ಇಂದು ನಮ್ಮ ಬಗ್ಗೆ ನಾವೇ ಏನೇನೂ ಸರ್ಟಿಫಿಕೇಟ್ಗಳನ್ನು ಕೊಟ್ಟುಕೊಳ್ಳುತ್ತಿರುತ್ತೇವೆ. ನಾನು ಒಳ್ಳೆಯವನು, ನಾನು ಪರೋಪಕಾರಿ, ನಾನು ರಾಷ್ಟ್ರಭಕ್ತ, ನಾನು ಧರ್ಮಾತ್ಮ, ನಾನು ಬುದ್ಧಿವಂತ, ನಾನು ಸಭ್ಯ, ನಾನು ಕವಿ, ನಾನು ಸಹೃದಯ – ಹೀಗೆ ಏನೇನೋ ಗುಣಗಳನ್ನು ನಮ್ಮ ಮೇಲೆ ನಾವೇ ಆರೋಪಿಸಿಕೊಳ್ಳುತ್ತಿರುತ್ತೇವೆ. ಸುಭಾಷಿತ ಕೇಳುತ್ತಿದೆ, ನಿಜವಾಗಿಯೂ ನೀವು ಇಷ್ಟೆಲ್ಲ ಗುಣವಂತರಾಗಿದ್ದರೆ ಅದನ್ನು ನೀವಾಗಿಯೇ ಒತ್ತಿ ಒತ್ತಿ ಹೇಳಬೇಕಿಲ್ಲ; ಅವು ಸಹಜವಾಗಿ ಯಾವಾಗ ಪ್ರಕಟವಾಗಬೇಕು ಆಗ ಪ್ರಕಟವಾಗುತ್ತವೆ; ಆ ಮೂಲಕ ಜನರ ಗಮನಕ್ಕೂ ಬರುತ್ತವೆ. ಹೀಗಲ್ಲದೆ, ನಿಮ್ಮಲ್ಲಿರದ ಗುಣಗಳ ಬಗ್ಗೆ ನೀವು ಎಷ್ಟೋ ದೊಡ್ಡ ದನಿಯಲ್ಲಿ ಪ್ರಚಾರ ಮಾಡಿದರೂ ಆ ಗುಣಗಳು ನಿಮ್ಮಲ್ಲಿ ಬಂದು ಸೇರುವುದೂ ಇಲ್ಲ, ಜನರೂ ನಿಮ್ಮಲ್ಲಿ ಆ ಗುಣಗಳು ಇವೆ ಎಂದು ನಂಬುವುದಿಲ್ಲ.