ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀತಿಯಿಲ್ಲದ ಮಾತು, ನೀತಿಯಿಲ್ಲದ ಮೌನ

ನಿಜದಲ್ಲಿ ಶಿಕ್ಷೆ ಆಗಬೇಕಿರುವುದು ಯಾರಿಗೆ? ಆಗುತ್ತಿರುವುದು ಯಾರಿಗೆ?
Last Updated 3 ನವೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಹತ್ತನೇ ಶತಮಾನದ ವಡ್ಡಾರಾಧನೆಯಲ್ಲಿ ಬರುವ ಕಾರ್ತಿಕ ಋಷಿಯ ಕತೆಯ ಅಗ್ನಿರಾಜ, ಮುನಿಗಳೂ ಸೇರಿದಂತೆ ಹಲವರ ಬಳಿ ‘ರಾಜ್ಯದ ಶ್ರೇಷ್ಠ, ಸುಂದರ ವಸ್ತು ಯಾರಿಗೆ ಸೇರಬೇಕು?’ ಎಂದು ಕೇಳಿ, ‘ರಾಜನಿಗೇ ಸೇರಬೇಕು’ ಎಂಬ ಒಪ್ಪಿಗೆಯನ್ನು ಸೃಷ್ಟಿಸಿಕೊಳ್ಳುತ್ತಾನೆ. ‘ಆ ವಸ್ತು ಯಾವುದು’ ಎಂದು ಕೇಳಿದವರ ಪ್ರಶ್ನೆ ಬಗ್ಗೆ ಆಸಕ್ತಿಯನ್ನೇ ತೋರುವುದಿಲ್ಲ. ಆತ ಏನು ಮಾಡುತ್ತಾನೆ ಎಂಬ ಊಹೆ ಯಾರಿಗೂ ಇದ್ದಿರಲಿಲ್ಲ. ತನ್ನ ಸುಂದರಿಯಾದ ಕಿರಿ ಮಗಳನ್ನು ಈ ಒಪ್ಪಿಗೆಯನ್ನು ತೋರಿಯೇ ಮದುವೆಯಾಗುತ್ತಾನೆ. ಅವಳ ಒಪ್ಪಿಗೆಯ ಪ್ರಶ್ನೆಯೇ ಅಲ್ಲಿರಲಿಲ್ಲ. ಹೀಗೆ ಹೆಣ್ಣನ್ನು ಭಾವವಿಲ್ಲದ ‘ವಸ್ತು’ವನ್ನಾಗಿ ಭಾವಿಸಿ ಆಕ್ರಮಿಸಿಕೊಳ್ಳುವುದನ್ನು ಸಕ್ರಮ
ಗೊಳಿಸುವ ಇಂತಹ ಅನೈತಿಕತೆಯನ್ನು ಬೇರು ಸಮೇತ ಕೀಳದೆ ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುತ್ತೇವೆ ಎನ್ನುವುದು ಸುಳ್ಳು ಮಾತು.

ಸಬಿತಾ ಬನ್ನಾಡಿ

ಇತ್ತೀಚಿನ ಕೆಲವು ಬೆಳವಣಿಗೆಗಳು ಹೃದಯವನ್ನು ಗಾಸಿಗೊಳಿಸುವಂತಿದ್ದವು. ಹಾಥರಸ್‌ನ ಹೆಣ್ಣುಮಗಳ ಸುಯ್ಲು ಯಾರನ್ನಾದರೂ ತಟ್ಟುವುದಿಲ್ಲವೆಂದರೆ ಅವರಿಗೆ ಹೃದಯವೇ ಇಲ್ಲ ಎಂದರ್ಥ. ಹಾಗಿರುವಾಗ ಆ ಅಪರಾಧಿಗಳ ಪರವಾಗಿ ಕತೆ ಕಟ್ಟುವ ಪಡೆಯೇ ಎದ್ದುನಿಲ್ಲುತ್ತದೆ ಮತ್ತು ಬೃಹತ್ ಸಮೂಹವೊಂದು ಮೌನವಾಗಿರುತ್ತದೆ. ಇಂತಹ ನಡೆಗಳ ಪರಿಣಾಮ ಊಹಾತೀತ. ಬೆದರಿಕೆಗಳೇ ಆಳ್ವಿಕೆಗಳಾಗಿ, ಬೆದರಿಸುವವರಿಗೆ ಅಂಕೆಯೇ ಇಲ್ಲದ ನಿರಂಕುಶತೆ ಹಬ್ಬಿ ಹರಡುತ್ತದೆ.

