<p>ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |<br />ಭುವನಜೀವನಜಲಧಿಯೂರ್ಮಿಕೋಟಿಯಲಿ ||<br />ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು |<br />ಸವಿ ನಮ್ಮದದರ ಕಣ – ಮಂಕುತಿಮ್ಮ || 127 ||ಪದ-ಅರ್ಥ: ಶಿವಸೌಖ್ಯಸೌಂದರ್ಯಗಳ=ಶಿವ(ಮಂಗಳಕರವಾದ)+ಸೌಖ್ಯ+ಸೌಂದರ್ಯಗಳ. ಪೂರ್ಣರವಿ=ಪೂರ್ಣ(ಒಟ್ಟು ಮೊತ್ತ)+ರವಿ, ಬೊಮ್ಮ=ಪರಬ್ರಹ್ಮ. ಭುವನಜೀವನಜಲಧಿಯೂರ್ಮಿಕೋಟಿಯಲಿ= ಭುವನ(ಪ್ರಪಂಚದ)+ಜೀವನ+ಜಲಧಿ(ಸಮುದ್ರ)+ಯೂರ್ಮಿ(ಅಲೆಗಳು)+ಕೋಟಿಯಲಿ(ಕೋಟಿ ಸಂಖ್ಯೆಯಲಿ), ಛವಿಕೋಟಿಯೆರಚಲ್= ಛವಿ(ಕಾಂತಿ)+ಕೋಟಿ+ಎರಚಲ್(ಎರಚಲು), ಪ್ರತಿಚ್ಛಾಯೆ= ಪ್ರತಿಫಲನ, ವಿಲಸಿಪುದು(ವಿಲಾಸವಾಗುವುದು, ಪ್ರಕಾಶವಾಗುವುದು)</p>.<p><strong>ವಾಚ್ಯಾರ್ಥ:</strong> ಮಂಗಳಕರವಾದ, ಸೌಖ್ಯದ, ಸೌಂದರ್ಯಗಳ ಒಟ್ಟು ಮೊತ್ತ, ಮೂಲವಾಗಿರುವುದು ಸೂರ್ಯನಂತಿರುವ ಪರಬ್ರಹ್ಮ. ಈ ಲೋಕಜೀವನವೆಂಬ ಸಮುದ್ರದ ಕೋಟಿಕೋಟಿ ಅಲೆಗಳ ಮೇಲೆ ಅದರ ಕೋಟಿ ಕಾಂತಿಯು ಬೀಳಲು ಅದರಿಂದ ಒಂದು ಪ್ರತಿಫಲನದ ಪ್ರಕಾಶವಾಗುವುದು. ಅದರಲ್ಲಿಯ ಒಂದು ಕಣ ಮಾತ್ರ ನಮಗೆ ಸವಿಯಾದದ್ದು.</p>.<p><strong>ವಿವರಣೆ:</strong> ಒಂದು ಅತ್ಯದ್ಭುತವಾದುದನ್ನು, ಮಾತಿಗೆ ಮೀರಿದ ವೈಭವವನ್ನು ಒಬ್ಬ ಸಮರ್ಥಕವಿ ಬಣ್ಣಿಸುವಾಗ ಬಳಸುವ ಭಾಷೆ ಹೇಗಾಗುತ್ತದೆನ್ನುವುದಕ್ಕೆ ಸುಂದರ ಮಾದರಿ ಈ ಕಗ್ಗ. ನಾವು ವರ್ಣಿಸುವಂಥ ವಸ್ತು ಎಷ್ಟು ದೊಡ್ಡದು ಎಂದು ಹೇಳುವ ಸಂಭ್ರಮ ಪದಗಳನ್ನು ಹೆಣೆಯುತ್ತ ಹೋಗುತ್ತದೆ. ಪರಬ್ರಹ್ಮ ಬಹಳ ದೊಡ್ಡದು. ಅದು ಎಷ್ಟು ದೊಡ್ಡದೆಂದರೆ ಸಣ್ಣ ಪುಟ್ಟ ಪದಗಳು ಅದನ್ನು ವರ್ಣಿಸಲಾರವು ಮತ್ತು ಸಣ್ಣಪದಗಳ ಬಳಕೆ ಅದರ ಮಹತ್ತನ್ನು ಸಾರಲಾರದು.</p>.<p>ಮಂಗಳಕರವಾದದ್ದರ, ಸೌಖ್ಯದ, ಸೌಂದರ್ಯಗಳ ಒಟ್ಟು ಮೊತ್ತವೇ ಸೂರ್ಯನಂತಿರುವ ಪರಬ್ರಹ್ಮ. ಈ ಭೂಲೋಕದ ಜೀವನವೆಂಬ ಮಹಾಸಮುದ್ರದ ಕೋಟ್ಯಂತರ ಅಲೆಗಳ ಮೇಲೆ ಪರಬ್ರಹ್ಮದ ಕೋಟಿಕಿರಣಗಳ ಕಾಂತಿ ಚೆಲ್ಲಿದಾಗ ಒಂದು ಬ್ರಹತ್ ಪ್ರತಿಫಲನ ಉಂಟಾಗುತ್ತದೆ. ನಮ್ಮ ಕಣ್ಣುಗಳು ಅವೆಲ್ಲವನ್ನು ಹಿಡಿದುಕೊಳ್ಳಲು ಅಸಮರ್ಥವಾಗಿವೆ. ಈ ಮಹಾಕಾಂತಿಯ ಪ್ರತಿಫಲನದಲ್ಲಿ ಒಂದು ಪುಟ್ಟ ಕಣದಷ್ಟನ್ನು ನಾವು ಅನುಭವಿಸಬಲ್ಲೆವು. ಅದೇ ನಮ್ಮ ಬದುಕಿನ ಸವಿ. ಎಂಥ ಕಾವ್ಯಾತ್ಮಕವಾದ ಭಾಷೆ!</p>.<p>ಇಂಥದ್ದೇ ಒಂದು ಪ್ರಸಂಗ ಮಹಾಭಾರತದ್ದು. ಕುಮಾರವ್ಯಾಸನ ಅಪ್ಪಟ ಪ್ರತಿಭೆಯ ವಿಲಾಸ ಅದು. ದ್ಯೂತದಲ್ಲಿ ಸೋತ ಮೇಲೆ ದ್ರೌಪದಿಯನ್ನು ಸಭೆಗೆ ಎಳೆತರಲು ಹೋದ ದುಶ್ಯಾಸನ ತನ್ನ ತಾಯಿಯಂತಿರಬೇಕಾಗಿದ್ದ ಅತ್ತಿಗೆಯ ಮುಡಿಗೆ ಕೈ ಹಾಕುತ್ತಾನೆ. ಅದೆಂಥ ಶ್ರೀಮುಡಿ! ಅದನ್ನು ವರ್ಣಿಸುವಾಗ ಕುಮಾರವ್ಯಾಸನ ಬರವಣಿಗೆ ಉತ್ತುಂಗಕ್ಕೇರಿಬಿಡುತ್ತದೆ. ಈ ಒಂದು ಪದ್ಯಕ್ಕೆ ಕುವೆಂಪುರವರು ಒಂದು ಲೇಖನವನ್ನೇ ಬರೆದಿದ್ದಾರೆ. ಆ ಮಹೀಶಕೃತುವರದೊಳುದ್ದಾಮ ಮುನಿಜನರಚಿತ ಮಂತ್ರಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ ಶ್ರೀಮುಡಿಗೆ ಕೈಯಿಕ್ಕಿದನು ವರಕಾಮಿನೀ ನಿಕುರುಂಬವಕಟಕ<br />ಟಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ.</p>.<p>ಮೊದಲಿನ ನಾಲ್ಕು ಸಾಲುಗಳಲ್ಲಿ ಆಕೆಯ ಶ್ರೀಮುಡಿಯ ವರ್ಣನೆಯನ್ನು ಅತ್ಯಂತ ಎತ್ತರಕ್ಕೇರಿಸಿ ಅದನ್ನು ಸಂಸ್ಕಂತ ಭೂಯಿಷ್ಟ ಮಾಡಿ ಕೊನೆಗೆ ಅತನ ಕೆಟ್ಟ ಕೆಲಸವನ್ನು, ಸಣ್ಣತನವನ್ನು ತೋರಲು ಗ್ರಾಮ್ಯವಾಗಿ ಕೈ ಇಕ್ಕಿದನು ಎನ್ನುತ್ತಾನೆ ಕವಿ. ಅದೇ ರೀತಿ ಡಿ.ವಿ.ಜಿ ಈ ಕಗ್ಗದಲ್ಲಿ ಪರಬ್ರಹ್ಮ ಎಷ್ಟು ದೊಡ್ಡವನು ಎಂದು ಹೇಳುವಾಗ ಪದಗಳು ಸಾಲುಸಾಲಾಗಿ ನುಗ್ಗಿ ಬರುತ್ತವೆ ಮತ್ತು ಮಾನವನ ಅಶಕ್ತತೆಯನ್ನು, ನಮಗೆ ದಕ್ಕಿದ್ದನ್ನು ಹೇಳುವಾಗ ‘ಕಣ’ ಎಂಬ ಸಣ್ಣ ಶಬ್ದ ಬರುತ್ತದೆ. ಇದೊಂದು ಸುಂದರ ಕಾವ್ಯಪ್ರಯೋಗ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಸೌಖ್ಯಸೌಂದರ್ಯಗಳ ಪೂರ್ಣರವಿ ಬೊಮ್ಮ |<br />ಭುವನಜೀವನಜಲಧಿಯೂರ್ಮಿಕೋಟಿಯಲಿ ||<br />ಛವಿಕೋಟಿಯೆರಚಲ್ ಪ್ರತಿಚ್ಛಾಯೆ ವಿಲಸಿಪುದು |<br />ಸವಿ ನಮ್ಮದದರ ಕಣ – ಮಂಕುತಿಮ್ಮ || 127 ||ಪದ-ಅರ್ಥ: ಶಿವಸೌಖ್ಯಸೌಂದರ್ಯಗಳ=ಶಿವ(ಮಂಗಳಕರವಾದ)+ಸೌಖ್ಯ+ಸೌಂದರ್ಯಗಳ. ಪೂರ್ಣರವಿ=ಪೂರ್ಣ(ಒಟ್ಟು ಮೊತ್ತ)+ರವಿ, ಬೊಮ್ಮ=ಪರಬ್ರಹ್ಮ. ಭುವನಜೀವನಜಲಧಿಯೂರ್ಮಿಕೋಟಿಯಲಿ= ಭುವನ(ಪ್ರಪಂಚದ)+ಜೀವನ+ಜಲಧಿ(ಸಮುದ್ರ)+ಯೂರ್ಮಿ(ಅಲೆಗಳು)+ಕೋಟಿಯಲಿ(ಕೋಟಿ ಸಂಖ್ಯೆಯಲಿ), ಛವಿಕೋಟಿಯೆರಚಲ್= ಛವಿ(ಕಾಂತಿ)+ಕೋಟಿ+ಎರಚಲ್(ಎರಚಲು), ಪ್ರತಿಚ್ಛಾಯೆ= ಪ್ರತಿಫಲನ, ವಿಲಸಿಪುದು(ವಿಲಾಸವಾಗುವುದು, ಪ್ರಕಾಶವಾಗುವುದು)</p>.<p><strong>ವಾಚ್ಯಾರ್ಥ:</strong> ಮಂಗಳಕರವಾದ, ಸೌಖ್ಯದ, ಸೌಂದರ್ಯಗಳ ಒಟ್ಟು ಮೊತ್ತ, ಮೂಲವಾಗಿರುವುದು ಸೂರ್ಯನಂತಿರುವ ಪರಬ್ರಹ್ಮ. ಈ ಲೋಕಜೀವನವೆಂಬ ಸಮುದ್ರದ ಕೋಟಿಕೋಟಿ ಅಲೆಗಳ ಮೇಲೆ ಅದರ ಕೋಟಿ ಕಾಂತಿಯು ಬೀಳಲು ಅದರಿಂದ ಒಂದು ಪ್ರತಿಫಲನದ ಪ್ರಕಾಶವಾಗುವುದು. ಅದರಲ್ಲಿಯ ಒಂದು ಕಣ ಮಾತ್ರ ನಮಗೆ ಸವಿಯಾದದ್ದು.</p>.<p><strong>ವಿವರಣೆ:</strong> ಒಂದು ಅತ್ಯದ್ಭುತವಾದುದನ್ನು, ಮಾತಿಗೆ ಮೀರಿದ ವೈಭವವನ್ನು ಒಬ್ಬ ಸಮರ್ಥಕವಿ ಬಣ್ಣಿಸುವಾಗ ಬಳಸುವ ಭಾಷೆ ಹೇಗಾಗುತ್ತದೆನ್ನುವುದಕ್ಕೆ ಸುಂದರ ಮಾದರಿ ಈ ಕಗ್ಗ. ನಾವು ವರ್ಣಿಸುವಂಥ ವಸ್ತು ಎಷ್ಟು ದೊಡ್ಡದು ಎಂದು ಹೇಳುವ ಸಂಭ್ರಮ ಪದಗಳನ್ನು ಹೆಣೆಯುತ್ತ ಹೋಗುತ್ತದೆ. ಪರಬ್ರಹ್ಮ ಬಹಳ ದೊಡ್ಡದು. ಅದು ಎಷ್ಟು ದೊಡ್ಡದೆಂದರೆ ಸಣ್ಣ ಪುಟ್ಟ ಪದಗಳು ಅದನ್ನು ವರ್ಣಿಸಲಾರವು ಮತ್ತು ಸಣ್ಣಪದಗಳ ಬಳಕೆ ಅದರ ಮಹತ್ತನ್ನು ಸಾರಲಾರದು.</p>.<p>ಮಂಗಳಕರವಾದದ್ದರ, ಸೌಖ್ಯದ, ಸೌಂದರ್ಯಗಳ ಒಟ್ಟು ಮೊತ್ತವೇ ಸೂರ್ಯನಂತಿರುವ ಪರಬ್ರಹ್ಮ. ಈ ಭೂಲೋಕದ ಜೀವನವೆಂಬ ಮಹಾಸಮುದ್ರದ ಕೋಟ್ಯಂತರ ಅಲೆಗಳ ಮೇಲೆ ಪರಬ್ರಹ್ಮದ ಕೋಟಿಕಿರಣಗಳ ಕಾಂತಿ ಚೆಲ್ಲಿದಾಗ ಒಂದು ಬ್ರಹತ್ ಪ್ರತಿಫಲನ ಉಂಟಾಗುತ್ತದೆ. ನಮ್ಮ ಕಣ್ಣುಗಳು ಅವೆಲ್ಲವನ್ನು ಹಿಡಿದುಕೊಳ್ಳಲು ಅಸಮರ್ಥವಾಗಿವೆ. ಈ ಮಹಾಕಾಂತಿಯ ಪ್ರತಿಫಲನದಲ್ಲಿ ಒಂದು ಪುಟ್ಟ ಕಣದಷ್ಟನ್ನು ನಾವು ಅನುಭವಿಸಬಲ್ಲೆವು. ಅದೇ ನಮ್ಮ ಬದುಕಿನ ಸವಿ. ಎಂಥ ಕಾವ್ಯಾತ್ಮಕವಾದ ಭಾಷೆ!</p>.<p>ಇಂಥದ್ದೇ ಒಂದು ಪ್ರಸಂಗ ಮಹಾಭಾರತದ್ದು. ಕುಮಾರವ್ಯಾಸನ ಅಪ್ಪಟ ಪ್ರತಿಭೆಯ ವಿಲಾಸ ಅದು. ದ್ಯೂತದಲ್ಲಿ ಸೋತ ಮೇಲೆ ದ್ರೌಪದಿಯನ್ನು ಸಭೆಗೆ ಎಳೆತರಲು ಹೋದ ದುಶ್ಯಾಸನ ತನ್ನ ತಾಯಿಯಂತಿರಬೇಕಾಗಿದ್ದ ಅತ್ತಿಗೆಯ ಮುಡಿಗೆ ಕೈ ಹಾಕುತ್ತಾನೆ. ಅದೆಂಥ ಶ್ರೀಮುಡಿ! ಅದನ್ನು ವರ್ಣಿಸುವಾಗ ಕುಮಾರವ್ಯಾಸನ ಬರವಣಿಗೆ ಉತ್ತುಂಗಕ್ಕೇರಿಬಿಡುತ್ತದೆ. ಈ ಒಂದು ಪದ್ಯಕ್ಕೆ ಕುವೆಂಪುರವರು ಒಂದು ಲೇಖನವನ್ನೇ ಬರೆದಿದ್ದಾರೆ. ಆ ಮಹೀಶಕೃತುವರದೊಳುದ್ದಾಮ ಮುನಿಜನರಚಿತ ಮಂತ್ರಸ್ತೋಮ ಪುಷ್ಕಲ ಪೂತ ಪುಣ್ಯಜಲಾಭಿಷೇಚನದ ಶ್ರೀಮುಡಿಗೆ ಕೈಯಿಕ್ಕಿದನು ವರಕಾಮಿನೀ ನಿಕುರುಂಬವಕಟಕ<br />ಟಾ ಮಹಾಸತಿ ಶಿವ ಶಿವಾಯೆಂದೊದರಿತಲ್ಲಲ್ಲಿ.</p>.<p>ಮೊದಲಿನ ನಾಲ್ಕು ಸಾಲುಗಳಲ್ಲಿ ಆಕೆಯ ಶ್ರೀಮುಡಿಯ ವರ್ಣನೆಯನ್ನು ಅತ್ಯಂತ ಎತ್ತರಕ್ಕೇರಿಸಿ ಅದನ್ನು ಸಂಸ್ಕಂತ ಭೂಯಿಷ್ಟ ಮಾಡಿ ಕೊನೆಗೆ ಅತನ ಕೆಟ್ಟ ಕೆಲಸವನ್ನು, ಸಣ್ಣತನವನ್ನು ತೋರಲು ಗ್ರಾಮ್ಯವಾಗಿ ಕೈ ಇಕ್ಕಿದನು ಎನ್ನುತ್ತಾನೆ ಕವಿ. ಅದೇ ರೀತಿ ಡಿ.ವಿ.ಜಿ ಈ ಕಗ್ಗದಲ್ಲಿ ಪರಬ್ರಹ್ಮ ಎಷ್ಟು ದೊಡ್ಡವನು ಎಂದು ಹೇಳುವಾಗ ಪದಗಳು ಸಾಲುಸಾಲಾಗಿ ನುಗ್ಗಿ ಬರುತ್ತವೆ ಮತ್ತು ಮಾನವನ ಅಶಕ್ತತೆಯನ್ನು, ನಮಗೆ ದಕ್ಕಿದ್ದನ್ನು ಹೇಳುವಾಗ ‘ಕಣ’ ಎಂಬ ಸಣ್ಣ ಶಬ್ದ ಬರುತ್ತದೆ. ಇದೊಂದು ಸುಂದರ ಕಾವ್ಯಪ್ರಯೋಗ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>