ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 12–01–2020ರಿಂದ 18–01–2020ರ ವರೆಗಿನ ರಾಶಿ ಭವಿಷ್ಯ

Last Updated 12 ಜನವರಿ 2020, 1:28 IST
ಅಕ್ಷರ ಗಾತ್ರ

ಮೇಷ

ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ – ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಬಹಳ ಹಿಂದಿನಿಂದ ಇದ್ದ ರಾಜಕೀಯ ಆಸಕ್ತಿ ಈಗ ಚಿಗುರೊಡೆದು ಆ ಕ್ಷೇತ್ರದಲ್ಲಿನ ಹಿರಿಯರ ಪರಿಚಯ ಮಾಡಿ ಕೊಳ್ಳುವಿರಿ. ತನ್ಮೂಲಕ ರಾಜಕೀಯ ಪ್ರವೇಶ ಮಾಡಲು ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವಿರಿ. ಒಡಹುಟ್ಟಿದವರೊಡನೆ ಸ್ವಲ್ಪ ಸಂಬಂಧಗಳಲ್ಲಿ ವ್ಯತ್ಯಾಸವಾಗಬಹುದು. ತಂದೆಯ ಪರಿಚಿತರಿಂದ ನಿಮಗೆ ಉದ್ಯೋಗ ದೊರೆಯುತ್ತದೆ. ಬಡ್ತಿಗಾಗಿ ಬಹಳ ವರ್ಷಗಳಿಂದ ಕಾಯುತ್ತಿರುವವರಿಗೆ ಈಗ ಬಡ್ತಿ ದೊರೆತು ಬೇರೆಡೆಗೆ ವರ್ಗವಾಗುವ ಸಾಧ್ಯತೆಯಿದೆ.

ವೃಷಭ

ಕೃತ್ತಿಕಾ 2,3,4, ರೋಹಿಣಿ, ಮೃಗಶಿರಾ 1,2 – ಮಕ್ಕಳು ನಿಮ್ಮ ಮಾತಿಗೆ ಹೆಚ್ಚು ಬೆಲೆ ಕೊಡುವರು. ನೀವು ತಲೆಕೆಡಿಸಿಕೊಂಡಿದ್ದ ಕೆಲವು ವಿಚಾರಗಳು ಸ್ನೇಹಿತರ ಮಧ್ಯಸ್ಥಿಕೆಯಿಂದ ಈಗ ಪರಿಹಾರವಾಗುತ್ತವೆ. ದ್ರವರೂಪದ ಆಹಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ. ರಾಸಾಯನಿಕ ವಸ್ತುಗಳನ್ನು ಮಾರುವವರಿಗೆ ವ್ಯವಹಾರ ಹೆಚ್ಚುತ್ತದೆ. ಕಣ್ಣಿನ ಬೇನೆಯನ್ನು ಉಪೇಕ್ಷೆಯನ್ನು ಮಾಡಬೇಡಿರಿ. ವಿದೇಶೀ ಮೂಲದ ವ್ಯವಹಾರವನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹೊಸ ಹೊಸ ಶಾಖೆಗಳನ್ನು ತೆರೆದು ವ್ಯವಹಾರ ವಿಸ್ತಾರವಾಗಬಹುದು.

ಮಿಥುನ

ಮೃಗಶಿರಾ 3,4, ಆರಿದ್ರಾ, ಪುನರ್ವಸು 1,2,3 – ನಿಮ್ಮ ಹಳೆಯ ಸಾಲಗಳನ್ನು ತೀರಿಸುವುದಕ್ಕೆ ಈಗ ಕಾಲ ಸನ್ನಿಹಿತವಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಪಾಲುದಾರರ ವಿರುದ್ಧ ಅನಗತ್ಯ ಟೀಕೆಯನ್ನು ಮಾಡಬೇಡಿರಿ. ವೃತ್ತಿಯಲ್ಲಿ ಒತ್ತಡವಿದ್ದು ಅದರ ಬಗ್ಗೆ ನಿಮಗೆ ಮತ್ತು ಹಿರಿಯ ಅಧಿಕಾರಿಗಳ ನಡುವೆ ಜಿಜ್ಞಾಸೆ ಮೂಡುವುದು. ಆಹಾರ ಸೇವನೆ ವಿಷಯದಲ್ಲಿ ಸ್ವಲ್ಪ ಎಚ್ಚರವಹಿಸಿರಿ, ವ್ಯತ್ಯಾಸವಾದಲ್ಲಿ ಉದರ ಸಂಬಂಧೀ ಖಾಯಿಲೆಗಳು ಕಾಡಬಹುದು. ವಿದೇಶದಲ್ಲಿ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಕಾನೂನಿನ ತೊಂದರೆಯು ತಪ್ಪುವುದು.

ಕಟಕ

ಪುನರ್ವಸು 4, ಪುಷ್ಯ, ಆಶ್ಲೇಷ – ಧನಾದಾಯವು ಸಾಮಾನ್ಯವಾಗಿರುತ್ತದೆ. ಹಣದ ವಹಿವಾಟು ಅಷ್ಟು ಒಳಿತಲ್ಲ. ವ್ಯವಹಾರಗಳಲ್ಲಿ ಸಾಕಷ್ಠು ಅವಕಾಶಗಳು ಒದಗಿ ಬರುತ್ತದೆ, ಸೂಕ್ತವಾಗಿ ಆಲೋಚಿಸಿ ಆಯ್ಕೆಯನ್ನು ಮಾಡಿಕೊಳ್ಳಿರಿ. ಯಾರೋ ಕಷ್ಟವೆಂದು ತೆಗೆದುಕೊಳ್ಳುವ ಸಾಲಕ್ಕೆ ಜಾಮೀನು ನೀಡದಿರಿ. ಇದು ಮುಂದೆ ನಿಮ್ಮ ಸಾಲವಾಗಬಹುದು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸ್ವಲ್ಪ ಸಾಧನೆಯಾಗುವುದು. ಧಾರ್ಮಿಕ ಕಾರ್ಯಗಳಿಗಾಗಿ ಮುಂದಾಳತ್ವವನ್ನು ವಹಿಸಿ ಹಣ ಖರ್ಚು ಮಾಡುವಿರಿ. ಇದರಿಂದ ಜನಾನುರಾಗ ಗಳಿಸುವಿರಿ.

ಸಿಂಹ

ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1 – ಅನವಶ್ಯಕವಾದ ಖರ್ಚುಗಳು ಒದಗಿ ಬಂದು ನಿಮ್ಮನ್ನು ಹೈರಾಣವಾಗಿಸುವುದು. ಬರಬೇಕಾಗಿದ್ದ ಹಣ ಸಕಾಲಕ್ಕೆ ಬರದೆ ಸಂಕಷ್ಠವೆನಿಸಿದರೂ ನಂತರ ಬೇರೊಂದು ಮೂಲದಿಂದ ಧನ ಒದಗಿ ಬಂದು ನಿಮ್ಮ ಕಷ್ಠ ತೀರುವುದು. ವಿದೇಶದಲ್ಲಿ ಕೆಲಸ ಮಾಡುತ್ತಿರುವವರಿಗೆ ಭತ್ಯೆಗಳು ಹೆಚ್ಚಾಗುವುವು. ಬಾಯಿ ಮಾತಿಗೆ ಮರುಳಾಗದೆ ಯಾವ ಹುತ್ತದಲ್ಲಿ ಯಾವ ಹಾವಿದೆ ಎಂದು ತಿಳಿದು ವ್ಯವಹಾರ ಮಾಡುವುದು ಅತೀ ಉತ್ತಮ. ಇದರಿಂದ ನಿಮ್ಮ ಶ್ರಮ, ಹಣ ಉಳಿಯುತ್ತದೆ.

ಕನ್ಯಾ

ಉತ್ತರ ಫಲ್ಗುಣಿ 2,3,4, ಹಸ್ತ, ಚಿತ್ತಾ 1,2 – ಹೊಸ ವ್ಯವಹಾರಗಳನ್ನು ಆರಂಭಿಸುವ ಮೊದಲು ಸೂಕ್ತವಾದ ದಾಖಲಾತಿ ಸರಿಯಾಗಿ ಹೊಂದಿಸಿಕೊಳ್ಳಿರಿ. ನೀವು ನಡೆಸುವ ಸಂಸ್ಥೆಗಳಿಗೆ ಸಾಕಷ್ಠು ದೇಣಿಗೆ ಬರುವ ಸಾಧ್ಯತೆಗಳಿವೆ. ಸಾಕಷ್ಠು ಧನ ಸಹಾಯ ತವರಿಂದ ಬರುವ ಎಲ್ಲಾ ಸಾಧ್ಯತೆಗಳಿವೆ. ಕಕ್ಕುಟೋದ್ಯಮವನ್ನು ನಡೆಸುವವರಿಗೆ ಭರ್ಝರಿ ವ್ಯಾಪಾರ ನಡೆಯುವುದು. ಪಶು ಸಂಗೋಪನೆಯನ್ನು ಮಾಡುವವರಿಗೆ ಉತ್ತಮ ರಾಸುಗಳಿಂದ ಲಾಭ. ಸಿಹಿ ತಿಂಡಿಯನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ಜೋರಾಗುತ್ತದೆ.

ತುಲಾ

ಚಿತ್ತಾ 3,4, ಸ್ವಾತಿ, ವಿಶಾಖೆ 1,2,3 – ಆಡಳಿತಾತ್ಮಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವವರಿಗೆ ಉತ್ತಮ ಸಂಪಾದನೆ ಮತ್ತು ಹೆಸರು ಬರುತ್ತವೆ. ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವವರಿಗೆ ಬೇಡಿಕೆ ಮತ್ತು ಸಂಭಾವನೆ ಸಹ ಹೆಚ್ಚಾಗುವುದು. ವಾರ್ತಾ ವಾಚಕರಿಗೆ ಹೆಚ್ಚಿನ ಹೊಸ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿಮ್ಮ ಊಟೋಪಚಾರಗಳು ಮತ್ತು ವಿಶ್ರಾಂತಿಯ ಬಗ್ಗೆ ಗಮನ ಇರಲಿ. ನೀವು ಶತ್ರುಗಳನ್ನು ಬಲಿ ಹಾಕಲು ಮಾಡುವ ತಂತ್ರಗಳು ಎಲ್ಲರಿಗೂ ತಿಳಿಯುತ್ತದೆ.

ವೃಶ್ಚಿಕ

ವಿಶಾಖ 4, ಅನುರಾಧ, ಜ್ಯೇಷ್ಠ – ನೆರೆಹೊರೆಯವರೊಡನೆ ಬರುವ ಸಣ್ಣಪುಟ್ಟ ಜಗಳಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿರಿ. ಕಂಪನಿಗಳ ಮೇಲೆ ಹಣಕಾಸಿನ ವಿಷಯಕ್ಕೆ ನೀವು ಹೂಡಿದ್ದ ವ್ಯಾಜ್ಯಗಳು ನಿಮ್ಮ ಪರವಾಗಿ ಆಗುತ್ತವೆ. ಹೊಸ ವ್ಯಾಪಾರಗಳನ್ನು ನಿಧಾನವಾಗಿ ಆರಂಭಿಸಿರಿ. ಆದರೆ, ಅತಿಯಾದ ಬಂಡವಾಳವನ್ನು ಹೂಡಬೇಡಿರಿ. ಆಮದು ಮತ್ತು ರಫ್ತು ಮಾಡುವವರಿಗೆ ಅನಿರೀಕ್ಷಿತವಾದ ತೊಡಕುಗಳು ಎದುರಾದರೂ ಸುಲಭವಾಗಿ ಬಗೆಹರಿಯುತ್ತವೆ. ಹಳೆಯ ಕಾಲದ ವಸ್ತುಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿಯಾಗಿ ಲಾಭ ಹೆಚ್ಚುತ್ತದೆ.

ಧನು

ಮೂಲ, ಪೂರ್ವಾಷಾಢ, ಉತ್ತರಾಷಾಡ 1 – ಗೃಹಾಲಂಕಾರ ವಸ್ತುಗಳನ್ನು ತಯಾರಿಸುವವರಿಗೆ ಮತ್ತು ಮಾರುವವರಿಗೆ ಲಾಭವಿದೆ. ಸ್ತ್ರೀಯರಿಗೆ ಕೇಶಾಲಂಕಾರ ಮಾಡುವವರಿಗೆ ಬೇಡಿಕೆ ಹೆಚ್ಚಾಗುವುದು. ಸೌಂದರ್ಯ ತಜ್ಞರಿಗೆ ಬೇಡಿಕೆ ಹೆಚ್ಚಾಗಿ ಧನ ಸಂಪಾದನೆ ಹೆಚ್ಚಾಗುವುದು. ಮನೆಯಲ್ಲಿ ಹಿರಿಯರು ವಿವಾಹ ಪ್ರಸ್ತಾವನೆಗಳನ್ನು ಮಾಡುವರು. ವಿಜ್ಞಾನಿಗಳಿಗೆ ಫಲ ನೀಡದಿದ್ದ ಸಂಶೋಧನೆಗಳು ಈಗ ಫಲವನ್ನು ನೀಡುತ್ತವೆ. ಅದರಿಂದ ಸಂತಸವಾಗಿ ಕೀರ್ತಿ ಸಹ ಹೆಚ್ಚುವುದು. ತಮ್ಮ ಕಾರ್ಯಕ್ಷೇತ್ರದಲ್ಲಿ ಛಾಪು ಮೂಡಿಸಬಹುದು.

ಮಕರ

ಉತ್ತರಾಷಾಡ 2,3,4, ಶ್ರವಣ, ಧನಿಷ್ಠ 1, 2 – ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಿಗುವ ಸೌಕರ್ಯಗಳು ಕಡಿಮೆಯಾದರೂ ಸಂಘ ಸಂಸ್ಥೆಗಳು ಮುಂದೆ ಬಂದು ಆ ಸೌಲಭ್ಯವನ್ನು ಮಾಡಿಕೊಡುವುದಲ್ಲದೆ ಮುಂದಿನ ವ್ಯವಸ್ಥೆಯನ್ನು ಸಹ ಮಾಡಿ ಕೊಡಲಿವೆ. ನೃತ್ಯಪಟುಗಳಿಗೆ ಮತ್ತು ಸಂಗೀತಗಾರರಿಗೆ ಉತ್ತಮ ಕಾರ್ಯಕ್ರಮಗಳು ದೊರೆಯುತ್ತವೆ ಮತ್ತು ಉತ್ತಮ ಸಂಭಾವನೆಯೂ ಸಹ ದೊರೆಯುತ್ತವೆ. ಸಂಗೀತ ಸಂಯೋಜಕರಿಗೆ ಉತ್ತಮ ಮಾರುಕಟ್ಟೆ ಒದಗುತ್ತದೆ. ಬರಹಗಾರರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಸಂಭಾವನೆ ಸಹ ಹೆಚ್ಚುವುದು. ನಿಮ್ಮ ಬಂಧುಗಳು ನಿಮ್ಮನ್ನು ತೆಗಳಿದರೆ ಅದಕ್ಕೆ ಅಲ್ಲಿಯೇ ಪ್ರತ್ಯುತ್ತರ ನೀಡಿರಿ.

ಕುಂಭ

ಧನಿಷ್ಠ 3,4, ಶತಭಿಷ, ಪೂರ್ವಾಭಾದ್ರ 1,2,3 – ವಿಚಿತ್ರವಾದ ಸನ್ನಿವೇಶದಲ್ಲಿ ನಿಮ್ಮ ವಿರೋಧಿಗಳು ನಿಮ್ಮನ್ನು ಬೆಂಬಲಿಸಿ ಸಹಕಾರವನ್ನು ನೀಡಿ ನಿಮ್ಮನ್ನು ಅಚ್ಚರಿಗೊಳಿಸುವರು. ವಾರಾಂತ್ಯಕ್ಕೆ ನೀವು ಪ್ರವಾಸಕ್ಕಾಗಿ ಹೊರಡುವಿರಿ. ಇದರಿಂದ ನೀವು ಹೆಚ್ಚು ಚೈತನ್ಯದಿಂದಿರುವಿರಿ. ನಿಮ್ಮ ಸಲಹೆ ಸೂಚನೆಗಳು ಯುವಕರಿಗೆ ಬಹಳ ಮೆಚ್ಚುಗೆಯಾಗಿರುತ್ತವೆ. ಕೃಷಿ ಸಂಶೋಧಕರ ಸಂಶೋಧನೆಗಳು ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ಮುಟ್ಟುತ್ತವೆ. ಇವರ ಪ್ರಬಂಧಗಳಿಗೆ ದೇಶ ವಿದೇಶಗಳಲ್ಲಿ ಮನ್ನಣೆ ದೊರೆಯುತ್ತದೆ.

ಮೀನ

ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ – ವಾಗ್ಮಿಗಳು ತಮ್ಮ ವಿಷಯಗಳನ್ನು ಉತ್ತಮವಾಗಿ ಮಂಡಿಸುವರು. ನಿಮ್ಮ ವಿರೋಧಿಗಳ ಸಂಚನ್ನು ತಿಳಿದು ಅವರನ್ನು ಸಮರ್ಥವಾಗಿ ಎದುರಿಸುವಲ್ಲಿ ಎಡುವುವಿರಿ. ಆಧ್ಯಾತ್ಮದಲ್ಲಿ ತೊಡಗಿರುವವರಿಗೆ ಉತ್ತಮ ಗುರುಗಳು ದೊರೆಯುವರು. ನಿಮ್ಮ ಪ್ರಮುಖ ಜವಾಬ್ದಾರಿಗಳನ್ನು ಬೇರೆಯವರಿಗೆ ವಹಿಸುವುದು ಬೇಡ. ನೀವೇ ನಿಂತು ನಿರ್ವಹಿಸಿರಿ. ನಿಮ್ಮ ನಿರ್ವಹಣೆ ಬಗ್ಗೆ ಸ್ವಲ್ಪ ತಕಾರರು ಇದ್ದರೂ ನಿಮ್ಮ ಕಾರ್ಯ ವೈಖರಿಯನ್ನು ನೋಡಿ ತಣ್ಣಗಾಗುವರು ಮತ್ತು ಸಹಕಾರ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT