ನಭೋಭೂಷಾ ಪೂಷಾ ಕಮಲವನಭೂಷಾ ಮಧುಕರೋ
ವಚೋಭೂಷಾ ಸತ್ಯಂ ವರವಿಭವಭೂಷಾ ವಿತರಣಮ್ ।
ಮನೋಭೂಷಾ ಮೈತ್ರೀ ಮಧುಸಮಯಭೂಷಾ ಮನಸಿಜಃ
ಸದೋಭೂಷಾ ಸೂಕ್ತಿಃ ಸಕಲಗುಣಭೂಷಾ ಚ ವಿನಯಃ ।।
ಇದರ ತಾತ್ಪರ್ಯ ಹೀಗೆ:
‘ಆಕಾಶಕ್ಕೆ ಸೂರ್ಯನೂ, ಕಮಲವನಕ್ಕೆ ದುಂಬಿಯೂ, ಮಾತಿಗೆ ಸತ್ಯವೂ, ಹೆಚ್ಚಾಗಿರುವ ಸಂಪತ್ತಿಗೆ ದಾನವೂ, ಮನಸ್ಸಿಗೆ ಸ್ನೇಹವೂ, ವಸಂತಕಾಲಕ್ಕೆ ಪ್ರೇಮವೂ, ಸಭೆಗೆ ಸೂಕ್ತಿಯೂ, ಎಲ್ಲ ಗುಣಗಳಿಗೂ ವಿನಯವೂ ಭೂಷಣಗಳು.‘
ಪ್ರತಿಯೊಂದು ವಸ್ತುವಿಗೂ ಅದರ ಸೊಗಸನ್ನು ಹೆಚ್ಚಿಸಬಲ್ಲ ಅದರದ್ದೇ ಆದ ಅಂಗವೊಂದು ಇದ್ದೇ ಇರುತ್ತದೆ; ಸೊಗಸಿನ ಜೊತೆಗೆ ಅದು ಅದರ ಬೆಲೆಯನ್ನೂ ಹೆಚ್ಚಿಸುತ್ತದೆ. ಆ ವಸ್ತುವಿನ ಪ್ರಯೋಜನಕ್ಕೂ ಸಾರ್ಥಕತೆಗೂ ಅದು ಕಾರಣವಾಗಿರುತ್ತದೆ. ಸುಭಾಷಿತ ಇದನ್ನೇ ಇಲ್ಲಿ ಹೇಳುತ್ತಿರುವುದು.
ಇಡಿಯ ಆಕಾಶಕ್ಕೆ ಭೂಷಣ ಎಂದರೆ ಸೂರ್ಯ. ಹೌದು, ಸೂರ್ಯನಿಲ್ಲದ ಆಕಾಶವನ್ನು ಊಹಿಸಿಕೊಳ್ಳಲೂ ಆಗದು. ಕಮಲವನಕ್ಕೆ ದುಂಬಿಯೇ ಭೂಷಣ; ದುಂಬಿಗಳು ಅಲ್ಲಿವೆ ಎಂದರೆ ಹೂವಿನಲ್ಲಿ ಮಕರಂದವೂ ಇದೆ ಎಂಬುದು ಗೊತ್ತಾಗುತ್ತದೆ; ಜೊತೆಗೆ ಕಮಲಗಳ ದೃಶ್ಯವೈಭವಕ್ಕೆ ದುಂಬಿಗಳ ಝೇಂಕಾರ ಸಂಗೀತವಾಗಿ ಒದಗಿ, ಅಲ್ಲಿಯ ಪರಿಸರವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.
ಸಾವಿರ ಮಾತುಗಳನ್ನು ಆಡಬಹುದು; ಆದರೆ ಆ ಎಲ್ಲ ಮಾತುಗಳಿಗೂ ಒಂದು ವ್ಯಕ್ತಿತ್ವ ಬರುವುದೇ ಅವು ಸತ್ಯವನ್ನು ಹೇಳಲು ಹೊರಟಾಗ. ಹೀಗಾಗಿ ಮಾತಿಗೆ ಭೂಷಣವೇ ಸತ್ಯ.
ನಮ್ಮ ಸಂಪತ್ತಿಗೆ ಅಲಂಕಾರ ಯಾವುದು? ದಾನವೇ ಸಂಪತ್ತಿಗೆ ಭೂಷಣ. ನಾವು ಕೂಡಿಟ್ಟ ಸಂಪತ್ತು ನಾಲ್ಕು ಜನರಿಗೆ ಉಪಯೋಗವಾಗಬೇಕು; ಆದರೆ ಅದಕ್ಕೆ ಸಾರ್ಥಕತೆ.
ಸ್ನೇಹವೇ ಮನಸ್ಸಿಗೆ ಭೂಷಣ ಎಂದಿದೆ ಸುಭಾಷಿತ. ಮನಸ್ಸಿನ ವೈಶಾಲ್ಯಕ್ಕೂ ಇದು ಸಂಕೇತ; ಸೊಗಸಿಗೂ ಸಂಕೇತ; ಆರೋಗ್ಯಕ್ಕೂ ಸಂಕೇತ.
ಪ್ರಕೃತಿಯಲ್ಲಿ ಕಾಣುವ ಸುಂದರ ಋತು ಎಂದರೆ ವಸಂತಋತು. ಈ ಸಮಯದಲ್ಲಿ ಪ್ರಕೃತಿಯು ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇದರ ಸಾರ್ಥಕತೆ ಪ್ರೇಮಭಾವದಲ್ಲಿಯೇ ಇದೆ.ಪ್ರೀತಿ–ಪ್ರೇಮ–ಶೃಂಗಾರಗಳಿಗೆ ಇದು ಒಪ್ಪುವಂಥ ಸಮಯವೂ ಹೌದು. ಹೀಗಾಗಿ ವಸಂತಸಮಯದಲ್ಲಿ ಮನ್ಮಥನೇ ಭೂಷಣ.
ಸಭೆ ಎಂದರೆ ಭಾಷಣ ಆಗಬಹುದು; ನಾಲ್ಕಾರು ಜನರ ಮಧ್ಯೆ ನಿಂತು ಆಡುವ ಮಾತುಗಳು. ಈ ಮಾತುಗಳಿಗೆ ಕಳೆ ಬರುವುದೇ ಸೂಕ್ತಿಗಳ ಮೂಲಕ. ಸೂಕ್ತಿ ಎಂದರೇನೆ ಒಳ್ಳೆಯ ಮಾತು ಎಂಬ ಅರ್ಥವಿದೆ. ಮಹಾಪುರುಷರ ವಿಚಾರಪ್ರದ ಮಾತುಗಳೂ ಸೂಕ್ತಿಗಳೇ ಹೌದು. ಸುಂದರವೂ ಅರ್ಥಪೂರ್ಣವೂ ಆದ ಸೂಕ್ತಿಗಳನ್ನು ಉದ್ಧರಿಸಿ ಮಾತನಾಡಿದರೆ ಇಡಿಯ ಪರಿಸರಕ್ಕೇ ಜೀವಕಳೆ ಬರುತ್ತದೆ; ಕೇಳುಗರಲ್ಲೂ ಆಕರ್ಷಣೆ–ಉತ್ಸಾಹಗಳು ಹೆಚ್ಚುತ್ತವೆ.
ನಮ್ಮಲ್ಲಿ ನೂರು ಒಳ್ಳೆಯ ಗುಣಗಳು ಇರಬಹುದು; ನಮ್ಮದು ಸಾವಿರ ಸಾಧನೆಗಳೂ ಇರಬಹುದು. ಆದರೆ ಅವುಗಳಿಗೆ ಬೆಲೆ ಬರುವುದು ನಮ್ಮಲ್ಲಿ ವಿನಯ ಇದ್ದಾಗ ಮಾತ್ರ. ಇತ್ತೀಚೆಗಷ್ಟೇ ನಮ್ಮನ್ನು ಅಗಲಿದ ಖ್ಯಾತ ಹಿನ್ನೆಲೆಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ವಿನಯಗುಣವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಅಷ್ಟೆಲ್ಲ ಸಾಧನೆಮಾಡಿದ್ದರೂ ಅವರಲ್ಲಿ ಅಹಂಕಾರ ಇರಲಿಲ್ಲ; ವಿನಯದ ಮೂರ್ತರೂಪವೇ ಆಗಿದ್ದ ಅವರನ್ನು ಜನರು ನೂರ್ಕಾಲ ಸ್ಮರಿಸಿಕೊಳ್ಳುತ್ತಲೇ ಇರುತ್ತಾರೆ.
ನಮ್ಮ ಕಾಲದ ದೊಡ್ಡ ದುರಂತ ಎಂದರೆ ನಮಗೆ ವಿನಯದ ಬೆಲೆ ಗೊತ್ತಿಲ್ಲ; ವಿನಯದ ಸೊಗಸೂ ಗೊತ್ತಿಲ್ಲ. ವಿನಯವೇ ನಮ್ಮ ಎಲ್ಲ ಸಾಧನೆಗಳನ್ನೂ ಕಾಪಾಡುವ ಮಹಾಶಕ್ತಿ ಎಂಬುದನ್ನು ನಾವು ಇನ್ನಾದರೂ ತಿಳಿದುಕೊಳ್ಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.