ಪುರಂದರದಾಸರ ಪಾಲಿಗೆ ಸಿದ್ಧಾಂತಕ್ಕಿಂತ ಸಾಧನೆ ಮುಖ್ಯವಾದುದು. ವ್ಯಾಸಕೂಟ–ದಾಸಕೂಟಗಳ ಭೇದವನ್ನು ನಾವು ಗಮನಿಸಬೇಕು. ನಿಷ್ಠಾವಂತರಾದ, ಶಾಸ್ತ್ರೈಕನಿಷ್ಠರಾದ, ಸ್ವಮತಮಂಡನೆ–ಪರಮತ ಖಂಡನೆಯೇ ಪರಮಾರ್ಥಕ್ಕೆ ಸಾದಿ ಎಂದು ಹಟ ಹಿಡಿದ ಮಡಿಮಡಿಯ ಗುಂಪಿಗೆ ವ್ಯಾಸಕೂಟವೆಂದು ಹೆಸರಾಯಿತು. ಭಕ್ತಿಯ ಅಗತ್ಯವನ್ನು ಪ್ರಮೇಯವಾಗಿ ಗ್ರಹಿಸಿದರೂ ಅವರ ಒಲವೆಲ್ಲ ಜ್ಞಾನದ ಕಡೆಯೇ. ಸಾಧನೆಯ ಸ್ವಾರಸ್ಯವನ್ನು ಅವರು ಗ್ರಂಥಗಳಲ್ಲಿ ಬಲ್ಲರೇ ವಿನಾ ಅನುಭವದಲ್ಲಿ ಕಂಡರಿಯರು. ಆದರೆ ದಾಸಕೂಟದವರಿಗೆ ಭಕ್ತಿ ಮುಖ್ಯ; ಶಾಸ್ತ್ರಜ್ಞಾನ ಗೌಣ; ಸಧನೆಯ ಅನುಭವ ಮುಖ್ಯ, ಸಿದ್ಧಾಂತ ಗೌಣ. ದಾಸರು ವಾದ ವಿವಾದಗಳಿಗೆ ಮನಸೋತವರಲ್ಲ; ವ್ಯಾಸಂಗ–ಪ್ರವನಗಳಲ್ಲಿ ಬಾಳನ್ನು ಕಳೆದವರಲ್ಲ. ಅವರ ಬಾಳಿನಲ್ಲಿ ಸಾಧನೆಗೆ ಹಿರಿಯ ಪಟ್ಟ. ಸಾಧನೆಯೆಂದರೆ ಭಗವತತ್ತ್ವ, ಸಾಕ್ಷಾತ್ಕಾರ, ಭಕ್ತಿ – ಇವು. ಇವಕ್ಕೆ ಯಾವುದೇ ಮತನಿಷ್ಠವಾದ ಸಿದ್ಧಾಮತವೊಂದರ ಕಟ್ಟುಪಾಡನ್ನು ತೊಡಿಸುವುದು ಸರಿಯಲ್ಲ. ಎಲ್ಲ ಸಂತರಿಗೂ ಸಮಾನವಾದ ಗುಣವನ್ನು ನಾವು ಪುರಂದರದಾಸರಲ್ಲಿ ಗುರುತಿಸಬೇಕು. ಅವರು ಕೇವಲ ಮಾಧ್ವಸಂಪ್ರದಾಯದ ಪ್ರಚಾರಕರು ಎಂದು ಕಾಣಿಸಿದರೆ ತಪ್ಪಾಗುತ್ತದೆ’ ಅವರ ಎತ್ತರವನ್ನು ಮುಟ್ಟಿದಂತೆ ಆಗುವುದಿಲ್ಲ.