<p><strong>ಉದೇತಿ ಸವಿತಾ ತಾಮ್ರಸ್ತಾಮ್ರ ಏವಾಸ್ತಮೇತಿ ಚ ।</strong></p>.<p><strong>ಸಂಪತ್ತೌ ಚ ವಿಪತ್ತೌ ಚ ಮಹತಾಮೇಕರೂಪತಾ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಸೂರ್ಯನು ಕೆಂಪಾಗಿಯೇ ಹುಟ್ಟುತ್ತಾನೆ; ಕೆಂಪಾಗಿಯೇ ಮುಳುಗುತ್ತಾನೆ. ಸಂಪತ್ತು ಇರಲಿ, ವಿಪತ್ತು ಬರಲಿ; ಸುಖ ಇರಲಿ, ಕಷ್ಟ ಬರಲಿ. ಮಹಾತ್ಮರ ಸ್ವರೂಪ ಮಾತ್ರ ಒಂದೇ ವಿಧದಲ್ಲಿ ಇರುತ್ತದೆ.’</p>.<p>ದಿನನಿತ್ಯದ ವಿದ್ಯಮಾನವೊಂದನ್ನು ವರ್ಣಿಸುವ ಮೂಲಕ ಸುಭಾಷಿತವು ಮಹಾತ್ಮರ ವಿಶಿಷ್ಟ ಗುಣದ ಬಗ್ಗೆ ಹೇಳುತ್ತಿದೆ.</p>.<p>ನಮ್ಮ ಮುಖವನ್ನು ನೋಡಿದ ಕೂಡಲೇ ನಾವು ಈಗ ಎಂಥ ಪರಿಸ್ಥಿತಿಯಲ್ಲಿದ್ದೇವೆ ಎಂದು ಇತರರಿಗೆ ಗೊತ್ತಾಗಿಬಿಡುತ್ತದೆ; ಸುಖದಲ್ಲಿ ನಮ್ಮ ಮುಖ ಅರಳಿರುತ್ತದೆ, ದುಃಖದಲ್ಲಿ ಅದು ಬಾಡಿಹೋಗಿರುತ್ತದೆ. ಆದರೆ ಮಹಾತ್ಮರು ಹೀಗೆ ಸುಖದಲ್ಲಿ ಹಿಗ್ಗುವುದೂ ಇಲ್ಲ, ದುಃಖದಲ್ಲಿ ಕುಗ್ಗುವುದೂ ಇಲ್ಲ. ಇದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಸೂರ್ಯನು ದಿನವೂ ಪೂರ್ವದಲ್ಲಿ ಹುಟ್ಟುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ. ಇದು ನಮಗೆ ಪ್ರತ್ಯಕ್ಷವಾಗಿರುವ ಸಂಗತಿ. ನಾವೆಲ್ಲರೂ ಜನ್ಮವನ್ನು, ಎಂದರೆ ಹುಟ್ಟನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತೇವೆ. ಆದರೆ ಅವಸಾನವನ್ನು, ಎಂದರೆ ಮುಳುಗುವುದನ್ನು ನೆನಸಿಕೊಂಡರೂ ಸಾಕು ಹೆದರುತ್ತೇವೆ, ಕಂಗಾಲಾಗುತ್ತೇವೆ. ಹುಟ್ಟುವುದು ಏಳಿಗೆಯನ್ನು ಸೂಚಿಸುತ್ತದೆ; ಮುಳುಗುವುದು ಅವನತಿಯನ್ನು ಸೂಚಿಸುತ್ತದೆ. ನಾವೀಗ ಲಾಭದ ಪಥದಲ್ಲಿದ್ದೇವೋ ಅಥವಾ ನಷ್ಟದ ದಾರಿಯಲ್ಲಿದ್ದೇವೋ ಎಂದು ನಾವೇನೂ ಯಾರಿಗೂ ಬಾಯಿಬಿಟ್ಟು ಹೇಳಬೇಕಾಗಿರುವುದಿಲ್ಲ; ನಮ್ಮ ಮುಖ, ಮಾತು, ನಡಿಗೆ – ಹೀಗೆ ನಮ್ಮ ನಡೆ–ನುಡಿಗಳೇ ಈ ಸಂಗತಿಗಳನ್ನು ಜಗತ್ತಿಗೆ ಸಾರುತ್ತಿರುತ್ತದೆ. ಆದರೆ ಸೂರ್ಯನನ್ನು ಗಮನಿಸಿ: ಅವನು ಹುಟ್ಟುವಾಗಲೂ ಕೆಂಪಾಗಿರುತ್ತಾನೆ, ಮುಳುಗುವಾಗಲೂ ಕೆಂಪಾಗಿಯೇ ಇರುತ್ತಾನೆ. ಎಂದರೆ ಅವನು ಹುಟ್ಟನ್ನೂ ಅವಸಾನವನ್ನೂ, ಲಾಭವನ್ನೂ ನಷ್ಟವನ್ನೂ, ಸುಖವನ್ನೂ ಕಷ್ಟವನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸುತ್ತಿದ್ದಾನೆ; ಅವನು ಹಿಗ್ಗಿನಲ್ಲೂ ಕುಗ್ಗಿನಲ್ಲೂ ಒಂದೇ ರೀತಿಯಲ್ಲಿರುತ್ತಾನೆ. ಸುಭಾಷಿತ ಹೇಳುತ್ತಿದೆ: ಇದೇ ಮಹಾತ್ಮರ ಗುಣ.</p>.<p>ಸುಖದಲ್ಲೂ ದುಃಖದಲ್ಲೂ ನಾವು ಒಂದೇ ವಿಧದಲ್ಲಿ ಇರುವುದು ಸುಲಭವಲ್ಲ, ಹೌದು. ಅದಕ್ಕೆ ಸಾಕಷ್ಟು ಸಾಧನೆ ಬೇಕು; ಮಾನಸಿಕ ಸಿದ್ಧತೆ ಬೇಕು, ದಿಟ. ಆದರೆ ನಾವು ಅದನ್ನು ರೂಢಿಸಿಕೊಂಡರೆ ಜೀವನವು ಸದಾ ಸುಂದರವಾಗಿಯೇ ಕಾಣುತ್ತಿರುತ್ತದೆ; ಇದರಲ್ಲಿ ಅನುಮಾನ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉದೇತಿ ಸವಿತಾ ತಾಮ್ರಸ್ತಾಮ್ರ ಏವಾಸ್ತಮೇತಿ ಚ ।</strong></p>.<p><strong>ಸಂಪತ್ತೌ ಚ ವಿಪತ್ತೌ ಚ ಮಹತಾಮೇಕರೂಪತಾ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಸೂರ್ಯನು ಕೆಂಪಾಗಿಯೇ ಹುಟ್ಟುತ್ತಾನೆ; ಕೆಂಪಾಗಿಯೇ ಮುಳುಗುತ್ತಾನೆ. ಸಂಪತ್ತು ಇರಲಿ, ವಿಪತ್ತು ಬರಲಿ; ಸುಖ ಇರಲಿ, ಕಷ್ಟ ಬರಲಿ. ಮಹಾತ್ಮರ ಸ್ವರೂಪ ಮಾತ್ರ ಒಂದೇ ವಿಧದಲ್ಲಿ ಇರುತ್ತದೆ.’</p>.<p>ದಿನನಿತ್ಯದ ವಿದ್ಯಮಾನವೊಂದನ್ನು ವರ್ಣಿಸುವ ಮೂಲಕ ಸುಭಾಷಿತವು ಮಹಾತ್ಮರ ವಿಶಿಷ್ಟ ಗುಣದ ಬಗ್ಗೆ ಹೇಳುತ್ತಿದೆ.</p>.<p>ನಮ್ಮ ಮುಖವನ್ನು ನೋಡಿದ ಕೂಡಲೇ ನಾವು ಈಗ ಎಂಥ ಪರಿಸ್ಥಿತಿಯಲ್ಲಿದ್ದೇವೆ ಎಂದು ಇತರರಿಗೆ ಗೊತ್ತಾಗಿಬಿಡುತ್ತದೆ; ಸುಖದಲ್ಲಿ ನಮ್ಮ ಮುಖ ಅರಳಿರುತ್ತದೆ, ದುಃಖದಲ್ಲಿ ಅದು ಬಾಡಿಹೋಗಿರುತ್ತದೆ. ಆದರೆ ಮಹಾತ್ಮರು ಹೀಗೆ ಸುಖದಲ್ಲಿ ಹಿಗ್ಗುವುದೂ ಇಲ್ಲ, ದುಃಖದಲ್ಲಿ ಕುಗ್ಗುವುದೂ ಇಲ್ಲ. ಇದನ್ನೇ ಸುಭಾಷಿತ ಹೇಳುತ್ತಿರುವುದು.</p>.<p>ಸೂರ್ಯನು ದಿನವೂ ಪೂರ್ವದಲ್ಲಿ ಹುಟ್ಟುತ್ತಾನೆ, ಪಶ್ಚಿಮದಲ್ಲಿ ಮುಳುಗುತ್ತಾನೆ. ಇದು ನಮಗೆ ಪ್ರತ್ಯಕ್ಷವಾಗಿರುವ ಸಂಗತಿ. ನಾವೆಲ್ಲರೂ ಜನ್ಮವನ್ನು, ಎಂದರೆ ಹುಟ್ಟನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತೇವೆ. ಆದರೆ ಅವಸಾನವನ್ನು, ಎಂದರೆ ಮುಳುಗುವುದನ್ನು ನೆನಸಿಕೊಂಡರೂ ಸಾಕು ಹೆದರುತ್ತೇವೆ, ಕಂಗಾಲಾಗುತ್ತೇವೆ. ಹುಟ್ಟುವುದು ಏಳಿಗೆಯನ್ನು ಸೂಚಿಸುತ್ತದೆ; ಮುಳುಗುವುದು ಅವನತಿಯನ್ನು ಸೂಚಿಸುತ್ತದೆ. ನಾವೀಗ ಲಾಭದ ಪಥದಲ್ಲಿದ್ದೇವೋ ಅಥವಾ ನಷ್ಟದ ದಾರಿಯಲ್ಲಿದ್ದೇವೋ ಎಂದು ನಾವೇನೂ ಯಾರಿಗೂ ಬಾಯಿಬಿಟ್ಟು ಹೇಳಬೇಕಾಗಿರುವುದಿಲ್ಲ; ನಮ್ಮ ಮುಖ, ಮಾತು, ನಡಿಗೆ – ಹೀಗೆ ನಮ್ಮ ನಡೆ–ನುಡಿಗಳೇ ಈ ಸಂಗತಿಗಳನ್ನು ಜಗತ್ತಿಗೆ ಸಾರುತ್ತಿರುತ್ತದೆ. ಆದರೆ ಸೂರ್ಯನನ್ನು ಗಮನಿಸಿ: ಅವನು ಹುಟ್ಟುವಾಗಲೂ ಕೆಂಪಾಗಿರುತ್ತಾನೆ, ಮುಳುಗುವಾಗಲೂ ಕೆಂಪಾಗಿಯೇ ಇರುತ್ತಾನೆ. ಎಂದರೆ ಅವನು ಹುಟ್ಟನ್ನೂ ಅವಸಾನವನ್ನೂ, ಲಾಭವನ್ನೂ ನಷ್ಟವನ್ನೂ, ಸುಖವನ್ನೂ ಕಷ್ಟವನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸುತ್ತಿದ್ದಾನೆ; ಅವನು ಹಿಗ್ಗಿನಲ್ಲೂ ಕುಗ್ಗಿನಲ್ಲೂ ಒಂದೇ ರೀತಿಯಲ್ಲಿರುತ್ತಾನೆ. ಸುಭಾಷಿತ ಹೇಳುತ್ತಿದೆ: ಇದೇ ಮಹಾತ್ಮರ ಗುಣ.</p>.<p>ಸುಖದಲ್ಲೂ ದುಃಖದಲ್ಲೂ ನಾವು ಒಂದೇ ವಿಧದಲ್ಲಿ ಇರುವುದು ಸುಲಭವಲ್ಲ, ಹೌದು. ಅದಕ್ಕೆ ಸಾಕಷ್ಟು ಸಾಧನೆ ಬೇಕು; ಮಾನಸಿಕ ಸಿದ್ಧತೆ ಬೇಕು, ದಿಟ. ಆದರೆ ನಾವು ಅದನ್ನು ರೂಢಿಸಿಕೊಂಡರೆ ಜೀವನವು ಸದಾ ಸುಂದರವಾಗಿಯೇ ಕಾಣುತ್ತಿರುತ್ತದೆ; ಇದರಲ್ಲಿ ಅನುಮಾನ ಇಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>