ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಪದ್ಯ – ಅಧಿಕಪ್ರಸಂಗಿ

Published 27 ಜುಲೈ 2023, 19:30 IST
Last Updated 27 ಜುಲೈ 2023, 19:30 IST
ಅಕ್ಷರ ಗಾತ್ರ

ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು |
ಗದ್ಯ ಲೌಕಿಕ ತಾತ್ತ್ವಿಕಕ್ಕಚ್ಚುಕಟ್ಟು||
ಮಧ್ಯದಲಿ ಮಿಸುಕಿ, ನೆಲಬಿಟ್ಟು, ಬಾನ್ ಮುಟ್ಟದಿಹ |
ಪದ್ಯವಧಿಕಪ್ರಸಂಗಿ – ಮಂಕುತಿಮ್ಮ || 937 ||

ಪದ-ಅರ್ಥ: ಹೃದ್ಯ=ಮನೋಹರವಾದ, ಹೃದಯಕ್ಕೆ ತಟ್ಟುವ, ಹೃದಯೇಂಗಿತಕೆ=ಹೃದಯ+ಇಂಗಿತಕೆ, ತಾತ್ತ್ವಿಕಕ್ಕಚ್ಚುಕಟ್ಟು=ತಾತ್ವಿಕಕ್ಕೆ+ಅಚ್ಚುಕಟ್ಟು, ಮಿಸುಕಿ=ಅಲುಗಾಡಿ, ಬಾನ್+ಆಕಾಶ, ಮುಟ್ಟದಿಹ=ಮುಟ್ಟದೆ+ಇಹ(ಇರುವ), ಪದ್ಯವಧಿಕಪ್ರಸಂಗಿ=ಪದ್ಯವು+ಅಧಿಕಪ್ರಸಂಗಿ.

ವಾಚ್ಯಾರ್ಥ: ಮನೋಹರವಾದ ಹೃದಯದ ಭಾವನೆಗಳನ್ನು ತಿಳಿಸಲು ಸಂಗೀತದ ರಾಗ, ತಾಳಗಳ ಕಟ್ಟು ಉಚಿತವಾದದ್ದು. ಲೌಕಿಕದ ತತ್ವಗಳನ್ನು ವಿವರಿಸಲು ಗದ್ಯ ಅಚ್ಚುಕಟ್ಟಾದದ್ದು. ಆದರೆ ಮಧ್ಯದಲ್ಲಿ ಒದ್ದಾಡುತ್ತ ನೆಲಬಿಟ್ಟರೂ, ಆಕಾಶ ತಲುಪದ ಪದ್ಯ ಅಧಿಕಪ್ರಸಂಗಿ.

ವಿವರಣೆ: ದೇಹ ಬುದ್ಧಿಗಳನ್ನು ಏಕಕಾಲದಲ್ಲಿ, ವಿಲೀನಗೊಳಿಸಿ ಪರಮಾನಂದ ಸ್ವರೂಪಿಯ ಪರಮ ಆನಂದವನ್ನು ಕರುಣಿಸುವ ಚೈತನ್ಯವೇ ಸಂಗೀತ. ಅದು ಹೃದಯದ ಭಾಷೆ. ಎಲ್ಲಿ ಪದಗಳು ಶಕ್ತಿಯನ್ನು ಕಳೆದುಕೊಂಡು ನಿಂತುಬಿಡುತ್ತವೋ ಅಲ್ಲಿ ಸಂಗೀತದ ಪದಚಲನೆ ಪ್ರಾರಂಭವಾಗುತ್ತದೆ. ಮನೋಹರವಾದ, ಹೃದಯಕ್ಕೆ ತಟ್ಟುವ ಭಾವನೆಗಳಿಗೆ ಸಂಗೀತವೇ ಸರಳ ಹಾಗೂ ಖಚಿತವಾದ ಸಾಧನ. ಅದಕ್ಕೆ ರಾಗ, ತಾಳಗಳ ಕಟ್ಟು ಇದ್ದರೆ, ಅದು ನೇರವಾಗಿ ಹೃದಯವನ್ನೇ ಸೇರುತ್ತದೆ. ಆದರೆ ಗದ್ಯ ಹಾಗಲ್ಲ, ಕೆಲವೊಮ್ಮೆ ನಾದಸೌಂದರ್ಯಕ್ಕಿಂತ ನುಡಿಗಟ್ಟಿನ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕಬೇಕಾಗುತ್ತದೆ. ಇಂಥ ಸನ್ನಿವೇಶದಲ್ಲಿ ಭಾಷೆಯು ಗದ್ಯರೂಪವನ್ನು ತಾಳುತ್ತದೆ. ಇಲ್ಲಿ ಅಭಿದಾವೃತ್ತಿಯ ವ್ಯವಸ್ಥೆಯೆಲ್ಲ ಲಕ್ಷಣಾವೃತ್ತಿಗೆ ಅಧೀನವಾಗಿ ದುಡಿಯುತ್ತದೆ.ಶ್ರೀ

ಪದ್ಯದ ಚೆಲುವು ಶಬ್ದಾರ್ಥಗಳೆರಡರಲ್ಲಿಯೂ ಇರಬೇಕಾದ ಕಾರಣ ಅಲ್ಲಿ ನಾದದ ಪಾತ್ರ ದೊಡ್ಡದು. ಗದ್ಯದ ಸುಂದರತೆ ಮುಖ್ಯವಾಗಿ ಅರ್ಥಗತವಾದ ಕಾರಣ ಅಲ್ಲಿ ನಾದಕ್ಕಿಂತ ನುಡಿಗಟ್ಟಿನ ಪಾತ್ರ ಪ್ರಮುಖವಾದದ್ದು. ಹೀಗಾಗಿ ಲೌಕಿಕದ ಚಿಂತನೆಗಳನ್ನು, ತತ್ವಗಳನ್ನು ವಿಶದೀಕರಿಸುವುದಕ್ಕೆ ಗದ್ಯ ಅಚ್ಚುಕಟ್ಟಾದ ಮಾಧ್ಯಮ. ಡಿ.ವಿ.ಜಿ ಹೇಳುತ್ತಾರೆ, ಈ ಪದ್ಯದ್ದೊಂದು ವಿಚಿತ್ರ ಪರಿಸ್ಥಿತಿ. ಇದಕ್ಕೆ ಸಂಗೀತದ ಸ್ವರ, ರಾಗ, ತಾಳಗಳು ಇಲ್ಲ.

ಗದ್ಯಕ್ಕಿರುವ ಸುಲಭತೆಯೂ, ಸರಳತೆಯೂ ಇಲ್ಲ. ಅದಕ್ಕೇ ಅದನ್ನು ನೆಲದ ಭಾಷೆಯಾದ ಗದ್ಯವೂ ಅಲ್ಲದ, ಅಂತ:ಕರಣವನ್ನು ಕಲಕುವ ಎತ್ತರದ ಭಾಷೆಯಾದ ಸಂಗೀತವೂ ಅಲ್ಲದ ಅಧಿಕಪ್ರಸಂಗಿ ಎನ್ನುತ್ತಾರೆ. ಹಾಗೆಂದರೆ, ಅದು ಅಪ್ರಯೋಜಕವೆಂದಲ್ಲ. ಬದಲಾಗಿ ಅದು ಸಂಗೀತ ಮತ್ತು ಗದ್ಯದ ಎರಡೂ ಪ್ರಕಾರಗಳ ಸೌರಭವನ್ನು ಹೀರಿಕೊಂಡು ಪುಷ್ಟವಾದ ಬಗೆ. ತಾವು ಕಗ್ಗಕ್ಕೆ ಬಳಸಿದ್ದು ಈ ಪ್ರಕಾರವಾದ್ದರಿಂದ ತಮಾಷೆಗೆ ಅದನ್ನು ಅಧಿಕಪ್ರಸಂಗಿ ಎಂದು ಕರೆದಿದ್ದಾರೆ. ಕಗ್ಗದ ಪದ್ಯಗಳನ್ನು ಗುನುಗುನಿಸಿದವರಿಗೆ ಗದ್ಯ, ಸಂಗೀತಗಳೆರಡರ ಅನುಭೂತಿಯಾಗುವುದು ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT