ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಫಲಿಸಿದ ಕುಯುಕ್ತಿ

Last Updated 7 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಪರೀಕ್ಷೆಯಲ್ಲಿಯೂ ಬೋಧಿಸತ್ವನಾದ ಮಹೋಷಧಕುಮಾರ ಯಶಸ್ಸುಗಳಿಸಿ ರಾಜನ ಪ್ರೀತಿಗೆ ಪಾತ್ರನಾದದ್ದನ್ನು ಕಂಡು ನಾಲ್ವರು ಅಮಾತ್ಯರಿಗೆ ಸಂಕಟವಾಯಿತು. ಹೇಗಾದರೂ ಮಾಡಿ ಅವನನ್ನು ರಾಜನ ಅವಕೃಪೆಗೆ ಗುರಿಮಾಡಿ ಕೊಲ್ಲಿಸಬೇಕೆಂದು ಚಿಂತಿಸಿದರು. ಒಂದು ದಿನ ರಾಜನ ಬಳಿಗೆ ಹೋಗಿ, ‘ಮಹಾಪ್ರಭು, ತಾವು ಅತ್ಯಂತ ಅಭಿಮಾನದಿಂದ, ಪ್ರೀತಿಯಿಂದ ನೋಡುವ ಗ್ರಹಪತಿ- ಮಹೋಷಧಕುಮಾರ ತಮಗೆ ಶತ್ರುವಾಗಿ ಬಿಟ್ಟಿದ್ದಾನೆ. ನಾವು ಅವನಿಗೆ ‘ರಹಸ್ಯವನ್ನು ಯಾರ ಹತ್ತಿರ ಹೇಳಬೇಕು?’ ಎಂದು ಕೇಳಿದೆವು. ಆಗ ಆತ ‘ಯಾರಿಗೂ ಹೇಳಬಾರದು. ಕೆಲಸ ಮುಗಿಯುವವರೆಗೂ ಬಾಯಿ ತೆರೆಯಬಾರದು’ ಎಂದ. ‘ಮಹಾರಾಜರಿಗೂ ಕೂಡ ಹೇಳಬಾರದು’ ಎಂದ. ತಮ್ಮಲ್ಲಿಯೂ ರಹಸ್ಯವನ್ನು ಹೇಳದಿರುವವನು, ತಮಗೆ ಒಳ್ಳೆಯದನ್ನು ಮಾಡುವನೇ?’ ಎಂದು ಕಿವಿ ಊದಿದರು. ಸಾಮಾನ್ಯವಾಗಿ ರಾಜರ ಕಿವಿ ಹಿತ್ತಾಳೆಯದ್ದೇ. ಮರುದಿನ ರಾಜ, ಕುಮಾರನ ಪರೀಕ್ಷೆ ಮಾಡುವುದಾಗಿ ತೀರ್ಮಾನಿಸಿದ. ಸಭೆ ಸೇರಿದಾಗ ರಾಜ ಕೇಳಿದ, ‘ಅಮಾತ್ಯರೇ ನೀವು ನಾಲ್ಕು ಜನ ಮತ್ತು ಮಹೋಷಧಕುಮಾರ ಇಲ್ಲಿದ್ದೀರಿ. ನನಗೊಂದು ಪ್ರಶ್ನೆ ಇದೆ.

ಅತ್ಯಂತ ರಹಸ್ಯವಾದ ವಿಚಾರವನ್ನು ಯಾರಲ್ಲಿ ಹಂಚಿಕೊಳ್ಳಬೇಕು?’. ಸೆನೆಕ ಕುತಂತ್ರಿ. ಆತ ಹೇಳಿದ, ‘ಮಹಾಸ್ವಾಮಿ, ತಾವೇ ನಮ್ಮ ರಕ್ಷಕರು, ನಮಗೆ ದೇವರು. ತಾವೇ ಮೊದಲು ತಮ್ಮ ಉತ್ತರವನ್ನು ಅಪ್ಪಣೆ ಕೊಡಿಸಿ’ ಎಂದ. ರಾಜ, ‘ಶೀಲವತಿಯಾದ, ಪ್ರತಿವ್ರತೆಯಾದ ಹೆಂಡತಿಯಲ್ಲಿ ಯಾವ ರಹಸ್ಯವನ್ನಾದರೂ ಹೇಳಬಹುದು’ ಎಂದ. ಸೆನೆಕ ಹೇಳಿದ, ‘ಸ್ವಾಮಿ, ಅತ್ಯಂತ ಆಪ್ತನಾದ ಮಿತ್ರನಲ್ಲಿ ರಹಸ್ಯವನ್ನು ಹೇಳಬಹುದು’. ಪುಕ್ಕುಸ, ‘ಸ್ವಾಮಿ, ನನ್ನ ಅಭಿಪ್ರಾಯದಂತೆ ಸ್ಥಿರಚಿತ್ತವುಳ್ಳ ಅಣ್ಣ ಅಥವಾ ತಮ್ಮನಿಗೆ ಯಾವ ರಹಸ್ಯವನ್ನಾದರೂ ಹೇಳಬಹುದು’ ಎಂದ.

ರಾಜ ಕಾವಿಂದನೆಡೆಗೆ ನೋಡಿದಾಗ ಆತ ಹೇಳಿದ, ‘ಮಹಾಪ್ರಭು, ನಮ್ಮ ಆಜ್ಞಾನುಸಾರಿಯಾದ, ವಂಶವನ್ನು ಮುಂದುವರೆಸಿಕೊಂಡು ಹೋಗುವ ಮಗನಿಗೆ ಯಾವ ರಹಸ್ಯವನ್ನಾದರೂ ಹೇಳಬಹುದು’. ಕೊನೆಯವನು ದೇವಿಂದ ಆತ ಹೇಳಿದ, ‘ಸ್ವಾಮಿ, ತಾಯಿಗಿಂತ ಯಾರೂ ಶ್ರೇಷ್ಠರಲ್ಲ. ಪ್ರೇಮದಿಂದ ನಮ್ಮನ್ನು ಕಾಣುವ ತಾಯಿಗೆ ಎಂಥ ರಹಸ್ಯವನ್ನಾದರೂ ಹೇಳಬಹುದು’. ನಾಲ್ಕು ಅಮಾತ್ಯರ ಅಭಿಪ್ರಾಯಗಳನ್ನು ತಿಳಿದ ರಾಜ ಮಹೋಷಧಕುಮಾರನನ್ನು ಅಭಿಪ್ರಾಯ ಹೇಳುವಂತೆ ಕೇಳಿದ. ಆಗ ಕುಮಾರ, ‘ಸ್ವಾಮಿ, ವಿಷಯ ರಹಸ್ಯವಾಗಿದ್ದರೆ ಅದನ್ನು ಗುಪ್ತವಾಗಿಯೇ ಇಡಬೇಕು. ಅದನ್ನು ಯಾರಿಗೂ ಪ್ರಕಟಮಾಡಬಾರದು, ಧೀರನಾದವನು ಕಾರ್ಯಮುಗಿಯುವವರೆಗೆ ತನ್ನ ಮನಸ್ಸಿನಲ್ಲಿಯೇ ಇಟ್ಟುಕೊಂಡು, ಕಾರ್ಯ ಮುಗಿದ ಮೇಲೆ ಬಾಯಿ ತೆರೆಯಬೇಕು’ ಎಂದ.

ರಾಜನಿಗೆ ಕೋಪ ಬಂತು, ‘ನೀನು ರಾಜರಿಗೂ ರಹಸ್ಯ ಹೇಳುವುದಿಲ್ಲವೇ?’ ಎಂದು ಕೇಳಿದ. ಕುಮಾರ ಹೇಳಿದ, ’ರಾಜರಿಗೂ ಹೇಳಬಾರದಂಥ ರಹಸ್ಯವಿದ್ದರೆ ಹೇಳಬಾರದು’. ನಾಲ್ಕು ಜನ ಮಂತ್ರಿಗಳು ತಮ್ಮ ಯೋಜನೆ ಫಲಿಸಿತೆಂದು ಮುಖ ಮುಖ ನೋಡಿಕೊಂಡು ಮನದಲ್ಲಿಯೇ ನಕ್ಕರು. ಸಭೆ ಮುಗಿಯಿತು. ರಾಜ ಅಮಾತ್ಯ ಸೆನೆಕನನ್ನು ಕರೆದು, ‘ನೀನು ಹೇಳಿದ್ದು ಸತ್ಯ. ಕುಮಾರ ನನ್ನನ್ನು ಅಪಾಯಕ್ಕೀಡು ಮಾಡುತ್ತಾನೆ. ಆದ್ದರಿಂದ ನಾಳೆ ಬೆಳಿಗ್ಗೆ ಆತ ರಾಜಸಭೆಗೆ ಬರುವಾಗ ಅವನ ತಲೆ ಕತ್ತರಿಸಿಬಿಡಿ’ ಎಂದು ಆಜ್ಞೆ ಮಾಡಿ ತನ್ನ ಖಡ್ಗವನ್ನೇ ಅವನಿಗೆ ಕೊಟ್ಟುಬಿಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT