<p>ನಮ್ಮ ಹಬ್ಬಗಳಿಗೆ ಮೂಲ ಎಂದರೆ ನಮ್ಮ ಪ್ರಕೃತಿಯೇ. ಈ ಪ್ರಕೃತಿಗೂ ಎರಡು ಆಯಾಮಗಳು; ಒಂದು: ಒಳಗಿನ ಪ್ರಕೃತಿ; ಇನ್ನೊಂದು: ಹೊರಗಿನ ಪ್ರಕೃತಿ. </p>.<p>ಒಳಗಿನ ಪ್ರಕೃತಿ ಎಂದರೆ ನಮ್ಮ ಸ್ವಭಾವ; ನಡೆ–ನುಡಿ, ಆಚಾರ–ವಿಚಾರಗಳು. ಹೊರಗಿನ ಪ್ರಕೃತಿ ಎಂದರೆ ಋತುಗಳು, ಗ್ರಹಸಂಚಾರ, ಗಿಡ–ಮರಗಳು, ನದಿ–ಗಿರಿಗಳು, ಮುಂತಾದವು. ನಮ್ಮೀ ಹೊರಗಿನ ಪ್ರಕೃತಿಗೂ ಒಳಗಿನ ಪ್ರಕೃತಿಗೂ ನೇರ ನಂಟಿರುವುದೂ ಸ್ಪಷ್ಟ. ಆದುದರಿಂದಲೇ ಈ ಎರಡು ಪ್ರಕೃತಿಗಳ ನಡುವೆ ಸಾಮರಸ್ಯವೂ ಏರ್ಪಡಬೇಕು. ಆಗಲೇ ನಮ್ಮ ಜೀವನವು ಸುಂದರವೂ ಸುಖಮಯವೂ ಆಗಿರುತ್ತದೆ. ಇಂಥ ವಿವೇಕವೇ ನಮ್ಮ ಸಂಸ್ಕೃತಿ ಕಾಣಿಸಿರುವ ಹಬ್ಬ–ಹರಿದಿನಗಳ ಕೇಂದ್ರಬಿಂದು. ಸುಗ್ಗಿಯ ಹಬ್ಬವಾಗಿ ನಾವು ಆಚರಿಸುವ ಸಂಕ್ರಾಂತಿಯಲ್ಲಿ ಈ ಎರಡು ಪ್ರಕೃತಿಗಳ ಸಾಮರಸ್ಯವನ್ನು ಕಾಣಬಹುದು.</p>.<p>ಸೂರ್ಯನ ಸಂಚಾರವೇ ಸಂಕ್ರಾಂತಿ ಹಬ್ಬದ ಆಚರಣೆಯನ್ನು ನಿರ್ಧರಿಸುವಂಥದ್ದು. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ‘ಪ್ರವೇಶಿ’ಸುತ್ತಲೇ ಇರುತ್ತಾನೆ. ಇದನ್ನೇ ’ಸಂಕ್ರಾಂತಿ’ ಎನ್ನುವುದು. ಹೀಗೆ ಅವನು ಮಕರರಾಶಿಯನ್ನು ಪ್ರವೇಶಿಸುವ ಸಮಯವನ್ನೇ ‘ಮಕರಸಂಕ್ರಾಂತಿ’ ಎಂದು ಕರೆಯುವುದು. ಈ ಮಕರಸಂಕ್ರಾಂತಿಗೇ ಏಕಿಷ್ಟು ಪ್ರಾಶಸ್ತ್ಯ? ಈ ಸಂಕ್ರಾಂತಿಯಲ್ಲಿ ನಡೆಯುವ ಸೂರ್ಯನ ಸಂಚಾರದಲ್ಲಿ ವಿಶೇಷವುಂಟು; ಸೂರ್ಯ ತನ್ನ ಸಂಚಾರದ ಪಥವನ್ನು ದಕ್ಷಿಣದಿಂದ ಉತ್ತರಕ್ಕೆ ಬದಲಾಯಿಸುತ್ತಾನೆ. ಹೀಗಾಗಿ ಇದೊಂದು ಪರ್ವಕಾಲ ಎಂಬುದು ನಮ್ಮ ಪೂರ್ವಜರ ಎಣಿಕೆ; ಪಿತೃಯಾನದಿಂದ ದೇವಯಾನದ ಕಡೆಗೆ ನಡಿಗೆ ಎಂಬುದು ಇಲ್ಲಿರುವ ನಂಬಿಕೆ. ಪಿತೃಯಾನ ಎಂದರೆ ಹುಟ್ಟು–ಸಾವುಗಳ ಚಕ್ರ; ದೇವಯಾನ ಎಂದರೆ ಶಾಶ್ವತಸುಖದಲ್ಲಿ ನಿಲುಗಡೆ. ಹೀಗಾಗಿಯೇ ಭೀಷ್ಮನು ಶರೀರವನ್ನು ಬಿಡಲು ಆರಿಸಿಕೊಂಡ ಕಾಲ ಉತ್ತರಾಯಣ ಪುಣ್ಯಕಾಲ; ಎಂದರೆ ಮಕರ ಸಂಕ್ರಾಂತಿ; ಮುಕ್ತಿಗಾಗಿ ಆರಿಸಿಕೊಂಡ ಕಾಲವಿದು.</p>.<p>ಎಲ್ಲೋ ದೂರದ ‘ಪ್ರಕೃತಿ’ಯಲ್ಲಿ ನಡೆಯುವ ವಿದ್ಯಮಾನಗಳಿಗೂ ನಮ್ಮ ಹಬ್ಬಕ್ಕೂ ಇರುವ ಸಂಬಂಧದ ಕೆಲವು ವಿವರಗಳು ಇವು. ಆದರೆ ನಮ್ಮ ಕಣ್ಣಿಗೇ ಗೋಚರವಾಗುವ ಪ್ರಕೃತಿಯ ಹಲವು ವಿದ್ಯಮಾನಗಳ ಸಂಭ್ರಮವನ್ನೂ ಸಂಕ್ರಾಂತಿಯ ಹಬ್ಬದಲ್ಲಿ ಕಾಣಬಹುದು. ಹೊಲ–ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೈರು–ತೆನೆಗಳನ್ನು ಕಂಡು ಸಂತೋಷಿಸುವುದು; ಅವುಗಳಿಗೆ ಪೂಜಿಸುವುದು. ದವಸ–ಧಾನ್ಯ–ಕಾಳುಗಳನ್ನು ವಿವಿಧ ಬಗೆಯ ಖಾದ್ಯಗಳನ್ನಾಗಿ ಮಾಡಿಕೊಂಡು ಚಪ್ಪರಿವುದು; ಆತ್ಮೀಯರಿಗೆ ಅವನ್ನು ಹಂಚುವುದು; ಕೃಷಿಗೆ ಪೂರಕವಾಗಿರುವ ದನ–ಕರುಗಳನ್ನು ಸಿಂಗರಿಸಿ, ಪೂಜಿಸುವುದು. ಪ್ರಕೃತಿಗೂ ನಮಗೂ ಇರುವ ಸಾವಯವ ಸಂಬಂಧದ ಹಲವು ನೆಲೆಗಳ ಸಾಂಕೇತಿಕತೆಯನ್ನು ಸಂಕ್ರಾಂತಿಯ ಆಚರಣೆಯ ಉದ್ದಕ್ಕೂ ಕಾಣಬಹುದು.</p>.<p>ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಆರತಿಯನ್ನು ಬೆಳಗಿ, ಸಂಭ್ರಮಿಸುವುದೂ ಉಂಟು ಇಂದು. ಮಕ್ಕಳು ನಮ್ಮತನದ ಪ್ರತಿರೂಪ, ನಮ್ಮತನದ ಮುಂದುವರಿಕೆಯ ಚಕ್ರರೂಪ. ಮಾತ್ರವಲ್ಲ, ಮಕ್ಕಳು ಸೃಷ್ಟಿಯ ಬೆರಗು; ಆ ಬೆರಗನ್ನು ಆತ್ಮತತ್ತ್ವದ ಬೆಳಕಿನಲ್ಲಿ ಕಾಣಬೇಕೆಂಬ ಹಂಬಲ ಸಂಕ್ರಾಂತಿ ನಮಗೆ ಕೊಡುವ ಬೆಂಬಲ. ಸೂರ್ಯೋಪಾಸನೆಯೇ ಸಂಕ್ರಾಂತಿಪರ್ವದ ಪ್ರಧಾನ ತತ್ತ್ವ. ಸೂರ್ಯ ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಸಂಕೇತ. ಅವನು ಆತ್ಮಕಾರಕ; ನಮ್ಮ ಹೊರಗಿನ ಆರೋಗ್ಯಕ್ಕೂ, ಒಳಗಿನ ಆರೋಗ್ಯಕ್ಕೂ ಕಾರಣನಾದ ದೇವತೆ. ಈ ಹಬ್ಬದಲ್ಲಿ ಸೂರ್ಯತತ್ತ್ವದ ಹಲವು ಆಯಾಮಗಳು ಅನಾವರಣಗೊಳ್ಳುತ್ತವೆ; ದೇಶದ ಬೇರೆ ಬೇರೆ ಭಾಗಗಳ ಆಚರಣೆಗಳಲ್ಲಿ ಈ ತತ್ತ್ವದ ಬೇರೆ ಬೇರೆ ರೂಪಗಳು ಪ್ರಕಟವಾಗುತ್ತವೆ.</p>.<p>‘ಎಳ್ಳು–ಬೆಲ್ಲ ತಿಂದು ಒಳ್ಳೇ ಮಾತಾಡು’ ಎಂಬುದು ಸಂಕ್ರಾಂತಿಯ ಘೋಷವಾಕ್ಯ. ಒಳ್ಳೆಯ ಮಾತು – ಎಂದರೆ ಅದು ನಮ್ಮ ಹೊರಗಿನ ಪ್ರಕೃತಿಯನ್ನೂ, ಒಳಗಿನ ಪ್ರಕೃತಿಯನ್ನೂ ಬೆಳಗಬಲ್ಲ ಮಾತು. ಅಂಥ ಮಾತುಗಳನ್ನು ಆಡುವಂಥ, ಕೇಳುವಂಥ ವಾತಾವರಣ ಸಮಾಜದಲ್ಲಿ ನೆಲಗೊಳ್ಳಲು ಒದಗುವ ದೇವಯಾನದ ಶಾಂತಿಯೇ ಸಂಕ್ರಾಂತಿಯ ದಿಟವಾದ ಕ್ರಾಂತಿ ಮತ್ತು ಕಾಂತಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ಹಬ್ಬಗಳಿಗೆ ಮೂಲ ಎಂದರೆ ನಮ್ಮ ಪ್ರಕೃತಿಯೇ. ಈ ಪ್ರಕೃತಿಗೂ ಎರಡು ಆಯಾಮಗಳು; ಒಂದು: ಒಳಗಿನ ಪ್ರಕೃತಿ; ಇನ್ನೊಂದು: ಹೊರಗಿನ ಪ್ರಕೃತಿ. </p>.<p>ಒಳಗಿನ ಪ್ರಕೃತಿ ಎಂದರೆ ನಮ್ಮ ಸ್ವಭಾವ; ನಡೆ–ನುಡಿ, ಆಚಾರ–ವಿಚಾರಗಳು. ಹೊರಗಿನ ಪ್ರಕೃತಿ ಎಂದರೆ ಋತುಗಳು, ಗ್ರಹಸಂಚಾರ, ಗಿಡ–ಮರಗಳು, ನದಿ–ಗಿರಿಗಳು, ಮುಂತಾದವು. ನಮ್ಮೀ ಹೊರಗಿನ ಪ್ರಕೃತಿಗೂ ಒಳಗಿನ ಪ್ರಕೃತಿಗೂ ನೇರ ನಂಟಿರುವುದೂ ಸ್ಪಷ್ಟ. ಆದುದರಿಂದಲೇ ಈ ಎರಡು ಪ್ರಕೃತಿಗಳ ನಡುವೆ ಸಾಮರಸ್ಯವೂ ಏರ್ಪಡಬೇಕು. ಆಗಲೇ ನಮ್ಮ ಜೀವನವು ಸುಂದರವೂ ಸುಖಮಯವೂ ಆಗಿರುತ್ತದೆ. ಇಂಥ ವಿವೇಕವೇ ನಮ್ಮ ಸಂಸ್ಕೃತಿ ಕಾಣಿಸಿರುವ ಹಬ್ಬ–ಹರಿದಿನಗಳ ಕೇಂದ್ರಬಿಂದು. ಸುಗ್ಗಿಯ ಹಬ್ಬವಾಗಿ ನಾವು ಆಚರಿಸುವ ಸಂಕ್ರಾಂತಿಯಲ್ಲಿ ಈ ಎರಡು ಪ್ರಕೃತಿಗಳ ಸಾಮರಸ್ಯವನ್ನು ಕಾಣಬಹುದು.</p>.<p>ಸೂರ್ಯನ ಸಂಚಾರವೇ ಸಂಕ್ರಾಂತಿ ಹಬ್ಬದ ಆಚರಣೆಯನ್ನು ನಿರ್ಧರಿಸುವಂಥದ್ದು. ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ‘ಪ್ರವೇಶಿ’ಸುತ್ತಲೇ ಇರುತ್ತಾನೆ. ಇದನ್ನೇ ’ಸಂಕ್ರಾಂತಿ’ ಎನ್ನುವುದು. ಹೀಗೆ ಅವನು ಮಕರರಾಶಿಯನ್ನು ಪ್ರವೇಶಿಸುವ ಸಮಯವನ್ನೇ ‘ಮಕರಸಂಕ್ರಾಂತಿ’ ಎಂದು ಕರೆಯುವುದು. ಈ ಮಕರಸಂಕ್ರಾಂತಿಗೇ ಏಕಿಷ್ಟು ಪ್ರಾಶಸ್ತ್ಯ? ಈ ಸಂಕ್ರಾಂತಿಯಲ್ಲಿ ನಡೆಯುವ ಸೂರ್ಯನ ಸಂಚಾರದಲ್ಲಿ ವಿಶೇಷವುಂಟು; ಸೂರ್ಯ ತನ್ನ ಸಂಚಾರದ ಪಥವನ್ನು ದಕ್ಷಿಣದಿಂದ ಉತ್ತರಕ್ಕೆ ಬದಲಾಯಿಸುತ್ತಾನೆ. ಹೀಗಾಗಿ ಇದೊಂದು ಪರ್ವಕಾಲ ಎಂಬುದು ನಮ್ಮ ಪೂರ್ವಜರ ಎಣಿಕೆ; ಪಿತೃಯಾನದಿಂದ ದೇವಯಾನದ ಕಡೆಗೆ ನಡಿಗೆ ಎಂಬುದು ಇಲ್ಲಿರುವ ನಂಬಿಕೆ. ಪಿತೃಯಾನ ಎಂದರೆ ಹುಟ್ಟು–ಸಾವುಗಳ ಚಕ್ರ; ದೇವಯಾನ ಎಂದರೆ ಶಾಶ್ವತಸುಖದಲ್ಲಿ ನಿಲುಗಡೆ. ಹೀಗಾಗಿಯೇ ಭೀಷ್ಮನು ಶರೀರವನ್ನು ಬಿಡಲು ಆರಿಸಿಕೊಂಡ ಕಾಲ ಉತ್ತರಾಯಣ ಪುಣ್ಯಕಾಲ; ಎಂದರೆ ಮಕರ ಸಂಕ್ರಾಂತಿ; ಮುಕ್ತಿಗಾಗಿ ಆರಿಸಿಕೊಂಡ ಕಾಲವಿದು.</p>.<p>ಎಲ್ಲೋ ದೂರದ ‘ಪ್ರಕೃತಿ’ಯಲ್ಲಿ ನಡೆಯುವ ವಿದ್ಯಮಾನಗಳಿಗೂ ನಮ್ಮ ಹಬ್ಬಕ್ಕೂ ಇರುವ ಸಂಬಂಧದ ಕೆಲವು ವಿವರಗಳು ಇವು. ಆದರೆ ನಮ್ಮ ಕಣ್ಣಿಗೇ ಗೋಚರವಾಗುವ ಪ್ರಕೃತಿಯ ಹಲವು ವಿದ್ಯಮಾನಗಳ ಸಂಭ್ರಮವನ್ನೂ ಸಂಕ್ರಾಂತಿಯ ಹಬ್ಬದಲ್ಲಿ ಕಾಣಬಹುದು. ಹೊಲ–ಗದ್ದೆಗಳಲ್ಲಿ ಬೆಳೆದು ನಿಂತಿರುವ ಪೈರು–ತೆನೆಗಳನ್ನು ಕಂಡು ಸಂತೋಷಿಸುವುದು; ಅವುಗಳಿಗೆ ಪೂಜಿಸುವುದು. ದವಸ–ಧಾನ್ಯ–ಕಾಳುಗಳನ್ನು ವಿವಿಧ ಬಗೆಯ ಖಾದ್ಯಗಳನ್ನಾಗಿ ಮಾಡಿಕೊಂಡು ಚಪ್ಪರಿವುದು; ಆತ್ಮೀಯರಿಗೆ ಅವನ್ನು ಹಂಚುವುದು; ಕೃಷಿಗೆ ಪೂರಕವಾಗಿರುವ ದನ–ಕರುಗಳನ್ನು ಸಿಂಗರಿಸಿ, ಪೂಜಿಸುವುದು. ಪ್ರಕೃತಿಗೂ ನಮಗೂ ಇರುವ ಸಾವಯವ ಸಂಬಂಧದ ಹಲವು ನೆಲೆಗಳ ಸಾಂಕೇತಿಕತೆಯನ್ನು ಸಂಕ್ರಾಂತಿಯ ಆಚರಣೆಯ ಉದ್ದಕ್ಕೂ ಕಾಣಬಹುದು.</p>.<p>ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಆರತಿಯನ್ನು ಬೆಳಗಿ, ಸಂಭ್ರಮಿಸುವುದೂ ಉಂಟು ಇಂದು. ಮಕ್ಕಳು ನಮ್ಮತನದ ಪ್ರತಿರೂಪ, ನಮ್ಮತನದ ಮುಂದುವರಿಕೆಯ ಚಕ್ರರೂಪ. ಮಾತ್ರವಲ್ಲ, ಮಕ್ಕಳು ಸೃಷ್ಟಿಯ ಬೆರಗು; ಆ ಬೆರಗನ್ನು ಆತ್ಮತತ್ತ್ವದ ಬೆಳಕಿನಲ್ಲಿ ಕಾಣಬೇಕೆಂಬ ಹಂಬಲ ಸಂಕ್ರಾಂತಿ ನಮಗೆ ಕೊಡುವ ಬೆಂಬಲ. ಸೂರ್ಯೋಪಾಸನೆಯೇ ಸಂಕ್ರಾಂತಿಪರ್ವದ ಪ್ರಧಾನ ತತ್ತ್ವ. ಸೂರ್ಯ ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಸಂಕೇತ. ಅವನು ಆತ್ಮಕಾರಕ; ನಮ್ಮ ಹೊರಗಿನ ಆರೋಗ್ಯಕ್ಕೂ, ಒಳಗಿನ ಆರೋಗ್ಯಕ್ಕೂ ಕಾರಣನಾದ ದೇವತೆ. ಈ ಹಬ್ಬದಲ್ಲಿ ಸೂರ್ಯತತ್ತ್ವದ ಹಲವು ಆಯಾಮಗಳು ಅನಾವರಣಗೊಳ್ಳುತ್ತವೆ; ದೇಶದ ಬೇರೆ ಬೇರೆ ಭಾಗಗಳ ಆಚರಣೆಗಳಲ್ಲಿ ಈ ತತ್ತ್ವದ ಬೇರೆ ಬೇರೆ ರೂಪಗಳು ಪ್ರಕಟವಾಗುತ್ತವೆ.</p>.<p>‘ಎಳ್ಳು–ಬೆಲ್ಲ ತಿಂದು ಒಳ್ಳೇ ಮಾತಾಡು’ ಎಂಬುದು ಸಂಕ್ರಾಂತಿಯ ಘೋಷವಾಕ್ಯ. ಒಳ್ಳೆಯ ಮಾತು – ಎಂದರೆ ಅದು ನಮ್ಮ ಹೊರಗಿನ ಪ್ರಕೃತಿಯನ್ನೂ, ಒಳಗಿನ ಪ್ರಕೃತಿಯನ್ನೂ ಬೆಳಗಬಲ್ಲ ಮಾತು. ಅಂಥ ಮಾತುಗಳನ್ನು ಆಡುವಂಥ, ಕೇಳುವಂಥ ವಾತಾವರಣ ಸಮಾಜದಲ್ಲಿ ನೆಲಗೊಳ್ಳಲು ಒದಗುವ ದೇವಯಾನದ ಶಾಂತಿಯೇ ಸಂಕ್ರಾಂತಿಯ ದಿಟವಾದ ಕ್ರಾಂತಿ ಮತ್ತು ಕಾಂತಿ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>