ಇದಕ್ಕೆ ಇಂಬು ನೀಡುವಂತೆ ಎರಡು ಸುದ್ದಿಗಳು ಬಂದವು. ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರ ಐಪಿಎಲ್ ಅಪಯಶಸ್ಸಿಗೆ ಸೇಡಿನ ರೂಪದಲ್ಲಿ ಅವರ ಐದು ವರ್ಷದ ಮಗಳನ್ನು ರೇಪ್ ಮಾಡುವುದಾಗಿ ಗುಜರಾತಿನ ಕಛ್‍ನ ಹದಿನಾರರ ಬಾಲಕ (?) ಟ್ವೀಟ್ ಮಾಡಿದ. ಅದೇ ಸುಮಾರಿಗೆ ತಮಿಳು ನಟ ವಿಜಯ್ ಸೇತುಪತಿಯವರು ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ಸಿನಿಮಾದಲ್ಲಿ ಪಾತ್ರ ನಿರ್ವಹಣೆ ಮಾಡುವುದನ್ನು ವಿರೋಧಿಸಿ ಅವರ ಪುಟ್ಟ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿ ಚೆನ್ನೈನ ವ್ಯಕ್ತಿಯೊಬ್ಬ ಟ್ವೀಟ್ ಮಾಡಿದ. ಇವೆರಡೂ ಪ್ರಕರಣಗಳಲ್ಲಿ ಇಷ್ಟು ಪಬ್ಲಿಕ್ ಆಗಿ ಇಂತಹ ಪ್ರಸಿದ್ಧರ ಮಕ್ಕಳನ್ನೇ ಮುಂದಿಟ್ಟು ಬೆದರಿಕೆ ಹಾಕುತ್ತಾರೆಂದರೆ ನಾವೀಗ ಎತ್ತ ಸಾಗುತ್ತಿದ್ದೇವೆ? ಇದು ಎಲ್ಲಾ ಪ್ರಜ್ಞಾವಂತರನ್ನು ಕಾಡಬೇಕಾದ ಸಂಗತಿ ಅಲ್ಲವೇ? ಅಂಕಿ ಅಂಶಗಳ ಪ್ರಕಾರ, ದಿನವೊಂದಕ್ಕೆ ಈ ದೇಶದಲ್ಲಿ ಸರಾಸರಿ 90 ಅತ್ಯಾಚಾರ‌ಗಳು ನಡೆಯುತ್ತವೆ ಎಂಬುದಕ್ಕೂ ಮೇಲಿನ ವಿಷಯಕ್ಕೂ ಸಂಬಂಧ ಇಲ್ಲವೇ?

ಇವರು ಪ್ರಸಿದ್ಧರಾಗಿರುವುದರಿಂದ ಈ ಕುರಿತು ಒಂದಿಷ್ಟು ಆಕ್ರೋಶ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುತ್ತದೆ ಮತ್ತು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಅದರೆ ಯಾವ ಬಲವೂ ಇಲ್ಲದವರ ಪಾಡೇನು? ವಿಜಯ್ ಸೇತುಪತಿ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯೇ ಅದಕ್ಕೂ ಮೊದಲು ಹಲವು ಬಾರಿ ಟ್ವಿಟರ್‌ನಲ್ಲಿ ಇದೇ ರೀತಿಯ ಬೆದರಿಕೆಯನ್ನು ಹಲವು ಮಹಿಳೆಯರಿಗೆ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಮತ್ತು ತನಗೂ ಇದೇ ರೀತಿಯ ಬೆದರಿಕೆ ಹಾಕಿದ್ದ ಎಂಬುದಾಗಿ ನಟಿ ಕಸ್ತೂರಿಯವರು ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಟ್ವೀಟ್‍ನಲ್ಲಿ ‘ಆತನ ಮೇಲೆ ಏನಾದರೂ ಕ್ರಮ ಕೈಗೊಳ್ಳುವಿರಾ? ಅವನು ಬಹಳ ಸ್ವತಂತ್ರನಾಗಿರುವಂತೆ ಕಾಣಿಸುತ್ತಿದೆ’ ಎಂದಿದ್ದಾರೆ. ಟ್ವಿಟರ್ ಈಗ ಅವನ ಖಾತೆಯನ್ನು ರದ್ದುಪಡಿಸಿದೆ! ಅಂದರೆ ಈ ಮೊದಲು ಆ ಶಿಕ್ಷೆಯೂ ಅವನಿಗೆ ಅಗಿರಲಿಲ್ಲ!

ಶಿಕ್ಷೆಯಿಲ್ಲದ ಸ್ಥಿತಿಯು ಇವೆಲ್ಲ ಶಿಕ್ಷಾರ್ಹ ವಿಷಯಗಳೇ ಅಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದರ ವ್ಯಕ್ತರೂಪ. ಹದಿನಾರು ವರ್ಷದ ಹುಡುಗನೊಬ್ಬ ಇಂತಹ ದುಸ್ಸಾಹಸ ಮಾಡುತ್ತಾನೆಂದರೆ ಇದಕ್ಕೆ ಯಾರು ಹೊಣೆ? ಅವನ ಮನಸ್ಸಿನಲ್ಲಿ ಹೆಣ್ಣುಕೂಸಿನ ಕುರಿತು ಇಷ್ಟು ನೀಚ ಭಾವನೆಗಳು ಹುಟ್ಟಿದ್ದು ಹೇಗೆ? ‘ಪಾರ್ಚ್‍ಡ್’ ಎಂಬ ಹಿಂದಿ ಸಿನಿಮಾ ಇದನ್ನು ಬಹಳ ಚೆನ್ನಾಗಿ ಕಟ್ಟಿಕೊಡುತ್ತದೆ. ಚಿಕ್ಕಂದಿನಲ್ಲೇ ಅಪ್ಪನನ್ನು ಕಳೆದುಕೊಂಡ ಹುಡುಗನೊಬ್ಬ ಅಮ್ಮ ಕಷ್ಟಪಟ್ಟು ಬೆಳೆಸಿದ್ದನ್ನು ಮರೆತು ತಾನೇ ಗಂಡುದಿಕ್ಕು ಎಂಬ ಅಹಮ್ಮಿಗೆ ಒಳಗಾಗುತ್ತಾನೆ. ಸುತ್ತಲಿನ ಹೆಂಗಸರ ಬವಣೆ ನೋಡಿಯೂ ಆತ ಚಿಕ್ಕ ವಯಸ್ಸಿನಲ್ಲಿ ಮದುವೆಯಾದಾಗ ಹೆಂಡತಿಯನ್ನು ಹಿಂಸಿಸುತ್ತಾನೆ. ಹಾಗೆ ವರ್ತಿಸುವುದೇ ಗಂಡಸುತನ ಎಂಬ ಸಾಮಾಜಿಕ ತರಬೇತಿ ಮನೆಯ ಹೊರಗೆ ಅವನು ಒಡನಾಡುವ ಸ್ನೇಹಿತರಿಂದ, ಸಮಾಜದಿಂದ ಸಿಕ್ಕಿದೆ. ಹೆಂಗಸರ ಬಗೆಗೆ ಕೆಟ್ಟ ಪದ ಬಳಸುವುದು, ಕೀಳಾಗಿ ಭಾವಿಸುವುದು, ಹಿಗ್ಗಾಮುಗ್ಗಾ ಥಳಿಸುವುದು, ಆಕ್ರಮಿಸುವುದು ಎಲ್ಲವೂ ಸಹಜ ಎಂದೇ ಭಾವಿಸುವಂತೆ ತಲೆಮಾರಿನಿಂದ ತಲೆಮಾರಿಗೆ ದಾಟಿಸಿದ ಈ ದುಷ್ಟಪಾಠ ಹಿಂಸೆಯನ್ನು ಸಾಮಾನ್ಯೀಕರಿಸುತ್ತದೆ. ಕುಟುಂಬದೊಳಗಿನ ಈ ಕ್ರೌರ್ಯವು ಅವಕಾಶ ಸಿಕ್ಕರೆ ಕುಟುಂಬದ ಹೊರಗೂ ಕೋರೆ ತೋರಿಸುತ್ತದೆ. ಅಂದರೆ ಮನೆ ಮನೆಯೂ ಹೆಣ್ಣನ್ನು ಅಪಮಾನಿಸುವ ಕೂರಲಗುಗಳನ್ನು ಉತ್ಪಾದಿಸುವ ಮಸೆತಾಣಗಳಾಗಿವೆ. ಕೆಲವು ಮೃದುವಾಗಿ ಇನ್ನು ಹಲವು ಅಮಾನುಷವಾಗಿ ಇದರ ಕಾರ್ಯಾಗಾರ ಗಳಾಗಿವೆ. ಎಲ್ಲೋ ಅಪರೂಪದಲ್ಲಿ ಅಪರೂಪವಾಗಿ ಹೆಣ್ಣನ್ನು ಎಲ್ಲ ರೀತಿಯಲ್ಲೂ ಸಮಾನವಾಗಿ ಪರಿಗಣಿಸುವ ಗೌರವ ಕೇಂದ್ರಗಳು ಇರುವವೇನೋ, ವಿಳಾಸ ಸ್ವಲ್ಪ ಕಷ್ಟವೇ. ಇದರ ಜೊತೆಗೆ ಆಳುವ ಶಕ್ತಿಗಳಿಗೂ ಇವೆಲ್ಲವೂ ರಾಜಕಾರಣದ ದಾಳಗಳಾಗಿ ಕಾಣುತ್ತವೆಯೇ ಹೊರತು ಎಲ್ಲ ರಾಜಕಾರಣಿಗಳು ಒಂದಾಗಿ ಅಳಿಸಬೇಕಾದ ಕಳಂಕಗಳಾಗಿ ಕಾಣುವುದಿಲ್ಲ.

ಈ ಎರಡೂ ಸಂದರ್ಭಗಳಲ್ಲಿ ಹೆಣ್ಣಿನ ಮೇಲಿನ ದಾಳಿಯನ್ನು ಶಿಕ್ಷೆ ಎಂದು ಪರಿಗಣಿಸುವುದನ್ನು ಗಮನಿಸಬೇಕಾಗಿದೆ. ಇಲ್ಲಿ ಅದು ಆ ಮಕ್ಕಳ ಅಪ್ಪಂದಿರಿಗೆ ಶಿಕ್ಷೆ! ಆ ಮಗು ಅನುಭವಿಸಬೇಕಾಗುವ ಹಿಂಸೆ ವಿಷಯವೇ ಅಲ್ಲ. ಯುದ್ಧ, ಕೋಮು ಗಲಭೆಯ ಸಮಯದಲ್ಲೂ ಯಾರಿಗೋ ಕೊಡುವ ಶಿಕ್ಷೆಯಾಗಿ ಹೆಣ್ಣುಮಕ್ಕಳನ್ನು ಬಲಿ ಮಾಡಲಾಗುತ್ತದೆ. ಹಿಂದೊಮ್ಮೆ ಓದಿದ್ದ ವರದಿ ನೆನಪಾಗುತ್ತಿದೆ. ಪಾಕಿಸ್ತಾನದಲ್ಲಿ ಅತ್ಯಾಚಾರ ಮಾಡಿದವನೊಬ್ಬನಿಗೆ ಶಿಕ್ಷೆ ಕೊಡಲು ಪಂಚಾಯಿತಿ ಸೇರಿದವರು ಒಂದು ನಿರ್ಣಯಕ್ಕೆ ಬರುತ್ತಾರೆ. ಆತನ ತಂಗಿಯ ಮೇಲೆ, ಅತ್ಯಾಚಾರಕ್ಕೆ ಒಳಗಾದವಳ ಅಣ್ಣ ಅತ್ಯಾಚಾರ ಎಸಗಬೇಕು. ಭಯಾನಕವಾದ ಈ ತೀರ್ಮಾನವು ಆ ಮೂಲಕ ಅಲ್ಲಿ ಇಬ್ಬರು ಹೆಣ್ಣುಮಕ್ಕಳಿಗಾಗುವ ಅನ್ಯಾಯವನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.

ಸಿರಿಯಾದ ಮೂಲಭೂತವಾದಿ ಭಯೋತ್ಪಾದಕನೊಬ್ಬ ಸಂದರ್ಶನದಲ್ಲಿ, ತಾನು 200ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾಗಿಯೂ ಅವರಲ್ಲಿ 50ಕ್ಕೂ ಹೆಚ್ಚು ಮಕ್ಕಳು ಎಂಬುದಾಗಿಯೂ ನಿರ್ಭಾವುಕನಾಗಿ ಹೇಳುತ್ತಿದ್ದ. ‘ಅವರ ಕಿರುಚಾಟದಿಂದ ನಿನಗೆ ಏನೂ ಅನ್ನಿಸಲಿಲ್ಲವೇ’ ಎಂದರೆ, ‘ನಾನು ಹಾಗೆ ಮಾಡದಿದ್ದರೆ ನನ್ನನ್ನು ಸಾಯಿಸುತ್ತಿದ್ದರು’ ಎಂದ. ಮೂಲಭೂತವಾದವು ನಿರ್ಗತಿಕರನ್ನು ಸೃಷ್ಟಿಸಿ, ಮೊದಲು ಅನ್ಯರನ್ನು ನಂತರ ತಮ್ಮವರನ್ನೇ ಜೀವಂತ ಹೆಣಗಳನ್ನಾಗಿಸುತ್ತದೆ ಎಂಬುದನ್ನು ಇಂತಹ ಉದಾಹರಣೆ ನೋಡಿ ಕಲಿಯಬೇಕು. ಹೆಂಗಸರು ಮೊದಲು ಈ ಸೂಕ್ಷ್ಮ ಅರಿಯಬೇಕು. ಆದರೆ ಹೆಂಗಸರ ಮನೋಸಮ್ಮತಿಯನ್ನು, ಶ್ರೇಣೀಕರಣಗಳನ್ನು ಸಾಮಾನ್ಯಗೊಳಿಸುವುದರ ಮೂಲಕ ಸದ್ದಿಲ್ಲದೇ ಹುಟ್ಟಿಸಲಾಗುತ್ತದೆ.

ಧೋನಿ ಅವರಾಗಲೀ ಸೇತುಪತಿ ಅವರಾಗಲೀ ಈ ರೀತಿಯ ಬೆದರಿಕೆಗಳನ್ನು ಕಲ್ಪಿಸಿಕೊಂಡಿರುವುದಿಲ್ಲ. ಆದರೀಗ ಅವರ ಮನೆಯಂಗಳಕ್ಕೆ ಬಂದಿದೆ. ಇದು ಎಲ್ಲೋ ದೂರದ್ದು ಎಂಬ ನಿಶ್ಚಿಂತೆ ನೆಲೆಸುವ ಬದಲು ಜನ ಈಗಲೇ ಎಚ್ಚರಗೊಂಡು ಒಕ್ಕೊರಲಿನಲ್ಲಿ ಎಲ್ಲಾ ಅನಾಚಾರಗಳನ್ನು ವಿರೋಧಿಸದಿದ್ದರೆ ಮುಂದೊಂದು ದಿನ ಹೇಳಲು ಏನೂ ಉಳಿದಿರುವುದಿಲ್ಲ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT