ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕೃಷ್ಣಾಷ್ಟಮಿ: ಶ್ರೀಕೃಷ್ಣ ಎಂಬ ಪ್ರಸಿದ್ಧ ರಹಸ್ಯ

Last Updated 18 ಆಗಸ್ಟ್ 2022, 19:13 IST
ಅಕ್ಷರ ಗಾತ್ರ

ಮತ್ತೊಮ್ಮೆ ಕೃಷ್ಣಾಷ್ಟಮಿ ಬಂದಿದೆ. ಕೃಷ್ಣಾಷ್ಟಮಿ ವರ್ಷಕ್ಕೆ ಒಮ್ಮೆ ಬರಬಹುದು; ಆದರೆ ಶ್ರೀಕೃಷ್ಣ ಮಾತ್ರ ನಮ್ಮೊಂದಿಗೆ ಎಂದೆಂದಿಗೂ ಇರುವ. ನಮ್ಮ ಪ್ರೀತಿಯಲ್ಲಿ, ಯೋಚನೆಯಲ್ಲಿ, ಯೋಜನೆಯಲ್ಲಿ, ತುಂಟಾಟದಲ್ಲಿ, ನಗುವಿನಲ್ಲಿ, ಅಳುವಿನಲ್ಲಿ, ಕದನದಲ್ಲಿ, ಸರಸದಲ್ಲಿ, ವಿರಸದಲ್ಲಿ – ಹೀಗೆ ನಮ್ಮೆಲ್ಲ ಭಾವಗಳಲ್ಲೂ ಶ್ರೀಕೃಷ್ಣತತ್ತ್ವ ಬೆಸೆದುಕೊಂಡಿರುತ್ತದೆ. ಸ್ನೇಹಿತನಾಗಿ, ಗುರುವಾಗಿ, ಪ್ರೇಮಿಯಾಗಿ, ಅಣ್ಣನಾಗಿ, ಮಗನಾಗಿ – ಹೀಗೆ ಬದುಕಿನ ಎಲ್ಲ ಭಾವಗಳ ಸಾರಥಿಯಾಗಿ ಅವನು ಒದಗುತ್ತಲೇ ಇರುತ್ತಾನೆ. ಕೃಷ್ಣನಷ್ಟು ನಮ್ಮ ಜೀವನವನ್ನು ಸಮಗ್ರವಾಗಿ ಆವರಿಸಿಕೊಂಡಿರುವ ಅಲೌಕಿಕ ವಿವರ ಇನ್ನೊಂದಿರಲಾರದು. ಸದಾ ಕಾಲ ಮನುಷ್ಯನಾಗಲು ತವಕಿಸುತ್ತಲೇ ಇರುವ ದೈವ ಎಂದರೆ ಅದು ಶ್ರೀಕೃಷ್ಣ.

ಶ್ರೀಕೃಷ್ಣ ಎಂಬುದು ಪ್ರಸಿದ್ಧ ರಹಸ್ಯ – ಎಂಬ ಡಿವಿಜಿ ಮಾತು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ. ‘ಪ್ರಸಿದ್ಧ’ ಎಂಬುದು ರಹಸ್ಯವಾಗಿರಲು ಸಾಧ್ಯವಿಲ್ಲ; ‘ರಹಸ್ಯ’ವು ಪ್ರಸಿದ್ಧವಾಗಿರಲು ಸಾಧ್ಯವಿಲ್ಲ. ಹಾಗಾದರೆ ಈ ‘ಪ್ರಸಿದ್ಧ ರಹಸ್ಯ’ ಎಂಬುದರ ಸ್ವಾರಸ್ಯವೇನು? ಶ್ರೀಕೃಷ್ಣನು ಪ್ರಸಿದ್ಧನೂ ಹೌದು, ರಹಸ್ಯನೂ ಹೌದು! ಇದು ಹೇಗೆ? ಲೀಲಾಶುಕನ ಪದ್ಯವೊಂದು ಇಲ್ಲಿ ಒದಗುತ್ತದೆ:

ಗೋಪಾಲಾಜಿರ ಕರ್ದಮೇ ವಿಹರಸೇ ವಿಪ್ರಾಧ್ವರೇ ಲಜ್ಜಸೇ
ಬ್ರೂಷೇ ಗೋಧನ ಹುಂಕೃತೈಃ ಸ್ತುತಿಶತೈರ್ಮೌನಂ ವಿಧತ್ಸೇ ವಿದಾಮ್‌
ದಾಸ್ಯಂ ಗೋಕುಲಪುಂಶ್ಚಲೀಷು ಕುರುಷೇ ಸ್ವಾಮ್ಯಂ ನ ದಾತಾತ್ಮಸು
ಜ್ಞಾತಂ ಕೃಷ್ಣ ತವಾಂಘ್ರಿಪಂಕಜಯುಗಂ ಪ್ರೇಮಾಚಲಂಮಂಜುಲಮ್‌

‘ಗೋಪಾಲರ ಅಂಗಳದ ಕೆಸರಿನಲ್ಲಿ ಆಟ ಆಡುವೆ; ಆದರೆ ಜ್ಞಾನಿಗಳ ಮಧ್ಯೆ ಸೇರಲು ಸಂಕೋಚಿಸುತ್ತೀಯೆ! ಗೋವುಗಳು ‘ಹುಂ’ ಎಂದು ಕರೆದರೂ ಸಾಕು, ಅವುಗಳೊಂದಿಗೆ ಮಾತನಾಡುತ್ತೀಯೆ; ಆದರೆ ವಿದ್ವಾಂಸರ ನೂರಾರು ಸ್ತುತಿಗಳಿಗೆ ಕಿವಿಗೊಡದೆ ಮೌನವಾಗಿರುತ್ತೀಯೆ! ಗೋಕುಲದ ಚಂಚಲೆಯರಾದ ಪ್ರಣಯಿನಿಗಳ ದಾಸನಾಗಲೂ ಸಿದ್ಧವಾಗುವೆ; ಆದರೆ ಕಠೋರ ಸಾಧಕರ ಒಡೆತನ ಬೇಡ ಎನ್ನುವೆ! ಕೃಷ್ಣ!! ತಿಳಿಯಿತು, ನಿನ್ನ ಪಾದಕಮಲಗಳ ಮಧುರವಾದ ಪ್ರೇಮದ ಗುಟ್ಟು’ – ಇದು ಈ ಪದ್ಯದ ಭಾವ.

ನಮ್ಮ ಎಣಿಕೆಗಳಿಗೆ ಮೀರಿದ ತತ್ತ್ವ ಶ್ರೀಕೃಷ್ಣತತ್ತ್ವ. ಅವನನ್ನು ನಾವು ಎಲ್ಲೆಲ್ಲೋ ಹುಡುಕುತ್ತೇವೆ; ಆದರೆ ಅವನು ಇಲ್ಲೇ, ನಮ್ಮ ಸನಿಹದಲ್ಲಿಯೇ, ನಮ್ಮಂತೆಯೇ ಸಾಮಾನ್ಯರಲ್ಲಿ ಸಾಮಾನ್ಯನಾಗಿ ನೆಲೆಗೊಂಡಿರುತ್ತಾನೆ. ಕೃಷ್ಣ ನಮ್ಮ ಬದುಕಿಗೆ ಸದಾ ಹತ್ತಿರವಾಗಿರುತ್ತಾನೆ.

ಶ್ರೀಕೃಷ್ಣನು ಪ್ರಸಿದ್ಧನಾದರೂ ಹೇಗೆ ರಹಸ್ಯನಾಗಿದ್ದಾನೆ – ಎಂಬುದನ್ನು ಲೀಲಾಶುಕನೇ ಇನ್ನೊಂದು ಪದ್ಯದಲ್ಲಿ ಸೊಗಸಾಗಿ ವರ್ಣಿಸಿದ್ದಾನೆ:

ಬಾಲೋsಪಿ ಶೈಲೋದ್ಧರಣಾಗ್ರಪಾಣಿಃ
ನೀಲೋsಪಿ ನೀರಂಧ್ರತಮಃ ಪ್ರದೀಪಃ
ಧೀರೋsಪಿ ರಾಧಾನಯನಾವಬದ್ಧೋ
ಜಾರೋsಪಿ ಸಂಸಾರಹರಃ ಕುತಸ್ತ್ವಮ್‌

‘ಇದು ಹೇಗೆ ಸಾಧ್ಯ – ನೀನು ಇನ್ನೂ ಚಿಕ್ಕ ಹುಡುಗ, ಆದರೆ ಕೈಬೆರಳಿನ ಕೊನೆಯಿಂದ ಪರ್ವತವನ್ನೇ ಎತ್ತಿಹಿಡಿದಿರುವೆ; ನಿನ್ನ ಮೈ ಬಣ್ಣವೇ ಕಪ್ಪು, ಆದರೆ ಗಾಢವಾದ ಕತ್ತಲಿನಲ್ಲಿಯೂ ಹೊಳೆಯುವ ಬೆಳಕಾಗಿ ತೋರುತ್ತಿರುವೆ; ನಿನ್ನನ್ನು ಯಾರೂ ಮಣಿಸಲು ಸಾಧ್ಯವಿಲ್ಲದಂಥ ಧೀರ ನೀನು, ಆದರೆ ರಾಧೆಯ ಕಣ್ಣೋಟಕ್ಕೇ ಕಟ್ಟುಬಿದ್ದಿರುವೆಯಲ್ಲ? ನೀನೇ ಒಬ್ಬ ಜಾರ; ಆದರೆ ಎಲ್ಲರನ್ನೂ ಸಂಸಾರದಿಂದ ಪಾರುಮಾಡುವ ತತ್ತ್ವವಾಗಿದ್ದೀಯೆ! ಇದು ಹೇಗೆ ಸಾಧ್ಯ?!’

ಅಲೌಕಿಕ ತತ್ತ್ವದ ದಿಟವಾದ ಲಕ್ಷಣದ ಮೂರ್ತರೂಪವೇ ಶ್ರೀಕೃಷ್ಣತತ್ತ್ವ. ಇದು ಅರ್ಥವಾದಂತಿರುತ್ತದೆ; ಆದರೆ ತಿಳಿಯಲು ಪ್ರಯತ್ನಿಸಿದರೆ ಸೋಲುತ್ತೇವೆ. ಅರ್ಥವಾಗುತ್ತಿಲ್ಲ ಎಂದು ವಿಚಾರಿಸಲು ತೊಡಗಿದರೆ, ‘ಇದು ಇಷ್ಟೇ’ ಎನ್ನುವಂತೆ ಕಣ್ಣೆದುರಿನಲ್ಲಿ ನಿಂತಿರುತ್ತದೆ. ಇದು ನಮ್ಮ ಬದುಕಲ್ಲದೆ ಮತ್ತೇನು? ನಮ್ಮ ಸೋಲು–ಗೆಲುವುಗಳ ಈ ಕಣ್ಣಾಮುಚ್ಚಾಲೆಯಾಟದ ಮೂಲವಾದರೂ ಶ್ರೀಕೃಷ್ಣ ಎಂಬ ಈ ಜೀವನತತ್ತ್ವವೇ ಹೌದು. ಹೀಗಾಗಿಯೇ ‘ಗೀತೆ’ಯ ಕೊನೆಯಲ್ಲಿ ಅವನೇ ಹೇಳಿದ ಮಾತು: ‘ಎಲ್ಲ ಧರ್ಮಗಳನ್ನೂ ತೊರೆದು ನನ್ನಲ್ಲಿ ಒಂದಾಗು’. ಕೃಷ್ಣನಲ್ಲಿ ಒಂದಾಗುವುದು ಎಂದರೆ ನಮ್ಮ ಜೀವನ ಎಂಬ ‘ಪ್ರಸಿದ್ಧ ರಹಸ್ಯ’ದಲ್ಲಿ ಒಂದಾಗುವುದು. ಈ ಐಕ್ಯಾನುಭವದ ಫಲವೇ ಜೀವನದ ಉತ್ಸವ, ಸಂಭ್ರಮ. ಈ ಉತ್ಸವ–ಸಂಭ್ರಮಗಳೇ ಶ್ರೀಕೃಷ್ಣತತ್ತ್ವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT