ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸೂಕ್ತಿ: ನಡೆ ಮುಂದೆ!

Last Updated 5 ಆಗಸ್ಟ್ 2020, 19:21 IST
ಅಕ್ಷರ ಗಾತ್ರ

ಕ್ಚಚಿದ್ವಿದ್ವಗೋಷ್ಠೀ ಕ್ವಚಿದಪಿ ಸುರಾಮತ್ತಕಲಹಃ

ಕ್ವಚಿದ್ವೀಣಾನಾದಃ ಕ್ವಚಿದಪಿ ಚ ಹಾಹೇತಿ ರುದಿತಮ್‌ ।

ಕ್ವಚಿದ್ರಮ್ಯಾ ರಾಮಾ ಕ್ವಚಿದಪಿ ಜರಾಜರ್ಜರತನುಃ

ನ ಜಾನೇ ಸಂಸಾರಃ ಕಿಮಮೃತಮಯಃ ಕಿಂ ವಿಷಮಯಃ ।।

ಇದರ ತಾತ್ಪರ್ಯ ಹೀಗೆ:

‘ಒಂದು ಕಡೆ ವಿದ್ವಾಂಸರ ಗೋಷ್ಠಿ; ಇನ್ನೊಂದು ಕಡೆ ಹೆಂಡಕುಡುಕರ ಜಗಳ. ಒಂದು ಕಡೆ ವೀಣಾನಾದ; ಇನ್ನೊಂದೆಡೆ ಹಾಹಾ ಎಂಬ ರೋದನ. ಒಂದು ಕಡೆ ಸುಂದರಿಯಾದ ತರುಣಿ; ಇನ್ನೊಂದು ಕಡೆ ಮುಪ್ಪಿನಿಂದ ಸೊರಗಿದ ಮುದುಕಿ. ಈ ಸಂಸಾರವು ಅಮೃತಮಯವೋ ವಿಷಯವೋ – ತಿಳಿಯುತ್ತಿಲ್ಲ.‘

ಜೀವನ ಎನ್ನುವುದು ಸಂಕೀರ್ಣ; ಹಲವು ವೈರುದ್ಧ್ಯಗಳ ನಡುವೆಯೇ ನಡೆಯುತ್ತಿರುತ್ತದೆ. ಹೀಗಾಗಿ ಜೀವನವನ್ನು ಹೀಗೆ – ಎಂದು ಹೇಳಲು ಕಷ್ಟವಾಗುತ್ತದೆ. ಒಮ್ಮೆ ಜೀವನ ಸುಖಮಯ ಎಂದು ಅನಿಸುತ್ತಿರುತ್ತದೆ; ಮರುಕ್ಷಣವೇ ಇಲ್ಲ ದುಃಖಮಯ ಎನಿಸಿಕೊಳ್ಳುತ್ತಿದೆ. ಸುಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ; ದುಃಖಮಯ ಎನ್ನುವುದಕ್ಕೂ ಹತ್ತಾರು ಅನುಭವಗಳು ಕಾರಣವಾಗಿರುತ್ತವೆ. ಆದರೆ ಸುಖಮಯ ಎನ್ನುವುದೋ ಅಥವಾ ದುಃಖಮಯ ಎನ್ನುವುದೋ – ಹೇಗೆ ನಿರ್ಧರಿಸುವುದು.

ಸುಭಾಷಿತ ಹೇಳುತ್ತಿರುವುದು ಇದನ್ನೇ. ನಮಗೆ ಹಿತವಾಗಿರುವಂಥ ವಿವರಗಳೂ ಜೀವನದಲ್ಲಿ ಎದುರಾಗುತ್ತಲೇ ಇರುತ್ತವೆ, ಅಹಿತವಾಗಿರುವಂಥವೂ ಎದುರಾಗುತ್ತಲೇ ಇರುತ್ತವೆ. ಇದರ ನಡುವೆ ನಮಗೆ ಪ್ರಶ್ನೆಯೊಂದು ಉಳಿದುಕೊಳ್ಳುತ್ತದೆ: ಜೀವನಕ್ಕೆ ಅರ್ಥವೇನು?

ಬಸವಣ್ಣನವರ ವಚನವೊಂದನ್ನು ಈ ಸುಭಾಷಿತದ ಜೊತೆ ನೋಡಬಹುದು:

ಹಬ್ಬಕ್ಕೆ ತಂದ ಹರಕೆಯ ಕುರಿ

ತೋರಣಕ್ಕೆ ತಂದ ತಳಿರ ಮೇಯಿತ್ತು !

ಕೊಂದಹರೆಂಬುದನರಿಯದೆ

ಬೆಂದ ಒಡಲ ಹೊರೆಯಹೋಯಿತ್ತಲ್ಲದೆ !

ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು:

ಕೊಂದವರುಳಿದರೆ ಕೂಡಲಸಂಗಮದೇವ ?

ಜೀವನವನ್ನು ಹಬ್ಬ ಎಂದು ಭಾವಿಸಿಕೊಂಡು ಸಂಭ್ರಮಪಡುತ್ತಿರುತ್ತೇವೆ. ಆದರೆ ಆ ಸಂಭ್ರಮದ ಒಡಲಲ್ಲಿಯೇ ದುಃಖದ ಮಡುವೂ ತುಂಬಿಕೊಂಡಿರುತ್ತದೆ; ಆದರೆ ಅದು ಆ ಕ್ಷಣ ನಮ್ಮ ಗಮನಕ್ಕೆ ಬಂದಿರುವುದಿಲ್ಲ.

ಬಲಿ ಕೊಡಲು ಕುರಿಯೊಂದನ್ನು ತಂದಿದ್ದಾರೆ; ಆದರೆ ಪಾಪ! ಆ ಕುರಿಗೆ ಇದು ಹೇಗೆ ಗೊತ್ತಾದೀತು? ಹಬ್ಬದಲ್ಲಿ ಕಟ್ಟಲು ತೋರಣವನ್ನು ಸಿದ್ಧಮಾಡಿಟ್ಟಿದ್ದಾರೆ. ಆ ಕುರಿ ಅದನ್ನೇ ತಿನ್ನುತ್ತಿದೆಯಂತೆ, ಮುಂದಿನ ಕ್ಷಣವೇ ಅದಕ್ಕೆ ಸಾವು ಇದೆ ಎಂದು ತಿಳಿಯದೆಯೇ!

ನಮ್ಮ ಜೀವನದಲ್ಲಿ ಎದುರಾಗುವ ಸುಖದ ಸಂದರ್ಭಗಳೂ ಹೀಗೇ ಇರುತ್ತವೆ; ಅಥವಾ ಕಷ್ಟಪರಂಪರೆಗಳೂ ಹೀಗೇ ಇರುತ್ತವೆ – ಒಂದು ಇನ್ನೊಂದರಲ್ಲಿ ಬೆರೆತುಕೊಂಡಿರುತ್ತದೆ.

ಮಂಕುತಿಮ್ಮನ ಕಗ್ಗದ ಪದ್ಯವೊಂದು ಹೀಗಿದೆ:

ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ।।
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ।।

ಜೀವನದಲ್ಲಿ ಇಂಥ ವೈರುದ್ಧ್ಯಗಳೇ ತುಂಬಿ ತುಳುಕುತ್ತಿದ್ದರೂ ನಮಗೆ ಅದನ್ನು ಮೀರಿ ನಡೆಯುವಂಥ ಅವಕಾಶ ಇಲ್ಲ. ನಾವು ಹತ್ತಿ ಕುಳಿತಿರುವ ಜಟಕಾಬಂಡಿಯನ್ನು ನಡೆಸುತ್ತಿರುವವನು ಬೇರೊಬ್ಬನಿದ್ದಾನೆ; ನಾವು ಪ್ರಯಾಣಿಕರು ಮಾತ್ರವಷ್ಟೆ. ಪ್ರಯಾಣದ ದಿಕ್ಕನ್ನೇ ನಿಯಂತ್ರಿಸಬಲ್ಲ ಚುಕ್ಕಾಣಿಯಾಗಲೀ ಶಕ್ತಿಯಾಗಲೀ ನಮಗೆ ಒದಗಿಲ್ಲ. ಹೀಗಾಗಿ ಜೀವನ ನಮ್ಮನ್ನು ಕರೆದುಕೊಂಡುಹೋಗುವ ದಿಕ್ಕಿಗೆ ನಾವು ಹಜ್ಜೆ ಹಾಕಬೇಕಷ್ಟೆ.

ಆದರೆ ನಾವು ಈ ಕಾರಣದಿಂದ ಹೆದರಬೇಕಿಲ್ಲ, ಧೃತಿಗೆಡಬೇಕಿಲ್ಲ ಎಂದೂ ಡಿವಿಜಿಯವರು ಹೇಳುತ್ತಿದ್ದಾರೆ. ಈ ಪ್ರಯಾಣದಲ್ಲಿ ನಾವು ಬೀಳಬಹುದು; ಆದರೆ ಅದರಿಂದ ಹೆದರಬೇಡಿ. ಏಕೆಂದರೆ ನಾವು ಬಿದ್ದರೆ ಎಲ್ಲಿ ಬೀಳುತ್ತೇವೆ? ಈ ನೆಲದ ಮೇಲೆಯೇ ಬೀಳುತ್ತೇವೆ; ಭೂಮಿಯ ಒಳಗೆ, ಪಾತಾಳಕ್ಕೆ ಜಾರುವುದಿಲ್ಲವಷ್ಟೆ! ಪದ ಕುಸಿಯೆ ನೆಲವಿಹದು – ಎಂದರೆ ಕಾಲು ಸೋತಾಗ ನೆಲದ ಮೇಲೆ ಕುಸಿಯುತ್ತವೇಯೇ ಹೊರತು ಪಾತಾಳವನ್ನು ಸೇರುವುದಿಲ್ಲ. ಹೀಗಾಗಿ ಜೀವನದಲ್ಲಿ ಬಂದದ್ದನ್ನು ಧೈರ್ಯವಾಗಿ ಸ್ವೀಕರಿಸಿ, ಮುಂದಕ್ಕೆ ಸಾಗುವುದನ್ನು ಕಲಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT