<p><em><strong>ಕಿಂ ಮಧುನಾ ಕಿಂ ವಿಧುನಾ</strong></em></p>.<p><em><strong>ಕಿಂ ಸುಧಯಾ ಕಿಂ ಚವಸುಧಯಾಖಿಲಯಾ ।</strong></em></p>.<p><em><strong>ಯದಿ ಹೃದಯಹಾರಿಚರಿತಃ</strong></em></p>.<p><em><strong>ಪುರುಷಃ ಪುನರೇಪಿ ನಯನಯೋರಯನಮ್ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಜೇನುತುಪ್ಪ, ಚಂದ್ರ, ಅಮೃತ, ಸಮಸ್ತಭೂಮಂಡಲ – ಇವುಗಳಿಂದ ಏನಾದೀತು? ಮನಸ್ಸಿಗೊಪ್ಪುವ ನಡತೆಯಿಂದ ಕೂಡಿದ ಸತ್ಪುರುಷರು ಕಣ್ಣಿಗೆ ಗೋಚರವಾದರೆ ಅದೇ ಎಲ್ಲವೂ.‘</p>.<p>ನಾವು ಯಾವುದಕ್ಕೆ ಹಂಬಲಿಸಬೇಕು ಎನ್ನುವುದನ್ನು ಸುಭಾಷಿತ ಹೇಳುತ್ತಿದೆ; ಅಥವಾ ಯಾವುದರಿಂದ ನಮಗೆ ದಿಟವಾದ ತಂಪು ಒದಗುತ್ತದೆ ಎನ್ನುವುದನ್ನು ಹೇಳುತ್ತಿದೆ ಎಂದೂ ಹೇಳಬಹುದು.</p>.<p>ಜೀನುತುಪ್ಪ. ಇದರ ರುಚಿ ಯಾರಿಗೆ ತಾನೆ ಇಷ್ಟವಾಗದು? ರುಚಿಗೂ ಬರುತ್ತದೆ, ಔಷಧಕ್ಕೂ ಒದಗುತ್ತದೆ. ಮಕ್ಕಳಿಗೆ ಔಷಧವನ್ನು ಕೊಡುವಾಗಲೂ ಬಳುಸುವುದುಂಟು, ಔಷಧದ ಕಹಿ ಅವಕ್ಕೆ ಗೊತ್ತಾಗದಿರಲಿ ಎಂದು. ಅಷ್ಟರ ಮಟ್ಟಿಗೆ ಜೇನಿನ ಸವಿ ವೈಶ್ವಿಕವಾಗಿದೆ. ವೇದದಲ್ಲಿಯೂ ಜೇನನ್ನು ಕುರಿತ ಸೊಲ್ಲುಗಳಿವೆ; ಜಗತ್ತೇ ಮಧುಮಯ, ಎಂದರೆ ಎಲ್ಲವೂ ಜೇನಿನ ಸಿಹಿಯಂತೆ ಆಗಲಿ ಎಂಬ ಪ್ರಾರ್ಥನೆ ಅಲ್ಲಿದೆ.</p>.<p>ಚಂದ್ರನು ಕವಿಗಳಿಗೂ ಪ್ರೇಮಿಗಳಿಗೂ ಮಕ್ಕಳಿಗೂ ಶಾಸ್ತ್ರಕಾರರಿಗೂ, ನಮ್ಮ ಕಾಲದಲ್ಲಿ ವಿಜ್ಞಾನಿಗಳೂ ತುಂಬ ಪ್ರಿಯನಾದವನು. ಚಂದ್ರನ ದರ್ಶನವೇ ಮನಸ್ಸಿಗೆ ತಂಪಾದ ಅನುಭವವೂ ಆಹ್ಲಾದಕರ ಅನುಭೂತಿಯೂ ಒದಗುತ್ತದೆ.</p>.<p>ಅಮೃತದ ಕಲ್ಪನೆಯೇ ದಿವ್ಯವಾಗಿದೆ; ನಮ್ಮನ್ನು ಸಾವಿನಿಂದ ಪಾರುಮಾಡುವಂಥದ್ದು; ಅಲ್ಲ, ಸಾವನ್ನೇ ಇಲ್ಲವಾಗಿಸುವುದು. ಇದರ ಪ್ರಾಪ್ರಿಗಾಗಿ ದೇವತಗಳೂ ರಾಕ್ಷಸರೂ – ಇಬ್ಬರೂ ಒಂದಾದರು, ತಮ್ಮ ತಮ್ಮ ಆಜನ್ಮವೈರವನ್ನೂ ಪಕ್ಕಕ್ಕಿಟ್ಟು! ನಮ್ಮನ್ನು ಚಿರಂಜೀವಿಗಳನ್ನಾಗಿಸುವ ಅಮೃತವನ್ನು ಯಾರು ತಾನೆ ಬಯಸುವುದಿಲ್ಲ?</p>.<p>ಮನುಷ್ಯನಿಗೆ ತುಂಬ ಇಷ್ಟವಾದದ್ದು ಮೂರು ಸಂಗತಿಗಳು ಎಂದು ದಾಸರು ಒಂದು ಪಟ್ಟಿ ಕೊಡುತ್ತಾರೆ: ಹೆಣ್ಣು, ಹೊನ್ನು ಮತ್ತು ಮಣ್ಣು. ಮಣ್ಣು ಎಂದರೆ ಭೂಮಿಯ ಒಡೆತನ; ಅಧಿಕಾರ; ರಾಜತ್ವ; ನಮ್ಮ ಕಾಲದಲ್ಲಾದರೆ ಮಂತ್ರಿಗಿರಿ. ನಾವು ಯಾವುದೋ ಒಂದು ರಾಜ್ಯದ ಅಥವಾ ದೇಶದ ಮಂತ್ರಿಯಾಗುವುದೇ ದೊಡ್ಡ ಸಾಧನೆ. ಹೀಗಿರುವಾಗ ಇಡಿಯ ಭೂಮಂಡಲದ ಆಧಿಪತ್ಯವೇ ನಮಗೆ ದಕ್ಕಿದರೆ, ಬೇಡ ಎಂದು ಯಾರಾದರೂ ಹೇಳುವುದುಂಟೆ?</p>.<p>ಆದರೆ ಸುಭಾಷಿತ ಹೇಳುತ್ತಿದೆ: ನೀವು ಯಾವುದರಿಂದ ಸುಖ, ಸಂತೋಷ, ನೆಮ್ಮದಿ, ತೃಪ್ತಿಗಳು ಸಿಗುತ್ತವೆ ಎಂದು ಭಾವಿಸಿಕೊಂಡಿದ್ದೀರೋ ಅವುಗಳಿಂದ ದಿಟವಾಗಿಯೂ ಸಿಗದು; ಸಜ್ಜನರ ಸಾಮೀಪ್ಯವೇ ನಮಗೆ ಹೆಚ್ಚಿನ ಸುಖವನ್ನೂ ನೆಮ್ಮದಿಯನ್ನೂ ತೃಪ್ತಿಯನ್ನೂ ಆಹ್ಲಾದವನ್ನೂ ನೀಡುವಂಥದ್ದು. ಸರ್ವಜ್ಞತ್ರಿಪದಿಯೊಂದು ಹೀಗಿದೆ:</p>.<p>’ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ<br />ದುರ್ಜನರ ಸಂಗ ಬಚ್ಚಲ<br />ಕೊಚ್ಚೆಯಂತಿಹದು ಸರ್ವಜ್ಞ’</p>.<p>ಸಜ್ಜನರ ಸಂಗವನ್ನೇ ಇಲ್ಲಿ ಜೇನಿನ ಸವಿಗೆ ಸಮೀಕರಿಸಲಾಗಿದೆ.</p>.<p>ಸುಭಾಷಿತ ಹೇಳುತ್ತಿರುವುದು ಕೂಡ ಅದನ್ನೇ.ಜೇನುತುಪ್ಪ, ಚಂದ್ರ, ಅಮೃತ, ಸಮಸ್ತಭೂಮಂಡಲ – ಇವುಗಳಿಂದ ಏನೆಲ್ಲ ಸಂತೋಷ–ಪ್ರಯೋಜನಗಳು ಸಿಗುತ್ತವೆಯೋ ಅವೆಲ್ಲವೂ ಕೇವಲ ಸಜ್ಜನನ ಸ್ನೇಹವೇ ಒದಗಿಸುತ್ತದೆ. ಹೀಗಾಗಿಯೇ ಬಸವಣ್ಣನವರು ಕೂಡ ಹೀಗೆಂದರು:</p>.<p>’ಸಾರ: ಸಜ್ಜನರ ಸಂಗವ ಮಾಡುವುದು</p>.<p>ದೂರ: ದುರ್ಜನರ ಸಂಗ ಬೇಡವಯ್ಯಾ.</p>.<p>ಆವ ಹಾವಾದಡೇನು? ವಿಷವೊಂದೆ,</p>.<p>ಅಂತವರ ಸಂಗ ಬೇಡವಯ್ಯಾ.</p>.<p>ಅಂತರಂಗ ಶುದ್ಧವಿಲ್ಲದವರ ಸಂಗವು</p>.<p>ಸಿಂಗಿ, ಕಾಳಕೂಟ ವಿಷವೊ ಕೂಡಲಸಂಗಯ್ಯಾ.‘</p>.<p>ಬಸವಣ್ಣನವರ ವಚನದಲ್ಲಿ ಇನ್ನೊಂದು ಸ್ವಾರಸ್ಯವೂ ಉಂಟು. ಅವರು ಸಜ್ಜನರ ಸಾಮೀಪ್ಯವನ್ನು ಬಯಸಬೇಕು; ದುಷ್ಟರಿಂದ ದೂರ ಇರಬೇಕು – ಎಂದಷ್ಟೆ ಹೇಳುತ್ತಿಲ್ಲ; ಸಜ್ಜನರ ಗುಣ ಎಂಥದು ಎನ್ನುವುದನ್ನು, ’ದುರ್ಜನರ ಗುಣಗಳು ಎಂಥವು‘ ಎಂದು ಹೇಳುವ ಮೂಲಕ ನಿರೂಪಿಸಿದ್ದಾರೆ. ’ಅಂತರಂಗಶುದ್ಧವಿಲ್ಲದವರೇ ದುರ್ಜನರು; ಅವರು ಹಾವಿಗೆ ಸಮಾನ. ಅಂಥವರ ಸಹವಾಸಕ್ಕೆ ಹೋಗಬೇಡಿ‘ ಎಂದು ಹೇಳುತ್ತಲೇ ಆ ಸಹವಾಸ ಹೇಗಿರುತ್ತದೆ ಎನ್ನುವುದನ್ನೂ ಹೇಳಿದ್ದಾರೆ. ’ಸಿಂಹ - ಹೆಣ್ಣುಸಿಂಹದ ಸಂಗದಂತೆ, ಕಾಳಕೂಟದ ವಿಷದಂತೆ‘ ಅವರ ಸ್ನೇಹ ಅಪಾಯಕಾರಿ ಎಂಬ ಎಚ್ಚರಿಕೆಯನ್ನು ನೀಡುತ್ತ, ಸಜ್ಜನರ ಸಾಮೀಪ್ಯವನ್ನು ದಕ್ಕಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.</p>.<p>ಸಜ್ಜನರನ್ನು ಇಲ್ಲಿ ಸುಭಾಷಿತವು ಸೂಚಿಸುವ ಪದ ಸೊಗಸಾಗಿದೆ: ’ಹೃದಯಹಾರಿಚರಿತಃ‘ – ಹೃದಯವನ್ನು ಅಪಹರಿಸುವಂಥ ವ್ಯಕ್ತಿತ್ವವನ್ನು ಉಳ್ಳವರು. ಅಂಥವರು ಸಿಗುವುದು ತುಂಬ ಕಷ್ಟವೇ! ಆದರೆ ಸಿಕ್ಕಾಗ ಅಂಥವರು ನಮ್ಮಿಂದ ದೂರ ಸರಿಯದಂತೆ ನಾವು ಎಚ್ಚರವಾಗಿಯೂ ಇರಬೇಕೆನ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಕಿಂ ಮಧುನಾ ಕಿಂ ವಿಧುನಾ</strong></em></p>.<p><em><strong>ಕಿಂ ಸುಧಯಾ ಕಿಂ ಚವಸುಧಯಾಖಿಲಯಾ ।</strong></em></p>.<p><em><strong>ಯದಿ ಹೃದಯಹಾರಿಚರಿತಃ</strong></em></p>.<p><em><strong>ಪುರುಷಃ ಪುನರೇಪಿ ನಯನಯೋರಯನಮ್ ।।</strong></em></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>’ಜೇನುತುಪ್ಪ, ಚಂದ್ರ, ಅಮೃತ, ಸಮಸ್ತಭೂಮಂಡಲ – ಇವುಗಳಿಂದ ಏನಾದೀತು? ಮನಸ್ಸಿಗೊಪ್ಪುವ ನಡತೆಯಿಂದ ಕೂಡಿದ ಸತ್ಪುರುಷರು ಕಣ್ಣಿಗೆ ಗೋಚರವಾದರೆ ಅದೇ ಎಲ್ಲವೂ.‘</p>.<p>ನಾವು ಯಾವುದಕ್ಕೆ ಹಂಬಲಿಸಬೇಕು ಎನ್ನುವುದನ್ನು ಸುಭಾಷಿತ ಹೇಳುತ್ತಿದೆ; ಅಥವಾ ಯಾವುದರಿಂದ ನಮಗೆ ದಿಟವಾದ ತಂಪು ಒದಗುತ್ತದೆ ಎನ್ನುವುದನ್ನು ಹೇಳುತ್ತಿದೆ ಎಂದೂ ಹೇಳಬಹುದು.</p>.<p>ಜೀನುತುಪ್ಪ. ಇದರ ರುಚಿ ಯಾರಿಗೆ ತಾನೆ ಇಷ್ಟವಾಗದು? ರುಚಿಗೂ ಬರುತ್ತದೆ, ಔಷಧಕ್ಕೂ ಒದಗುತ್ತದೆ. ಮಕ್ಕಳಿಗೆ ಔಷಧವನ್ನು ಕೊಡುವಾಗಲೂ ಬಳುಸುವುದುಂಟು, ಔಷಧದ ಕಹಿ ಅವಕ್ಕೆ ಗೊತ್ತಾಗದಿರಲಿ ಎಂದು. ಅಷ್ಟರ ಮಟ್ಟಿಗೆ ಜೇನಿನ ಸವಿ ವೈಶ್ವಿಕವಾಗಿದೆ. ವೇದದಲ್ಲಿಯೂ ಜೇನನ್ನು ಕುರಿತ ಸೊಲ್ಲುಗಳಿವೆ; ಜಗತ್ತೇ ಮಧುಮಯ, ಎಂದರೆ ಎಲ್ಲವೂ ಜೇನಿನ ಸಿಹಿಯಂತೆ ಆಗಲಿ ಎಂಬ ಪ್ರಾರ್ಥನೆ ಅಲ್ಲಿದೆ.</p>.<p>ಚಂದ್ರನು ಕವಿಗಳಿಗೂ ಪ್ರೇಮಿಗಳಿಗೂ ಮಕ್ಕಳಿಗೂ ಶಾಸ್ತ್ರಕಾರರಿಗೂ, ನಮ್ಮ ಕಾಲದಲ್ಲಿ ವಿಜ್ಞಾನಿಗಳೂ ತುಂಬ ಪ್ರಿಯನಾದವನು. ಚಂದ್ರನ ದರ್ಶನವೇ ಮನಸ್ಸಿಗೆ ತಂಪಾದ ಅನುಭವವೂ ಆಹ್ಲಾದಕರ ಅನುಭೂತಿಯೂ ಒದಗುತ್ತದೆ.</p>.<p>ಅಮೃತದ ಕಲ್ಪನೆಯೇ ದಿವ್ಯವಾಗಿದೆ; ನಮ್ಮನ್ನು ಸಾವಿನಿಂದ ಪಾರುಮಾಡುವಂಥದ್ದು; ಅಲ್ಲ, ಸಾವನ್ನೇ ಇಲ್ಲವಾಗಿಸುವುದು. ಇದರ ಪ್ರಾಪ್ರಿಗಾಗಿ ದೇವತಗಳೂ ರಾಕ್ಷಸರೂ – ಇಬ್ಬರೂ ಒಂದಾದರು, ತಮ್ಮ ತಮ್ಮ ಆಜನ್ಮವೈರವನ್ನೂ ಪಕ್ಕಕ್ಕಿಟ್ಟು! ನಮ್ಮನ್ನು ಚಿರಂಜೀವಿಗಳನ್ನಾಗಿಸುವ ಅಮೃತವನ್ನು ಯಾರು ತಾನೆ ಬಯಸುವುದಿಲ್ಲ?</p>.<p>ಮನುಷ್ಯನಿಗೆ ತುಂಬ ಇಷ್ಟವಾದದ್ದು ಮೂರು ಸಂಗತಿಗಳು ಎಂದು ದಾಸರು ಒಂದು ಪಟ್ಟಿ ಕೊಡುತ್ತಾರೆ: ಹೆಣ್ಣು, ಹೊನ್ನು ಮತ್ತು ಮಣ್ಣು. ಮಣ್ಣು ಎಂದರೆ ಭೂಮಿಯ ಒಡೆತನ; ಅಧಿಕಾರ; ರಾಜತ್ವ; ನಮ್ಮ ಕಾಲದಲ್ಲಾದರೆ ಮಂತ್ರಿಗಿರಿ. ನಾವು ಯಾವುದೋ ಒಂದು ರಾಜ್ಯದ ಅಥವಾ ದೇಶದ ಮಂತ್ರಿಯಾಗುವುದೇ ದೊಡ್ಡ ಸಾಧನೆ. ಹೀಗಿರುವಾಗ ಇಡಿಯ ಭೂಮಂಡಲದ ಆಧಿಪತ್ಯವೇ ನಮಗೆ ದಕ್ಕಿದರೆ, ಬೇಡ ಎಂದು ಯಾರಾದರೂ ಹೇಳುವುದುಂಟೆ?</p>.<p>ಆದರೆ ಸುಭಾಷಿತ ಹೇಳುತ್ತಿದೆ: ನೀವು ಯಾವುದರಿಂದ ಸುಖ, ಸಂತೋಷ, ನೆಮ್ಮದಿ, ತೃಪ್ತಿಗಳು ಸಿಗುತ್ತವೆ ಎಂದು ಭಾವಿಸಿಕೊಂಡಿದ್ದೀರೋ ಅವುಗಳಿಂದ ದಿಟವಾಗಿಯೂ ಸಿಗದು; ಸಜ್ಜನರ ಸಾಮೀಪ್ಯವೇ ನಮಗೆ ಹೆಚ್ಚಿನ ಸುಖವನ್ನೂ ನೆಮ್ಮದಿಯನ್ನೂ ತೃಪ್ತಿಯನ್ನೂ ಆಹ್ಲಾದವನ್ನೂ ನೀಡುವಂಥದ್ದು. ಸರ್ವಜ್ಞತ್ರಿಪದಿಯೊಂದು ಹೀಗಿದೆ:</p>.<p>’ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ<br />ದುರ್ಜನರ ಸಂಗ ಬಚ್ಚಲ<br />ಕೊಚ್ಚೆಯಂತಿಹದು ಸರ್ವಜ್ಞ’</p>.<p>ಸಜ್ಜನರ ಸಂಗವನ್ನೇ ಇಲ್ಲಿ ಜೇನಿನ ಸವಿಗೆ ಸಮೀಕರಿಸಲಾಗಿದೆ.</p>.<p>ಸುಭಾಷಿತ ಹೇಳುತ್ತಿರುವುದು ಕೂಡ ಅದನ್ನೇ.ಜೇನುತುಪ್ಪ, ಚಂದ್ರ, ಅಮೃತ, ಸಮಸ್ತಭೂಮಂಡಲ – ಇವುಗಳಿಂದ ಏನೆಲ್ಲ ಸಂತೋಷ–ಪ್ರಯೋಜನಗಳು ಸಿಗುತ್ತವೆಯೋ ಅವೆಲ್ಲವೂ ಕೇವಲ ಸಜ್ಜನನ ಸ್ನೇಹವೇ ಒದಗಿಸುತ್ತದೆ. ಹೀಗಾಗಿಯೇ ಬಸವಣ್ಣನವರು ಕೂಡ ಹೀಗೆಂದರು:</p>.<p>’ಸಾರ: ಸಜ್ಜನರ ಸಂಗವ ಮಾಡುವುದು</p>.<p>ದೂರ: ದುರ್ಜನರ ಸಂಗ ಬೇಡವಯ್ಯಾ.</p>.<p>ಆವ ಹಾವಾದಡೇನು? ವಿಷವೊಂದೆ,</p>.<p>ಅಂತವರ ಸಂಗ ಬೇಡವಯ್ಯಾ.</p>.<p>ಅಂತರಂಗ ಶುದ್ಧವಿಲ್ಲದವರ ಸಂಗವು</p>.<p>ಸಿಂಗಿ, ಕಾಳಕೂಟ ವಿಷವೊ ಕೂಡಲಸಂಗಯ್ಯಾ.‘</p>.<p>ಬಸವಣ್ಣನವರ ವಚನದಲ್ಲಿ ಇನ್ನೊಂದು ಸ್ವಾರಸ್ಯವೂ ಉಂಟು. ಅವರು ಸಜ್ಜನರ ಸಾಮೀಪ್ಯವನ್ನು ಬಯಸಬೇಕು; ದುಷ್ಟರಿಂದ ದೂರ ಇರಬೇಕು – ಎಂದಷ್ಟೆ ಹೇಳುತ್ತಿಲ್ಲ; ಸಜ್ಜನರ ಗುಣ ಎಂಥದು ಎನ್ನುವುದನ್ನು, ’ದುರ್ಜನರ ಗುಣಗಳು ಎಂಥವು‘ ಎಂದು ಹೇಳುವ ಮೂಲಕ ನಿರೂಪಿಸಿದ್ದಾರೆ. ’ಅಂತರಂಗಶುದ್ಧವಿಲ್ಲದವರೇ ದುರ್ಜನರು; ಅವರು ಹಾವಿಗೆ ಸಮಾನ. ಅಂಥವರ ಸಹವಾಸಕ್ಕೆ ಹೋಗಬೇಡಿ‘ ಎಂದು ಹೇಳುತ್ತಲೇ ಆ ಸಹವಾಸ ಹೇಗಿರುತ್ತದೆ ಎನ್ನುವುದನ್ನೂ ಹೇಳಿದ್ದಾರೆ. ’ಸಿಂಹ - ಹೆಣ್ಣುಸಿಂಹದ ಸಂಗದಂತೆ, ಕಾಳಕೂಟದ ವಿಷದಂತೆ‘ ಅವರ ಸ್ನೇಹ ಅಪಾಯಕಾರಿ ಎಂಬ ಎಚ್ಚರಿಕೆಯನ್ನು ನೀಡುತ್ತ, ಸಜ್ಜನರ ಸಾಮೀಪ್ಯವನ್ನು ದಕ್ಕಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.</p>.<p>ಸಜ್ಜನರನ್ನು ಇಲ್ಲಿ ಸುಭಾಷಿತವು ಸೂಚಿಸುವ ಪದ ಸೊಗಸಾಗಿದೆ: ’ಹೃದಯಹಾರಿಚರಿತಃ‘ – ಹೃದಯವನ್ನು ಅಪಹರಿಸುವಂಥ ವ್ಯಕ್ತಿತ್ವವನ್ನು ಉಳ್ಳವರು. ಅಂಥವರು ಸಿಗುವುದು ತುಂಬ ಕಷ್ಟವೇ! ಆದರೆ ಸಿಕ್ಕಾಗ ಅಂಥವರು ನಮ್ಮಿಂದ ದೂರ ಸರಿಯದಂತೆ ನಾವು ಎಚ್ಚರವಾಗಿಯೂ ಇರಬೇಕೆನ್ನಿ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>