. ದಕ್ಷಿಣದ ಜನರ ಮೈ ಬಣ್ಣವೂ ಕಪ್ಪೆಂಬ ದನಿಯೂ ಅವರ ಮಾತಿನ ಹಿಂದಿದೆ. ದಕ್ಷಿಣ ಭಾರತ ಕರ್ನಾಟಕ, ಕೇರಳ, ಆಂಧ್ರಗಳನ್ನೂ ಒಳಗೊಂಡಿದೆ. ಪ್ರತಿಯೊಂದು ರಾಜ್ಯದವರಿಗೂ ಒಂದೊಂದು ಭಾಷೆ, ಅಸ್ತಿತ್ವವಿದೆ ಎಂಬ ಸಾಮಾನ್ಯ ತಿಳಿವಳಿಕೆ ಇವರಿಗಿದ್ದಂತಿಲ್ಲ. ಇದು ಉತ್ಪ್ರೇಕ್ಷೆಯ ಮಾತಲ್ಲ. ರಾಜಧಾನಿಯಲ್ಲಿರುವ ದಕ್ಷಿಣದ ಜನರಿಗೆ ಇಂಥ ಬೇಕಾದಷ್ಟು ಅನುಭವಗಳಾಗಿವೆ.<br /> <br /> ಈ ಮನೋಭಾವಕ್ಕೂ ಅರುಣಾಚಲ ಯುವಕನ ಕೊಲೆಗೂ ಸೂಕ್ಷ್ಮವಾದ ಸಂಬಂಧವಿದೆ. ದೆಹಲಿಯಲ್ಲಿ ನಿಡೊ ಕೊಂದಂತೆ ಅಸ್ಸಾಂ, ನಾಗಲ್ಯಾಂಡ್ ಮತ್ತಿತರ ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಮಾತಾಡುವ ಜನರನ್ನು ಹುಡುಕಿಕೊಂಡು ಹೋಗಿ ಹತ್ಯೆ ಮಾಡಲಾಗುತ್ತಿದೆ. ಇದುವರೆಗೆ ಲೆಕ್ಕವಿಲ್ಲದಷ್ಟು ಹಿಂದಿ ಭಾಷಿಗರು ಈಶಾನ್ಯದ ರಕ್ತದಾಹಿ ಹಂತಕರ ಗುಂಡಿಗೆ ಬಲಿಯಾಗಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವುದು ಸಂಘಟಿತವಾದ ದಾಳಿ. ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ.<br /> <br /> ಜಾತಿ, ಧರ್ಮ ಮತ್ತು ಜನಾಂಗ ದ್ವೇಷ ಯಾವುದೋ ಒಂದು ರಾಜ್ಯ ಅಥವಾ ಭಾಗಕ್ಕೆ ಸೀಮಿತವಾಗಿದೆ ಎಂದು ನಿರ್ಲಕ್ಷಿಸುವಂತಿಲ್ಲ. ಎಲ್ಲ ಕಾಲಕ್ಕೂ ಎಲ್ಲ ಭಾಗ, ರಾಜ್ಯಗಳಲ್ಲೂ ಇದು ಆಚರಣೆಯಲ್ಲಿದೆ. ಮಹಾರಾಷ್ಟ್ರದಿಂದ ಬಿಹಾರಿಗಳನ್ನು ಓಡಿಸಲಾಗಿದೆ. ಹೋದ ವರ್ಷ ಈಶಾನ್ಯ ರಾಜ್ಯಗಳ ಜನರು ಭಯಬಿದ್ದು ಬೆಂಗಳೂರು ಬಿಡಲಿಲ್ಲವೆ? ಅನಂತರ ಅವರನ್ನು ವಾಪಸ್ ಕರೆತರಲು ಸರ್ಕಾರ ಕಸರತ್ತು ನಡೆಸಲಿಲ್ಲವೆ?<br /> <br /> ಪ್ರತಿಯೊಂದು ಘಟನೆ ನಡೆದಾಗ ಸಂಸತ್ತಿನೊಳಗೆ ದೊಡ್ಡ ದೊಡ್ಡ ಚರ್ಚೆಗಳಾಗುತ್ತವೆ. ಕೊನೆಗೆ ಈಶಾನ್ಯ ರಾಜ್ಯಗಳು ಭಾರತದ ಅವಿಭಾಜ್ಯ ಅಂಗವೆಂದು ಸಾರಿ ಸಾರಿ ಹೇಳಲಾಗುತ್ತದೆ. ಘಟನೆ ಖಂಡಿಸುವ ನಿರ್ಣಯ ಮಾಡಿ ಕೈತೊಳೆದುಕೊಳ್ಳಲಾಗುತ್ತದೆ. ಕಾಲಕ್ರಮೇಣದಲ್ಲಿ ಅದು ಮರೆತೇ ಹೋಗುತ್ತದೆ. ಅದು ಪುನಃ ನೆನಪಿಗೆ ಬರುವುದು ಮತ್ತೊಂದು ಘಟನೆ ನಡೆದಾಗ.<br /> <br /> ಸಮೀಕ್ಷೆಯೊಂದರ ಪ್ರಕಾರ ವರ್ಣಭೇದ ನೀತಿ ಅನುಸರಿಸುವ ವಿಶ್ವದ ಐದು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು. 80ದೇಶಗಳ ಜನರ ಸಾಮಾಜಿಕ ಧೋರಣೆ ಕುರಿತು ‘ವರ್ಲ್ಡ್ ವ್ಯಾಲ್ಯೂ’ ಸಂಸ್ಥೆ ನಡೆಸಿರುವ ಈ ಸಮೀಕ್ಷೆ ಪ್ರಕಾರ ಮತ್ತೊಂದು ಜನಾಂಗ ಕುರಿತು ಅತ್ಯಂತ ಅಸಹನೆ ತೋರಿದ ಪ್ರದೇಶ ಹಾಂಕಾಂಗ್. ಗೋವಾದ ಸಂಸ್ಕೃತಿ ಸಚಿವ ಇತ್ತೀಚೆಗೆ ನೈಜೀರಿಯಾ ಜನರನ್ನು ಅವಮಾನಿಸುವ ಮಾತುಗಳನ್ನು ಆಡಿದ್ದಾರೆ.<br /> <br /> ಈಶಾನ್ಯ ರಾಜ್ಯಗಳ ಬಹುಭಾಗ ಭಾರತದೊಂದಿಗೆ ಭೌತಿಕವಾಗಿ ಮಿಳಿತವಾಗಿದೆ ವಿನಾ ಸಾಂಸ್ಕೃತಿಕವಾಗಿ ದೂರವೇ ಉಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಈಶಾನ್ಯದ ರಾಜ್ಯಗಳಲ್ಲಿ ನಡೆದಿರುವ ಜನಾಂಗೀಯ ಗಲಭೆಗಳು, ಸ್ವಾಯತ್ತತೆಗಾಗಿ ನಡೆದಿರುವ ಬಂಡಾಯಗಳು ನಿರಂತರ ಅಶಾಂತಿಯನ್ನು ಸೃಷ್ಟಿಸಿವೆ.<br /> <br /> ಉತ್ತಮ ಶಿಕ್ಷಣ ಮತ್ತು ಉದ್ಯೋಗ ಹುಡುಕಿಕೊಂಡು ದೆಹಲಿ, ಬೆಂಗಳೂರು ಮತ್ತಿತರ ನಗರಗಳಿಗೆ ಆ ಪ್ರದೇಶಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ರೀತಿ ಬರುವ ಎಲ್ಲರ ಮೇಲೆ ಹಲ್ಲೆ, ಅತ್ಯಾಚಾರಗಳು ನಡೆಯುವುದಿಲ್ಲ ಎನ್ನುವುದು ನಿಜ. ಆದರೆ ಅವರ ಕಣ್ಣುಗಳನ್ನು ‘ಚಿಂಕಿ ’ಎಂದೂ, ಅವರ ಚಹರೆಗೆ ನೇಪಾಳಿ ಗೂರ್ಖರನ್ನು ಕರೆಯುವಂತೆ ‘ಬಹಾದೂರ್’ ಎಂದು ಕೂಗಿ ಕರೆದು ಮಾನಸಿಕವಾಗಿ ಹಿಂಸಿಸಲಾಗುತ್ತಿದೆ.<br /> <br /> ಉತ್ತರದ ಜನ, ಈಶಾನ್ಯ ಮತ್ತು ದಕ್ಷಿಣ ರಾಜ್ಯಗಳವರನ್ನು ನಡೆಸಿಕೊಂಡಂತೆ; ಈಶಾನ್ಯದ ಜನ ಹಿಂದಿ ಭಾಷಿಕರನ್ನು ನಡೆಸಿಕೊಂಡಂತೆ; ಆಫ್ರಿಕಾದ ಬಿಳಿಯರು ಅಲ್ಲಿನ ಮೂಲ ನಿವಾಸಿಗಳನ್ನು ಅನಾಗರಿಕವಾಗಿ ನಡೆಸಿಕೊಳ್ಳುತ್ತಿರುವುದು, ರಾಜಕೀಯವಾಗಿ, ಧಾರ್ಮಿಕವಾಗಿ ಅವರನ್ನು ಶೋಷಿಸುತ್ತಿರುವುದು, ಕಪ್ಪು ಜನರ ಮಕ್ಕಳಿಗೆ ಶಿಕ್ಷಣ– ಸಂಸ್ಕೃತಿ ಕಲಿಸುವ ಹೆಸರಿನಲ್ಲಿ ಅವರದಲ್ಲದ ಕಥೆಗಳನ್ನು, ಇತಿಹಾಸ– ಸಂಸ್ಕೃತಿಯನ್ನು ಹೇಳಿಕೊಡುತ್ತಿರುವುದು ನಡೆಯುತ್ತಿದೆ. ಇದು ಅತ್ಯಂತ ಅಪಾಯಕಾರಿ.<br /> <br /> ಬುಡಕಟ್ಟು ಪರಂಪರೆ, ಆಚರಣೆಗಳನ್ನು ಅಣಕಿಸುವಂತೆ ಯುವ ಪೀಳಿಗೆಯನ್ನು ಬೆಳೆಸುತ್ತಿರುವ ಬಗೆಗೆ ಚಿನುವಾ ಅಚಿಬೆ ತಮ್ಮ ಕೃತಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕಪ್ಪು ಜನರ ಆಶಾಕಿರಣ ನೆಲ್ಸನ್ ಮಂಡೇಲಾ ರಾಜಕೀಯ ಹಕ್ಕುಗಳಿಗಾಗಿ ದನಿ ಎತ್ತಿದ ಕಾರಣಕ್ಕಾಗಿಯೇ ಜೈಲು ಸೇರಿದ್ದು. ಬಹುಶಃ ಮಂಡೇಲಾ, ಗಾಂಧಿ ಹಾಗೂ ಮಾರ್ಟಿನ್ ಲೂಥರ್ ಕಿಂಗ್ ಅವರಂಥ ಹೋರಾಟಗಾರರು ಹುಟ್ಟದಿದ್ದರೆ ಪರಿಸ್ಥಿತಿ ಹೇಗಿರುತಿತ್ತು ಎನ್ನುವುದು ಊಹೆಗೂ ನಿಲುಕದ್ದು.<br /> <br /> ಜಾತಿಯ ಕಾರಣಕ್ಕೆ ಅಸ್ಪೃಶ್ಯರನ್ನು, ಧರ್ಮದ ಕಾರಣಕ್ಕೆ ಅಲ್ಪಸಂಖ್ಯಾತ ಮುಸ್ಲಿಮರನ್ನು, ಚಹರೆ ಮತ್ತು ಬಣ್ಣದ ಕಾರಣಕ್ಕೆ ಈಶಾನ್ಯ ಮತ್ತು ಆಫ್ರಿಕಾ ಜನರನ್ನು ನಡೆಸಿಕೊಳ್ಳುವ ಮನಸ್ಥಿತಿಗಳೆಲ್ಲವೂ ಒಂದೇ. ದಲಿತರು, ಮುಸ್ಲಿಮರಿಗೆ ಬಾಡಿಗೆ ಮನೆ ಸಿಗುವುದು ಎಷ್ಟು ಕಷ್ಟವೋ, ಈಶಾನ್ಯದವರಿಗೂ ಅಷ್ಟೇ ಕಷ್ಟ. ಹೀಗಾಗಿ ಅವರೆಲ್ಲರೂ ಒಂದೇ ಕಡೆಗಳಲ್ಲಿ ಗುಂಪು, ಗುಂಪಾಗಿ ನೆಲೆಸುವುದು. ದೆಹಲಿಯಲ್ಲಿ ಒಂದೊಂದು ಬಡಾವಣೆಯೂ ಒಂದೊಂದು ಸಮುದಾಯ ಇಲ್ಲವೆ ಜನಾಂಗಕ್ಕೆ ಸೀಮಿತವಾಗಿದೆ.<br /> <br /> ಈಚೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈಶಾನ್ಯ ರಾಜ್ಯಗಳ ಜನರ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಡಿಜಿಟಲ್ ಉದ್ಯಮದ ಕೆಲಸಗಳನ್ನು ಹೊರಗುತ್ತಿಗೆಗೆ ಕೊಡಬೇಕೆಂದು ಪ್ರತಿಪಾದಿಸಿದ್ದಾರೆ. ತಂತ್ರಜ್ಞಾನ ಮತ್ತು ಇಂಗ್ಲಿಷ್ ಭಾಷೆ ಬಲ್ಲ ಈಶಾನ್ಯದ ಜನರಿಗೆ ಮನೆ ಮುಂದೆ ಉದ್ಯೋಗ ಸಿಗುತ್ತದೆಂಬ ಭಾವನೆಯೂ ಇದರ ಹಿಂದೆ ಇದ್ದಿರಬಹುದು. ವಿಭಿನ್ನ ಭಾಷೆ, ಸಂಸ್ಕೃತಿ, ಜಾತಿ, ಧರ್ಮ ಮತ್ತು ಬಣ್ಣಗಳ ಜನರಿರುವ ಭಾರತದಂಥ ದೇಶದಲ್ಲಿ ಇಂಥ ನಿಲುವುಗಳನ್ನು ಒಪ್ಪಲಾಗದು. ಏಕೆಂದರೆ ಇದರ ಅನನ್ಯತೆ ಇರುವುದೇ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ.<br /> <br /> ಜಾತಿ– ಬಣ್ಣ ಮತ್ತು ಧರ್ಮದ ಕಾರಣಕ್ಕೆ ಅವಮಾನಕ್ಕೆ ಒಳಗಾಗುವ ಪ್ರಕರಣಗಳು ಶತಮಾನಗಳಿಂದಲೂ ನಡೆದು ಬಂದಿದೆ. ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತಿತರ ದೇಶಗಳಲ್ಲಿ ಜನಾಂಗ ನಿಂದನೆಗೆ ಒಳಗಾದ ತಕ್ಷಣ ಬೊಬ್ಬೆ ಹಾಕುವ ಭಾರತೀಯರು, ನಾವು ಬೇರೆಯವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದೇವೆ ಎನ್ನುವ ಬಗೆಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.<br /> <br /> ಬೇರೆಯವರನ್ನು ಸಹಿಸದೆ ಅವಮಾನಿಸುತ್ತಿರುವಾಗ, ಬೇರೆಯವರು ನಮ್ಮನ್ನು ಹೀಯಾಳಿಸಿದರು– ಛೇಡಿಸಿದರು ಎಂದು ಆರೋಪಿಸುವ ನೈತಿಕ ಶಕ್ತಿ ಇರುವುದಿಲ್ಲ.<br /> <br /> ಜನಾಂಗ ದ್ವೇಷ ಮತ್ತು ನಿಂದನೆ ಒಂದು ಮಾನಸಿಕ ಸ್ಥಿತಿ. ಇದರ ನಿವಾರಣೆ ಕಾನೂನುಗಳಿಂದ ಮಾತ್ರ ಸಾಧ್ಯವಿಲ್ಲ. ಜನರ ಮಾನಸಿಕ ಸ್ಥಿತಿಗತಿ ಬದಲಾಗಬೇಕು. ಸೂಕ್ತ ಶಿಕ್ಷಣ– ತಿಳಿವಳಿಕೆ, ಜಾಗೃತಿಯೂ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತಿಸಬೇಕು. ಸಂಸತ್ತಿನೊಳಗೆ ಕೂರುವ ಜನ ಪ್ರತಿನಿಧಿಗಳು ಇಂಥ ಗಂಭೀರ ವಿಷಯಗಳ ಬಗೆಗೆ ಸೂಕ್ಷ್ಮ ಮತಿಗಳಾಗಿರಬೇಕಾದ್ದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಇಂಥ ಮನಸ್ಥಿತಿ ಇನ್ನು ನೂರಾರು ವರ್ಷಗಳು ಮುಂದುವರಿಯಬಹುದು.<br /> <br /> ನಿಮ್ಮ ಅನಿಸಿಕೆ ತಿಳಿಸಿ: <a href="mailto:editpagefeedback@prajavani.co.in">editpagefeedback@prajavani.co.in</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>