ಭಕ್ತನಾದವನು ಭಗವಂತನ ಸ್ಮರಣೆ ಮಾಡಬೇಕೆಂದರೆ ಹಲವು ಅಡ್ಡಿ–ಆತಂಕಗಳು ಬರುವುದು ಸಹಜ. ಅವುಗಳನ್ನು ಮೀರಿ ಭಗವಂತನ ಪೂಜೆ ಪ್ರಾರ್ಥನೆಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡಬೇಕು. ಮಾನವನ ಅಂತರಂಗದಲ್ಲಿರುವ ಹಲವಾರು ದುರ್ಗುಣಗಳು ಆತನನ್ನು ಭಗವಂತನ ಆರಾಧನೆ ಮಾಡದಂತೆ ತಡೆಯುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಷಡ್ವೈರಿಗಳು; ಹಸಿವು, ತೃಷೆ, ವ್ಯಸನಗಳಿಂದ ನಾನು ಕಂಗೆಟ್ಟಿದ್ದೇನೆ. ಪಂಚೇಂದ್ರಿಯಗಳು ಹಾಗೂ ಸಪ್ತಧಾತು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜ, ಶುಕ್ರ)ಗಳು ನನ್ನನ್ನು ಹರಿದು ಹಂಚಿದ್ದಾವೆ. ಅಯ್ಯಾ ಭಗವಂತನೆ ನನ್ನ ಮೊರೆಯನ್ನು ಕೇಳಿ ಇವುಗಳ ಪ್ರಭಾವದಿಂದ ಮುಕ್ತನನ್ನಾಗಿಸಿ ಶಿವಭಕ್ತಿ, ಶಿವಾಚಾರದಲ್ಲಿ ತೊಡಗುವಂತೆ ಮಾಡು ಎಂದು ಬಸವಣ್ಣನವರು ಪರಿ, ಪರಿಯಿಂದ ಭಗವಂತನಲ್ಲಿ ಪ್ರಾರ್ಥನೆ ಇಟ್ಟಿದ್ದಾರೆ.